ಶಿವಮೊಗ್ಗ: ಸೆಂಟ್ರಲ್ ಜೈಲಿನಲ್ಲಿ ವಿಚಾರಣಾಧೀನ ಖೈದಿ ಆತ್ಮಹತ್ಯೆ; ಒಂದೇ ವಾರದಲ್ಲಿ ಎರಡು ಖೈದಿಗಳ ಸಾವು

|

Updated on: Apr 29, 2023 | 7:54 AM

ಭದ್ರಾವತಿ ನಗರದ ದೇವಸ್ಥಾನದ ಬಳಿ ಅಜ್ಜಿ ಒಬ್ಬರನ್ನ ಕೊಲೆ ಮಾಡಿ, ಅವರ ಬಳಿ ಇದ್ದ ಹಣವನ್ನ ಕಿತ್ತುಕೊಂಡಿದ್ದ ಆರೋಪದ ಮೇಲೆ ಜೈಲಿನಲ್ಲಿದ್ದ ವಿಚಾರಣಾಧೀನ ಖೈದಿಯು ಈಗ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಶಿಕ್ಷೆಗೂ ಮೊದಲೇ ಜೀವ ಬಿಟ್ಟ ಹಂತಕನ ಕುರಿತು ಒಂದು ವರದಿ ಇಲ್ಲಿದೆ.

ಶಿವಮೊಗ್ಗ: ಸೆಂಟ್ರಲ್ ಜೈಲಿನಲ್ಲಿ ವಿಚಾರಣಾಧೀನ ಖೈದಿ ಆತ್ಮಹತ್ಯೆ; ಒಂದೇ ವಾರದಲ್ಲಿ ಎರಡು ಖೈದಿಗಳ ಸಾವು
ಆತ್ಮಹತ್ಯೆ ಮಾಡಿಕೊಂಡ ವಿಚಾರಣಾಧೀನ ಖೈದಿ
Follow us on

ಶಿವಮೊಗ್ಗ: ಸೆಂಟ್ರಲ್ ಜೈಲಿನಲ್ಲಿ(Shivamogga Central Jail) ಕೊಲೆ ಕೇಸ್​ ಕುರಿತು ವಿಚಾರಣೆ ಎದುರಿಸುತ್ತಿದ್ದ ಕರುಣಾಕರ ದೇವಾಡಿಗ (23) ಎಂಬ ವ್ಯಕ್ತಿಯು ಜೈಲಿನಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದ ಸೆಂಟ್ರಲ್ ಜೈಲಿನಲ್ಲಿ ಎಲ್ಲವೂ ವ್ಯವಸ್ಥೆ ಸರಿಯಾಗಿಲ್ಲ ಎನ್ನುವುದು ಮತ್ತೊಮ್ಮೆ ಸಾಭೀತಾಗಿದೆ. ಮೊನ್ನೆಯಷ್ಟೇ ಓರ್ವ ವಿಚಾರಣಾಧೀನ ಖೈದಿ ಮೇಲೆ ಹಲ್ಲೆ ನಡೆದಿತ್ತು. ಆತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದನು. ಇದರ ಬೆನ್ನಲ್ಲೆ ಇದೀಗ ಸೆಂಟ್ರಲ್ ಜೈಲ್​ನಲ್ಲಿ ಖೈದಿಯು ನೇಣಿಗೆ ಶರಣಾಗಿದ್ದು ಮಾತ್ರ ಅಚ್ಚರಿ ಮೂಡಿಸಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಭದ್ರಾವತಿ ನಗರದ ದೇವಸ್ಥಾನದ ಬಳಿ ಅನಾಥ ಅಜ್ಜಿಯ ಬಳಿ ಇದ್ದ ಹಣ ದೋಚಿ, ಬಳಿಕ ಅಜ್ಜಿಯನ್ನು ಮರ್ಡರ್ ಮಾಡಿ ಕರುಣಾಕರ್ ಎಸ್ಕೇಪ್ ಆಗಿದ್ದನು. ಬಳಿಕ ಇತನನ್ನು ಬಂಧಿಸುವಲ್ಲಿ ಭದ್ರಾವತಿ ಪೊಲೀಸರು ಯಶಸ್ವಿಯಾಗಿದ್ದರು. ಕೊಲೆ ಪ್ರಕರಣ ಎದುರಿಸುತ್ತಿದ್ದ ಕರುಣಾಕರ್ ಈಗಾಗಲೇ ಲವ್ ಮಾಡಿ ಮದುವೆಯಾಗಿದ್ದು, ಬಳಿಕ ಚಿಕ್ಕಮಗಳೂರಿನ ತರಿಕೇರಿಯಲ್ಲಿ ಸಪ್ಲೈಯರ್ ಕೆಲಸ ಮಾಡಿಕೊಂಡಿದ್ದನು. ಇಂತಹ ವ್ಯಕ್ತಿಯು ಕೊಲೆ ಕೇಸ್ ನಲ್ಲಿ ಅಂದರ್​ ಆಗಿ ಇದೀಗ ಜೀವವನ್ನೇ ಕಳೆದುಕೊಂಡಿದ್ದು ಸದ್ಯ ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಭದ್ರಾವತಿ ತಾಲೂಕಿನ ಬಾರಂದೂರಿನ ನಿವಾಸಿಯಾಗಿರುವ ಕರುಣಾಕರ್ ಕಳೆದ ನಾಲ್ಕು ತಿಂಗಳಿನಿಂದ ಸೆಂಟ್ರಲ್ ಜೈಲಿನಲ್ಲಿದ್ದನು. ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಯ ಸುದ್ದಿಯು ಕುಟುಂಬಸ್ಥರಿಗೆ ದೊಡ್ಡ ಶಾಕ್​ ನೀಡಿದೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಕರೆತರಲಾಗಿತ್ತು. ಈ ವೇಳೆ ಪತ್ನಿ, ಅತ್ತೆ ಮತ್ತು ಸಂಬಂಧಿಕರು ಶವಾಗಾರ ಎದುರು ನೋವು ತೋಡಿಕೊಂಡರು.

ಇದನ್ನೂ ಓದಿ:ವಿಜಯಪುರ: ಪ್ರಿಯಕರನ ಬ್ಲ್ಯಾಕ್‌ಮೇಲ್‌ಗೆ ಹೆದರಿ ಮಹಿಳೆ ಆತ್ಮಹತ್ಯೆ, ವಿವಾಹಿತೆಯ ಭಯಾನಕ ಲೈವ್ ಸೊಸೈಡ್ ವಿಡಿಯೋ ವೈರಲ್

ಕೊಲೆ ಕೇಸ್​ನಲ್ಲಿ ಬಂಧನಕ್ಕೊಳಗಾಗಿದ್ದ ಕರುಣಾಕರ್ ಇನ್ನು ವಿಚಾರಣೆ ಎದುರಿಸುತ್ತಿದ್ದನು. ಕುಟುಂಬಸ್ಥರು ಕರುಣಾಕರ್​ಗೆ ಬೇಲ್​ಗಾಗಿ ಪ್ರಯತ್ನ ಮಾಡುತ್ತಿದ್ದರು. ಈ ನಡುವೆ ಕರುಣಕಾರ್ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎನ್ನುವುದು ಮಾತ್ರ ನಿಗೂಢವಾಗಿದೆ. ಸೆಂಟ್ರಲ್ ಜೈಲಿನ ಒಳಗೆ ಏನು ನಡೆಯುತ್ತಿದೆ ಎನ್ನುವುದು ಮಾತ್ರ ನಿಗೂಢವಾಗಿದೆ. ಇನ್ನು ಜೈಲಾಧಿಕಾರಿಗಳು ಸಾವಿನ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ತುಂಗಾ ನಗರದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಆಗಿದ್ದು. ಕರುಣಾಕರ್ ಆತ್ಮಹತ್ಯೆ ಹಿಂದಿನ ರಹಸ್ಯವನ್ನು ಬಯಲು ಮಾಡಬೇಕಿದೆ.

ವಿವಿಧ ಅಪರಾಧಗಳಲ್ಲಿ ಜೈಲಿನಲ್ಲಿ ಶಿಕ್ಷೆ ಮತ್ತು ವಿಚಾರಣೆ ಎದುರಿಸುತ್ತಿರುವ ಖೈದಿಗಳು ಸುರಕ್ಷಿತರೇ ಎನ್ನುವ ಪ್ರಶ್ನೆ ಇದೀಗ ಉದ್ಭವವಾಗಿದೆ. ಕೇವಲ ನಾಲ್ಕೈದು ದಿನಗಳ ಅಂತರದಲ್ಲಿ ಇಬ್ಬರು ವಿಚಾರಣಾಧೀನ ಖೈದಿಗಳ ಸಾವನ್ನಪ್ಪಿದ್ದು, ನೂರೆಂಟು ಅನುಮಾನಗಳು ಹುಟ್ಟಿಕೊಂಡಿವೆ. ಜೈಲ್​ನಲ್ಲಿ ನಡೆಯುತ್ತಿರುವ ನಿಗೂಢ ಚಟುವಟಿಕೆಗಳು ಪೊಲೀಸ್ ತನಿಖೆಯಿಂದ ಬಹಿರಂಗವಾಗಬೇಕಿದೆ.

ವರದಿ: ಬಸವರಾಜ್ ಯರಗಣವಿ ಟಿವಿ9 ಶಿವಮೊಗ್ಗ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ