Mysuru News: ಮೈಸೂರಿನಲ್ಲಿ ಮಾಜಿ ಸಚಿವರ ಕಾರನ್ನೇ ಕದ್ದ ಖದೀಮ, ಕಳ್ಳನ ಕೈಚಳ ಸಿಸಿಟಿವಿಯಲ್ಲಿ ಸೆರೆ

|

Updated on: Jun 07, 2023 | 1:33 PM

ಕಳ್ಳರಿಗೆ ಕಳ್ಳತನ ಮಾಡುವುದಕ್ಕೆ ಜಾಗ ಯಾವುದಾದರೇನು? ಯಾರದ್ದಾದರೇನು? ಅದು ಖದೀಮರಿಗೆ ಸಂಬಂಧ ಇಲ್ಲ. ಹೌದು ಮೈಸೂರಿನಲ್ಲಿ ಮಾಜಿ ಸಚಿವರೊಬ್ಬರ ಕಾರನ್ನೇ ಖದೀಮ ಎಗರಿಸಿಕೊಂಡು ಹೋಗಿದ್ದಾನೆ. ಇನ್ನು ಕಳ್ಳರ ಕೈಚಳ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೈಸೂರು: ಕಳ್ಳರಿಗೆ ಕಳ್ಳತನ ಮಾಡುವುದಕ್ಕೆ ಜಾಗ ಯಾವುದಾದರೇನು? ಯಾರದ್ದಾದರೇನು? ಅದು ಖದೀಮರಿಗೆ ಸಂಬಂಧ ಇಲ್ಲ. ನಿಜ ಮೈಸೂರಿನಲ್ಲಿ ಮಾಜಿ ಸಚಿವ ಶಿವಣ್ಣ ಕಾರನ್ನೇ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಮೈಸೂರಿನ (Mysuru) ವಿಜಯನಗರ ಮೂರನೇ‌ ಹಂತದಲ್ಲಿ ಘಟನೆ ನಡೆದಿದೆ.  ಮುಸುಕುಧಾರಿ ಓರ್ವ,  ಮಾಜಿ ಸಚಿವ ಕೋಟೆ ಶಿವಣ್ಣ ಅವರ ಇನ್ನೋವಾ ಕಾರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಕಾಂಪೌಂಡ್ ಹಾರಿ ಮನೆಯೊಳಗೆ ನುಗ್ಗಿ ಕೀ ತೆಗೆದುಕೊಂಡು ಬಂದು ಕಾರನ್ನು ಓಡಿಸಿಕೊಂಡು ಹೋಗಿದ್ದಾನೆ. ಜೂನ್ 6ರ ಮಧ್ಯರಾತ್ರಿ 1 ಗಂಟೆಯಲ್ಲಿ ಈ ಕೃತ್ಯ ನಡೆದಿದ್ದು, ಕಳ್ಳನ ಕರಾಮತ್ತು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಾಂಪೌಂಡ್ ಹಾರಿ ಮನೆಯೊಳಗೆ ನುಗ್ಗಿರುವ ಕಳ್ಳ ಕೀ ತೆಗೆದುಕೊಂಡು ಬಂದ ಕಾರು ತೆಗೆದುಕೊಂಡು ಹೋಗಿದ್ದಾನೆ. ಕಾರು ಕದ್ದವನು ಮತ್ತೆ ಬಂದು ಫೈಲ್‌ಗಳು ಹಾಗೂ ಗಣಪತಿ ವಿಗ್ರಹ ಇಟ್ಟು ಹೋಗಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಇನ್ನು ಘಟನೆ ಬಗ್ಗೆ ಮಾಧ್ಯಮಗಖಿಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೋಟೆ ಶಿವಣ್ಣ. 20 ವರ್ಷದಲ್ಲಿ ಇಂತಹ ಘಟನೆ ಆಗಿರಲಿಲ್ಲ. ಜೂನ್‌ 5 ರಂದು ಹೆಚ್‌ ಡಿ.ಕೋಟೆಗೆ ಹೋಗಿ ಬಂದು ರಾತ್ರಿ 8 ಗಂಟೆಗೆ ಕಾರು ನಿಲ್ಲಿಸಿದ್ದೆ. ಈ ರಸ್ತೆಯಲ್ಲಿ ನೂರಾರು ಕಾರು ನಿಲ್ಲುತ್ತವೆ. ಜೂನ್ 5 ಸಂಜೆ ಕಾರು ನಿಲ್ಲಿಸಿ ಡ್ರೈವರ್ ಕೀ ಕೊಟ್ಟು ಹೋಗಿದ್ದ. ಮಾರನೇ ದಿನ ಬೆಳಿಗ್ಗೆ ಕಾರು ನೋಡಿದರೆ ಕಾಣಲಿಲ್ಲ. ಮನೆಯವರನ್ನು ವಿಚಾರಿಸಿದೆ ಯಾರೂ ತೆಗೆದುಕೊಂಡು ಹೋಗಿರಲಿಲ್ಲ. ತಕ್ಷಣ ಪೊಲೀಸ್ ಕಮೀಷನರ್‌ಗೆ ಹೇಳಿದೆ. ತಕ್ಷಣ ಪೊಲೀರು ಬಂದು ಪರಿಶೀಲನೆ ಮಾಡಿದರು ಎಂದರು.

ಸಿಸಿ ಕ್ಯಾಮೆರಾ ನೋಡಿದಾಗ ಮಧ್ಯರಾತ್ರಿ 1 ಗಂಟೆಗೆ ಕಾರು ಕಳ್ಳತನ ಆಗಿರುವುದು ಗೊತ್ತಾಗಿದೆ. ಕಳ್ಳ ಕಾಂಪೌಂಡ್ ಹಾರಿ ಬಂದಿದ್ದಾನೆ. ಆತನ ಹಿಂದೆ ಯಾರೋ ಸೇರಿಕೊಂಡು ವ್ಯವಸ್ಥಿತಿವಾಗಿ ಕಳ್ಳತನ ಮಾಡಿದ್ದಾನೆ. ಕಾರು ಕದ್ದವನು ಮತ್ತೆ ಬಂದು ಫೈಲ್‌ಗಳು ಹಾಗೂ ಗಣಪತಿ ವಿಗ್ರಹ ಇಟ್ಟು ಹೋಗಿದ್ದಾನೆ. ಕೆಲವು ದಿನಗಳ ಹಿಂದೆ ಇದೇ ರೀತಿ ಕಾರು ಕಳ್ಳತನ ಆಗಿದೆ. ಮಾಜಿ ಮಂತ್ರಿಗೇ ಈ ರೀತಿ ಆದರೆ ಜನ ಸಾಮಾನ್ಯರ ಗತಿ ಏನು ? ಹೊರ ರಾಜ್ಯದವರಾ ಅಥವಾ ಇಲ್ಲಿಯವರೋ ಗೊತ್ತಾಗುತ್ತಿಲ್ಲ. ಡಿಜಿ, ಐಜಿ, ಗೃಹ ಸಚಿವರನ್ನು ಖುದ್ದು ಭೇಟಿ ಮಾಡಿ ದೂರು ನೀಡುವೆ. ನನ್ನ ಬಳಿ ಕೆಲಸ ಮಾಡಿದವರು ಯಾರೋ ಕೃತ್ಯ ಮಾಡಿದ್ದಾರೆ ಅನ್ನಿಸಿಲ್ಲ. ಆದರೆ ವ್ಯವಸ್ಥಿತವಾಗಿ ಕಾರು ಕಳ್ಳತನ ಆಗಿದೆ ಎಂದು ಹೇಳಿದರು.

ಇನ್ನಷ್ಟು ಮೈಸೂರು ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 1:31 pm, Wed, 7 June 23