ಮಂಡ್ಯದ ಬೇಬಿ ಬೆಟ್ಟದಲ್ಲಿ ಇಂದಿನಿಂದ 4 ದಿನ ಟ್ರಯಲ್ ಬ್ಲಾಸ್ಟ್​​: ರೈತ ಸಂಘಟನೆಗಳು, ಬಿಜೆಪಿಯಿಂದ ಪ್ರತಿಭಟನೆ

ಹೈಕೋರ್ಟ್​ ಆದೇಶದಂತೆ ರಾಜ್ಯ ಸರ್ಕಾರ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ಇಂದಿನಿಂದ ನಾಲ್ಕು ದಿನ ಟ್ರಯಲ್ ಬ್ಲಾಸ್ಟ್​​ ನಡೆಸಲಿದೆ. ಟ್ರಯಲ್ ಬ್ಲಾಸ್ಟ್​ಗೆ ಆಗಮಿಸಿರುವ ತಜ್ಞರು ವಾಪಾಸ್ ತೆರಳುವಂತೆ ರೈತರು ಕೆಆರ್​ಎಸ್​ ಬೃಂದಾವನದ ಮುಖ್ಯ ದ್ವಾರದ ರಸ್ತೆಯಲ್ಲಿ ಗೋ ಬ್ಯಾಕ್ ಚಳುವಳಿ ನಡೆಸಲಿದ್ದಾರೆ.

ಮಂಡ್ಯದ ಬೇಬಿ ಬೆಟ್ಟದಲ್ಲಿ ಇಂದಿನಿಂದ 4 ದಿನ ಟ್ರಯಲ್ ಬ್ಲಾಸ್ಟ್​​: ರೈತ ಸಂಘಟನೆಗಳು, ಬಿಜೆಪಿಯಿಂದ ಪ್ರತಿಭಟನೆ
ಮಂಡ್ಯ ಬೇಬಿ ಬೆಟ್ಟ
Edited By: ವಿವೇಕ ಬಿರಾದಾರ

Updated on: Mar 05, 2024 | 9:47 AM

ಮಂಡ್ಯ, ಮಾರ್ಚ್ 05: ವಿರೋಧದ ನಡುವೆಯೂ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ (Babybetta) ಇಂದಿನಿಂದ ನಾಲ್ಕು ದಿನ ಟ್ರಯಲ್ ಬ್ಲಾಸ್ಟ್​​ಗೆ (Trail Blast) ಮುಹೂರ್ತ ಫಿಕ್ಸ್ ಆಗಿದೆ. ಈ ಸಂಬಂಧ ಹೊರ ರಾಜ್ಯದಿಂದ ತಜ್ಞರ ತಂಡ ಸೋಮವಾರ ರಾತ್ರಿಯೇ ಕೆಆರ್​ಎಸ್​​ನ (KRS) ರಾಯಲ್ ಆರ್ಕಿಡ್ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿಸಿದೆ. ತಜ್ಞರು ಇಂದು (ಮಾ.05) ಬೆಳಿಗ್ಗೆ ಕಾವೇರಿ ನೀರಾವರಿ ನಿಯಮ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳೊಂದೆಗೆ ಸಭೆ ನಡೆಸಲಿದ್ದಾರೆ. ಬಳಿಕ ಬೇಬಿ ಬೆಟ್ಟಕ್ಕೆ ತಜ್ಞರು ಭೇಟಿ ನೀಡಲಿದ್ದಾರೆ. ಬುಧವಾರ ಅಥವಾ ಗುರುವಾರ ಆಯ್ದ ಸ್ಥಳಗಳಲ್ಲಿ ಟ್ರಯಲ್​ ಬ್ಲಾಸ್ಟ್​ ನಡೆಸಲಿದ್ದಾರೆ.

ಈ ಟ್ರಯಲ್ ಬ್ಲಾಸ್ಟ್​​ ಅನ್ನು ವಿರೋಧಿಸಿ, ಟ್ರಯಲ್ ಬ್ಲಾಸ್ಟ್​ಗೆ ಆಗಮಿಸಿರುವ ತಜ್ಞರು ವಾಪಾಸ್ ತೆರಳುವಂತೆ ರೈತರು ಕೆಆರ್​ಎಸ್​ ಬೃಂದಾವನದ ಮುಖ್ಯ ದ್ವಾರದ ರಸ್ತೆಯಲ್ಲಿ ಗೋ ಬ್ಯಾಕ್ ಚಳುವಳಿ ನಡೆಸಲಿದ್ದಾರೆ. ರೈತ ಸಂಘ ಹಾಗೂ ಬೇಬಿ ಬೆಟ್ಟ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಬೆಳಿಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಯಲಿದೆ. ಬಿಜೆಪಿ ಕೂಡ ಪ್ರತ್ಯೇಕವಾಗಿ ಧರಣಿ ನಡೆಸಲು ನಿರ್ಧರಿಸಿದೆ.

ಕೆಆರ್​ಎಸ್​ ಡ್ಯಾಂನಿಂದ ಐದಾರು ಕಿಮೀ ದೂರದಲ್ಲೇ ಇರುವ ಬೇಬಿ ಬೆಟ್ಟದಲ್ಲಿ ಹಲವು ವರ್ಷಗಳಿಂದ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. ಗಣಿಗಾರಿಕೆಯಿಂದ ಕೆಆರ್​ಎಸ್​ಗೆ ಡ್ಯಾಂಗೆ ಹಾನಿಯಾಗುತ್ತದೆ ಎಂದು ಹಲವು ಹೋರಾಟಗಳು ನಡೆದವ. ರೈತ ಸಂಘಟನೆಗಳು, ಸಂಸದೆ ಸುಮಲತಾ ಅಂಬರೀಶ್​, ಸಾಮಾಜಿಕ ಕಾರ್ಯಕರ್ತರ ಹೋರಾಟದ ಪ್ರತಿಫಲವಾಗಿ ಹಿಂದಿನ ಬಿಜೆಪಿ ಸರ್ಕಾರ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಿಷೇಧಿಸಿತ್ತು. ಬೇಬಿ ಬೆಟ್ಟ ಸೇರಿದಂತೆ ಕೆಆರ್​ಎಸ್​ ಡ್ಯಾಂನ 20 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಲಾಗಿತ್ತು.

ಇದನ್ನೂ ಓದಿ: ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್​ ನಡೆಸದಂತೆ ರಾಜಮಾತೆ ಪ್ರಮೋದಾದೇವಿ ಅವರಿಂದ ಜಿಲ್ಲಾಧಿಕಾರಿಗೆ ಪತ್ರ

ಇದಾದ ಬಳಿಕ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಡೆಯಬೇಕೋ ಬೇಡವೋ, ಬೇಬಿ ಬೆಟ್ಟದ ಗಣಿಗಾರಿಕೆಯಿಂಧ ಕೆಆರ್​ಎಸ್​ ಅಣೆಕಟ್ಟೆಗೆ ಹಾನಿಯಾಗುತ್ತಾ ಎಂದು ತಿಳಿಯಲು ಮಾಡುವ ಉದ್ದೇಶದಿಂದ ಹೈಕೋರ್ಟ್​ ಟ್ರಯಲ್​ ಬ್ಲಾಸ್ಟ್​ ನಡೆಸಲು ಆದೇಶ ನೀಡಿದೆ. ಹೀಗಾಗಿ ರಾಜ್ಯ ಸರ್ಕಾರ ಇಂದಿನಿಂದ 4 ದಿನ ಟ್ರಯಲ್​​ ಬ್ಲಾಸ್ಟ್​ ನಡೆಸಲಿದೆ.

ಇನ್ನು ಈ ಟ್ರಯಲ್​ ಬ್ಲಾಸ್ಟ್​​ ಮಾಡುವಾಗ ಕಡಿಮೆ ಸ್ಫೋಟಕ ಬಳಸಿ ಬ್ಲಾಸ್ಟ್​​ ಮಾಡಿ ಕೆಆರ್​ಎಸ್​ಗೆ ತೊಂದರೆ ಆಗಲ್ಲ ಎಂದು ವರದಿ ನೀಡುತ್ತಾರೆ. ಬಳಿಕ ಬೆಟ್ಟದಲ್ಲಿ ಮತ್ತೆ ಗಣಿಗಾರಿಕೆ ಆರಂಭವಾಗಿ ಅಪಾರ ಪ್ರಮಾಣದ ಸ್ಫೋಟಕ ಬಳಸಿ ಬ್ಲಾಸ್ಟ್​ ಮಾಡುತ್ತಾರೆ. ಇದರಿಂದ ಕೆಆರ್​ಎಸ್​ಗೆ ಹಾನಿಯಾಗುತ್ತದೆ. ಹೀಗಾಗಿ ಟ್ರಯಲ್​ ಬ್ಲಾಸ್ಟ್​ ಮಾಡಬಾರದು ಎಂದು ರೈತ ಸಂಘ ಹಾಗೂ ಬಿಜೆಪಿ ಆಗ್ರಹಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Prashantha B

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More
Follow Us