ಶಿವಮೊಗ್ಗ: ಸಚಿವ ಕೆ.ಎಸ್.ಈಶ್ವರಪ್ಪ ಹೆಸರಿನಲ್ಲಿ ಲಕ್ಷ ಲಕ್ಷ ಹಣ ವಂಚನೆ; ಇಬ್ಬರ ಬಂಧನ, ಮೂವರು ಪರಾರಿ

ಬೆಂಗಳೂರಿನಲ್ಲಿ ಲಕ್ಷ್ಮಣ ಎನ್ನುವರಿಗೆ 106 ಕುಡಿಯುವ ನೀರಿನ ಆರ್. ಓ. ಪ್ಲಾಂಟ್ ಕೊಡಿಸುವುದಾಗಿ ನಂಬಿಸಿ ಅವರಿಂದ 26.25 ಲಕ್ಷ ರೂಪಾಯಿ ಹಣ ಕಿತ್ತುಕೊಂಡಿದ್ದಾರೆ. ಕೆಲಸ ಮಾಡದ ಹಿನ್ನಲೆಯಲ್ಲಿ ಗುತ್ತಿಗೆದಾರ ಲಕ್ಷ್ಮಣ ಆರೋಪಿಗಳ ಬಳಿಹಣ ವಾಪಸ್ ಕೇಳಿದ್ದಾರೆ. ಇವರಿಗೆ ಹಣ ವಾಪಸ್ ನೀಡದೇ ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ.

ಶಿವಮೊಗ್ಗ: ಸಚಿವ ಕೆ.ಎಸ್.ಈಶ್ವರಪ್ಪ ಹೆಸರಿನಲ್ಲಿ ಲಕ್ಷ ಲಕ್ಷ ಹಣ ವಂಚನೆ; ಇಬ್ಬರ ಬಂಧನ, ಮೂವರು ಪರಾರಿ
ಬಂಧಿತ ಆರೋಪಿಗಳು
Edited By:

Updated on: Oct 06, 2021 | 3:55 PM

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಅವರ ಹೆಸರು ದುರ್ಬಳಿಕೆ ಮಾಡಿಕೊಂಡ ಪ್ರಕರಣ ಬಳಕಿಗೆ ಬಂದಿದೆ. ಸಚಿವರ ಹೆಸರು ಹೇಳಿ ಲಕ್ಷ ಲಕ್ಷ ಹಣ ಅಮಾಯಕರಿಂದ ಪಡೆದು ವಂಚನೆ ಮಾಡಿದ್ದಾರೆ. ಸಚಿವರ ಬಳಿ ಕೆಲಸ ಮಾಡಿಸಿಕೊಡವುದಾಗಿ ನಂಬಿಸಿ ಉದ್ಯಮಿ ಮತ್ತು ಗುತ್ತಿಗೆದಾರರಿಂದ ಹಣ ವಸೂಲಿ ಮಾಡಿದ್ದಾರೆ. ಶಿವಮೊಗ್ಗ ನಗರ ಶಾಸಕ ಕೆ.ಎಸ್ ಈಶ್ವರಪ್ಪ, ಸದ್ಯ  ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾರೆ. ಸಚಿವರ ಹೆಸರು ಹೇಳಿಕೊಂಡು ಕೆಲವು ತಿಂಗಳಿಂದ ಶಿವಮೊಗ್ಗದ ಕೆಲ ವ್ಯಕ್ತಿಗಳು ಅಮಾಯಕರಿಗೆ ವಂಚನೆ ಮಾಡಿದ್ದಾರೆ.

ಸಚಿವರ ಆಪ್ತರು ಮತ್ತು ಅವರ ಆಪ್ತ ಸಹಾಯಕ ಎಂದು ಶಿವಮೊಗ್ಗದ ಎಚ್. ಎನ್. ಮಂಜುನಾಥ್, ವಿಠ್ಠಲ್ ರಾವ್, ಮಹ್ಮದ್ ಮುಸಾಫಿರ್, ಖಾಜಿವಾಲಿಸ್ ಹಾಗೂ ಮಹ್ಮದ್ ರೆಹಮಾನ್, ಉದ್ಯಮಿ ಹಾಗೂ ಗುತ್ತಿಗೆದಾರಿಗೆ ವಂಚನೆ ಮಾಡುತ್ತಿದ್ದರು. ಸಾಗರ ತಾಲೂಕು ಬರೂರು ಗ್ರಾಮದ ಲೋಕೋಪಯೋಗಿ ಗುತ್ತಿಗೆದಾರರ ಮತ್ತಲ್ ಬೈಲ್ ಲಕ್ಷ್ಮಣ ಅವರಿಗೆ ಸಚಿವರ ಆಪ್ತರು ಎಂದು ಪರಿಚಯಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಲಕ್ಷ್ಮಣ ಎನ್ನುವರಿಗೆ 106 ಕುಡಿಯುವ ನೀರಿನ ಆರ್. ಓ. ಪ್ಲಾಂಟ್ ಕೊಡಿಸುವುದಾಗಿ ನಂಬಿಸಿ ಅವರಿಂದ 26.25 ಲಕ್ಷ ರೂಪಾಯಿ ಹಣ ಕಿತ್ತುಕೊಂಡಿದ್ದಾರೆ. ಕೆಲಸ ಮಾಡದ ಹಿನ್ನಲೆಯಲ್ಲಿ ಗುತ್ತಿಗೆದಾರ ಲಕ್ಷ್ಮಣ ಆರೋಪಿಗಳ ಬಳಿಹಣ ವಾಪಸ್ ಕೇಳಿದ್ದಾರೆ. ಇವರಿಗೆ ಹಣ ವಾಪಸ್ ನೀಡದೇ ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ.

ಈ ಆರೋಪಿಗಳು ರಾಜೇಶ್ ಎನ್ನುವರಿಗೆ ಕೂಡ ವಂಚನೆ ಮಾಡಿರುವುದು ತನಿಖೆ ವೇಳೆ ಬಯಲಾಗಿದೆ. ಮೈಸೂರಿನ ಹೆಬ್ಬಾಳದ ನಿವಾಸಿ ರಾಜೇಶ್​ಗೆ 100 ಕೋಟಿ ಮೌಲ್ಯದ ಪ್ರಾಜೆಕ್ಟ್​ಗೆ ಬಂಡಬಾಳ ಕೊಡಿಸುವುದಾಗಿ ನಂಬಿಸಿ ಅವರಿಂದ 10 ಲಕ್ಷ ರೂಪಾಯಿ ಹಣ ಪಡೆದಿದ್ದಾರೆ. ಇವರು ಮೋಸ ಮಾಡಿರುವುದು ಗೊತ್ತಾಗುತ್ತಿದ್ದಂತೆ ರಾಜೇಶ್, ಸಚಿವ ಕೆ.ಎಸ್ ಈಶ್ವರಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ. ಈ ವಂಚನೆ ಪ್ರಕರಣ ಬಯಲು ಆಗುತ್ತಿದ್ದಂತೆ ಸಚಿವರು ಎಸ್​ಪಿಗೆ ಮಾಹಿತಿ ನೀಡಿ ವಂಚಕರ ವಿರುದ್ಧ ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ.

ಸಚಿವ ಕೆ.ಎಸ್ ಈಶ್ವರಪ್ಪನವರು ಕ್ರಮಕ್ಕೆ ಸೂಚನೆ ನೀಡುತ್ತಿದ್ದಂತಯೇ ಎಸ್​ಪಿ ಲಕ್ಷ್ಮಿಪ್ರಸಾದ್, ಶಿವಮೊಗ್ಗದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ಸಿಪಿಐ ಗುರುರಾಜ್ ಅವರಿಗೆ ಸೂಚನೆ ನೀಡಿದ್ದಾರೆ. ವಂಚನೆಗೊಳಗಾದ ಲಕ್ಷ್ಮಣ ಮತ್ತು ರಾಜೇಶ್ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಳಿಕ ಕಾರ್ಯಪ್ರವೃತ್ತರಾದ ಸೈಬರ್ ಕ್ರೈಂ ಸಿಪಿಐ ಗುರುರಾಜ್, ವಿಠ್ಠಲ್ ರಾವ್ ಮತ್ತು ಖಾಜಿವಾಸ್ ಅನ್ನು ಬಂಧಿಸಿದ್ದಾರೆ.

ಇಬ್ಬರನ್ನು ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಸದ್ಯ ಇಬ್ಬರೂ ನ್ಯಾಯಾಂಗ ಬಂಧನಕ್ಕೊಳಗಾಗಿದ್ದಾರೆ. ಇನ್ನೂ ಪ್ರಕರಣದಲ್ಲಿ ಮೂವರು ಪರಾರಿಯಾಗಿದ್ದಾರೆ. ಇವರ ಬಂಧನಕ್ಕೆ ಸಿಪಿಐ ಗುರುರಾಜ್ ತಂಡವು ಜಾಲ ಬೀಸಿದೆ. ಇನ್ನೂ ಈ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಸಚಿವರಿಗೆ ಬಿಗ್ ಶಾಕ್ ಆಗಿದೆ. ಅವರ ಹೆಸರು ಇಷ್ಟೊಂದು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವುದು ಸದ್ಯ ಸಚಿವರ ಆಪ್ತ ವಲಯದಲ್ಲಿ ಸಂಚಲನ ಮೂಡಿಸಿದೆ.

ಸದ್ಯ ಎರಡು ಪ್ರಕರಣದಲ್ಲಿ ಒಟ್ಟು 36.25 ಲಕ್ಷ ರೂಪಾಯಿ ಹಣ ವಂಚನೆ ಆಗಿದೆ. ಕೇವಲ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ ಸಚಿವರ ಆಪ್ತರೆಂದು ಸದಾ ಅವರ ಹಿಂದೆ ಮುಂದೆ ಸುತ್ತಿದ್ದ ಈ ತಂಡವು ಇನ್ನೂ ಎಷ್ಟು ಜನರಿಗೆ ವಂಚನೆ ಮಾಡಿದೆ ಎನ್ನುವುದು ತನಿಖೆಯಿಂದ ಹೊರಬೀಳಬೇಕಿದೆ.

ವರದಿ: ಬಸವರಾಜ್ ಯರಗಣವಿ

ಇದನ್ನೂ ಓದಿ:
Bengaluru Fraud: ವಾಮಾಚಾರದ ಹೆಸರಲ್ಲಿ ಕೋಟಿ ಕೋಟಿ ಹಣ ವಂಚನೆ, ಮಹಿಳೆ ಸೇರಿ ಹಲವರ ಬಂಧನ

ಎಟಿಎಂಗೆ ಹಣ ತುಂಬುವ ನೌಕರರಿಂದ 3 ಕೋಟಿಗೂ ಹೆಚ್ಚು ವಂಚನೆ; ಮೂವರ ನ್ಯಾಯಾಂಗ ಬಂಧನ

Loading...
Unable to load recommendations.
Follow Us