ಮಂಡ್ಯ: ನೇಣು ಬಿಗಿದುಕೊಂಡು ಪತ್ನಿ ಆತ್ಮಹತ್ಯೆ, ಇತ್ತ ಪತಿ ಕೂಡ ಕೆರೆಗೆ ಹಾರಿ ಸಾವು; ಆಗಿದ್ದೇನು?

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 21, 2024 | 8:36 PM

ಅವರದ್ದು ಸುಂದರ ಸಂಸಾರವಾಗಿತ್ತು. ಹತ್ತಾರು ಎಕರೆ ಜಮೀನು, ಒಳ್ಳೆಯ ಮನೆ, ಮುದ್ದಾದ ಮಗು, ಜೀವನ ಮಾಡೋದಕ್ಕೇ ಬೇರೇನೂ ಬೇಕಾಗಿರಲಿಲ್ಲ. ಆದರೆ, ಅಂತಹ ಸಂಸಾರದ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಇಡೀ ಸಂಸಾರವೇ ಸ್ಮಶಾನವಾಗಿದೆ‌. ಕೌಟುಂಬಿಕ ಕಲಹಕ್ಕೆ ಪತ್ನಿ ನೇಣುಬಿಗಿದುಕೊಂಡು ಆತ್ಮಹತ್ಯೆ ‌ಮಾಡಿಕೊಂಡರೇ, ಪತಿ ಸಾವಿನ ಭಯದಲ್ಲೇ ಕೆರೆಗೆ ಹಾರಿ ಪತಿ ಸಾವನ್ನಪ್ಪಿದ್ದಾನೆ. ಈ ಕುರಿತು ಒಂದು ವರದಿ ಇಲ್ಲಿದೆ.

ಮಂಡ್ಯ: ನೇಣು ಬಿಗಿದುಕೊಂಡು ಪತ್ನಿ ಆತ್ಮಹತ್ಯೆ, ಇತ್ತ ಪತಿ ಕೂಡ ಕೆರೆಗೆ ಹಾರಿ ಸಾವು; ಆಗಿದ್ದೇನು?
ಕೆಆರ್‌ ಪೇಟೆಯಲ್ಲಿ ದಂಪತಿ ಆತ್ಮಹತ್ಯೆ
Follow us on

ಮಂಡ್ಯ, ಆ.21: ಕೌಟುಂಬಿಕ ಕಲಹದಿಂದ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದು, ಅವರ ಒಂದು ವರ್ಷದ ಮಗು ಅನಾಥವಾದ ಘಟನೆ ಮಂಡ್ಯ ಜಿಲ್ಲೆಯ ಕೆಆರ್‌ ಪೇಟೆ(KR pete) ತಾಲೂಕಿನ ಗದ್ದೆಹೊಸರು ಗ್ರಾಮದಲ್ಲಿ ನಡೆದಿದೆ. ಮೋಹನ್ ಹಾಗೂ ಸ್ವಾತಿ ಮೃತ ದಂಪತಿ. ಕಳೆದ ಎರಡು ವರ್ಷಗಳ ಹಿಂದೆ ಮನೆಯವರು ಸೇರಿಕೊಂಡು ಮದುವೆ ಮಾಡಿದ್ದರು. ಇದಾದ ನಂತರ ಇವರಿಗೆ ಮುದ್ದಾದ ಒಂದು ಹೆಣ್ಣು ಮಗು ಸಹ ಆಗಿದೆ. ಇದೀಗ ಮನೆಯಲ್ಲಿ ಎದ್ದಿದ್ದ ಕಲಹಕ್ಕೆ ಇಬ್ಬರು ಸಾವನ್ನಪ್ಪಿದ್ದರೆ, ಮಗು ಅನಾಥವಾಗಿದೆ.

ಅಂದಹಾಗೆ ಮೋಹನ್‌ಗೆ ಸುಮಾರು 25 ಎಕರೆ ತೋಟವಿದ್ದು, ತೋಟದ‌ಲ್ಲೇ ಮನೆಯನ್ನು ಕಟ್ಟಿಕೊಂಡು ಆ ಮನೆಯಲ್ಲಿ ವಾಸವಿದ್ದರು. ಆಗಾಗ ಮೋಹನ್ ಮತ್ತು ಸ್ವಾತಿ ನಡುವೆ ಜಗಳವಾಗುತ್ತಿತ್ತು. ಬಳಿಕ ಮನೆಯವರೇ ಇವರಿಗೆ ಸಮಾಧಾನ ಮಾಡುತ್ತಿದ್ದರು. ಆದ್ರೆ, ನಿನ್ನೆ(ಆ.20) ಸಂಜೆ ಮನೆಯಲ್ಲಿ ಯಾರು ಇಲ್ಲದೇ ಇಬ್ಬರ ನಡುವೆ ಜಗಳ ವಿಕೋಪಕ್ಕೆ ತಿರುಗಿದೆ‌. ನಂತರ ಸ್ವಾತಿ ಅಣ್ಣ, ಆ ಹೆಣ್ಣು ಮಗುವನ್ನು ಕರೆದುಕೊಂಡು ಬಂದಿದ್ದಾರೆ. ನಂತರ ಹೋಗಿ ನೋಡಿದಾಗ ಸ್ವಾತಿ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿತ್ತು. ಆಗ ಆಕೆಯ ಕುಟುಂಬಸ್ಥರೆಲ್ಲರೂ ಮನೆಯ ಬಳಿ ಬಂದು ಸ್ವಾತಿ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ವೇಳೆ‌ ಮೋಹನ್ ಅಲ್ಲಿಂದ ಪರಾರಿಯಾಗಿದ್ದ.

ಇದನ್ನೂ ಓದಿ:ಆನ್​​ಲೈನ್​ ಗೇಮ್ ಗೀಳಿಗೆ ಕುಟುಂಬವೇ ಸರ್ವನಾಶ! ಸಾಲಗಾರರ ಕಾಟಕ್ಕೆ ಹೆದರಿ ಮಗಳು, ಮಡದಿಯೊಂದಿಗೆ ಆತ್ಮಹತ್ಯೆ

ಆನ್​ಲೈನ್ ಬೆಟ್ಟಿಂಗ್​ಗಾಗಿ ಹಣ ನೀಡುವಂತೆ ಪತ್ನಿಗೆ ಕಿರುಕುಳ ಆರೋಪ

ಬಳಿಕ ಸ್ವಾತಿಯ ಕುಟುಂಬಸ್ಥರು ಮನೆಯಲ್ಲಿ ಇದ್ದ ಪೀಠೋಪಕರಣಗಳು ಹಾಗೂ ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಹೊಡೆದು ಹಾಕಿ ಬಳಿಕ ಕೊಬ್ಬರಿ ಗೋಡೋನ್‌ಗೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ನಂತರ ಇಂದು ಬೆಳಗ್ಗೆ ಮನೆಯ 500 ಮೀಟರ್ ದೂರದಲ್ಲಿ ಇದ್ದ ಕೆರೆಯಲ್ಲಿ ಮೋಹನ್ ಶವ ಸಹ ಪತ್ತೆಯಾಗಿದೆ. ಇದೀಗ ಸ್ವಾತಿ ಪೋಷಕರು ಮೋಹನ್ ಪೋಷಕರ ವಿರುದ್ಧ ಕೊಲೆ, ವರದಕ್ಷಿಣೆ ಕೇಸ್‌ ಸಹ ನೀಡಿದ್ದಾರೆ. ಆನ್ ಲೈನ್ ಬೆಟ್ಟಿಂಗ್ ನಿಂದಾಗಿ ಸ್ವಾತಿಗೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಮೃತ ಸ್ವಾತಿಯ ಘೋಷಕರು ಆರೋಪಿಸಿದ್ದಾರೆ.

ಅನಾಥವಾದ ಒಂದು ವರ್ಷದ ಮುದ್ದಾದ ಕಂದಮ್ಮ

ಇನ್ನು ಸ್ವಾತಿಯನ್ನ ಚೆನ್ನಾಗಿಯೇ ನೋಡಿಕೊಂಡಿದ್ದು, ನಾವೇ ಸಾಕಷ್ಟು ಹಣವನ್ನ ಕೊಟ್ಟಿದ್ದೇವೆ. ಆಕೆಯನ್ನ ಮಗಳ ರೀತಿಯಲ್ಲಿ ನೋಡಿಕೊಂಡಿದ್ದೇವೆ. ಆದರೆ, ಆಕೆ ಯಾಕೆ ಆತ್ಮಹತ್ಯೆ ‌ಮಾಡಿಕೊಂಡಿದ್ದಾಳೆ ಗೊತ್ತಿಲ್ಲ. ನಮ್ಮ ಮಗ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ಮೋಹನ್ ತಾಯಿ ಆರೋಪಿಸಿದ್ದಾರೆ‌. ಒಟ್ಟಾರೆ ಕೌಟುಂಬಿಕ ಕಲಹಕ್ಕೆ ಎರಡು ಜೀವಗಳು ಬಲಿಯಾಗಿವೆ. ಅಪ್ಪ-ಅಮ್ಮನ ಈ ಸಾವಿನಿಂದಾಗಿ ಒಂದು ವರ್ಷದ ಮುದ್ದಾದ ಕಂದಮ್ಮ ಅನಾಥವಾಗಿದೆ‌. ಈ ಸಂಬಂಧ ಕೆ ಆರ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ