ಹಣ ದುರುಪಯೋಗ ಮಾಡಿಕೊಂಡ ಪಿಡಿಒ ಬಂಧನ, ತೊಗರಿಬೇಳೆ ಕದ್ದ ಶಿಕ್ಷಕನ ವಿರುದ್ಧ ದೂರು ದಾಖಲು

ಶಾಲೆಯಲ್ಲಿ ಕದ್ದ ಬೇಳೆಯನ್ನು ಅಂಗಡಿಗೆ ಸಾಗಿಸುತ್ತಿದ್ದ ವೇಳೆ ವೇಳೆ ಸ್ಥಳೀಯರೊಬ್ಬರು ವಿಡಿಯೊ ಮಾಡಿಕೊಂಡು ಸಾಮಾಜಿಕ ಮಾಧ್ಯಮಗಳಿಗೆ ಹರಿಬಿಟ್ಟಿದ್ದರು.

ಹಣ ದುರುಪಯೋಗ ಮಾಡಿಕೊಂಡ ಪಿಡಿಒ ಬಂಧನ, ತೊಗರಿಬೇಳೆ ಕದ್ದ ಶಿಕ್ಷಕನ ವಿರುದ್ಧ ದೂರು ದಾಖಲು
ಅಕ್ರಮದ ಆರೋಪ ಎದುರಿಸುತ್ತಿರುವ ಪಿಡಿಒ ಕಮಲಾ ಮತ್ತು ಮುಖ್ಯ ಶಿಕ್ಷಕ ರಾಜೇಗೌಡ
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 01, 2022 | 12:13 PM

ಕೋಲಾರ: ಸರ್ಕಾರಕ್ಕೆ ಸೇರಿದ್ದ ಲಕ್ಷಾಂತರ ರೂಪಾಯಿ ಮೊತ್ತದ ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಕಮಲಾ ಅವರನ್ನು ಕೋಲಾರ ಗ್ರಾಮಾಂತರ ರಾಣೆ ಪೊಲೀಸರು ಬಂಧಿಸಿದ್ದಾರೆ. ಕೋಲಾರ ತಾಲ್ಲೂಕುನ ಮಾರ್ಜೇನಹಳ್ಳಿ ಗ್ರಾಪಂ ಪಿಡಿಒ ಕಮಲಾ, 14 ಮತ್ತು 15ನೇ ಹಣಕಾಸು ಯೋಜನೆಯಲ್ಲಿ ನಕಲಿ ಬಿಲ್ ಸೃಷ್ಟಿಸಿ ಸರ್ಕಾರಕ್ಕೆ ₹ 16.5 ಲಕ್ಷ ವಂಚನೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಈ ಕುರಿತು ಮಾರ್ಜೇನಹಳ್ಳಿ ಗ್ರಾಮ ಪಂಚಾಯಿತ ಆಡಳಿತ ಮಂಡಳಿ ಕಳೆದ ಜನವರಿ 20ರಂದು ಪೊಲೀಸರಿಗೆ ದೂರು ನೀಡಿತ್ತು. ಕಮಲಾ ಅವರು ಡೇಟಾ ಎಂಟ್ರಿ ಸಿಬ್ಬಂದಿ ಮೇಲೆ ಆರೋಪ ಹೊರಿಸಿದ್ದರು.

ತೊಗರಿಬೇಳೆ ಕದ್ದು ಸಿಕ್ಕಿಬಿದ್ದ ಶಿಕ್ಷಕ

ಮಂಡ್ಯ: ಮಕ್ಕಳ ಬಿಸಿಯೂಟಕ್ಕೆ ಬಳಸಬೇಕಿದ್ದ ತೊಗರಿಬೇಳೆಯನ್ನು ಕದ್ದು ಸಾಗಿಸುತ್ತಿದ್ದ ಆರೋಪದ ಮೇಲೆ ಮುಖ್ಯ ಶಿಕ್ಷಕನ ಮೇಲೆ ಶಿಕ್ಷಣ ಇಲಾಖೆಯ ಬಿಸಿಯೂಟ ವಿಭಾಗದ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಳವಳ್ಳಿ ತಾಲ್ಲೂಕಿನ ಮಾರೆಗೌಡನಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಕಾಳರಾಜೇಗೌಡ ವಿರುದ್ಧ ಬೇಳೆ ಕಳ್ಳತನದ ಆರೋಪ ಕೇಳಿಬಂದಿದೆ. ಶಾಲೆಯಲ್ಲಿ ಕದ್ದ ಬೇಳೆಯನ್ನು ಆಟೊವೊಂದರಲ್ಲಿ ಹಲಗೂರಿನ ಅಂಗಡಿಗೆ ಸಾಗಿಸುತ್ತಿದ್ದ ವೇಳೆ ವೇಳೆ ಸ್ಥಳೀಯರೊಬ್ಬರು ವಿಡಿಯೊ ಮಾಡಿಕೊಂಡು ಸಾಮಾಜಿಕ ಮಾಧ್ಯಮಗಳಿಗೆ ಹರಿಬಿಟ್ಟಿದ್ದರು.

ವಿಡಿಯೊ ನೋಡಿದ್ದ ಜನರು ಶಿಕ್ಷಕನ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದರು. ವಿಡಿಯೊ ಸಾಕ್ಷ್ಯದ ಆಧಾರದ ಮೇಲೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮುಖ್ಯ ಶಿಕ್ಷಕನಿಗೆ ನೊಟೀಸ್ ಜಾರಿ ಮಾಡಿದ್ದರು. ಕಳ್ಳತನ ವಿಡಿಯೊ ಆಧರಿಸಿ ಹಲಗೂರು ಪೊಲೀಸರಿಗೆ ಜಿಸಿಯೂಟದ ಅಧಿಕಾರಿ ದೂರು ನೀಡಿದ್ದಾರೆ.

Published On - 12:13 pm, Fri, 1 July 22