ಶಾಕಿಂಗ್ ವಿಡಿಯೋ: ಸೀಲ್ಡ್​ ತಂಪು ಪಾನೀಯ ಬಾಟಲ್ ಒಳಗಿತ್ತು ಜೇಡರ ಹುಳ!

ಐಸ್ ಕ್ರೀಮ್ ಕೋನ್‌ನಲ್ಲಿ ಮಾನವ ಬೆರಳಿನ ತುಂಡು ದೊರೆತ ವಿಚಾರದ ನೆನಪು ಮಾಸುವ ಮುನ್ನವೇ ಕರ್ನಾಟಕದ ತುಮಕೂರಿನಲ್ಲಿ ವ್ಯಕ್ತಿಯೊಬ್ಬರಿಗೆ ಸೀಲ್ಡ್ ತಂಪು ಪಾನೀಯದ ಬಾಟಲ್​​​ನಲ್ಲಿ ಜೇಡರ ಹುಳ ದೊರೆತಿದೆ. ಬಾಟಲ್ ಒಳಗೆ ಜೇಡರ ಹುಳ ಇದ್ದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಶಾಕಿಂಗ್ ವಿಡಿಯೋ: ಸೀಲ್ಡ್​ ತಂಪು ಪಾನೀಯ ಬಾಟಲ್ ಒಳಗಿತ್ತು ಜೇಡರ ಹುಳ!
ಪಿಟಿಐ ಟ್ವೀಟ್ ಮಾಡಿರುವ ವಿಡಿಯೋದಿಂದ ತೆಗೆದಿರುವ ಸ್ಕ್ರೀನ್​​ಗ್ರ್ಯಾಬ್

Updated on: Jul 05, 2024 | 12:38 PM

ಬೆಂಗಳೂರು, ಜುಲೈ 5: ಸೀಲ್ಡ್​ ತಂಪು ಪಾನೀಯ ಬಾಟಲ್ ಒಂದರಲ್ಲಿ ಜೇಡರ ಹುಳು ಪತ್ತೆಯಾದ ಘಟನೆ ತುಮಕೂರಿನಿಂದ ವರದಿಯಾಗಿದೆ. ತುಮಕೂರಿನ ನಿವಾಸಿಯೊಬ್ಬರು ತಂಪು ಪಾನೀಯ ಬಾಟಲಿಯೊಳಗೆ ಜೇಡ ಹುಳ ಇದ್ದುದಾಗಿ ಆರೋಪಿಸಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಬಹಿರಂಗವಾಗಿದೆ. ಪ್ಯಾಕ್ ಮಾಡಿದ ಆಹಾರ ಮತ್ತು ಪಾನೀಯಗಳಲ್ಲಿ ಕೀಟಗಳನ್ನು ಕಂಡ ಬಗ್ಗೆ ಜನ ದೂರುವ ಹಲವಾರು ಘಟನೆಗಳಲ್ಲಿ ಇದೀಗ ತುಮಕೂರಿನ ಘಟನೆಯೂ ಸೇರ್ಪಡೆಯಾಗಿದೆ.

ಕರ್ನಾಟಕದ ತುಮಕೂರಿನಲ್ಲಿ ಸೀಲ್ಡ್ ತಂಪು ಪಾನೀಯ ಬಾಟಲಿಯೊಳಗೆ ಜೇಡರ ಹುಳ ಕಂಡುಬಂದಿದೆ ಎಂದು ಪಿಟಿಐ ಸುದ್ದಿಸಂಸ್ಥೆ ಸಾಮಾಜಿಕ ಮಾಧ್ಯಮ ಎಕ್ಸ್​​​ನಲ್ಲಿ ಪೋಸ್ಟ್​ ಮಾಡಿದ್ದು, ವಿಡಿಯೋವನ್ನೂ ಲಗತ್ತಿಸಿದೆ.

ಕೋಲ್ಡ್ ಡ್ರಿಂಕ್ ಬಾಟಲ್​​ ಒಳಗೆ ಜೇಡ: ವಿಡಿಯೋ ಇಲ್ಲಿ ನೋಡಿ


ಜೇಡರ ಹುಳು ಪತ್ತೆಯಾದ ತಂಪು ಪಾನೀಯದ ಕಂಪನಿ, ಸ್ಥಳ ಅಥವಾ ತಯಾರಿಕೆಯ ದಿನಾಂಕದ ಕುರಿತು ಯಾವುದೇ ಮಾಹಿತಿ ಈವರೆಗೆ ದೊರೆತಿಲ್ಲ. ಈ ಬಗ್ಗೆ ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

ಪ್ಯಾಕ್ ಮಾಡಿದ ಆಹಾರ ಮತ್ತು ಪಾನೀಯಗಳಲ್ಲಿ ಕೀಟಗಳು ಪತ್ತೆಯಾದ ಘಟನೆ ಇದೇ ಮೊದಲಲ್ಲ. ಏಕೆಂದರೆ ಪ್ಯಾಕ್ ಮಾಡಿದ ಆಹಾರಗಳಲ್ಲಿ ಜಿರಳೆಗಳು, ನೊಣಗಳು ಪತ್ತೆಯಾದ ಬಗ್ಗೆ ಈ ಹಿಂದೆಯೂ ಅನೇಕ ದೂರುಗಳು ಕೇಳಿಬಂದಿವೆ.

ಕಳೆದ ತಿಂಗಳು, ಮುಂಬೈ ಮೂಲದ ವ್ಯಕ್ತಿಯೊಬ್ಬರಿಗೆ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಐಸ್ ಕ್ರೀಮ್ ಕೋನ್‌ನಲ್ಲಿ ಮಾನವ ಬೆರಳಿನ ತುಂಡು ದೊರೆತಿತ್ತು. ಘಟನೆ ದೇಶದಾದ್ಯಂತ ಸಂಚಲನಕ್ಕೆ ಕಾರಣವಾಗಿತ್ತು. ಈ ಘಟನೆಯು ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ನಂತರ ಪೊಲೀಸರು ಐಸ್ ಕ್ರೀಂ ಉತ್ಪಾದಕ ಕಂಪನಿಯ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದರು. ಬೆರಳಿನ ಎಫ್​ಎಸ್​​ಎಲ್ ವರದಿಯು ಐಸ್ ಕ್ರೀಮ್ ಉತ್ಪಾದನಾ ಘಟಕದ ಉದ್ಯೋಗಿಗೆ ಸೇರಿದ್ದು ಎಂಬುದನ್ನು ಬಹಿರಂಗಪಡಿಸಿತ್ತು.

ಇದನ್ನೂ ಓದಿ: ಐಸ್​ಕ್ರೀಂನಲ್ಲಿ ಬೆರಳು ಪತ್ತೆ ಪ್ರಕರಣ: ನೂರಕ್ಕೂ ಹೆಚ್ಚು ಐಸ್​ಕ್ರೀಂಗಳು ಸೋಂಕು ಹೊಂದಿರಬಹುದು

ಮತ್ತೊಂದು ಘಟನೆಯಲ್ಲಿ, ನೋಯ್ಡಾದ ಮಹಿಳೆಯೊಬ್ಬರು ಅಮುಲ್ ಐಸ್ ಕ್ರೀಮ್ ಟಬ್‌ನಲ್ಲಿ ಹೆಪ್ಪುಗಟ್ಟಿದ ಶತಪದಿ ಸಿಕ್ಕಿದ್ದಾಗಿ ದೂರಿದ್ದರು. ಅದನ್ನು ಅವರು ಬ್ಲಿಂಕಿಟ್ ಮೂಲಕ ಆರ್ಡರ್ ಮಾಡಿದ್ದರು. ಐಸ್ ಕ್ರೀಮ್ ಟಬ್‌ನ ಫೋಟೋ ಮತ್ತು ವೀಡಿಯೊವನ್ನು ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಕಂಪನಿ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us