ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಇಂದು ಬಾಗಲಕೋಟೆ ಜಿಲ್ಲೆ ಬಾದಾಮಿಯ ಮನೋರಥ ಪ್ರತಿಷ್ಠಾನ ಗೋಶಾಲೆಯಲ್ಲಿ ಗೋವು ಪೂಜೆ ನೆರವೇರಿಸಿ ಭಕ್ತಿ-ಪ್ರೀತಿ ಮೆರೆದರು.
ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ವೀಕ್ಷಣೆಗೆ ಬಾದಾಮಿಗೆ ತೆರಳಿದ್ದ ವೇಳೆ ಸಚಿವರು ಬಾದಾಮಿ ಶ್ರೀ ಬನಶಂಕರಿ ದೇವಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಿದರು.
ಬಳಿಕ ಸಚಿವರು ಬಾದಾಮಿಯ ಮನೋರಥ ಪ್ರತಿಷ್ಠಾನದ ಗೋಶಾಲೆಗೆ ತೆರಳಿ ಭಾರತೀಯ ಸಂಪ್ರದಾಯದಂತೆ ದೇಸಿ ಗೋವುಗಳಿಗೂ ಪೂಜೆ ಸಲ್ಲಿಸಿ, ಆರತಿ ಬೆಳಗಿದರು.
ಮನೋರಥ ಗೋಶಾಲೆಯಲ್ಲಿ ಭಾರತೀಯ ಪ್ರಸಿದ್ಧ ತಳಿಗಳಾದ ಗೀರ್, ಸಾಹಿವಾಲ್, ಅಮೃತ್ ಮಹಲ್, ಮಲ್ನಾಡ್ ಗಿಡ್ಡ ಹೀಗೆ ವಿವಿಧ ಗೋವುಗಳಿದ್ದು, ಸಚಿವರು ಈ ದೇಸಿ ಹಸು-ಕರುಗಳಿಗೆ ಬೆಲ್ಲ, ಬಾಳೆಹಣ್ಣು, ಅಕ್ಕಿ ತಿನ್ನಿಸಿ ನೇವರಿಸಿದರು.
ಬಾದಾಮಿಯ ಈ ಗೋಶಾಲೆಯಲ್ಲಿ ಸಚಿವರು ಸ್ವಲ್ಪ ಹೊತ್ತು ಎಲ್ಲಾ ರಾಜಕೀಯ ಜಂಜಾಟಗಳಿಂದ ದೂರವಿದ್ದು, ಸಣ್ಣ ಕರುಗಳನ್ನು ಮುದ್ದಿಸುತ್ತ ಸಂತಸದಿಂದ ಕಾಲ ಕಳೆದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹಿಂದೂ ಧರ್ಮ ಪಾಲನೆ, ಭಾರತೀಯ ಸಂಸ್ಕೃತಿ ಅನುಸರಣೆ ಎಂದರೆ ಯಾವತ್ತೂ ಒಂದು ಹೆಜ್ಜೆ ಮುಂದೆ ಇದ್ದು, ರಾಜಕೀಯ ಜಂಜಾಟ ಬಿಟ್ಟು ಕರುಗಳ ಮುದ್ದಿಸಿ ಸಂತಸಪಟ್ಟರು.