ಉತ್ತರ ಕನ್ನಡ: ರೈಲ್ವೇ ಯೋಜನೆಗೆ ಭೂಮಿ ನೀಡಿ 30 ವರ್ಷ ಕಳೆದ್ರೂ ಕೈ ಸೇರದ ಪರಿಹಾರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 03, 2023 | 9:38 PM

ಅವರೆಲ್ಲ ಕೇಂದ್ರ ಸರ್ಕಾರದ ಯೋಜನೆಯೊಂದಕ್ಕೆ ಜಾಗ ನೀಡಿ ನಿರಾಶ್ರಿತರಾದವರು. ಗುಂಟೆಗೆ ಕೇವಲ 400 ರೂಪಾಯಿ ಪರಿಹಾರ ನೀಡಿ ಯೋಜನೆಯವರು ಕೈತೊಳೆದುಕೊಂಡಿದ್ದು, ನಿರಾಶ್ರಿತರು ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಿದ್ದರು. ಆದರೆ, ಜಾಗ ನೀಡಿ 30 ವರ್ಷ ಕಳೆದರೂ ಇದುವರೆಗೂ ನಿರಾಶ್ರಿತರಿಗೆ ಪರಿಹಾರ ಮಾತ್ರ ಕೈ ಸೇರಿಲ್ಲ. ಪರಿಹಾರಕ್ಕಾಗಿ ಅಲೆದಾಡಿ ಹಲವರು ಈಗಾಗಲೇ ಸಾವನ್ನಪ್ಪಿದ್ದು, ಇನ್ನಾದರೂ ಪರಿಹಾರ ನೀಡುವಂತೆ ನಿರಾಶ್ರಿತರು ಆಗ್ರಹಿಸುತ್ತಿದ್ದಾರೆ. 

ಉತ್ತರ ಕನ್ನಡ: ರೈಲ್ವೇ ಯೋಜನೆಗೆ ಭೂಮಿ ನೀಡಿ 30 ವರ್ಷ ಕಳೆದ್ರೂ ಕೈ ಸೇರದ ಪರಿಹಾರ
ಅಂಕೋಲಾ
Follow us on

ಉತ್ತರ ಕನ್ನಡ, ನ.03: ಕಳೆದ 30 ವರ್ಷಗಳ ಹಿಂದೆ ಜಿಲ್ಲೆಯ ಅಂಕೋಲಾ(Ankola)ತಾಲ್ಲೂಕಿನ ವ್ಯಾಪ್ತಿಯಲ್ಲಿ ಕೊಂಕಣ ರೈಲ್ವೇಯ ನೂತನ ಮಾರ್ಗ ನಿರ್ಮಾಣಕ್ಕೆ ಮುಂದಾಗಿತ್ತು. ಇಲ್ಲಿನ ಹಾರವಾಡ, ಸಕಲಬೇಣ, ಆವರ್ಸಾ ಭಾಗದ ನೂರಾರು ಕುಟುಂಬಗಳ ಕೃಷಿ ಜಮೀನು ಸೇರಿದಂತೆ ನೂರಾರು ಎಕರೆ ಭೂಮಿಯನ್ನು, ಯೋಜನೆ ಜಾರಿಗಾಗಿ ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಪ್ರತಿ ಗುಂಟೆಗೆ ಕೇವಲ 400 ರಿಂದ 1000 ರೂಪಾಯಿ ನಿಗದಿಪಡಿಸಿದ ಭೂಸ್ವಾಧೀನಾಧಿಕಾರಿಗಳು, ಪರಿಹಾರ ಕೊಟ್ಟು ಕೈತೊಳೆದುಕೊಂಡಿದ್ದರು. ಈ ವೇಳೆ ಕೆಲ ಭೂ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿ ಭೂಸ್ವಾಧೀನ ಕಾಯ್ದೆ 18ರಡಿ ಅರ್ಜಿ ಸಲ್ಲಿಸಿ ಹೆಚ್ಚಿನ ಪರಿಹಾರ ಪಡೆದುಕೊಂಡಿದ್ದರು. ಆದರೆ, ಅನಕ್ಷರಸ್ಥರಾದ ಕೆಲವರು ಕಾನೂನಿನ ಅರಿವಿಲ್ಲದೇ ಜಿಲ್ಲಾಧಿಕಾರಿ ಮೊರೆ ಹೋಗಿದ್ದು, ಈ ವೇಳೆ 28(ಎ) ಅನ್ವಯ ಪ್ರಕರಣಗಳ ದಾಖಲಿಸಿದ್ದರು. ಈ ಸಂಬಂಧ ಕೊಂಕಣ ರೈಲ್ವೇ ಕುಮಟಾದ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಾರ್ಯಾಲಯದಲ್ಲಿ ಸಾಕಷ್ಟು ಬಾರಿ ವಿಚಾರಣೆ ನಡೆದಿದ್ದರೂ ಇದುವರೆಗೂ ಪರಿಹಾರ ಮಾತ್ರ ಕೈಸೇರಿಲ್ಲ.

ಪರಿಹಾರಕ್ಕಾಗಿ ಅಲೆದಾಡಿ ಸಾವನ್ನಪ್ಪಿದ ಹಲವರು

ಇನ್ನು ಕೊಂಕಣ ರೈಲ್ವೇ ಯೋಜನೆಗೆ ಭೂಮಿ ನೀಡಿದವರಲ್ಲಿ ಬಹುತೇಕರು ಕೃಷಿಕರಾಗಿದ್ದು, ತಮ್ಮ ಜಮೀನುಗಳಲ್ಲಿ ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದರು. ಆದರೆ, ಇದೀಗ ಇತ್ತ ಭೂಮಿಯೂ ಇಲ್ಲ, ಅತ್ತ ಪರಿಹಾರವೂ ಇಲ್ಲ ಎನ್ನುವಂತಾಗಿದೆ. ಈಗಾಗಲೇ ಪರಿಹಾರಕ್ಕಾಗಿ ಅಲೆದಾಡಿ ಸಾಕಷ್ಟು ಮಂದಿ ಸಾವನ್ನಪ್ಪಿದ್ದು, ಇದೀಗ ಇರುವವರಲ್ಲೂ ಹಲವರು ವಯಸ್ಸಾದವರೇ ಇರುವುದರಿಂದ ಪ್ರತಿ ಬಾರಿ ವಿಚಾರಣೆಗೆ ಕುಮಟಾಕ್ಕೆ ತೆರಳಲಾಗದೇ ಪರದಾಡುವಂತಾಗಿದೆ. ಇನ್ನೊಂದೆಡೆ ಮೇಲಿಂದ ಮೇಲೆ ಅಧಿಕಾರಿಗಳು ವರ್ಗಾವಣೆಯಾಗಿ ಹೋಗುವುದರಿಂದ ಪ್ರತಿಬಾರಿ ಹೊಸ ಅಧಿಕಾರಿ ಬಂದಾಗಲೂ ದಾಖಲೆಗಳನ್ನ ನೀಡುವಂತಾಗಿದೆ.

ಇದನ್ನೂ ಓದಿ:Shivamogga: ರೈತನ ಜಮೀನು ಒತ್ತುವರಿ, ಪರಿಹಾರ ನೀಡದ ಭೂ ಸ್ವಾಧೀನಾಧಿಕಾರಿಗಳ ಕಚೇರಿ ಜಪ್ತಿಗೆ ಕೋರ್ಟ್ ಆದೇಶ

ಇನ್ನು ನಿರಾಶ್ರಿತರು ‘ಕಳೆದ 2019ರಲ್ಲಿ ಅಂದಿನ ಕೊಂಕಣ ರೈಲ್ವೇ ಭೂಸ್ವಾಧೀನಾಧಿಕಾರಿಗಳು ಪರಿಹಾರಕ್ಕೆ ಒಪ್ಪಿ ಇನ್ನೇನು ಅಂತಿಮಗೊಳಿಸುವಷ್ಟರಲ್ಲಿ ಕೊರೊನಾ ವಕ್ಕರಿಸಿದ್ದು, ಇದರಿಂದ ಮತ್ತೆ ವಿಳಂಬವಾಗುವಂತಾಗಿದೆ. ಹೀಗಾಗಿ ಅಧಿಕಾರಿಗಳು ಇತ್ತ ಗಮನಹರಿಸಿ ಆದಷ್ಟು ಶೀಘ್ರದಲ್ಲಿ ಪರಿಹಾರ ಒದಗಿಸಿಕೊಡಿ ಎನ್ನುತ್ತಿದ್ದಾರೆ. ಒಟ್ಟಾರೇ ಸರ್ಕಾರದ ಯೋಜನೆಗೆ ಭೂಮಿ ಕೊಟ್ಟು ಮೂರು ದಶಕಗಳೇ ಕಳೆದರೂ ಸಹ ಇದುವರೆಗೂ ನಿರಾಶ್ರಿತರಿಗೆ ಪರಿಹಾರ ಸಿಗದಿರೋದು ನಿಜಕ್ಕೂ ದುರಂತವೇ. ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಆದಷ್ಟು ಶೀಘ್ರದಲ್ಲಿ ಪರಿಹಾರ ಒದಗಿಸಿಕೊಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ