
ಭಾರೀ ಜಿದ್ದಾಜಿದ್ದಿನ ಕ್ಷೇತ್ರವಾದ ರಾಜರಾಜೇಶ್ವರಿನಗರ ಕ್ಷೇತ್ರದ ಮತದಾನ ನಿನ್ನೆ ಮುಗಿದಿದ್ದು ಇಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಮತದಾನದ ಬಗ್ಗೆ ತಮ್ಮ ಅಬಿಪ್ರಾಯ ಹಂಚಿಕೊಂಡಿದ್ದಾರೆ.
ಕೊರೊನಾ ಕಾಲದಲ್ಲಿ ಒಳ್ಳೆಯ ಮತದಾನವಾಗಿದೆ:
ಕೊರೊನಾ ಸಮಯದಲ್ಲಿ 45 % ಮತದಾನವಾಗಿರೋದು ಒಳ್ಳೆಯ ಮತದಾನ. ಆದರೆ ಕಳೆದ ಬಾರಿಗಿಂತ 7 % ಮತದಾನ ಕಡಿಮೆಯಾಗಿದೆ ಎಂದಿದ್ದಾರೆ. ಅಲ್ಲದೆ ಕಡಿಮೆ ಮತದಾನವಾಗಿರುವುದು ಯಾರಿಗೆ ಲಾಭ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ಮುನಿರತ್ನ ಕಳೆದ 134 ವರ್ಷಗಳಿಂದ ಅದನ್ನೇ ಹೇಳಿಕೊಂಡು ಬರ್ತಿದ್ದಾರೆ. ಕಡಿಮೆ ಪರ್ಸೆಂಟೆಜ್ ಆದ್ರೆ ನಮ್ಗೆ ಲಾಭ ಅಂತ ಹೇಳ್ತಾ ಬರ್ತಿದ್ದಾರೆ. ಆದರೆ ಜನರು ತುಂಬಾ ಬುದ್ಧಿವಂತರಿದ್ದಾರೆ. 20 % ಆಗ್ಲಿ 30 % ಆಗ್ಲಿ ಅಭಿವೃದ್ಧಿ ಮಾಡಿದವರಿಗೆ ಜನರು ವೋಟ್ ಹಾಕ್ತಾರೆ ಎಂದಿದ್ದಾರೆ.
ಬೈ ಎಲೆಕ್ಷನ್: ಶಿರಾ ಬಂಪರ್ ಮತದಾನ, ರಾಜರಾಜೇಶ್ವರಿ ನಗರ ನೀರಸ ನೀರಸ
ಕಡಿಮೆ ಮತದಾನವಾದ್ರೆ ನಮ್ಗೆ ಲಾಭ ಅಗುತ್ತೆ ಅನ್ನೋದನ್ನ ಬಿಟ್ಟು ಮುಂದೆ ಜನರ ಜೊತೆ ಯಾವ ರೀತಿ ಬೆರೆಯಬೇಕು ಎಂಬುದನ್ನು ಚಿಂತೆ ಮಾಡಿದ್ರೆ ಕಾಂಗ್ರೆಸ್ ಉಳಿಯುತ್ತೆ ಎಂದಿದ್ದಾರೆ. ಜೊತೆಗೆ 50 ಸಾವಿರ ಮತಗಳಿಂದ ಮುನಿರತ್ನ ಗೆಲ್ತಾರೆ ಎನ್ನುವ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುನಿರತ್ನ ಅದು ಯಡಿಯೂರಪ್ನವರ ಹಿರಿತನದ ಆಧಾರದಲ್ಲಿ ಹೇಳಿದ್ದಾರೆ.
ಯಡಿಯೂರಪ್ಪನವರು ಕೊಟ್ಟ ಮಾತು ತಪ್ಪೋದಿಲ್ಲ..
ನಾನು ಮತದಾರರಲ್ಲಿ ಮತ ಭಿಕ್ಷೆ ಕೇಳಿದ್ದೇನೆ. ಹೀಗಾಗಿ ಎಷ್ಟು ಮತಗಳಿಂದ ಗೆಲ್ತೇನೆ ಅನ್ನೋದನ್ನ ಈಗ ಹೇಳೋದಿಲ್ಲ. ಅಲ್ಲದೆ ಯಡಿಯೂರಪ್ಪನವರು ಕೊಟ್ಟ ಮಾತು ತಪ್ಪೋದಿಲ್ಲ. ಇದು ಸೂರ್ಯಚಂದ್ರ ಇರೋವರೆಗೂ ಸತ್ಯ. ಆ ಮಾತಿನ ಪ್ರಕಾರ ಈಗಾಗಲೇ ಎಲ್ಲರನ್ನೂ ಸಚಿವರನ್ನಾಗಿ ಮಾಡಿದ್ದಾರೆ ಎಂದಿದ್ದಾರೆ.
ಯಡಿಯೂರಪ್ಪನವರು ಮಾತು ಕೊಟ್ಟಂತೆ ಮಂತ್ರಿ ಮಾಡ್ತೀನಿ ಅಂತ ನನಗೂ ಹೇಳಿದ್ದಾರೆ ಆದರಿಂದ ಸಚಿವ ಸ್ಥಾನ ನೀಡುವ ಬಗ್ಗೆ ಈಗಲೇ ನಾನು ಏನು ಹೇಳುವುದಿಲ್ಲ. ಮುಂದಿನ ಭವಿಷ್ಯ ಏನು ಅನ್ನೋದು ಯಾರಿಗೂ ಗೊತ್ತಿಲ್ಲ ಅದನ್ನ ಕಾಲವೇ ಉತ್ತರ ಕೊಡುತ್ತೆ ಎಂದರು.
ನನ್ನ ರಾಜಕೀಯ ಸ್ನೇಹಿತರು ಪವರ್ ಖಾತೆಯನ್ನೆ ತಗೋ ಎಂದಿದ್ದಾರೆ..
ನಾವು ಕಾಂಗ್ರೆಸ್ ನಿಂದ ಹೊದಾಗ ಕೆಲವರು ಶುಭ ಕೋರಿದ್ರು. ನಿಮ್ಗೆ ಒಳ್ಳೆಯದಾಗ್ಲಿ ಒಳ್ಳೆಯ ಪೋರ್ಟ್ ಫೋಲಿಯೋ ಸಿಗಲಿ ಎಂದಿದ್ದರು. ಅಲ್ಲದೆ ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪೋದಿಲ್ಲ ಎಂದು ಅವರೂ ಸಹ ಹೇಳಿದ್ದಾರೆ. ಹಾಗೆಯೇ ನನಗೆ ಅಶಿರ್ವಾದ ಮಾಡಿ ಕಳಿಸಿದವರು ಪವರ್ ಖಾತೆಯನ್ನೆ ತಗೋ, ಪವರ್ ಖಾತೆಯನ್ನು ಬೇರೆಯವರಿಗೆ ಬಿಟ್ಟುಕೊಡಬೇಡ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಪರೋಕ್ಷವಾಗಿ ಡಿಕೆಶಿಗೆ ಮುನಿರತ್ನ ಟಾಂಗ್ ನೀಡಿದರು.
ನಕಲಿ ವೋಟರ್ ಐಡಿ ಆರೋಪ ಕುರಿತಂತೆ ಮುನಿರತ್ನ ಮತ್ತೆ ಆಣೆ ಪ್ರಮಾಣದ ಬಗ್ಗೆ ಮಾತನಾಡಿದಲ್ಲದೆ ಎಲ್ಲಿ ಬೇಕಾದರೂ ಅಣೆ ಪ್ರಮಾಣ ಮಾಡಲು ನಾನು ಸಿದ್ದ. ಹಾಗಾಗಿ ಅವರು ಯಾವ ದೇವರನ್ನ ನಂಬ್ತಾರೋ ಅಲ್ಲಿಯೇ ನಾನು ಆಣೆ ಮಾಡಲು ಸಿದ್ದ ಎಂದಿದ್ದಾರೆ.