Uttara Kannada: ಅರಣ್ಯ ಪ್ರದೇಶವನ್ನೇ ಹೆಚ್ಚಾಗಿ ಹೊಂದಿರುವ ಜೋಯಿಡಾದಲ್ಲೂ ಕೊರೊನಾ ಭೀತಿ
Covid Cases in Rural Karnataka: ಉದ್ಯೋಗಕ್ಕಾಗಿ ಮುಂಬೈ, ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಕೆಲಸ ಮಾಡಿಕೊಂಡಿದ್ದ ಈ ಭಾಗದ ಜನರಲ್ಲಿ ಬಹುತೇಕರು ತಿಂಗಳ ಹಿಂದೆಯೇ ಊರುಗಳಿಗೆ ವಾಪಸ್ಸಾಗಿದ್ದಾರೆ. ಹೀಗಾಗಿ ಇಂತಹವರಿಂದ ಹಳ್ಳಿಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿವೆ.

ಉತ್ತರ ಕನ್ನಡ: ಕೊರೊನಾ ಎರಡನೇ ಅಲೆ ಕೇವಲ ನಗರಗಳಿಗಷ್ಟೇ ಸೀಮಿತವಾಗಿಲ್ಲ. ಗ್ರಾಮೀಣ ಭಾಗಗಳಲ್ಲೂ ಕೂಡ ಕೊವಿಡ್ ಸೋಂಕು ಕಂಡು ಬರುತ್ತಿದೆ. ಇನ್ನು ಅರಣ್ಯದಿಂದ ಆವೃತ್ತವಾಗಿರುವ ಪುಟ್ಟ ಹಳ್ಳಿಗಳಲ್ಲೂ ಕೂಡ ಕೊರೊನಾ ಪ್ರಸರಣವಾಗುತ್ತಿದ್ದು, ಇದಕ್ಕೆ ನಿದರ್ಶನವೆಂಬಂತೆ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನಲ್ಲೂ ಕೂಡ ಈಹ ಕೊರೊನಾ ಹೆಚ್ಚಳವಾಗುತ್ತಿದೆ. ಅಲ್ಲೊಂದು ಇಲ್ಲೊಂದು ಮನೆಗಳನ್ನು ಹೊಂದಿರುವ ಈ ತಾಲೂಕಿನ ಹಳ್ಳಿಗಳು ಕೊರೊನಾ ಮೊದಲ ಅಲೆಯಲ್ಲಿ ಯಾವುದೇ ತೊಂದರೆ ಇಲ್ಲದೇ ಆರಾಮವಾಗಿದ್ದವು. ಆದರೆ ಈ ಬಾರಿಯ ಎರಡನೇಯ ಅಲೆಯಲ್ಲಿ ಕುಗ್ರಾಮಗಳಲ್ಲೂ ಸೋಂಕಿತರು ಪತ್ತೆಯಾಗುತ್ತಿದ್ದು, ಗ್ರಾಮದ ನಿವಾಸಿಗಳ ನಿದ್ದೆಗೆಡಿಸಿದೆ.
ಜೋಯಿಡಾ ತಾಲೂಕಿನಲ್ಲಿ ಕಳೆದ ಅವಧಿಯ ಕೊರೊನಾ ಸಂದರ್ಭದಲ್ಲಿ ಕೇವಲ ಬೆರಳೆಣಿಕೆಯಷ್ಟು ಸೋಂಕು ಪ್ರಕರಣಗಳು ಮಾತ್ರ ಕಂಡುಬಂದಿದ್ದವು. ಆದರೆ ಈ ಬಾರಿ ಎರಡನೇಯ ಅಲೆಯಲ್ಲಿ ಆರಂಭದಿಂದಲೂ ಈ ತಾಲೂಕಿನಲ್ಲಿ ಸಾಕಷ್ಟು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದ್ದು, 400ಕ್ಕೂ ಅಧಿಕ ಮಂದಿ ಸೋಂಕಿತರು ಸದ್ಯ ಪತ್ತೆಯಾಗಿದ್ದಾರೆ. ಅಲ್ಲದೆ 15 ಮಂದಿ ಸೋಂಕಿತರು ಸಾವನ್ನಪ್ಪಿರುವುದು ತಾಲೂಕಿನ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಗುಡ್ಡಗಾಡು ಹಾಗೂ ಅರಣ್ಯ ಪ್ರದೇಶವನ್ನೇ ಹೊಂದಿರುವ ಈ ತಾಲೂಕಿನ ಜನತೆಯಲ್ಲಿ ಹೆಚ್ಚಿನವರು ಹೊರಗಡೆ ಹೋಗಿಲ್ಲ. ಜತೆಗೆ ಲಾಕ್ಡೌನ್ ಸಮಯದಲ್ಲಿ ಹೆಚ್ಚಿನ ಓಡಾಟವನ್ನೂ ನಡೆಸಿಲ್ಲವಾದರೂ ಇಷ್ಟೊಂದು ಪ್ರಮಾಣದಲ್ಲಿ ಸೋಂಕು ಪತ್ತೆಯಾಗುತ್ತಿರುವುದು ಈ ಭಾಗದ ಜನರಲ್ಲಿ ಆತಂಕ ಸೃಷ್ಟಿಸಿದೆ.
ಉದ್ಯೋಗಕ್ಕಾಗಿ ಮುಂಬೈ, ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಕೆಲಸ ಮಾಡಿಕೊಂಡಿದ್ದ ಈ ಭಾಗದ ಜನರಲ್ಲಿ ಬಹುತೇಕರು ತಿಂಗಳ ಹಿಂದೆಯೇ ಊರುಗಳಿಗೆ ವಾಪಸ್ಸಾಗಿದ್ದಾರೆ. ಹೀಗಾಗಿ ಇಂತಹವರಿಂದ ಹಳ್ಳಿಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿವೆ. ಇನ್ನು ತಾಲೂಕಿನ ರಾಮನಗರ, ಅಖೇತಿ, ಜಗಲಬೇಟ, ಬಾಪೇಲಿ ಸೇರಿದಂತೆ ಹೆಚ್ಚು ಕೊವಿಡ್ ಪಾಸಿಟಿವ್ ಪ್ರಕರಣಗಳು ಕಂಡುಬಂದ ಗ್ರಾಮ ಪಂಚಾಯತಿಗಳನ್ನ ಕಂಟೈನ್ಮೆಂಟ್ ಝೋನ್ಗಳೆಂದು ಘೋಷಣೆ ಮಾಡಲಾಗಿದೆ. ಹೀಗಾಗಿ ಲಾಕ್ಡೌನ್ ನಂತರದಲ್ಲಿ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿವೆ ಎಂದು ಜೋಯಿಡಾ ತಹಶೀಲ್ದಾರರಾದ ಸಂಜಯ ಕಾಂಬಳೆ ತಿಳಿಸಿದ್ದಾರೆ.
ಒಟ್ಟಾರೆ ಕಳೆದ ಅವಧಿಯಲ್ಲಿ ಕೊರೊನಾ ಹಂಗಿಲ್ಲದೇ ಆರಾಮಾಗಿ ಇದ್ದ ಜೋಯಿಡಾ ಜನತೆಗೂ ಈ ಬಾರಿ ಎರಡನೇಯ ಅಲೆಯಿಂದಾಗಿ ಆತಂಕ ಸೃಷ್ಟಿಯಾಗಿದೆ. ಈಗಾಗಲೇ ನಗರ ಪ್ರದೇಶಗಳಲ್ಲಿ ಎಗ್ಗಿಲ್ಲದೇ ಹರಡುತ್ತಿರುವ ಮಹಾಮಾರಿ ಗ್ರಾಮೀಣ ಭಾಗದಲ್ಲಿ ಹಬ್ಬುವುದನ್ನ ತಡೆಯಬೇಕಾಗಿದ್ದು, ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಬೇಕಾಗಿದೆ.
ಇದನ್ನೂ ಓದಿ:
ಕೊರೊನಾ ಸೋಂಕಿತರಿಗೆ ಸುಗಮ ಸಂಗೀತ ಆಯೋಜಿಸಿದ ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್
ಮಂಗಳೂರಿನ ಅಗ್ನಿಶಾಮಕ ಸಿಬ್ಬಂದಿಗಳಲ್ಲೂ ಕೊರೊನಾತಂಕ; ಕೊರೊನಾ ವಾರಿಯರ್ಸ್ಗೆ ಹೆಚ್ಚಿನ ಸೌಲಭ್ಯ ಒದಗಿಸುವಂತೆ ಆಗ್ರಹ