AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಯಕರ್ತರ ಉತ್ಸಾಹ ನೋಡಿದರೆ ಗೆಲುವು ನಮ್ಮದೇ: ರಾಮನಗರದಲ್ಲಿ ಇನ್ನೂ ಏನೇನೆಂದರು ನೋಡಿ ಡಾ ಮಂಜುನಾಥ್

ಬಿಜೆಪಿ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಡಾ. ಸಿಎನ್ ಮಂಜುನಾಥ್ ಲೋಕಸಭೆ ಚುನಾವಣೆಯಲ್ಲಿ ಗೆಲುವಿನ ಭರವಸೆ ವ್ಯಕ್ತಪಡಿಸಿದ್ದಾರೆ. ರಾಮನಗರದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಉತ್ಸಾಹ ನೋಡಿದರೆ ನಾವೇ ಗೆಲ್ಲುವುದು ಖಚಿತ ಎಂದು ಹೇಳಿದ್ದಾರೆ. ಅವರ ಮಾತುಗಳ ಮತ್ತಷ್ಟು ವಿವರಕ್ಕಾಗಿ ಮುಂದೆ ಓದಿ.

ಕಾರ್ಯಕರ್ತರ ಉತ್ಸಾಹ ನೋಡಿದರೆ ಗೆಲುವು ನಮ್ಮದೇ: ರಾಮನಗರದಲ್ಲಿ ಇನ್ನೂ ಏನೇನೆಂದರು ನೋಡಿ ಡಾ ಮಂಜುನಾಥ್
ಡಾ. ಸಿಎನ್ ಮಂಜುನಾಥ್
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: Ganapathi Sharma|

Updated on:Mar 23, 2024 | 4:11 PM

Share

ರಾಮನಗರ, ಮಾರ್ಚ್​ 23: ನಿಮ್ಮಲ್ಲಿರುವ ಹುರುಪು ಮತ್ತು ಉತ್ಸಾಹ ನೋಡಿದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ (Bengaluru rural lok sabha constituency) ನಮಗೆ ಗೆಲುವು ಖಚಿತ ಎಂದೆನಿಸುತ್ತಿದೆ ಎಂಬುದಾಗಿ ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ (Dr CN Manjunath) ಭರವಸೆ ವ್ಯಕ್ತಪಡಿಸಿದರು. ಶನಿವಾರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೂಟಗಲ್ ಗ್ರಾಮ ಪಂಚಾಯಿತಿ ಜೆಡಿಎಸ್ ಭದ್ರಕೋಟೆಯಾಗಿದೆ. ಬಿಜೆಪಿ (BJP) ಸೇರಿದ ಪರಿಣಾಮ ಇಡೀ ಕ್ಷೇತ್ರವೇ ಸುಭದ್ರ ಕೋಟೆಯಾಗಿದೆ ಎಂದು ಹೇಳಿದರು.

ಆರೋಗ್ಯ ಕ್ಷೇತ್ರದಲ್ಲಿ 35 ವರ್ಷಗಳ ಕಾಲ ಸುಮಾರು 75 ಲಕ್ಷ ಜನರಿಗೆ ಚಿಕಿತ್ಸೆ ಕೊಡಿಸಿದ್ದೇನೆ. ವೈದ್ಯಕೀಯ ಸೇವೆ ನೀಡುತ್ತಿರುವ ಸಂದರ್ಭ ಸುಮಾರು ಎರಡು ಕೋಟಿ ಜನರ ಸಂಪರ್ಕಕ್ಕೆ ಬಂದಿದ್ದೇನೆ. ಬೆಂಗಳೂರು ಗ್ರಾಮಾಂತರ ಮಾತ್ರವಲ್ಲದೆ ಇಡೀ ರಾಜ್ಯದ ಜನ ನನ್ನನ್ನು ಗುರುತಿಸಿದ್ದಾರೆ. ನಾನು ನಿರ್ದೇಶಕನಾದರೆ ಪಂಚತಾರಾ ಖಾಸಗಿ ಆಸ್ಪತ್ರೆ ಮಾಡಬೇಕು ಎಂದುಕೊಂಡಿದ್ದೆ. ಆದರೆ ಇದೀಗ ಅಂತದ್ದೇ ಸಾಧನೆ ಮಾಡಿದ ಖುಷಿ ನನಗಿದೆ. ರೈತರಿಗೆ ಮತ್ತು ಬಡವರಿಗೆ ಅತ್ಯುತ್ತಮ ಚಿಕಿತ್ಸೆ ಕೊಡಿಸಿದ್ದೇನೆ ಎಂದು ಮಂಜುನಾಥ್ ಹೇಳಿದರು.

ಬಡವರ ಕಣ್ಣೀರು ಮತ್ತು ರೈತರ ಬೆವರಿಗೆ ಬಹಳ ಶಕ್ತಿ ಇದೆ: ಮಂಜುನಾಥ್

ನನ್ನದು ಮೂರು ಘೋಷವಾಕ್ಯಗಳಿವೆ. ಅವುಗಳೆಂದರೆ, ಮೊದಲನೆಯದ್ದು ಚಿಕಿತ್ಸೆ ಮೊದಲು, ಹಣ ಪಾವತಿ ನಂತರ. ಎರಡನೇಯದು ಕಡತ ಆಮೇಲೆ, ಚಿಕಿತ್ಸೆ ಮೊದಲು. ಮೂರನೇಯದ್ದು, ಮಾನವೀಯತೆಗೆ ಮೊದಲ ಆದ್ಯತೆ. ನಾನು ನನ್ನ ಜೀವನದಲ್ಲಿ ಬಡವರ ಪರ ಕೆಲಸ ಮಾಡಿದ್ದೇನೆ. ಬಡವರ ಕಣ್ಣೀರು ಮತ್ತು ರೈತರ ಬೆವರಿಗೆ ಬಹಳ ಶಕ್ತಿ ಇದೆ. ಕಣ್ಣೀರಿಡುವ ಜನರ ಬಳಿ ಮೊದಲು ಹೋಗಿ ಮಾತನಾಡಿದ್ದೇನೆ. ಕಣ್ಣೀರಿನಲ್ಲಿ ಒಂದು ಪರ್ಸೆಂಟ್ ನೀರಿದ್ದರೆ ಶೇ 99 ರಷ್ಟು ನೋವಿರುತ್ತದೆ ಎಂದು ಅವರು ಹೇಳಿದರು.

ಭಾರತವನ್ನು ಎರಡು ರೀತಿಯಲ್ಲಿ ಪರಿಗಣಿಸಬಹುದು. ಒಂದು ವೈಮಾನಿಕ ಭಾರತ, ಇನ್ನೊಂದು ರೈಲಿನ ಭಾರತ. ನಿಜವಾದ ಭಾರತ ನೋಡಬೇಕಾದರೆ ರೈಲಿನಲ್ಲಿ ಪ್ರಯಾಣ ಮಾಡಬೇಕು. ಅನೇಕ ಸಮಸ್ಯೆಗಳನ್ನು ಕಾಣುತ್ತೇವೆ. ಪ್ರಧಾನಿ ಮೋದಿ ಹಾಗೂ ದೇವೇಗೌಡರ ಸರ್ಕಾರ ರೈಲಿನಲ್ಲಿ ಕಂಡ ಸಮಸ್ಯೆಗಳಿಗೆ ಪರಿಹಾರ ಕೊಟ್ಟಿದೆ ಎಂದು ಅವರು ಹೇಳಿದರು.

ರಾಜಕೀಯಕ್ಕೆ ಬರುತ್ತೇನೆ ಎಂದು ಕನಸಿನಲ್ಲಿ ಕೂಡ ಅಂದುಕೊಂಡಿರಲಿಲ್ಲ. ಜೆಡಿಎಸ್ ಸಂವಾದ ನೋಡಿದರೆ ನಾನೂ ಕೂಡ ಕಾರ್ಯಕರ್ತನಾಗಿರಬೇಕು ಎನಿಸುತ್ತಿದೆ. ನಿಮ್ಮ ಸ್ವಾಭಿಮಾನಕ್ಕೆ ದೊಡ್ಡ ಸಲಾಂ. ಮನಸ್ಸು ನಿರ್ಮಲವಾಗಿದ್ದರೆ, ಮಾತು ಮೃದವಾಗಿದ್ದರೇ ಚಮತ್ಕಾರ. ನಾವು ಏನು ಬಟ್ಟೆ ಹಾಕುತ್ತೇವೆ ಎಂಬುದು ಮುಖ್ಯ ಅಲ್ಲ. ಉಡುಗೆ ತೊಡುಗೆಯಲ್ಲಿ ಯಾರನ್ನೂ ಅಳೆಯಲಾಗದು. ಒಳ್ಳೆ ಬಟ್ಟೆ ಹಾಕಿಕೊಂಡಿದ್ದರೂ ಮನಸ್ಸು ಕೆಟ್ಟದಿರಬಹುದು ಎಂದು ಅವರು ಅಭಿಪ್ರಾಯ ಪಟ್ಟರು.

ಮತಗಳನ್ನು ಮಾರಾಟ ಮಾಡಬೇಡಿ: ಮಂಜುನಾಥ್ ಸಲಹೆ

ಅಂಗಾಂಗ ದಾನ ಬಹಳ ದೊಡ್ಡ ದಾನ. ಅದೇ ರೀತಿ ಮತದಾನ ಮಹತ್ವದ ದಾನ. ಆ ಮತದಾನವನ್ನು ನನಗಾಗಿ ಮಾಡಿ. ಮತಗಳು ಮಾರಾಟ ಆಗಬಾರದು. ಮತಗಳು ಮಾರಾಟ ಆದರೆ ಪ್ರಜಾಪ್ರಭುತ್ವದ ಕೊಲೆ ಆದಂತೆ ಎಂದು ಮಂಜುನಾಥ್ ಹೇಳಿದರು.

ಇದನ್ನೂ ಓದಿ: ಹಾಸನದಲ್ಲಿ ದೋಸ್ತಿ ಕುಸ್ತಿ: ಬೀದಿಗೆ ಬಂತು ಜೆಡಿಎಸ್, ಬಿಜೆಪಿ ಅಂತಃ ಕಲಹ

ರಾಮನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮತದಾರರಿಗೆ ಹಂಚಲುಗೊಂಡೊಯ್ಯುತ್ತಿದ್ದ ಅಪಾರ ಪ್ರಮಾಣದ ಸೀರೆ, ಆಭರಣ, ನಗದನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡ ಬೆನ್ನಲ್ಲೇ ಮಂಜುನಾಥ್ ಮತದಾನದ ಕುರಿತು ಜಾಗೃತಿಯ ಮಾತುಗಳನ್ನಾಡಿದ್ದಾರೆ.

ಬಿಜೆಪಿಯೇ ಬೇಕಿತ್ತಾ ಎಂಬ ಪ್ರಶ್ನೆಗೆ ಏನಂದರು ಡಾ. ಮಂಜುನಾಥ್?

ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಬಿಜೆಪಿಯನ್ನೇ ಆಯ್ಕೆ ಮಾಡಿಕೊಳ್ಳಬೇಕಿತ್ತಾ ಎಂಬ ‘ಟಿವಿ9’ ಪ್ರಶ್ನೆಗೆ ಉತ್ತರಿಸಿದ ಮಂಜುನಾಥ್, ನಾನು ರಾಜಕಾರಣಕ್ಕೆ ಬರುತ್ತೇನೆ ಎಂದುಕೊಂಡಿರಲೇ ಇಲ್ಲ. ಹೈ ಕಮಾಂಡ್​ನವರೇ ನನ್ನನ್ನು ಆಯ್ಕೆ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದೇನೆ ಎಂದರು.

ರಾಜ್ಯದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Sat, 23 March 24