ಉತ್ತರ ಕನ್ನಡ: ನಾಯಿಯಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವೈರಸ್; ಶ್ವಾನಪ್ರಿಯರು ಕಂಗಾಲು

| Updated By: preethi shettigar

Updated on: Feb 07, 2022 | 10:48 AM

ವಾರದಲ್ಲಿ ಸುಮಾರು 50 ಕ್ಕೂ ಹೆಚ್ಚು ನಾಯಿಗಳು ಸಾವನ್ನಪ್ಪುತ್ತಿವೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಪಶು ಆಸ್ಪತ್ರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಿಬ್ಬಂದಿ ಕೊರತೆ ಇದ್ದರೂ, ಲಭ್ಯವಿರುವ ವೈದ್ಯರು, ಸಿಬ್ಬಂದಿಗಳು ಸೇರಿ ವೈರಸ್ ಕಾಟಕ್ಕೆ ಒಳಗಾಗುತ್ತಿರುವ ಮೂಖ ಪ್ರಾಣಿಗಳನ್ನು ರಕ್ಷಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ಉತ್ತರ ಕನ್ನಡ: ನಾಯಿಯಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವೈರಸ್; ಶ್ವಾನಪ್ರಿಯರು ಕಂಗಾಲು
ನಾಯಿ
Follow us on

ಉತ್ತರ ಕನ್ನಡ: ರಾಜ್ಯದಲ್ಲಿ ಒಂದೆಡೆ ಕೊರೊನಾ ಸೋಂಕು(Coronavirus) ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಸೋಂಕಿತರಾಗಿ ಚಿಕಿತ್ಸೆ(Treatment) ಪಡೆಯುತ್ತಿದ್ದಾರೆ. ಆದರೆ, ಈ ನಡುವೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಯಿಗಳಿಗೂ(Dog) ವೈರಸ್ ಕಾಟ ಶುರುವಾಗಿದ್ದು, ಲಸಿಕೆ ನೀಡದಿದ್ದಲ್ಲಿ ನಾಯಿಗಳ‌ ಸಾವು ಗ್ಯಾರಂಟಿ ಎಂದು ವೈದ್ಯರು ಹೇಳಿದ್ದಾರೆ. ಸೋಂಕಿಗೆ ತುತ್ತಾಗುವ ನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಶ್ವಾನಪ್ರಿಯರನ್ನು ಈ ವಿಚಾರ ಕಂಗಾಲಾಗಿಸಿದೆ.

ಕಳೆದ ಮೂರು ವರ್ಷಗಳಿಂದ ಜನಸಾಮಾನ್ಯರನ್ನು ಪರಿ ಪರಿಯಾಗಿ ಪೀಡಿಸುತ್ತಿರುವ ಕೊರೊನಾದಿಂದಾಗಿ ಜನ ಜೀವನವೇ ಅಸ್ತವ್ಯಸ್ತವಾಗಿದೆ. ಈ ಬಾರಿ ಕಾಣಿಸಿರುವ ಮಹಾಮಾರಿ ಜೀವಕ್ಕೇನು ಅಪಾಯ ತರದಿದ್ದರೂ, ಸರಕಾರ ಸಾಕಷ್ಟು ಎಚ್ಚರಿಕೆಯ ಹೆಜ್ಜೆಯನ್ನು ಇರಿಸುವಂತೆ ಮಾಡಿದೆ. ಇದು ರಾಜ್ಯದ ಜನರ ಪರಿಸ್ಥಿತಿಯಾದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಯಿಗಳೂ ಕೂಡಾ ಕೆನೈನ್ ಪಾರ್ವೊ ವೈರಸ್‌ನಿಂದಾಗಿ ಸಂಕಷ್ಟಕ್ಕೀಡಾಗುತ್ತಿವೆ.

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಅಂಕೋಲಾ, ಜೊಯಿಡಾ ತಾಲೂಕಿನಲ್ಲಿ ನಾಯಿಗಳಲ್ಲಿ ಸೋಂಕಿನ ಬಾಧೆ ಹೆಚ್ಚತೊಡಗಿದೆ. ಈ ಸೋಂಕು ಪೀಡಿತ ನಾಯಿಗಳು ಆರಂಭದ ದಿನಗಳಲ್ಲಿ ಚುರುಕುತನವನ್ನು ಕಳೆದುಕೊಂಡು ಮಂದ ಸ್ಥಿತಿಗೆ ತಲುಪುತ್ತಿದ್ದು, ನಂತರ ವಾಂತಿ, ಅತಿಸಾರದಂತ ಆರೋಗ್ಯ ಸಮಸ್ಯೆಗೊಳಗಾಗುತ್ತಿದೆ. ಅನ್ನಾಹಾರವನ್ನು ತ್ಯಜಿಸಿ ನಿಶ್ಯಕ್ತ ಸ್ಥಿತಿಗೆ ತಲುಪಿ ಕೊನೆಗೇ ಸಾವನ್ನಪ್ಪುತ್ತವೆ.

ವಾರದಲ್ಲಿ ಸುಮಾರು 50 ಕ್ಕೂ ಹೆಚ್ಚು ನಾಯಿಗಳು ಸಾವನ್ನಪ್ಪುತ್ತಿವೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಪಶು ಆಸ್ಪತ್ರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಿಬ್ಬಂದಿ ಕೊರತೆ ಇದ್ದರೂ, ಲಭ್ಯವಿರುವ ವೈದ್ಯರು, ಸಿಬ್ಬಂದಿಗಳು ಸೇರಿ ವೈರಸ್ ಕಾಟಕ್ಕೆ ಒಳಗಾಗುತ್ತಿರುವ ಮೂಖ ಪ್ರಾಣಿಗಳನ್ನು ರಕ್ಷಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ಈ ಕೆನೈನ್ ಪಾರ್ವೊ ನಾಯಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಹಾಗೂ ಹರಡುವ ಸೋಂಕಾಗಿದೆ. ಈ ವೈರಸ್​ಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ, ಜೀರ್ಣಾಂಗ ವ್ಯವಸ್ಥೆಯ ವೈಫಲ್ಯದಿಂದ ನಾಯಿಗಳು ಮರಣ ಹೊಂದುವ ಸಾಧ್ಯತೆಯೂ ಅಧಿಕ. ಹೀಗಾಗಿ ಸೋಂಕಿನ ಆರಂಭಿಕ ಲಕ್ಷಣಗಳು ಕಂಡುಬಂದಾಗಲೇ ನಾಯಿಗಳನ್ನು ಪಶು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡುವುದು ಅತ್ಯಗತ್ಯವಾಗಿದೆ. ಇಲ್ಲದಿದ್ದರೆ ಅಸ್ವಸ್ಥ ಸ್ಥಿತಿಗೆ ತಲುಪಿದ ಮೂರು- ನಾಲ್ಕು ದಿನಗಳಲ್ಲಿ ಮರಣ ಹೊಂದುವ ಸಾಧ್ಯತೆ ಹೆಚ್ಚು. 6 ರಿಂದ 12 ವಾರಗಳ ನಾಯಿ ಮರಿಗಳಿಗೆ ಮುಂಜಾಗ್ರತಾ ಕ್ರಮವಾಗಿ ಲಸಿಕೆಯನ್ನು ನೀಡುವ ಮೂಲಕ ಮಾರಕ ಕೆನೈನ್ ಪಾರ್ವೊ ವೈರಸ್ ಬಾಧಿಸದಂತೆ ಎಚ್ಚರಿಕೆ ವಹಿಸಬಹುದಾಗಿದೆ ಎಂದು ಪಶು ವೈದ್ಯರಾದ ಡಾ.ರಾಕೇಶ್ ಹೇಳಿದ್ದಾರೆ.

ಒಟ್ಟಿನಲ್ಲಿ ಪ್ರತೀ ದಿನ ಸೋಂಕು ಪೀಡಿತ ಹಲವಾರು ನಾಯಿಗಳನ್ನು ಪಶು ಆಸ್ಪತ್ರೆಗಳತ್ತ ಚಿಕಿತ್ಸೆಗಾಗಿ ಮಾಲಿಕರು ತರುತ್ತಿದ್ದು, ಸಿಬ್ಬಂದಿ ಕೊರತೆಯು ಕೂಡ ನಾಯಿಗಳ ಚಿಕಿತ್ಸೆಗೆ ಸಮಸ್ಯೆಯುಂಟು ಮಾಡುತ್ತಿದೆ. ಈ ಸಮಸ್ಯೆ ನೀಗಿಸಲು ಸರಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ.

ವರದಿ: ವಿನಾಯಕ ಬಡಿಗೇರ

ಇದನ್ನೂ ಓದಿ:

ಹಾಸನದಲ್ಲಿ ಹೃದಯ ವಿದ್ರಾವಕ ಘಟನೆ; ಹೆತ್ತವರಿಗೆ ಬೇಡವಾದ ಮಗು ನಾಯಿ ಪಾಲು!

ಬೆಂಗಳೂರಿನಲ್ಲಿ ಬೀದಿ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಅಪರಿಚಿತ ವ್ಯಕ್ತಿ; ದೃಶ್ಯ ಸಿಸಿಟಿವಿಯಲ್ಲಿ ಸೆರೆ