
ಬೆಂಗಳೂರು: ವಿದ್ಯಾರ್ಥಿಗಳಿಗೆ ಸಂವಿಧಾನದ ಕುರಿತು ರಸಪ್ರಶ್ನೆಗಳು, ಚರ್ಚೆಗಳು ಮತ್ತು ಪ್ರಬಂಧ ಬರಹ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸುವ ಮೂಲಕ ನವೆಂಬರ್ 26 ರಂದು ಎಲ್ಲ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಸಂವಿಧಾನ ದಿನ (Constitution Day) ಆಚರಿಸಲು ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು (Department of School Education and Literacy) ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ನವೆಂಬರ್ 26 ರಂದು ಸಂವಿಧಾನ ದಿನವನ್ನು ಆಚರಿಸಲು ಸುತ್ತೋಲೆ ಹೊರಡಿಸಿದೆ. ವಿದ್ಯಾರ್ಥಿಗಳಿಗೆ ಆ ದಿನದಂದು ಸಂವಿಧಾನದ ಪೀಠಿಕೆಯನ್ನು ಓದಲು ತಿಳಿಸಲಾಗುವುದು. ‘ಸಂವಿಧಾನದ ಪೀಠಿಕೆಯನ್ನು ಬೆಳಗ್ಗೆ 11 ಗಂಟೆಗೆ ಓದಬೇಕು. ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಆ ಸಮಯವನ್ನು ಅನುಸರಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ವಿದ್ಯಾರ್ಥಿಗಳಿಗೆ ಸಂವಿಧಾನದ ಕುರಿತು ರಸ ಪ್ರಶ್ನೆ, ಚರ್ಚಾ ಸ್ಪರ್ಧೆ ಮತ್ತು ಪ್ರಬಂಧ ಬರಹ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸುವಂತೆ ಶಾಲೆಗಳು ಮತ್ತು ಕಾಲೇಜುಗಳಿಗೆ ಇಲಾಖೆ ಸೂಚಿಸಿದೆ.
ಇದೇ ವೇಳೆ, ಸಂವಿಧಾನ ದಿನಾಚರಣೆಯನ್ನು ಪರಿಣಾಮಕಾರಿಯಾಗಿ ಆಚರಿಸುವಂತೆ ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳ ಸಮನ್ವಯ ವೇದಿಕೆ ಸರ್ಕಾರಕ್ಕೆ ಮನವಿ ಮಾಡಿದೆ. ಸರ್ಕಾರವು ಶಾಲಾ ಗ್ರಂಥಾಲಯಗಳಿಗೆ ಸಂವಿಧಾನದ ಕನಿಷ್ಠ ಐದು ಪ್ರತಿಗಳನ್ನು ನೀಡಬೇಕು ಎಂದು ವೇದಿಕೆ ಪ್ರಕಟಣೆಯಲ್ಲಿ ಕೋರಿದೆ. ಮುನ್ನುಡಿಯನ್ನು ಎಲ್ಲಾ ಶಾಲೆಗಳಲ್ಲಿ ಪ್ರದರ್ಶಿಸಬೇಕು ಎಂದೂ ಸೂಚಿಸಿದೆ.
ಸಂವಿಧಾನ ದಿನ ಆಚರಣೆಯ ಮಹತ್ವ ಏನು?
ಭಾರತದ ಸಂವಿಧಾನವನ್ನು 1949 ರ ನವೆಂಬರ್ 26 ರಂದು ಅಂಗೀಕರಿಸಲಾಯಿತು. ಅಂದಿನಿಂದ ಸಂವಿಧಾನದ ದಿನ ಆಚರಿಸಲು ನಿರ್ಧರಿಸಲಾಯಿತು. ಈ ದಿನವನ್ನು ರಾಷ್ಟ್ರೀಯ ಕಾನೂನು ದಿನ ಎಂದೂ ಕರೆಯಲಾಗುತ್ತದೆ. ಭಾರತದ ಸಂವಿಧಾನ ದಿನದ ಉದ್ದೇಶವು ಭಾರತೀಯ ಸಂವಿಧಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅದರ ವಾಸ್ತುಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ಸ್ಮರಿಸುವುದಾಗಿದೆ.
ಡಾ. ಬಿ. ಆರ್. ಅಂಬೇಡ್ಕರ್ ಅವರು ಪ್ರಸಿದ್ಧ ಸಮಾಜ ಸುಧಾರಕ, ರಾಜಕಾರಣಿ ಮತ್ತು ನ್ಯಾಯಶಾಸ್ತ್ರಜ್ಞರಾಗಿದ್ದರು. ಭಾರತೀಯ ಸಂವಿಧಾನವನ್ನು ರಚಿಸಿದವರು. ಅವರು ಆಗಸ್ಟ್ 29, 1947 ರಂದು ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಅಂಬೇಡ್ಕರ್ ಅವರನ್ನು ಭಾರತೀಯ ಸಂವಿಧಾನದ ಪಿತಾಮಹ ಎಂದು ಕರೆಯಲಾಗುತ್ತದೆ.
ನವೆಂಬರ್ 19, 2015 ರಂದು, ಸಬಲೀಕರಣ ಮತ್ತು ಸಾಮಾಜಿಕ ನ್ಯಾಯ ಸಚಿವಾಲಯವು ನಾಗರಿಕರಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಉತ್ತೇಜಿಸಲು ಪ್ರತಿ ವರ್ಷ ನವೆಂಬರ್ 26 ಅನ್ನು ‘ಸಂವಿಧಾನ ದಿನ’ ಎಂದು ಆಚರಿಸಲು ಸರ್ಕಾರಕ್ಕೆ ಸೂಚಿಸಿತು.
Also Read:
ಸಂವಿಧಾನವೇ ನಮ್ಮ ರಾಷ್ಟ್ರಧರ್ಮ; ನಾಡಿನ ಜನತೆಗೆ ಸಂವಿಧಾನ ದಿನದ ಶುಭಕಾಮನೆ ತಿಳಿಸಿದ ಸಿಎಂ ಬೊಮ್ಮಾಯಿ
Also Read:
Published On - 3:09 pm, Wed, 23 November 22