ಕೊಯಮತ್ತೂರು ಬಾಂಬ್ ಸ್ಫೋಟದ ಆರೋಪಿ 27 ವರ್ಷದ ಬಳಿಕ ಕರ್ನಾಟಕದಲ್ಲಿ ಅರೆಸ್ಟ್
1998ರ ಕೊಯಮತ್ತೂರು ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸಿದ್ದಿಕಿ ರಾಜ್ನನ್ನು ವಿಜಯಪುರದಲ್ಲಿ ಬಂಧಿಸಲಾಗಿದೆ. ತಮಿಳುನಾಡಿನಿಂದ ತಲೆಮರೆಸಿಕೊಂಡಿದ್ದ ಸಿದ್ದಿಕಿ ರಾಜ್, ವಿಜಯಪುರದಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ. ಕೊಯಮತ್ತೂರು ಪೊಲೀಸರು ಆತನನ್ನು ಬಂಧಿಸಿದ್ದು, ಕೋಮು ಗಲಭೆ ಮತ್ತು ಹತ್ಯೆಗೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.

ವಿಜಯಪುರ, ಜುಲೈ 10: ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ 1998ರ ಸರಣಿ ಬಾಂಬ್ ಸ್ಫೋಟ (Coimbatore Bomb blast) ಪ್ರಕರಣದ ಪ್ರಮುಖ ಆರೋಪಿಯನ್ನು ವಿಜಯಪುರದಲ್ಲಿ (Vijayapura) ಬಂಧಿಸಲಾಗಿದೆ. ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸಿದ್ದಿಕಿ ರಾಜ್ನನ್ನು ಕೊಯಮತ್ತೂರು ಪೊಲೀಸರು ಬಂಧಸಿದ್ದಾರೆ. ಸ್ಫೋಟ ಬಳಿಕ ತಮಿಳುನಾಡಿನಿಂದ (Tamilunadu) ಮರೆಸಿಕೊಂಡಿದ್ದ ಆರೋಪಿ ಸಿದ್ದಿಕಿ ರಾಜ್ ಕಳೆದ 27 ವರ್ಷಗಳಿಂದ ಬೇರೆ ಬೇರೆ ಸ್ಥಳಗಳಲ್ಲಿ ಅಡಗಿಕೊಂಡಿದ್ದನು. ಕೊನೆಗೆ ವಿಜಯಪುರ ನಗರದಲ್ಲಿ ಗುಪ್ತವಾಗಿ ಠಿಕಾಣಿ ಹೂಡಿದ್ದನು.
ಮೂಲತಃ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯವನಾದ ಸಿದ್ದಿಕಿ ರಾಜ್ 1998ರಲ್ಲಿ ಕೊಯಮತ್ತೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಆರೋಪಿ ಸಿದ್ದಿಕಿ ರಾಜ್ ಹುಬ್ಬಳ್ಳಿ ಮೂಲದ ಮಹಿಳೆಯೊಂದಿಗೆ ವಿವಾಹವಾಗಿದ್ದಾನೆ. ಸರಣಿ ಸ್ಫೋಟ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಸಿದ್ದಿಕಿ ರಾಜ್ ಕಳೆದ 12 ವರ್ಷಗಳಿಂದ ವಿಜಯಪುರದಲ್ಲಿ ತರಕಾರಿ ಮಾರಾಟ ಮಾಡಿಕೊಂಡು ಜೀವನ ನಡೆಸಿತ್ತಿದ್ದನು.
ಈತನಿಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ಆರೋಪಿ ಸಿದ್ದಿಕಿ ರಾಜ್ ವಿಜಯಪುರದಲ್ಲಿ ಅಡಗಿರುವುದು ಗೊತ್ತಾಗಿದೆ. ಕೂಡಲೇ ವಿಜಯಪುರಕ್ಕೆ ಬಂದ ಪೊಲೀಸರು, ಆರೋಪಿ ಸಿದ್ದಿಕಿ ರಾಜ್ನನ್ನು ಪತ್ತೆ ಮಾಡಿ, ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಆರೋಪಿ ಸಿದ್ದಿಕಿ ರಾಜ್ ಕೊಯಮತ್ತೂರು ಸರಣಿ ಬಾಂಬ್ ಸ್ಫೋಟ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದಾನೆ. ಬಂಧಿತ ಆರೋಪಿ ವಿರುದ್ಧ ಕೋಮು ಗಲಭೆ, ಹತ್ಯೆಗೆ ಸಂಬಂಧಿಸಿದ ಹಲವು ಪ್ರಕರಣಗಳಿವೆ.
ಇದನ್ನೂ ಓದಿ: ವಿಜಯಪುರ ಕೆನರಾ ಬ್ಯಾಂಕಿಗೆ ಕನ್ನ ಹಾಕಿದ್ದೇ ಮ್ಯಾನೇಜರ್… 58 ಕೆಜಿ ಚಿನ್ನ ಕಳ್ಳ ಸಿಕ್ಕಿಬಿದ್ದ
ಸಾಧಿಕ್ ಬಂಧನದ ಮೂಲಕ ಕೊಯಮತ್ತೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಮೂರನೇ ಪ್ರಮುಖ ಆರೋಪಿ ಸೆರೆಯಾದಂತಾಗಿದೆ. ಕೆಲವು ವಾರಗಳ ಹಿಂದೆಯಷ್ಟೇ ಮೋಸ್ಟ್ ವಾಂಟೆಡ್ ಕ್ರಿಮಿನಲ್ಗಳಾದ ಅಬುಬಕರ್ ಸಿದ್ದಿಕ್ ಮತ್ತು ಮೊಹಮ್ಮದ್ ಅಲಿ ಆಲಿಯಾಸ್ ಯೂನಸ್ನನ್ನು ಆಂಧ್ರಪದೇಶದಲ್ಲಿ ಬಂಧಿಸಲಾಗಿತ್ತು.
ಏನಿದು ಕೊಯಮತ್ತೂರು ಬಾಂಬ್ ಸ್ಫೋಟ ಪ್ರಕರಣ
1998ರ ಫೆಬ್ರವರಿ 14 ರಂದು ಕೊಯಮತ್ತೂರಿನಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಿದ್ದವು. ಸ್ಫೋಟದಲ್ಲಿ 59 ಜನರು ಮೃತಪಟ್ಟಿದ್ದು, ಸುಮಾರು 231 ಜನರು ಗಾಯಗೊಂಡಿದ್ದರು. ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅವರನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:01 pm, Thu, 10 July 25



