ಮಂಡ್ಯದ ಬೇಬಿ ಬೆಟ್ಟದಲ್ಲಿ ಇಂದಿನಿಂದ 4 ದಿನ ಟ್ರಯಲ್ ಬ್ಲಾಸ್ಟ್​​: ರೈತ ಸಂಘಟನೆಗಳು, ಬಿಜೆಪಿಯಿಂದ ಪ್ರತಿಭಟನೆ

| Updated By: ವಿವೇಕ ಬಿರಾದಾರ

Updated on: Mar 05, 2024 | 9:47 AM

ಹೈಕೋರ್ಟ್​ ಆದೇಶದಂತೆ ರಾಜ್ಯ ಸರ್ಕಾರ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ಇಂದಿನಿಂದ ನಾಲ್ಕು ದಿನ ಟ್ರಯಲ್ ಬ್ಲಾಸ್ಟ್​​ ನಡೆಸಲಿದೆ. ಟ್ರಯಲ್ ಬ್ಲಾಸ್ಟ್​ಗೆ ಆಗಮಿಸಿರುವ ತಜ್ಞರು ವಾಪಾಸ್ ತೆರಳುವಂತೆ ರೈತರು ಕೆಆರ್​ಎಸ್​ ಬೃಂದಾವನದ ಮುಖ್ಯ ದ್ವಾರದ ರಸ್ತೆಯಲ್ಲಿ ಗೋ ಬ್ಯಾಕ್ ಚಳುವಳಿ ನಡೆಸಲಿದ್ದಾರೆ.

ಮಂಡ್ಯದ ಬೇಬಿ ಬೆಟ್ಟದಲ್ಲಿ ಇಂದಿನಿಂದ 4 ದಿನ ಟ್ರಯಲ್ ಬ್ಲಾಸ್ಟ್​​: ರೈತ ಸಂಘಟನೆಗಳು, ಬಿಜೆಪಿಯಿಂದ ಪ್ರತಿಭಟನೆ
ಮಂಡ್ಯ ಬೇಬಿ ಬೆಟ್ಟ
Follow us on

ಮಂಡ್ಯ, ಮಾರ್ಚ್ 05: ವಿರೋಧದ ನಡುವೆಯೂ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ (Babybetta) ಇಂದಿನಿಂದ ನಾಲ್ಕು ದಿನ ಟ್ರಯಲ್ ಬ್ಲಾಸ್ಟ್​​ಗೆ (Trail Blast) ಮುಹೂರ್ತ ಫಿಕ್ಸ್ ಆಗಿದೆ. ಈ ಸಂಬಂಧ ಹೊರ ರಾಜ್ಯದಿಂದ ತಜ್ಞರ ತಂಡ ಸೋಮವಾರ ರಾತ್ರಿಯೇ ಕೆಆರ್​ಎಸ್​​ನ (KRS) ರಾಯಲ್ ಆರ್ಕಿಡ್ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿಸಿದೆ. ತಜ್ಞರು ಇಂದು (ಮಾ.05) ಬೆಳಿಗ್ಗೆ ಕಾವೇರಿ ನೀರಾವರಿ ನಿಯಮ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳೊಂದೆಗೆ ಸಭೆ ನಡೆಸಲಿದ್ದಾರೆ. ಬಳಿಕ ಬೇಬಿ ಬೆಟ್ಟಕ್ಕೆ ತಜ್ಞರು ಭೇಟಿ ನೀಡಲಿದ್ದಾರೆ. ಬುಧವಾರ ಅಥವಾ ಗುರುವಾರ ಆಯ್ದ ಸ್ಥಳಗಳಲ್ಲಿ ಟ್ರಯಲ್​ ಬ್ಲಾಸ್ಟ್​ ನಡೆಸಲಿದ್ದಾರೆ.

ಈ ಟ್ರಯಲ್ ಬ್ಲಾಸ್ಟ್​​ ಅನ್ನು ವಿರೋಧಿಸಿ, ಟ್ರಯಲ್ ಬ್ಲಾಸ್ಟ್​ಗೆ ಆಗಮಿಸಿರುವ ತಜ್ಞರು ವಾಪಾಸ್ ತೆರಳುವಂತೆ ರೈತರು ಕೆಆರ್​ಎಸ್​ ಬೃಂದಾವನದ ಮುಖ್ಯ ದ್ವಾರದ ರಸ್ತೆಯಲ್ಲಿ ಗೋ ಬ್ಯಾಕ್ ಚಳುವಳಿ ನಡೆಸಲಿದ್ದಾರೆ. ರೈತ ಸಂಘ ಹಾಗೂ ಬೇಬಿ ಬೆಟ್ಟ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಬೆಳಿಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಯಲಿದೆ. ಬಿಜೆಪಿ ಕೂಡ ಪ್ರತ್ಯೇಕವಾಗಿ ಧರಣಿ ನಡೆಸಲು ನಿರ್ಧರಿಸಿದೆ.

ಕೆಆರ್​ಎಸ್​ ಡ್ಯಾಂನಿಂದ ಐದಾರು ಕಿಮೀ ದೂರದಲ್ಲೇ ಇರುವ ಬೇಬಿ ಬೆಟ್ಟದಲ್ಲಿ ಹಲವು ವರ್ಷಗಳಿಂದ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. ಗಣಿಗಾರಿಕೆಯಿಂದ ಕೆಆರ್​ಎಸ್​ಗೆ ಡ್ಯಾಂಗೆ ಹಾನಿಯಾಗುತ್ತದೆ ಎಂದು ಹಲವು ಹೋರಾಟಗಳು ನಡೆದವ. ರೈತ ಸಂಘಟನೆಗಳು, ಸಂಸದೆ ಸುಮಲತಾ ಅಂಬರೀಶ್​, ಸಾಮಾಜಿಕ ಕಾರ್ಯಕರ್ತರ ಹೋರಾಟದ ಪ್ರತಿಫಲವಾಗಿ ಹಿಂದಿನ ಬಿಜೆಪಿ ಸರ್ಕಾರ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಿಷೇಧಿಸಿತ್ತು. ಬೇಬಿ ಬೆಟ್ಟ ಸೇರಿದಂತೆ ಕೆಆರ್​ಎಸ್​ ಡ್ಯಾಂನ 20 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಲಾಗಿತ್ತು.

ಇದನ್ನೂ ಓದಿ: ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್​ ನಡೆಸದಂತೆ ರಾಜಮಾತೆ ಪ್ರಮೋದಾದೇವಿ ಅವರಿಂದ ಜಿಲ್ಲಾಧಿಕಾರಿಗೆ ಪತ್ರ

ಇದಾದ ಬಳಿಕ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಡೆಯಬೇಕೋ ಬೇಡವೋ, ಬೇಬಿ ಬೆಟ್ಟದ ಗಣಿಗಾರಿಕೆಯಿಂಧ ಕೆಆರ್​ಎಸ್​ ಅಣೆಕಟ್ಟೆಗೆ ಹಾನಿಯಾಗುತ್ತಾ ಎಂದು ತಿಳಿಯಲು ಮಾಡುವ ಉದ್ದೇಶದಿಂದ ಹೈಕೋರ್ಟ್​ ಟ್ರಯಲ್​ ಬ್ಲಾಸ್ಟ್​ ನಡೆಸಲು ಆದೇಶ ನೀಡಿದೆ. ಹೀಗಾಗಿ ರಾಜ್ಯ ಸರ್ಕಾರ ಇಂದಿನಿಂದ 4 ದಿನ ಟ್ರಯಲ್​​ ಬ್ಲಾಸ್ಟ್​ ನಡೆಸಲಿದೆ.

ಇನ್ನು ಈ ಟ್ರಯಲ್​ ಬ್ಲಾಸ್ಟ್​​ ಮಾಡುವಾಗ ಕಡಿಮೆ ಸ್ಫೋಟಕ ಬಳಸಿ ಬ್ಲಾಸ್ಟ್​​ ಮಾಡಿ ಕೆಆರ್​ಎಸ್​ಗೆ ತೊಂದರೆ ಆಗಲ್ಲ ಎಂದು ವರದಿ ನೀಡುತ್ತಾರೆ. ಬಳಿಕ ಬೆಟ್ಟದಲ್ಲಿ ಮತ್ತೆ ಗಣಿಗಾರಿಕೆ ಆರಂಭವಾಗಿ ಅಪಾರ ಪ್ರಮಾಣದ ಸ್ಫೋಟಕ ಬಳಸಿ ಬ್ಲಾಸ್ಟ್​ ಮಾಡುತ್ತಾರೆ. ಇದರಿಂದ ಕೆಆರ್​ಎಸ್​ಗೆ ಹಾನಿಯಾಗುತ್ತದೆ. ಹೀಗಾಗಿ ಟ್ರಯಲ್​ ಬ್ಲಾಸ್ಟ್​ ಮಾಡಬಾರದು ಎಂದು ರೈತ ಸಂಘ ಹಾಗೂ ಬಿಜೆಪಿ ಆಗ್ರಹಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ