- TV9 Kannada Photo gallery Cricket photos IND vs ENG ODI: Rohit, Kohli, Bumrah's Grand Return After 967 days; Edgbaston Clash
IND vs ENG: 967 ದಿನಗಳ ನಂತರ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಟೀಂ ಇಂಡಿಯಾದ ತ್ರಿಮೂರ್ತಿಗಳು
IND vs ENG ODI: ಜುಲೈ 14ರಿಂದ ಭಾರತ vs ಇಂಗ್ಲೆಂಡ್ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಯೊಂದಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಬರೋಬ್ಬರಿ 967 ದಿನಗಳ ನಂತರ ಒಟ್ಟಿಗೆ ಏಕದಿನ ಪಂದ್ಯವನ್ನಾಡಲಿದ್ದಾರೆ. 2023ರ ವಿಶ್ವಕಪ್ ಫೈನಲ್ ಬಳಿಕ ಗಾಯ ಮತ್ತು ಕೆಲಸದ ಹೊರೆ ನಿರ್ವಹಣೆಯಿಂದಾಗಿ ದೂರ ಉಳಿದಿದ್ದ ಈ ತ್ರಯರ ಪುನರಾಗಮನವು ಟೀಂ ಇಂಡಿಯಾದ ಬಲವನ್ನು ಹೆಚ್ಚಿಸುವ ನಿರೀಕ್ಷೆಯಿದೆ.
Updated on: Jul 13, 2026 | 3:38 PM

ಭಾರತ ಮತ್ತು ಇಂಗ್ಲೆಂಡ್ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಇದೇ ಜುಲೈ 14 ರಿಂದ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯಕ್ಕೆ ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಮೈದಾನ ಆತಿಥ್ಯವಹಿಸುತ್ತಿದೆ. ಈ ಪಂದ್ಯದೊಂದಿಗೆ ಟೀಂ ಇಂಡಿಯಾದ ಹಲವು ದಿಗ್ಗಜ ಆಟಗಾರರು ಏಕದಿನ ಕ್ರಿಕೆಟ್ಗೆ ಮರಳುತ್ತಿದ್ದಾರೆ. ವಿಶೇಷವೆಂದರೆ ಟೀಂ ಇಂಡಿಯಾದ ಈ ಮೂವರು ಅನುಭವಿ ಆಟಗಾರರು ಒಟ್ಟಿಗೆ ಆಡಿ 2ವರ್ಷಕ್ಕೂ ಹೆಚ್ಚು ಸಮಯವಾಗಿತ್ತು. ಇದೀಗ ಈ ಮೂವರು ಒಟ್ಟಿಗೆ ಆಡುವುದನ್ನು ಕಾಣಬಹುದಾಗಿದೆ (PC-PTI).

ಇಂಗ್ಲೆಂಡ್ ವಿರುದ್ಧದ ಈ ಏಕದಿನ ಸರಣಿಗೆ 15 ಸದಸ್ಯರ ಭಾರತ ಏಕದಿನ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದ ನಾಯಕತ್ವ ಎಂದಿನಂತೆ ಶುಭ್ಮನ್ ಗಿಲ್ ಕೈಯಲಿದೆ. ಉಳಿದಂತೆ ಈ ತಂಡದಲ್ಲಿ ಅನುಭವಿಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾ ಬರೋಬ್ಬರಿ 967 ದಿನಗಳ ನಂತರ ಅಂದರೆ 32 ತಿಂಗಳುಗಳ ನಂತರ ಒಟ್ಟಿಗೆ ಆಡಲಿದ್ದಾರೆ (PC-PTI).

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾ ಕೊನೆಯದಾಗಿ ನವೆಂಬರ್ 19, 2023 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಒಟ್ಟಿಗೆ ಆಡಿದ್ದರು. ಆ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ, ಭಾರತವನ್ನು ಸೋಲಿಸಿ ಚಾಂಪಿಯನ್ ಆಯಿತು. ಆ ಪಂದ್ಯದ ಬಳಿಕ ಈ ಮೂವರು ಒಟ್ಟಿಗೆ ಏಕದಿನ ಪಂದ್ಯವನ್ನು ಆಡಿರಲಿಲ್ಲ (PC-PTI).

2023 ರ ಏಕದಿನ ವಿಶ್ವಕಪ್ ನಂತರ ಈ ಮೂವರು ಏಕದಿನ ಪಂದ್ಯಗಳಲ್ಲಿ ಒಟ್ಟಿಗೆ ಆಡದಿರಲು ಕಾರಣ ಕೆಲವೊಮ್ಮೆ ಗಾಯ ಮತ್ತು ಕೆಲವೊಮ್ಮೆ ಕೆಲಸದ ಹೊರೆ ನಿರ್ವಹಣೆ. ಇದೀಗ 967 ದಿನಗಳ ನಂತರ, ಈ ಮೂವರು ಮತ್ತೊಮ್ಮೆ ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ಇಂಗ್ಲೆಂಡ್ ವಿರುದ್ಧ ಆಡುವುದನ್ನು ಕಾಣಬಹುದು. ಈ ಮೂವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದರೆ, ಟೀಂ ಇಂಡಿಯಾ ಟಿ20 ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಬಹುದಾಗಿದೆ (PC-PTI).

ಏಕದಿನ ಸರಣಿಗೆ ಭಾರತ ತಂಡ: ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಅರ್ಶ್ದೀಪ್ ಸಿಂಗ್, ಗುರ್ನೂರ್ ಬ್ರಾರ್, ಶಿವಂ ದುಬೆ (PC-PTI).




