Karwar: ಸಾರಾಯಿ ದೇವರು ಅಂತಲೇ ಖ್ಯಾತಿ ಪಡೆದಿರುವ ಕರಾವಳಿಯ ಖಾಪ್ರಿ ಜಾತ್ರೆಗೆ ರಾಜ್ಯಗಳಿಂದಲೂ ಬರುತ್ತಾರೆ ಭಕ್ತರು! ಏನಿದರ ವಿದೇಶದ ನಂಟು?

Liquor god: ಇದಕ್ಕೆ ಆಫ್ರಿಕಾ ಮೂಲದ‌ ಕತೆಯಿದೆ. ಕಾರವಾರ ನಗರದ ಕೋಡಿಭಾಗ ಹತ್ತಿರವಿರುವ ಖಾಪ್ರಿ ದೇವರಿಗೆ ಹೆಂಡ, ಸಿಗರೇಟ್, ಮೇಣದ ಬತ್ತಿ ಅರ್ಪಣೆ ಮಾಡುವ ಮೂಲಕ ಇಲ್ಲಿಗೆ ಬರುವ ಭಕ್ತರು ತಮ್ಮ ಹರಿಕೆ ತಿರಿಸುತ್ತಾರೆ. ಈ ಸಂಪ್ರದಾಯ ನೂರಾರು ವರ್ಷಗಳಿಂದ ಇದು ನಡೆಯುತ್ತಾ ಬಂದಿದೆ.

Karwar: ಸಾರಾಯಿ ದೇವರು ಅಂತಲೇ ಖ್ಯಾತಿ ಪಡೆದಿರುವ ಕರಾವಳಿಯ ಖಾಪ್ರಿ ಜಾತ್ರೆಗೆ ರಾಜ್ಯಗಳಿಂದಲೂ ಬರುತ್ತಾರೆ ಭಕ್ತರು! ಏನಿದರ ವಿದೇಶದ ನಂಟು?
ಸಾರಾಯಿ ದೇವರು ಅಂತಲೇ ಖ್ಯಾತಿ ಪಡೆದಿರುವ ಕರಾವಳಿಯ ಖಾಪ್ರಿ ಜಾತ್ರೆ
Edited By: ಸಾಧು ಶ್ರೀನಾಥ್​

Updated on: Mar 13, 2023 | 10:51 AM

ಸಾಮಾನ್ಯವಾಗಿ ಜಾತ್ರೆ ಅಂದ್ರೆ ಅಲ್ಲಿ ಜನ ಜಂಗುಳಿ ಸೇರುವುದು, ರಥೋತ್ಸವ ನೆರವೇರುವುದು ಮಾಮೂಲಿ. ಜೊತೆಗೆ ವಿಶೇಷ ಪೂಜೆ, ಹೂವು, ಹಣ್ಣು ಕಾಯಿ ನೈವೇದ್ಯೆ ಮಾಡುವುದು ವಾಡಿಕೆ. ಆದರೆ ಇಲ್ಲೀಗ ನಿಮಗೆ ಹೇಳುತ್ತಿರುವ ಜಾತ್ರೆಯ ವಿಶೇಷವೇ ಬೇರೆ… ಆ ದೇವರಿಗೆ ಹೆಂಡ, ಸಿಗರೇಟ್ ಅಂದ್ರೆ ಬಹು ಪ್ರೀತಿ. ಅಲ್ಲಿಗೆ ಬರುವ ಭಕ್ತರು ಆ ದೇವರಿಗೆ ಎಣ್ಣೆ, ಸಿಗರೇಟ್ ನೈವೇದ್ಯ ಮಾಡಿ ತಮ್ಮ ಹರಕೆ ತೀರಿಸುತ್ತಾರೆ. ಅರೆ ಏನಿದು? ಅಂತಾ ಆಶ್ಚರ್ಯ ಪಡ್ತಿದೀರಾ. ಆಶ್ಚರ್ಯ ಆದರೂ ಇದು ಸತ್ಯ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ… ಹೌದು ಕರಾವಳಿಯಲ್ಲಿ ಸಾರಾಯಿ ದೇವರು ಅಂತಲೇ ಖ್ಯಾತಿ ಪಡೆದಿರುವ ಖಾಪ್ರಿ ದೇವರ (liquor god) ಜಾತ್ರಾ ಮಹೋತ್ಸವ (special puja) ಈ ಬಾರಿಯೂ ಅದ್ದೂರಿಯಾಗಿ ನೇರವೇರಿದೆ. ಸಹಸ್ರಾರು ಭಕ್ತರು ದೇವರಿಗೆ ಮದ್ಯ ನೈವೇದ್ಯ ಮಾಡಿ ಸಿಗರೇಟಿನ ಆರತಿ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಪೂಜೆ ಸಲ್ಲಿಸಿದರು. ಸಾಮಾನ್ಯವಾಗಿ ಜಾತ್ರೆಗಳಲ್ಲಿ ಜನಜಂಗುಳಿ ಸೇರುವುದು, ರಥೋತ್ಸವ ನೇರವೇರುವುದನ್ನ ನೋಡಿದ್ದೇವೆ. ಜೊತೆಗೆ ದೇವರಿಗೆ ವಿವಿಧ ತರಹದ ರುಚಿರುಚಿಯಾದ ಖಾದ್ಯಗಳ ನೈವೇದ್ಯ, ಹಣ್ಣು, ಹೂ, ಕಾಯಿ ಅರ್ಪಣೆ ಮಾಡುವುದು ವಾಡಿಕೆ. ಆದರೆ ಕಾರವಾರ ನಗರದ (Karwar, uttara kannada) ಕೋಡಿಭಾಗ ಹತ್ತಿರವಿರುವ ಖಾಪ್ರಿ ದೇವರಿಗೆ ಹೆಂಡ, ಸಿಗರೇಟ್, ಮೇಣದ ಬತ್ತಿ ಅರ್ಪಣೆ ಮಾಡುವ ಮೂಲಕ ಇಲ್ಲಿಗೆ ಬರುವ ಭಕ್ತರು ತಮ್ಮ ಹರಿಕೆ ತಿರಿಸುತ್ತಾರೆ. ಈ ಸಂಪ್ರದಾಯ ಇಂದು ಮೊನ್ನೆಯದಲ್ಲ ನೂರಾರು ವರ್ಷಗಳಿಂದ ಇದು ನಡೆಯುತ್ತಾ ಬಂದಿದೆ..

ಭಕ್ತರು ತಾವು ತಂದ ಸಾರಾಯಿಯನ್ನ ದೇವಸ್ಥಾನದ ಪಕ್ಕದಲ್ಲಿ ಚೌಕಾಕಾರದ ಹುಂಡಿಗೆ ಸುರಿಯುತ್ತಾರೆ. ಜೊತೆಗೆ ಸಿಗರೇಟ್ ಅನ್ನು ಹಚ್ಚಿ, ದೀಪ ಬೆಳಗುವ ರೀತಿ ಬೆಳಗುತ್ತಾರೆ. ಈ ರೀತಿ ಮಾಡುವುದರಿಂದ ತಾವು ಬೇಡಿಕೊಂಡ‌ ಹರಕೆಗಳು ಈಡೇರುತ್ತವೆ ಎನ್ನುವುದು ಇಲ್ಲಿಗೆ ಬರುವ ಭಕ್ತರು ನಂಬಿಕೆಯಾಗಿದೆ‌‌. ಇನ್ನು ಈ ಜಾತ್ರೆ ವಿಶೇಷ ಅಂದರೆ ಸರ್ವ ಧರ್ಮದವರು ಜಾತ್ರೆಗೆ ದೇವರ ದರ್ಶನ ಪಡೆಯುತ್ತಾರೆ.

ಇನ್ನು ಖಾಪ್ರಿ ದೇವರಿಗೆ ತನ್ನದೇ ಆದ ಇತಿಹಾಸವಿದ್ದು, ಈ ದೇವರು ಆಫ್ರಿಕಾ ಮೂಲದೆನ್ನಲಾಗುತ್ತದೆ. ಆಫ್ರಿಕಾ ಮೂಲದ‌ ವ್ಯಕ್ತಿಯೋರ್ವ 300 ವರ್ಷಗಳ ಹಿಂದೆ ಕಾರವಾರ ನಗರ ಕೋಡಿಭಾಗನ ಕಾಳಿ ನದಿ ಹತ್ತಿರವಿರುವ ಈ ಸ್ಥಳಕ್ಕೆ ಬಂದು ದೇವರನ್ನು ತಂದು ಪೂಜಿಸುತ್ತಿದ್ದನಂತೆ. ಅದಾದ ನಂತರ ಆತ ಕಣ್ಮರೆಯಾಗಿದ್ದು, ಇಲ್ಲಿನ ಪರಸಪ್ಪ ಮನೆತನದವರು ಇದೇ ಜಾಗದಲ್ಲಿ ಕೆಲಸ ಮಾಡುವಾಗ ದೇವರ ಕಲ್ಲು ಗೋಚರವಾಗಿತ್ತಂತೆ.

ಬಳಿಕ ಕನಸಿನಲ್ಲಿ ದೇವರು ಬಂದು ತನಗೆ ಕೋಳಿ, ಸಾರಾಯಿ, ಸಿಗರೇಟ್ ನೈವೇದ್ಯ ಮಾಡು ಅಂತಾ ಕೇಳಿಕೊಂಡಿದ್ದರಿಂದ ಅಲ್ಲಿಂದ ದೇವಸ್ಥಾನವನ್ನು ಕಟ್ಟಿ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಅಲ್ಲಿಂದ ಇಲ್ಲಿಯವರಗೆ ಈ ದೇವರಿಗೆ ನಡೆದುಕೊಂಡು ಬಂದ ಭಕ್ತರಿಗೆ ಖಾಪ್ರಿ ದೇವರು ಒಳ್ಳೆಯದನ್ನ ಮಾಡುತ್ತಾ ಬಂದಿದ್ದಾನೆ ಎನ್ನುವ ನಂಬಿಕೆ ಇದೆ.

ಇನ್ನೂ ವಿಶೇಷ ಅಂದರೆ ಖಾಪ್ರಿ ದೇವರಲ್ಲಿ ಕೆಲಸದ ಸಮಸ್ಯೆ ಬಗ್ಗೆ, ಸಂತಾನ ಭಾಗ್ಯದ ಬಗ್ಗೆ, ಕೌಟುಂಬಿಕ ಕಲಹ ಹೀಗೆ ಹಲವು ಸಮಸ್ಯೆಗಳ ಬಗ್ಗೆ ಕೇಳಿಕೊಂಡರೆ ಬಗೆಹರಿಯುತ್ತವೆ ಎನ್ನುವ ನಂಬಿಕೆ ಇದೆ… ಹಾಗೆ ನೆರವೇರಿದ ಸಾಕಷ್ಟು ಉದಾಹರಣೆಗಳು ಇಲ್ಲಿ ಕಂಡ ಬಂದಿವೆ… ಇನ್ನು ಮನೆಯಲ್ಲಿ ಅತಿಯಾದ ಮದ್ಯವ್ಯಸನಿಗಳು ಇದ್ದರೆ ದುಶ್ಚಟಗಳಿಗೆ ದಾಸರಾಗಿದ್ದರೆ ಅಂತಹವರು ಬಂದು ಖಾಪ್ರಿ ದೇವರಿಗೆ ಬೇಡಿಕೊಂಡು ಹೆಂಡ, ಸಿಗರೇಟ್ ನೈವೇದ್ಯ ನೀಡಿದರೆ ಅಂತಹವರು ಹೆಂಡ ಕುಡಿಯುವುದನ್ನ, ಸಿಗರೇಟ್ ಸೇದುವುದನ್ನ ಬಿಟ್ಟಿದ್ದಾರಂತೆ.. ಹೀಗೆ ಇಲ್ಲಿನ ದೇವ ವಿಶೇಷ ಶಕ್ತಿಯನ್ನು ಹೊಂದಿದೆ ಎನ್ನುತ್ತಾರೆ ಗಣಪತಿ ಉಳವೇಕರ, ಎಮ್ ಎಲ್ ಸಿ.

ಒಟ್ಟಾರೆಯಾಗಿ ಖಾಪ್ರಿ ದೇವರಿಗೆ ಹೆಂಡ, ಸಿಗರೇಟ್ ನೈವೇದ್ಯ ಮಾಡುವ ಮೂಲಕ ಭಕ್ತರು ತಮ್ಮ ಹರಕೆಯನ್ನ ಶ್ರದ್ಧಾ ಭಕ್ತಿಯಿಂದ ನೆರವೇರಿಸುತ್ತಾರೆ. ಇದು ಆಶ್ಚರ್ಯವಾದರೂ ಸತ್ಯ. ನೀವು ಒಮ್ಮೆ ಈ ದೇವರ ಜಾತ್ರೆಗೆ ಬನ್ನೀ… ಖಾಪ್ರಿ ದೇವರ ಕೃಪೆಗೆ ಪಾತ್ರರಾಗಿ.

ವರದಿ: ವಿನಾಯಕ ಬಡಿಗೇರ ಟಿವಿ 9 ಕಾರವಾರ

Web contact

TV9 Kannada

Read More
Follow Us