Organ Donation: ಅಂಗಾಂಗ ದಾನದಲ್ಲಿ ಮೂರನೇ ಸ್ಥಾನದಲ್ಲಿದೆ ಕರ್ನಾಟಕ; ರಾಜ್ಯದಲ್ಲಿ ಬೆಂಗಳೂರೇ ಮುಂದು

|

Updated on: Aug 03, 2023 | 6:42 PM

ಒಬ್ಬ ದಾನಿಯು ಎಂಟು ಜೀವಗಳನ್ನು ಉಳಿಸಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅದೇ ವ್ಯಕ್ತಿ ಚರ್ಮ, ಮೂಳೆಗಳು, ಅಸ್ಥಿರಜ್ಜುಗಳು, ಹೃದಯ ಕವಾಟಗಳು ಮತ್ತು ಕಾರ್ನಿಯಾಗಳ ಅಂಗಾಂಶ ದಾನದ ಮೂಲಕ 50 ಕ್ಕೂ ಹೆಚ್ಚು ಜನರ ಜೀವನವನ್ನು ಸುಧಾರಿಸಬಹುದು ಎನ್ನಲಾಗಿದೆ.

Organ Donation: ಅಂಗಾಂಗ ದಾನದಲ್ಲಿ ಮೂರನೇ ಸ್ಥಾನದಲ್ಲಿದೆ ಕರ್ನಾಟಕ; ರಾಜ್ಯದಲ್ಲಿ ಬೆಂಗಳೂರೇ ಮುಂದು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಅಂಗಾಂಗ ದಾನ (Organ Donation) ಮತ್ತು ಅಂಗಾಂಶ ಕಸಿಯಲ್ಲಿ ಕರ್ನಾಟಕವು (Karnataka) ಮೂರನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಅಂಗಾಂಶ ಕಸಿ ಸಂಸ್ಥೆಯ ಅಂಕಿಅಂಶದ ಮಾಹಿತಿಯನ್ನು ಸಂಸತ್​​ನಲ್ಲಿ ಮಂಡಿಸಲಾಗಿದ್ದು, 2019 ರಲ್ಲಿ 105 ಮಂದಿ ಅಂಗಾಂಗ ದಾನ ಮಾಡಿದ್ದರೆ ಈ ಸಂಖ್ಯೆ 2022 ರಲ್ಲಿ 151 ಕ್ಕೆ ತಲುಪಿದೆ. ಈ ಪೈಕಿ ಕರ್ನಾಟಕವು ಶೇ 43 ರಷ್ಟು ಹೆಚ್ಚಳವನ್ನು ಕಂಡಿದ್ದು, 759 ಅಂಗಗಳು ಮತ್ತು ಅಂಗಾಂಶಗಳನ್ನು ದಾನ ನೀಡಲಾಗಿದೆ. ರಾಜ್ಯದಲ್ಲಿ ಅಂಗಾಂಗ ದಾನಿಗಳ ಮತ್ತು ಅಂಗಾಂಶ ಕಸಿ ಚಟುವಟಿಕೆಗಳನ್ನು ಸಂಘಟಿಸುವ, ‘ಸ್ಟೇಟ್ ಆರ್ಗಾನ್ ಆ್ಯಂಡ್ ಟಿಶ್ಯೂ ಟ್ರಾನ್ಸ್​​​ಪ್ಲಾಂಟ್ ಅಥಾರಿಟಿ’ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆ ‘ಜೀವನ ಸಾರ್ಥಕತೆ’ಯ ಅಂಕಿಅಂಶಗಳ ಪ್ರಕಾರ, ಬೆಂಗಳೂರಿನ ಆಸ್ಟರ್ ಆರ್‌ವಿ ಆಸ್ಪತ್ರೆಯಲ್ಲಿ ಕರ್ನಾಟಕದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನ ನಡೆದಿದೆ.

ಅಂಗಾಂಗ ದಾನ ವಿಚಾರದಲ್ಲಿ ರಾಜ್ಯವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಸುಧಾರಣೆಗೆ ಇನ್ನೂ ಹೆಚ್ಚಿನ ಅವಕಾಶವಿದೆ. ಸರಿಸುಮಾರು 4,000 ಬ್ರೈನ್​​ಡೆಡ್ ಆಗಿರುವ ರೋಗಿಗಳನ್ನು ಸಂಭವನೀಯ ದಾನಿಗಳೆಂದು ಗುರುತಿಸಲಾಗುತ್ತಿಲ್ಲ. ವೈದ್ಯರು ದೀರ್ಘಕಾಲದಿಂದ ಬ್ರೈನ್​​ಡೆಡ್ ಸ್ಥಿತಿಯಲ್ಲಿ ಇರುವ ರೋಗಿಗಳ ಸ್ಥಿತಿಯನ್ನು ಅಧ್ಯಯನ ಮಾಡಬೇಕು, ಶೀಘ್ರದಲ್ಲೇ ಬ್ರೈನ್​​ಡೆಡ್ ಎಂದು ದೃಢೀಕರಿಸಲಾಗಿದೆ ಅಥವಾ ಈಗಾಗಲೇ ಮೆದುಳು ನಿಷ್ಕ್ರಿಯವಾಗಿದೆ ಎಂಬಂಥವರ ಅಂಗಗಳನ್ನು ದಾನ ಮಾಡಲು ಸ್ವಯಂಪ್ರೇರಿತರಾಗಿ ಅವರ ಕುಟುಂಬಗಳಿಗೆ ಸಲಹೆ ನೀಡಬೇಕು ಎಂದು ಆಸ್ಟರ್ ಆರ್‌ವಿ ಆಸ್ಪತ್ರೆಯ ಪ್ರಮುಖ ಸಲಹೆಗಾರ (ಕ್ರಿಟಿಕಲ್ ಕೇರ್) ಡಾ. ಚಿನ್ನದುರೈ ಆರ್ ಅವರು ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

ದಾನಿಗಳ ಹೆಚ್ಚಳದೊಂಗೆ ರಾಜ್ಯವು ಪ್ರಗತಿ ಸಾಧಿಸಿದ್ದರೂ, ಅಂಗಾಂಗ ಕಸಿ ಅಗತ್ಯವಿರುವ ಯಾವುದೇ ರೋಗಿಗೆ ಅದಕ್ಕಾಗಿ ಕಾಯುವ ಸಮಯವು ಕನಿಷ್ಠ ಮೂರು ವರ್ಷಗಳವರೆಗೆ ಮುಂದುವರಿಯುತ್ತದೆ. ಮೂತ್ರಪಿಂಡವು ರಾಜ್ಯದಲ್ಲಿ ಬಹುನಿರೀಕ್ಷಿತ ಅಂಗವಾಗಿದೆ, ನಂತರದ ಸ್ಥಾನದಲ್ಲಿ ಯಕೃತ್ತು ಇದೆ ಎಂದು ವರದಿ ತಿಳಿಸಿದೆ.

ಬ್ರೈನ್​​ಡೆಡ್ ಸ್ಥಿತಿಯಲ್ಲಿರುವ ರೋಗಿಯ ಸ್ಥಿತಿ ಕೊನೆಯಾಗುವಾಗ ಅಂಗಾಂಗ ದಾನದ ಪ್ರಶ್ನೆ ಉದ್ಭವಿಸುತ್ತದೆ. ಅದು ಅನಿವಾರ್ಯವಾಗಿದ್ದರೂ ಸಹ, ಆ ಕುರಿತು ಮಾತುಕತೆ ನಡೆಸಲು ಆ ಹಂತದಲ್ಲಿ ಯಾವುದೇ ಮಾನಸಿಕ ಸ್ಥಿಮಿತ ಹೊಂದಿರುವುದಿಲ್ಲ ಎಂದು ‘ಜೀವನ ಸಾರ್ಥಕತೆ’ಯ ಮುಖ್ಯ ಅಂಗಾಂಶ ಕಸಿ ಸಂಯೋಜಕಿ ಲಿಜಾಮೋಲ್ ಜೋಸೆಫ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸೋಮವಾರದಂದು ಹೆಚ್ಚು ಹೃದಯಾಘಾತ ಸಂಭವಿಸುವುದು ಯಾಕೆ? ಇಲ್ಲಿದೆ ತಜ್ಞರ ಅಭಿಪ್ರಾಯ

ಆದಾಗ್ಯೂ, ನಿಯಮಿತ ಮಾತುಕತೆಯಿಂದ ಅಂಗಗಳನ್ನು ದಾನ ಮಾಡಲು ಜನರನ್ನು ಪ್ರೇರೇಪಿಸಬಹುದಾಗಿದೆ. ಹೆಚ್ಚಿನ ಜನರಿಗೆ ಅದರಿಂದ ಪ್ರಯೋಜನವಾಗಲಿದೆ ಎಂದು ಅವರು ಹೇಳಿದ್ದಾರೆ.

ಒಬ್ಬ ದಾನಿಯು ಎಂಟು ಜೀವಗಳನ್ನು ಉಳಿಸಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅದೇ ವ್ಯಕ್ತಿ ಚರ್ಮ, ಮೂಳೆಗಳು, ಅಸ್ಥಿರಜ್ಜುಗಳು, ಹೃದಯ ಕವಾಟಗಳು ಮತ್ತು ಕಾರ್ನಿಯಾಗಳ ಅಂಗಾಂಶ ದಾನದ ಮೂಲಕ 50 ಕ್ಕೂ ಹೆಚ್ಚು ಜನರ ಜೀವನವನ್ನು ಸುಧಾರಿಸಬಹುದು ಎನ್ನಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ