ತುಮಕೂರಿನ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರ ದುಸ್ಥಿತಿ; ಜೀವ ಭಯದಲ್ಲೇ ಪಾಠ ಕೇಳುವ ಮಕ್ಕಳು

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬ್ಯಾಡಗೆರೆ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಬಿರುಕು ಬಿಟ್ಟಿದೆ. ಮಕ್ಕಳಿಗೆ ಕೊಠಡಿ ಇಲ್ಲ. ಸರ್ಕಾರಿ ಶಾಲೆಯ ಆವರಣದಲ್ಲೇ ವಿದ್ಯುತ್ ಲೈನ್ (ಗ್ರೌಂಡಿಗ್ ವೈರ್) ಅಳವಡಿಸಿದ್ದು ಶಾಲಾ ಮಕ್ಕಳು ಅದನ್ನ ತಾಗಿಸಿಕೊಂಡು ಓಡಾಡುತ್ತಾರೆ. ಹಾಘೂ ಶಾಲೆ ಎದುರಲ್ಲೆ ಬೃಹತ್ ಅರಳಿ ಮರ ಒಣಗಿದ್ದು ಬೀಳುವ ಆತಂಕವಿದೆ.

ತುಮಕೂರಿನ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರ ದುಸ್ಥಿತಿ; ಜೀವ ಭಯದಲ್ಲೇ ಪಾಠ ಕೇಳುವ ಮಕ್ಕಳು
ಬ್ಯಾಡಗೆರೆ ಗ್ರಾಮದ ಅಂಗನವಾಡಿ ಕೇಂದ್ರ
Follow us
| Updated By: ಆಯೇಷಾ ಬಾನು

Updated on: Dec 19, 2023 | 9:30 AM

ತುಮಕೂರು, ಡಿ.19: ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳ (Anganwadi) ದುಸ್ಥಿತಿ ಹೇಳತೀರದ್ದಾಗಿದೆ. ಕೊಪ್ಪಳದ ಅಂಗನವಾಡಿಯೊಂದರಲ್ಲಿ ಕಟ್ಟಡದ ದುಸ್ಥಿತಿಯಿಂದಾಗಿ ಜೀವ ಭಯದಲ್ಲಿ ಮಕ್ಕಳನ್ನು ಮೈದಾನದಲ್ಲಿ ಕೂರಿಸಿ ಪಾಠ ಮಾಡುವಂತ ಸ್ಥಿತಿ ಇದೆ. ಇನ್ನು ಮತ್ತೊಂದೆಡೆ ತುಮಕೂರಿನಲ್ಲಿ (Tumkur) ಅಂಗನವಾಡಿ ಇಲ್ಲದೆ ಅಕ್ಷರ ದಾಸೋಹ ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಮಾಡುವಂತಾಗಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬ್ಯಾಡಗೆರೆ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಬಿರುಕು ಬಿಟ್ಟಿದ್ದು ಬಿದ್ದು ಹೋಗುವ ಸ್ಥಿತಿಯಲ್ಲಿದೆ. ಹೀಗಾಗಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಕ್ಷರ ದಾಸೋಹದ ಚಿಕ್ಕ ಕೊಠಡಿಯಲ್ಲಿ ಅಂಗನವಾಡಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.

15 ಜನ ಮಕ್ಕಳಿರುವ ಅಂಗನವಾಡಿ ಕೇಂದ್ರ ದುಸ್ಥಿತಿಗೆ ಜಾರಿದೆ. ಈ‌ ಮಕ್ಕಳಿಗೆ ಕೂರಲು ಸೂಕ್ತವಾಗಿ ಅಂಗನವಾಡಿ ಕಟ್ಟಡ ಇಲ್ಲ, ಸುಮಾರು 30 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಹಳೆ ಅಂಗನವಾಡಿ ಕೇಂದ್ರ ಈಗ ಹಾಳಾಗಿದೆ. ಇಂದೋ ನಾಳೆ ಬೀಳುವ ಪರಿಸ್ಥಿತಿಯಲ್ಲಿದೆ. ಬೀಳೊ ಪರಿಸ್ಥಿತಿ ಇರುವ ಕಾರಣ ಪಕ್ಕದಲ್ಲೆ ಇರುವ ಶಾಲೆಯ ಅಕ್ಷರ ದಾಸೋಹದ ಚಿಕ್ಕ ಕೊಠಡಿಯಲ್ಲಿ ಅಂಗನವಾಡಿ ಮಕ್ಕಳಿಗೆ ಲಾಲನೆ ಪಾಲನೆ ಮಾಡಲಾಗುತ್ತಿದೆ. ಒಂದು ಚಿಕ್ಕ ಕೊಠಡಿಯಲ್ಲಿ ಮಕ್ಕಳು ಕೂತು ಪಾಠ ಕೇಳುತ್ತಿದ್ದು, ಪಕ್ಕದಲ್ಲಿ ಗ್ಯಾಸ್​ನಲ್ಲಿ ಅಡುಗೆ ಮಾಡಲಾಗುತ್ತದೆ.

ಈ ಮಕ್ಕಳಿಗೆ ಟೀಕರ್ ಇಲ್ಲ

ಬೀಳುವ ಕೊಠಡಿಯಲ್ಲಿದ್ದ ಮಕ್ಕಳನ್ನ ದಾಸೋಹದ ಕೊಠಡಿಯಲ್ಲಿ ಕೂರಿಸಲಾಗುತ್ತಿದ್ದು ಅದು ಕೂಡ ಸಮರ್ಪಕವಾಗಿ ಇಲ್ಲ ಅನ್ನೋ ಆರೋಪ ಗ್ರಾಮಸ್ಥರು ಮಾಡ್ತಿದ್ದಾರೆ. ಇನ್ನೂ ಈ ಮಕ್ಕಳಿಗೂ ಕೂಡ ಅಂಗನವಾಡಿ ಕಾರ್ಯಕರ್ತೆ ಇಲ್ಲ. ಪಕ್ಕದ ಗ್ರಾಮದ ಅಂಗನವಾಡಿ ‌ಕಾರ್ಯಕರ್ತೆ ಮೂರು ದಿನಗಳ ಕಾಲ ಡೆಪ್ಯೋಟೆಷನ್ ಬಂದು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದಂತೆ ಅಂಗನವಾಡಿ ಸಹಾಯಕಿ‌ ಮಕ್ಕಳನ್ನ ನೋಡಿಕೊಳ್ಳಬೇಕಿದೆ. ಇಷ್ಟೇ ಅಲ್ಲದೆ ಅಂಗನವಾಡಿ ಜೊತೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೂ ಕೂಡ ದುಸ್ಥಿತಿಯಲ್ಲಿದೆ. ಕಟ್ಟಡ ತೀವ್ರ ಹಳೆಯದಾಗಿದ್ದು ಸಣ್ಣ ಪುಟ್ಟ ತೇಪೆ ಹಚ್ಚಿ ಬಣ್ಣ ಹೊಡೆಯಲಾಗಿದೆ. ಶಾಲೆಯಾದ್ರೂ ಸರಿಯಾಗಿದೆ ಅಂದ್ರೆ ಅದು ಸರಿಯಿಲ್ಲ, ಅತ್ತ ಅಂಗನವಾಡಿ ಕೂಡ ಸಮರ್ಪಕವಾಗಿ ಇಲ್ಲ.

ಇದನ್ನೂ ಓದಿ: ಕೋಲಾರ: ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ದೇವಾಲಯ, ಶೆಡ್ ನಿರ್ಮಾಣಕ್ಕೆ ಹಣ ವಸೂಲಿ

ಶಾಲೆಯ ಆವರಣದಲ್ಲಿ ವಿದ್ಯುತ್ ಲೈನ್

ಇಲ್ಲಿನ ಶಾಲೆ ಮಕ್ಕಳು ತೀವ್ರ ಭಯದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಶಾಲೆಯ ಆವರಣದಲ್ಲಿ ವಿದ್ಯುತ್ ಲೈನ್ (ಗ್ರೌಂಡಿಗ್ ವೈರ್) ಅಳವಡಿಸಿದ್ದು ಶಾಲಾ ಮಕ್ಕಳು ಅದನ್ನ ತಾಗಿಸಿಕೊಂಡು ಓಡಾಡುತ್ತಾರೆ. ಅಲ್ಲದೇ ಶಾಲೆಯ ಕಾಂಪೌಂಡ್ ಗೆ ಹೊಂದಿಕೊಂಡಂತೆ ವಿದ್ಯುತ್ ಕಂಬ ಅಳವಡಿಸಿ ಗ್ರೌಂಡ್ ವೈರ್ ಶಾಲೆಯ ಆವರಣದಲ್ಲಿ ಬಿಗಿಸಲಾಗಿದೆ. ಶಾಲೆ ಎದುರಲ್ಲೆ ಬೃಹತ್ ಅರಳಿ ಮರ ಒಣಗಿದ್ದು ಬೀಳುವ ಆತಂಕವಿದೆ. ಇದು ಕೂಡ ತೆಗೆಸಲು ಬೆಸ್ಕಾಂ ಅಧಿಕಾರಿಗಳಿಗೆ ಸಾಕಷ್ಟು ಬಾರಿ‌ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ಒಟ್ಟಾರೆ ಈ ಬ್ಯಾಡಗೆರೆ ಗ್ರಾಮದಲ್ಲಿ ಅಂಗನವಾಡಿ, ಸರ್ಕಾರಿ ಶಾಲೆ ದುಸ್ಥಿತಿಗೆ ಜಾರಿದ್ದು ಬೆಸ್ಕಾಂ ಅಧಿಕಾರಿಗಳ‌ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಶಿಕ್ಷಣ ಇಲಾಖೆ ಹಾಗೂ ಬೆಸ್ಕಾಂ ಇಲಾಖೆ ಸಿಬ್ಬಂದಿ ಸಂಪೂರ್ಣ ನಿರ್ಲಕ್ಷ್ಯ ಕಂಡು ಬಂದಿದೆ. ಆದಷ್ಟು ಬೇಗ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಅನಾಹುತವನ್ನು ತಪ್ಪಿಸಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ