ಟಿ.ನರಸೀಪುರದಲ್ಲಿ ಚಿರತೆ ಸೆರೆಗೆ ಟಾಸ್ಕ್ ಫೋರ್ಸ್ ರಚಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ

ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಚಿರತೆ ದಾಳಿಗೆ ಒಟ್ಟು ನಾಲ್ವರು ಬಲಿಯಾಗಿದ್ದಾರೆ. ಈ ಬಗ್ಗೆ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳವಳ ವ್ಯಕ್ತಿಡಿಸಿದರಲ್ಲದೆ, ಚಿರತೆ ಸೆರೆಹಿಡಿಯಲು ಟಾಸ್ಕ್ ಫೋರ್ಸ್ ರಚನೆಗೆ ಸೂಚಿಸಿದರು.

ಟಿ.ನರಸೀಪುರದಲ್ಲಿ ಚಿರತೆ ಸೆರೆಗೆ ಟಾಸ್ಕ್ ಫೋರ್ಸ್ ರಚಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಎಡ ಚಿತ್ರ)
Follow us
| Updated By: Rakesh Nayak Manchi

Updated on: Jan 24, 2023 | 10:48 PM

ಮೈಸೂರು: ಜಿಲ್ಲೆಯ ಟಿ.ನರಸೀಪುರ (T.Narasipura) ತಾಲೂಕಿನಲ್ಲಿ ಜನರ ನಿದ್ದೆಗೆಡಿಸಿದ ಚಿರತೆಗಳ ಸೆರೆಗೆ ಟಾಸ್ಕ್​ ಫೋರ್ಸ್​ ರಚನೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸೂಚಿಸಿದ್ದಾರೆ. ಚಿರತೆ ದಾಳಿ ಪ್ರಕರಣಗಳ ಕುರಿತಂತೆ ಅರಣ್ಯ ಇಲಾಖೆ ಹಾಗೂ ಮೈಸೂರು ಜಿಲ್ಲಾಡಳಿತದೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಿಎಂ ಬೊಮ್ಮಾಯಿ ಅವರು ಚಿರತೆ ದಾಳಿಯಲ್ಲಿ (Leopard Attacks) ಸಂಭವಿಸಿದ ಸಾವು ನೋವಿನ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ನಂತರ ಚಿರತೆಯನ್ನು ಕೂಡಲೇ ಸೆರೆ ಹಿಡಿಯಲು ಎಲ್ಲ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಸ್ತುತ ತಾಲೂಕಿನಲ್ಲಿ ಚಿರತೆ ಸೆರೆ ಹಿಡಿಯಲು 158 ಮಂದಿ ಕೆಲಸ ಮಾಡುತ್ತಿದ್ದಾರೆ. ಕೋಂಬಿಂಗ್ ಆಪರೇಷನ್ ಪ್ರಾರಂಭವಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಿದರು. ಈ ವೇಳೆ ಸಿಎಂ ಬೊಮ್ಮಾಯಿ, ಪ್ರಕರಣ ಸಂಭವಿಸಿದ 3-4 ಕಿ.ಮೀ. ಸುತ್ತಳತೆಯಲ್ಲಿ ಕೋಂಬಿಂಗ್ ಕಾರ್ಯಾಚರಣೆ ನಡೆಸಲು ಸೂಚನೆ ನೀಡಿದರು. ಚಿರತೆ ದಾಳಿಯಿಂದಾಗಿ ಟಿ. ನರಸೀಪುರ ತಾಲ್ಲೂಕಿನ 21 ಹಳ್ಳಿಗಳು ಬಾಧಿತವಾಗಿದ್ದು, ಈ ಹಳ್ಳಿಗಳಲ್ಲಿ ಚಿರತೆ ಸೆರೆ ಹಿಡಿಯಲು ಸ್ಥಳೀಯರ ನೆರವು ಪಡೆಯಬೇಕು. ಅಗತ್ಯವಿದ್ದಲ್ಲಿ ಸಶಸ್ತ್ರ ಮೀಸಲು ಪೊಲೀಸ್ ಪಡೆಗಳ ನೆರವು ಪಡೆಯಲು ಮುಖ್ಯಮಂತ್ರಿಯವರು ಸೂಚಿಸಿದರು.

ಚಿರತೆ ದಾಳಿಗೆ ಸಾವನ್ನಪ್ಪಿದ ಸಿದ್ದಮ್ಮ ಮನೆಗೆ ಸಚಿವ ಸೋಮಶೇಖರ್ ಭೇಟಿ

ಮೈಸೂರು ಜಿಲ್ಲೆಯಲ್ಲಿ ಚಿರತೆ ದಾಳಿಯಿಂದ ಸಾವನ್ನಪ್ಪಿದ ವೃದ್ಧೆ ಸಿದ್ದಮ್ಮ ಮತ್ತು ಬಾಲಕ ಜಯಂತ್ ಮನೆಗೆ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ನೀಡಿದರು. ಕನ್ನನಾಯಕನಹಳ್ಳಿಯ ಸಿದ್ದಮ್ಮ ಮನೆಗೆ ಭೇಟಿ ನೀಡಿದ ಸಚಿವರು ನಂತರ ಹೊರಳಹಳ್ಳಿಯ ಜಯಂತ್‌ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಸೂಚಿಸಿದರು. ಭೇಟಿ ವೇಳೆ ಎರಡೂ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಿದರು. ಈ ವೇಳೆ ಅಳಲು ತೋಡಿಕೊಂಡ ಜಯಂತ್ ಕುಟುಂಬಸ್ಥರು, ಮಗನನ್ನ ಬಲಿ ಪಡೆದ ಚಿರತೆಯನ್ನ ಮೊದಲು ಕೊಲ್ಲುವಂತೆ ಆಕ್ರೋಶ ವ್ಯಕ್ತಪಡಿಸಿದರು.

ಟಿ.ನರಸೀಪುರದಲ್ಲಿ ಎಮ್ಮೆ ಮೇಲೆ ಚಿರತೆ ದಾಳಿ

ತಾಲೂಕಿನಲ್ಲಿ ಚಿರತೆಗಳು ನರ ಬಲಿ ಮತ್ತು ಪ್ರಾಣಿ ಬಲಿ ಪಡೆಯುತ್ತಿದ್ದು, ಅನೇಕರ ಮೇಲೆ ದಾಳಿ ನಡೆಸಿ ಗಾಯಗೊಳಿಸಿವೆ. ಇದೀಗ  ಸಿದ್ದನಹುಂಡಿ ಗ್ರಾಮದಲ್ಲಿ ರತ್ನಮ್ಮ ಎಂಬುವವರಿಗೆ ಸೇರಿದ ಎಮ್ಮೆ ಮೇಲೆ ಚಿರತೆ ದಾಳಿ ನಡೆಸಿ ಅರೆಬರೆ ತಿಂದುಹಾಕಿ ಹೋಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದರು. ಎಮ್ಮೆ ಮೇಲಿನ ದಾಳಿಯಿಂದ ಗ್ರಾಮದ ಹಾಗೂ ತಾಲೂಕಿನ ಜನರಲ್ಲಿ ಆತಂಕ ಇನ್ನಷ್ಟು ಹೆಚ್ಚಿಸಿದೆ. ಇನ್ನು ಕಗ್ಗಲೀಪುರ ಗ್ರಾಮದಲ್ಲಿಯೂ ಚಿರತೆ ಪ್ರತ್ಯಕ್ಷಗೊಂಡಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ