ಶೇ.15ರಿಂದ 20ರಷ್ಟು KSRTC ಬಸ್​ ಟಿಕೆಟ್​​ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ -ಎಸ್.ಆರ್.ಶ್ರೀನಿವಾಸ್

| Updated By: ಆಯೇಷಾ ಬಾನು

Updated on: Jul 14, 2024 | 1:46 PM

ಕೆಎಸ್​ಆರ್​ಟಿಸಿ ಬಸ್​ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಆದಷ್ಟು ಬೇಗ ಟಿಕೆಟ್ ದರ ಹೆಚ್ಚಾಗಲಿದೆ. 2019ರಲ್ಲಿ ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಆಗಿತ್ತು. ಇಲ್ಲಿ ತನಕ ಟಿಕಟ್ ದರ ಹೆಚ್ಚಳ ಮಾಡದೆ 5 ವರ್ಷ ಆಗಿದೆ. ತೈಲ ಬೆಲೆ ಏರಿಕೆ ಆಗಿರುವುದರಿಂದ ದರ ಏರಿಕೆ ಅನಿವಾರ್ಯ ಎಂದು ಕೆಎಸ್ಆರ್‌ಟಿಸಿ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ತಿಳಿಸಿದ್ದಾರೆ.

ಶೇ.15ರಿಂದ 20ರಷ್ಟು KSRTC ಬಸ್​ ಟಿಕೆಟ್​​ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ -ಎಸ್.ಆರ್.ಶ್ರೀನಿವಾಸ್
ಎಸ್.ಆರ್.ಶ್ರೀನಿವಾಸ್
Follow us on

ತುಮಕೂರು, ಜುಲೈ.14: ಹಾಲು, ಪೆಟ್ರೋಲ್-ಡೀಸೆಲ್​ ಬೆಲೆ ಏರಿಕೆ ಬೆನ್ನಲ್ಲೇ ಈಗ ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ದರ ಹೆಚ್ಚಳದ ಬರೆ ಬಿದ್ದಿದೆ. ಶೀಘ್ರದಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್‌ಗಳ ಟಿಕೆಟ್ ದರ (Bus Ticket Fare) ಹೆಚ್ಚಾಗುವ ಸಾಧ್ಯತೆ ಇದೆ. ಶೇ.15ರಿಂದ 20ರಷ್ಟು KSRTC ಬಸ್​ ಟಿಕೆಟ್​​ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ತುಮಕೂರಿನಲ್ಲಿ ಗುಬ್ಬಿ ‘ಕೈ’ ಶಾಸಕ, ಕೆಎಸ್ಆರ್‌ಟಿಸಿ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ತಿಳಿಸಿದ್ದಾರೆ.

ಮೊನ್ನೆ ಬೋರ್ಡ್ ಮೀಟಿಂಗ್ ಮಾಡಿ, ಟಿಕೆಟ್ ದರ ಹೆಚ್ಚಳ ಮಾಡುವ ವಿಚಾರದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಈ ಹಿಂದೆ 2019ರಲ್ಲಿ ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಆಗಿತ್ತು. ಇಲ್ಲಿ ತನಕ ಟಿಕಟ್ ದರ ಹೆಚ್ಚಳ ಮಾಡದೆ 5 ವರ್ಷ ಆಗಿದೆ. ತೈಲ ಬೆಲೆ ಏರಿಕೆ ಆಗಿರುವುದರಿಂದ ದರ ಏರಿಕೆ ಅನಿವಾರ್ಯ. ನೌಕರರಿಗೆ ಸಂಬಳ ಹೆಚ್ಚಳ ಮತ್ತು ಸವಲತ್ತು ಕೊಡುವುದನ್ನ ಮಾಡಬೇಕಾದರೆ ದರ ಹೆಚ್ಚಳ ಆಗಲೇಬೇಕು.

ಕೆಎಸ್‌ಆರ್‌ಟಿಸಿ ನೌಕರರ ವೇತನ ಪರಿಷ್ಕರಣೆ 2020ರಲ್ಲಿ ಮಾಡಬೇಕಿತ್ತು. ಇಲ್ಲಿ ತನಕ ಮಾಡಿಲ್ಲ. ಈ ಬಾರಿ 2024ರಲ್ಲಿ ವೇತನ ಪರಿಷ್ಕರಣೆ ಮಾಡ್ತಿವಿ. ಹಾಗಾಗಿ ಟಿಕೆಟ್ ದರ ಹೆಚ್ಚಳ ಆಗುತ್ತೆ. ಕಾಲಕಾಲಕ್ಕೆ ಹೆಚ್ಚಳ ಮಾಡಿದ್ರೆ ಹೀಗೆಲ್ಲ ಆಗ್ತಿರಲಿಲ್ಲ. ಕಳೆದ ತ್ರೈ ಮಾಸಿಕದಲ್ಲಿ ಕೆಎಸ್‌ಆರ್​ಟಿಸಿಗೆ 295 ಕೋಟಿ ನಷ್ಟ ಆಗಿದೆ. 40 ಹೊಸ ವೋಲ್ವೋ ಬಸ್‌ಗಳಿಗೆ ಪ್ರಸ್ಥಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈಗಾಗಲೆ 600 ಸಾಮಾನ್ಯ ಬಸ್‌ಗಳನ್ನು ಕೊಂಡುಕೊಳ್ಳಲಾಗಿದೆ. 15%-20 ದರ ಹೆಚ್ಚಳ ಮಾಡಲು ಪ್ರಸ್ಥಾವನೆ ಸಲ್ಲಿಸಲಾಗಿದೆ ಎಂದರು.

ಇದನ್ನೂ ಓದಿ: ಶ್ರೀಘ್ರದಲ್ಲೇ ರಸ್ತೆಗೆ ಇಳಿಯಲಿದೆ ಕೆಎಸ್​ಆರ್​ಟಿಸಿ ಹೊಸ ವೋಲ್ವೋ ಬಸ್​, ಇಲ್ಲಿದೆ ವಿಶೇಷತೆ

ಇನ್ನು ಉಳಿದದ್ದು ಸಿಎಂ ವಿವೇಚನೆಗೆ ಬಿಟ್ಟಿದ್ದು ರೇಟ್ ಜಾಸ್ತಿ ಮಾಡಿರುವುದರಿಂದ ಪುರುಷ ಪ್ರಯಾಣಿಕರಿಗೆ ಹೊರೆಯಾಗುತ್ತದೆ ಅನ್ನೋ ಪ್ರಶ್ನೆಯೇ ಇಲ್ಲ. ಶಕ್ತಿ ಯೋಜನೆಯಲ್ಲಿನ ಮಹಿಳಾ ಪ್ರಯಾಣಿಕರ ಟಿಕೆಟ್ ದರ ಹೆಚ್ಚಾಗುತ್ತೆ, ಸರ್ಕಾರ ಅದನ್ನು ತುಂಬಿಕೊಡುತ್ತೆ. ಕೆಎಸ್‌ಆರ್‌ಟಿಸಿ ಸಂಸ್ಥೆ ಉಳಿಯಬೇಕಾದರೆ ದರ ಹೆಚ್ಚಳ ಅನಿವಾರ್ಯ ಎಂದು ಎಸ್ ಆರ್ ಶ್ರೀನಿವಾಸ್ ತಿಳಿಸಿದರು.

ಬಸ್​ ಟಿಕೆಟ್​ ದರ ಏರಿಸುವ ಸುಳಿವು ನೀಡಿದ ಕಾಂಗ್ರೆಸ್ ಶಾಸಕ

ಇನ್ನು ಮತ್ತೊಂದೆಡೆ ಶಕ್ತಿ ಯೋಜನೆಯಿಂದ ನಿಗಮ ನಷ್ಟದಲ್ಲಿದೆ. ಡೀಸೆಲ್​ ಹಾಗೂ ಬಸ್​​ನ ಬಿಡಿ ಭಾಗಗಳ ದರ ಕೂಡ ಹೆಚ್ಚಾಗಿದೆ. ಕಳೆದ 10 ವರ್ಷಗಳಿಂದ ಬಸ್​​ ಟಿಕೆಟ್ ದರ ಏರಿಕೆ ಮಾಡಿಲ್ಲ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಆಸ್ತಿ ಪರಭಾರೆ ಮಾಡುತ್ತೇವೆ. ಸಂಸ್ಥೆಗೆ ಸೇರಿದ ಹಳೇ ಕಟ್ಟಡಗಳನ್ನು ನವೀಕರಿಸಿ ಬಾಡಿಗೆ ಕೊಡುತ್ತೇವೆ. ಬಸ್​ ​ ಟಿಕೆಟ್ ದರವನ್ನು ಹೆಚ್ಚಿಸುವ ಚಿಂತನೆಯಲ್ಲಿದ್ದೇವೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ರಾಜು ಕಾಗೆ ಹೇಳಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ