ಮೈಸೂರಿನಲ್ಲಿ ರೈಲು ಅಪಘಾತಕ್ಕೆ ಸಂಚು: ಹಳಿ ಮೇಲೆ ಮರದ ದಿಮ್ಮಿ, ಕಬ್ಬಿಣದ ರಾಡ್ ಇಟ್ಟವರು ಪೊಲೀಸ್ ವಶಕ್ಕೆ

| Updated By: ಆಯೇಷಾ ಬಾನು

Updated on: Nov 16, 2023 | 8:27 AM

ಕಿಡಿಗೇಡಿಗಳು, ಹಳಿ ಮೇಲೆ ಮರದ ದಿಮ್ಮಿ, ಕಬ್ಬಿಣದ ರಾಡ್​​ ಇಟ್ಟು ಅಪಘಾತಕ್ಕೆ ಯತ್ನಿಸಿದ್ದರು. ಈ ಕೃತ್ಯ ಎಸಗುವ ಮುನ್ನ ವಿಡಿಯೋ ಮಾಡಿಕೊಂಡಿದ್ದರು. ಬೇರೊಂದು ರೈಲು ಹಳಿ ಮೇಲೆ ಹೋಗುವುದನ್ನು ವಿಡಿಯೋ ಮಾಡಿದ್ದರು. ವಿಡಿಯೋ ಮಾಡಿದ ಬಳಿಕ ರೈಲು ಅಪಘಾತಕ್ಕೆ ಸಂಚು ರೂಪಿಸಿದ್ದರು. ಘಟನೆ ಸಂಬಂಧ ಮೂವರನ್ನು ವಶಕ್ಕೆ ಪಡೆಯಲಾಗಿದೆ.

ಮೈಸೂರಿನಲ್ಲಿ ರೈಲು ಅಪಘಾತಕ್ಕೆ ಸಂಚು: ಹಳಿ ಮೇಲೆ ಮರದ ದಿಮ್ಮಿ, ಕಬ್ಬಿಣದ ರಾಡ್ ಇಟ್ಟವರು ಪೊಲೀಸ್ ವಶಕ್ಕೆ
ಮೈಸೂರಿನಲ್ಲಿ ರೈಲು ಅಪಘಾತಕ್ಕೆ ಸಂಚು
Follow us on

ಮೈಸೂರು, ನ.16: ಮೈಸೂರಿನಲ್ಲಿ ರೈಲು ಅಪಘಾತಕ್ಕೆ ಯತ್ನಿಸಿದ (Train Accident Attempt) ಪ್ರಕರಣ ಸಂಬಂಧ ಸ್ಫೋಟಕ ಸತ್ಯ ಬಹಿರಂಗವಾಗಿದೆ. ಕಿಡಿಗೇಡಿಗಳು ಹಳಿ ಮೇಲೆ ಮರದ ದಿಮ್ಮಿ ಹಾಗೂ ಕಬ್ಬಿಣದ ರಾಡ್ ಇಟ್ಟು ಅಪಘಾತ ಮಾಡಿಸಲು ಯತ್ನಿಸಿದ್ದು ವಿಡಿಯೋ ಪತ್ತೆಯಾಗಿದೆ. ಚಾಮರಾಜನಗರದಿಂದ ಮೈಸೂರಿಗೆ ಬರುತ್ತಿದ್ದ ಎಕ್ಸ್ ಪ್ರೆಸ್ ರೈಲು ಗಾಡಿ ಸಂ. 06275 ರ ಅಪಘಾತಕ್ಕೆ ಸಂಜು ರೂಪಿಸಲಾಗಿತ್ತು. ಸುಮಾರು 400ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದ ರೈಲು ಅಪಘಾತಕ್ಕೆ ಕಿಡಿಗೇಡಿಗಳಿಂದ ಯತ್ನ ನಡೆದಿತ್ತು. ಸದ್ಯ ಲೋಕೋಪೈಲಟ್ (ಚಾಲಕ) ಸಮಯ ಪ್ರಜ್ಞೆಯಿಂದ ಭಾರಿ ದುರಂತ ತಪ್ಪಿದೆ.

ಕಿಡಿಗೇಡಿಗಳು, ಹಳಿ ಮೇಲೆ ಮರದ ದಿಮ್ಮಿ, ಕಬ್ಬಿಣದ ರಾಡ್​​ ಇಟ್ಟು ಅಪಘಾತಕ್ಕೆ ಯತ್ನಿಸಿದ್ದರು. ಈ ಕೃತ್ಯ ಎಸಗುವ ಮುನ್ನ ವಿಡಿಯೋ ಮಾಡಿಕೊಂಡಿದ್ದರು. ಬೇರೊಂದು ರೈಲು ಹಳಿ ಮೇಲೆ ಹೋಗುವುದನ್ನು ವಿಡಿಯೋ ಮಾಡಿದ್ದರು. ವಿಡಿಯೋ ಮಾಡಿದ ಬಳಿಕ ರೈಲು ಅಪಘಾತಕ್ಕೆ ಸಂಚು ರೂಪಿಸಿದ್ದರು. ಸದ್ಯ ಘಟನೆಗೆ ಸಂಬಂಧಿಸಿದಂತೆ ಸೋಮಯ್ ಮರಾಂಡಿ (22 ವರ್ಷ), ಭಜನು ಮುರ್ಮು ಮತ್ತು ದಸಮತ್ ಮರಾಂಡಿ ಎಂದು ಗುರುತಿಸಲಾದ ಮೂವರನ್ನು ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶದಿಂದ ಬಿಹಾರಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ, 19 ಮಂದಿಗೆ ಗಂಭೀರ ಗಾಯ

ವಿಚಾರಣೆ ವೇಳೆ ತಮಾಷೆಗಾಗಿ ಹೀಗೆ ಮಾಡಿದ್ದೇವೆ ಎಂದು ಕಿಡಿಗೇಡಿಗಳು ತಿಳಿಸಿದ್ದಾರೆ. ಮೂವರು ಆರೋಪಿಗಳು ಅಪಘಾತದ ಸಂಚು ರೂಪಿಸಿ ಕೆಲ ಕಾಲ ರೈಲ್ವೆ ಹಳಿ ಬಳಿಯೇ ಇದ್ದರು. ಮದ್ಯ ಸೇವಿಸಿ ಹಲವು ತಾಸು ರೈಲ್ವೆ ಹಳಿ​ ಬಳಿಯೇ ಕಾಯುತ್ತಿದ್ದರು. ಹಳಿ ಮೇಲೆ ಮರದ ದಿಮ್ಮಿ, ಕಬ್ಬಿಣದ ರಾಡ್​​ ಇಟ್ಟಿರುವುದು ಗಮನಿಸಿದ ಲೋಕೋಪೈಲಟ್​ ರೈಲನ್ನು ನಿಲ್ಲಿಸಿದ್ದಾರೆ. ಲೋಕೋಪೈಲಟ್​ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.

ಇನ್ನು ರೈಲು ಅಪಘಾತದ ಯತ್ನದ ಬಗ್ಗೆ ಮಾಹಿತಿ ಪಡೆದ ಮೈಸೂರಿನ ರೈಲ್ವೆ ಸಂರಕ್ಷಣಾ ದಳದ (ಆರ್‌ಪಿಎಫ್) ಸಹಾಯಕ ರಕ್ಷಣಾ ಆಯುಕ್ತ ಎಂ.ಎನ್.ಎ.ಖಾನ್, ಪೋಸ್ಟ್ ಕಮಾಂಡರ್ ಕೆ.ವಿ.ವೆಂಕಟೇಶ ಮತ್ತು ಅವರ ತಂಡ, ಆರ್‌ಪಿಎಫ್ ನ ಶ್ವಾನ ದಳ ಘಟನಾ ಸ್ಥಳಕ್ಕೆ ತೆರಳಿ ಸಮಯಕ್ಕೆ ಸ್ಪಂದಿಸಿದರು. ಒಡಿಶಾದ ಮಯೂರ್‌ಬಂಜ್ ನ ಬಂಗಿರಿಪೋಸಿದ ಜಲ್ದಿಹಾ ಮೂಲದ ಸೋಮಯ್ ಮರಾಂಡಿ ಎಂಬಾತ ಸ್ಥಳದಲ್ಲಿ ಪತ್ತೆಯಾಗಿದ್ದು, ವಿಚಾರಣೆ ನಡೆಸಿದಾಗ, ತನ್ನ ಸಹಚರರೊಂದಿಗೆ ಕೃತ್ಯಕ್ಕೆ ಯತ್ನಿಸಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.

ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಮೈಸೂರಿನ ಸರ್ಕಾರಿ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ನ.13, 2023 ರಂದು ರೈಲ್ವೆ ಕಾಯಿದೆ-1989 ರ ಅನ್ವಯ ಅಡಿ.ಓo.39/2023 U/s 150(1)(0) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ತನಿಖೆಯು ನಡೆಯುತ್ತಿದೆ.

ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ