ಮಂಡ್ಯದಲ್ಲಿ ಡಿಸಿ, ಎಸ್​ಪಿ ಮುಂದೆಯೇ ರೌಡಿಶೀಟರ್​ಗೆ ಸನ್ಮಾನ ಮಾಡಿದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ

ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಮಂಡ್ಯ ಜಿಲ್ಲಾಧಿಕಾರಿ, ಎಸ್​ಪಿ ಎದುರೇ ರೌಡಿಶೀಟರ್​ಗೆ ಸನ್ಮಾನ ಮಾಡಿದ್ದಾರೆ. ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಮಾಡುವ ಪೊಲೀಸರ ಎದುರೇ ಒಬ್ಬ ರೌಡಿಶೀಟರ್​ಗೆ ಸನ್ಮಾನ ಮಾಡುತ್ತಾರೆ ಎಂದರೆ ಏನರ್ಥ? ಸಮಾಜಕ್ಕೆ ಈ ಶಾಸಕರು ನೀಡುತ್ತಿರುವ ಸಂದೇಶವಾದರೂ ಏನು? ಎಂಬ ಪ್ರಶ್ನೆ ಎದ್ದಿದೆ.

ಮಂಡ್ಯದಲ್ಲಿ ಡಿಸಿ, ಎಸ್​ಪಿ ಮುಂದೆಯೇ ರೌಡಿಶೀಟರ್​ಗೆ ಸನ್ಮಾನ ಮಾಡಿದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ
ಡಿಸಿ, ಎಸ್​ಪಿ ಮುಂದೆಯೇ ರೌಡಿಶೀಟರ್​ಗೆ ಅಧಿಕಾರಿಗಳ ಕೈಯಿಂದ ಸನ್ಮಾನ ಮಾಡಿಸಿದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ
Edited By: Rakesh Nayak Manchi

Updated on: Oct 19, 2023 | 10:33 AM

ಮಂಡ್ಯ, ಅ.19: ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ ಬಂಡಿಸಿದ್ದೇಗೌಡ (Ramesha Bandisiddegowda) ಅವರು ಮಂಡ್ಯ ಜಿಲ್ಲಾಧಿಕಾರಿ, ಎಸ್​ಪಿ ಎದುರೇ ಅಧಿಕಾರಿಗಳ ಕೈಯಿಂದ ರೌಡಿಶೀಟರ್​ಗೆ ಸನ್ಮಾನ ಮಾಡಿಸಿದ್ದಾರೆ. ಸನ್ಮಾನ ಸ್ವೀಕರಿಸಿದ ನಂತರ ರೌಡಿಶೀಟರ್, ಶಾಸಕರ ಕಾಲಿಗೆ ಬಿದ್ದು ನಮಸ್ಕರಿಸಿದ ನಂತರ ಶಾಸಕ ರಮೇಶ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್​.ಚಲುವರಾಯಸ್ವಾಮಿ (N.Chaluvarayaswamy) ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾನೆ.

ಕೆಆರ್​ಎಸ್​​ನಲ್ಲಿ ನೃತ್ಯಕಾರಂಜಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯನೂ ಆಗಿರುವ ರೌಡಿ ಶೀಟರ್ ದೇವರಾಜು ಅಲಿಯಾಸ್ ಬುಲ್ಲಿ ಎಂಬಾತನಿಗೆ ಶಾಸಕ ರಮೇಶ್ ಅವರು ಅಧಿಕಾರಿಗಳ ಕೈಯಿಂದ ಸನ್ಮಾನಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮುಜುಗರ ಉಂಟಾಗುವಂತೆ ಮಾಡಿದ್ದಾರೆ.

ಹಲವಾರು ಅಪರಾಧಿ ಕೃತ್ಯದಲ್ಲಿ ಭಾಗಿಯಾಗಿರುವ ದೇವರಾಜು, ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದಿದ್ದರೂ ವೇದಿಕೆಗೆ ಕರೆದು ಗೌರವ ಸಮರ್ಪಣೆ ಮಾಡಲಾಗಿದೆ. ಶಾಸಕರ ಸೂಚನೆ ಮೇರೆಗೆ ಕಾವೇರಿ ನೀರಾವರಿ ನಿಗಮದಿಂದ ಗೌರವ ಸಮರ್ಪಣೆ ಮಾಡಲಾಗಿದೆ.

ಇದನ್ನೂ ಓದಿ: ಒಕ್ಕಲಿಗರ ಬಗ್ಗೆ ಸಾಹಿತಿ ಪ್ರೊ. ಭಗವಾನ್ ಅವಹೇಳನಕಾರಿ ಹೇಳಿಕೆ: ಮಂಡ್ಯ ಬಿಜೆಪಿ ಕಾರ್ಯಕರ್ತರಿಂದ ಎಸ್​ಪಿಗೆ ದೂರು

ರೌಡಿ ಶೀಟರ್​​ಗೆ ಸನ್ಮಾನಿಸಿದ ವೇದಿಕೆಯಲ್ಲಿ ಮಾತನಾಡುತ್ತಾ ತಮ್ಮನ್ನೇ ಉದಾಹರಣೆಯನ್ನಾಗಿಕೊಂಡು ಸಮರ್ಥನೆ ಮಾಡಿಕೊಂಡ ಶಾಸಕ ರಮೇಶ್ ಬಂಡಿಸಿದ್ದೇಗೌಡ, ತನ್ನ ಮೇಲೂ ಸಿಬಿಐ ಕೇಸ್ ಇದೆ. ಹಾಗಾದರೆ ನಾನೂ ಕಾರ್ಯಕ್ರಮಕ್ಕೆ ಹೋಗಬಾರದು. ಆಪಾದನೆ ಇದ್ದ ಮಾತ್ರಕ್ಕೆ ಅಪರಾಧಿ ಅಲ್ಲ ಎಂದು ಹೇಳಿ ಶಿಷ್ಯನ ಪರ ಬ್ಯಾಟಿಂಗ್ ಮಾಡಿದ್ದಾರೆ.

ಐದು ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಸಮಾಜ ಸೇವೆ ಹೆಸರಿನಲ್ಲಿ ರೌಡಿಶೀಟರ್​ಗಳು ರಾಜಕೀಯಕ್ಕೆ ಎಂಟ್ರಿಕೊಡಲು ಆರಂಭಿಸಿದ್ದರು. ರೌಡಿಶೀಟರ್​ಗಳಾದ ಸೈಲೆಂಟ್ ಸುನಿಲ, ಬೆತ್ತನಗೆರೆ ಶಂಕರ, ವಿಲ್ಸನ್ ಗಾರ್ಡನ್ ನಾಗ ಸೇರಿದಂತೆ ಅನೇಕರು ಬಿಜೆಪಿ ಸೇರ್ಪಡೆಯಾಗುವ ಮೂಲಕ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದರು. ಮಂಡ್ಯಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಅವರನ್ನು ರೌಡಿಶೀಟರ್ ಫೈಟರ್ ರವಿ ಸ್ವಾಗತಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು.

ಅಷ್ಟೇ ಅಲ್ಲದೆ, ಮಂಡ್ಯದಲ್ಲಿ ಜೆಡಿಎಸ್ ಶಾಸಕ ಡಿಸಿ ತಮ್ಮಣ್ಣ ಅವರು ಚುನಾವಣೆ ಸಂದರ್ಭದಲ್ಲಿ ವರುಣ್ ಗೌಡ ಅಲಿಯಾಸ್ 202 ಹಾಗೂ ಪ್ರಶಾಂತ್ ಅಲಿಯಾಸ್ ಕುಳ್ಳಿ ಸೇರಿದಂತೆ ರೌಡಿಶೀಟರ್​ಗಳ ಗ್ಯಾಂಗ್​ ಅನ್ನೇ ರೆಡ್ ಕಾರ್ಪೆಟ್ ಹಾಕಿ ತಮ್ಮ ಪಕ್ಷಕ್ಕೆ ಸ್ವಾಗತಿಸಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:30 am, Thu, 19 October 23

Prashantha B

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More
Follow Us