AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ ಗಲಭೆ ಹಿಂದುಗಳ ಪರಾಕ್ರಮದ ಸಂಕೇತ, ವಿವಾದಾತ್ಮಕ ಹೇಳಿಕೆ ನೀಡಿದ ಶರಣ್ ಪಂಪ್​ವೆಲ್

ಹಿಂದೂಗಳು ನಪುಂಸಕರಲ್ಲ ಎಂಬುದಕ್ಕೆ ಗುಜರಾತ್ ಗಲಭೆ ಸಾಕ್ಷಿ. ಇದು ಹಿಂದೂಗಳ ಪರಾಕ್ರಮದ ಸಂಕೇತ ಎಂದು ವಿಹೆಚ್​​​​ಪಿ ಮುಖಂಡ ಶರಣ್ ಪಂಪ್​ವೆಲ್​ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಗುಜರಾತ ಗಲಭೆ ಹಿಂದುಗಳ ಪರಾಕ್ರಮದ ಸಂಕೇತ, ವಿವಾದಾತ್ಮಕ ಹೇಳಿಕೆ ನೀಡಿದ ಶರಣ್ ಪಂಪ್​ವೆಲ್
ಶರಣ್ ಪಂಪ್​ವೆಲ್
TV9 Web
| Updated By: Rakesh Nayak Manchi|

Updated on: Jan 29, 2023 | 3:35 PM

Share

ತುಮಕೂರು: ಸದ್ಯ ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಮಾಡುತ್ತಿರುವ ವಿಚಾರ ಗುಜರಾತ್ ಗಲಭೆ (Gujarat Riots). ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪಾತ್ರ ಇಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿದ್ದರೂ ಬ್ರಿಟನ್​ನ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಬಿಬಿಸಿ, ನರೇಂದ್ರ ಮೋದಿಯವರನ್ನು ಗುರಿಯಾಗಿಸಿ ನಿರ್ಮಾಣ ಮಾಡಿದ ಗುಜರಾತ್ ಗಲಭೆಯ ಸಾಕ್ಷ್ಯ ಚಿತ್ರದಲ್ಲಿ ಮೋದಿ ಪಾತ್ರ ಇದೆ ಎಂದು ಆರೋಪಿಸಿದೆ. ಈ ಬಗ್ಗೆ ಆರೋಪ-ಪ್ರತ್ಯಾರೋಪ ನಡೆಯುತ್ತಿರುವ ಬೆನ್ನಲ್ಲೆ ವಿವಾದಾತ್ಮಕ ಹೇಳಕೆ ನೀಡಿದ ವಿಶ್ವ ಹಿಂದೂ ಪರಿಷತ್ (VHP) ಮುಖಂಡ ಶರಣ್ ಪಂಪ್​ವೆಲ್ (Sharan Pumpwell), ಗುಜರಾತ್ ಗಲಭೆಯನ್ನು ಹಿಂದೂರಗಳ ಪರಾಕ್ರಮಕ್ಕೆ ಹೋಲಿಕೆ ಮಾಡಿದ್ದಾರೆ.

ತುಮಕೂರಿನಲ್ಲಿ ನಡೆದ ಬಜರಂಗದಳದ ಶೌರ್ಯ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಶರಣ್ ಪಂಪ್​ವೆಲ್, 59 ಕರಸೇವಕರ ಹತ್ಯೆಯ ಪ್ರತೀಕಾರಕ್ಕೆ 2 ಸಾವಿರ ಜನರ ಹತ್ಯೆ ಹಿಂದೂಗಳು ನಪುಂಸಕರಲ್ಲ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ. 59 ಜನ ಕರಸೇವಕರ ಹತ್ಯೆಗೆ ಪ್ರತಿಕಾರವಾಗಿ 2 ಸಾವಿರ ಜನರ ಹತ್ಯೆ ಮಾಡಿದ್ದೇವೆ. ಇದು ಹಿಂದೂಗಳ ಪರಾಕ್ರಮ. ಹಿಂದುಗಳು ಷಂಡರಲ್ಲ ಎಂದು ಈ ಘಟನೆ ತೋರಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: BBC Documentary: ಬ್ರಿಟಿಷ್ ದೌರ್ಜನ್ಯದ ಸಾಕ್ಷ್ಯಚಿತ್ರ ಏಕಿಲ್ಲ? ಬಿಬಿಸಿ ವಿರುದ್ಧ ಕೇರಳ ರಾಜ್ಯಪಾಲ ಕಿಡಿ

ಹಿಂದೂ ಸಮಾಜ ಯಾವತ್ತೂ ನಪುಂಸಕ ಸಮಾಜ ಅಲ್ಲ. ನಾವು ನಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದೇವೆ. ಒಂದು ಸಲ ಗುಜರಾತಿನ ಘಟನೆಯನ್ನು ನೆನೆಪು ಮಾಡಿಕೊಳ್ಳಿ. ಅಯೋದ್ಯೆಯ ಮಂದಿರಕೋಸ್ಕರ 58 ಜನ ಸೈನಿಕರು ಕರಸೇವೆಗಾಗಿ ರೈಲಿನಲ್ಲಿ ಬರಬೇಕಾದರೆ ಆ ರೈಲನ್ನು ಸುಟ್ಟು 59 ಕರ ಸೇವಕರ ಹತ್ಯೆ ಮಾಡಿದ್ದರು. ಅದರ ಬಳಿಕ ಗುಜರಾತ್ ಯಾವ‌ ರೀತಿ ಉತ್ತರ ಕೊಟ್ಟಿತು ಎಂಬುದನ್ನು ಯೋಚಿಸಿ. ಯಾವ ಹಿಂದೂನು ಮನೆಯಲ್ಲಿ ಕುಳಿತುಕೊಂಡಿಲ್ಲ. ರಸ್ತೆಗೆ ಇಳಿದರು ಮನೆ ಮನೆಗೆ ನುಗ್ಗಿದರು. ಕರಸೇವಕರ ಹತ್ಯೆ ನಡೆದಿದ್ದು 59. ಆದರೆ, ಗುಜರಾತಿನಲ್ಲಿ ನಂತರ ನಡೆದ ಹತ್ಯೆಯ ಸಂಖ್ಯೆ ಎಷ್ಟು? ಇನ್ನೂ ಲೆಕ್ಕ ಸಿಕ್ಕಿಲ್ಲ. ಸುಮಾರು 2 ಸಾವಿರ ಹತ್ಯೆಯಾಗಿದೆ. ಇದು ಹಿಂದೂಗಳ ಪರಾಕ್ರಮ ಎಂದರು.

ಸಿದ್ದರಾಮಯ್ಯಗೆ ಸವಾಲು ಹಾಕಿದ ಪಂಪ್​ವೆಲ್

ಕರಾವಳಿ ಹಿಂದುತ್ವದ ಪಾಠಶಾಲೆ ಎಂದು ಆರೋಪಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸವಾಲು ಹಾಕಿದ ಶರಣ್ ಪಂಪ್​ವೆಲ್, ರಾಜ್ಯದ ಎಲ್ಲಾ ಜಿಲ್ಲೆಗಳು ಹಿಂದುತ್ವದ ಫ್ಯಾಕ್ಟರಿ ಆಗಲಿದೆ. ಅನಿವಾರ್ಯ ಅವಶ್ಯಕತೆ ಬಂದರೆ ಹೊಡೆದಾಟ ಮಾಡುತ್ತೇವೆ. ನುಗ್ಗಿ ಹೊಡೆದೇ ಹೊಡೆಯುತ್ತೇವೆ. ಕಾಂಗ್ರೆಸ್​ನ ಪ್ರಮುಖ ನಾಯಕನನ್ನು ಕೆಲವರು ಖಾನ್ ಎಂದು ಕರೆಯುತ್ತಾರೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯನವರು ನಮ್ಮ ನೆಲ ಮಂಗಳೂರಿಗೆ ಬಂದು ಹೇಳುತ್ತಾರೆ ದಕ್ಷಿಣ ಕನ್ನಡ ಜಿಲ್ಲೆ ಹಿಂದೂತ್ವದ ಫ್ಯಾಕ್ಟರಿ ಆಗಿದೆ ಅಂತಾ. ಅರೇ ಸಿದ್ದರಾಮಯ್ಯನವರೇ ನೆನಪಿರಲಿ ದಕ್ಷಿಣ ಕನ್ನಡ ಜಿಲ್ಲೆ ಮಾತ್ರ ಅಲ್ಲ. ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಕೂಡ ಹಿಂದುತ್ವದ ಫ್ಯಾಕ್ಟರಿ ಆಗಲಿದೆ. ಬಜರಂಗದಳ ಶೌರ್ಯ ಯಾತ್ರೆ ಮೂಲಕ ತುಮಕೂರಿನಲ್ಲಿ ಸಂಚಲನ ಮೂಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳೂ ಹಿಂದುತ್ವದ ಫ್ಯಾಕ್ಟರಿ ಆಗಲಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ