ವಿಜಯಪುರ ಕೆನರಾ ಬ್ಯಾಂಕಿಗೆ ಕನ್ನ ಹಾಕಿದ್ದೇ ಮ್ಯಾನೇಜರ್… 58 ಕೆಜಿ ಚಿನ್ನ ಕಳ್ಳ ಸಿಕ್ಕಿಬಿದ್ದ
ವಿಜಯಪುರ ಜಿಲ್ಲಾ ಪೊಲೀಸರು ಅತೀ ದೊಡ್ಡ ಕಳ್ಳತನ ಪ್ರಕರಣ ಭೇದಿಸಿದ್ದಾರೆ. ಕಳೆದ ತಿಂಗಳು ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿರುವ ಕೆನೆರಾ ಬ್ಯಾಂಕ್ ಕಳ್ಳತನವಾಗಿತ್ತು. 53 ಕೆಜಿ ಚಿನ್ನ ನಗದನ್ನು ಸಿನಿಮೀಯ ರೀತಿಯಲ್ಲಿ ಕಳ್ಳರು ಕದ್ದುಕೊಂಡು ಪರಾರಿಯಾಗಿದ್ದರು. ಕದೀಮರ ಪತ್ತೆಯ ಕಾರ್ಯ ಪೊಲೀಸರಿಗೆ ಕಬ್ಬಿಣದ ಕಡಲೆಯಾಗಿತ್ತು. ಒಂದು ತಿಂಗಳ ಕಾಲ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು ಕದೀಮರ ಕೈಗೆ ಕೋಳ ಹಾಕಿದ್ದಾರೆ. ಹಾಗಿದ್ದರೆ ಕಳ್ಳ ಯಾರು? ಇಲ್ಲಿದೆ ವಿವರ

ವಿಜಯಪುರ, ಜೂನ್ 27: ಮೇ 25 ರಂದು ವಿಜಯಪುರ (Vijayapura) ಜಿಲ್ಲೆ ಬಸನವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್ (Managuli Canara Bank) ಕಳ್ಳತನವಾಗಿತ್ತು. ಬ್ಯಾಂಕ್ ಹಿರಿಯ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ 58 ಕೆಜಿ 975.94 ಗ್ರಾಂ ಚಿನ್ನಾಭರಣಗಳು ಹಾಗೂ 5.20 ಲಕ್ಷ ನಗದು ಕಳ್ಳತನವಾಗಿತ್ತು. ಈ ಕುರಿತು ಬ್ಯಾಂಕ್ ಮ್ಯಾನೇಜರ್ ಮನಗೂಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಬ್ಯಾಂಕ್ ಕಿಟಕಿ ಸರಳು ಮುರಿದಿದ್ದು ಕಪ್ಪು ಗೊಂಬೆಗೆ ಪೂಜೆ ಮಾಡಿ ವಾಮಾಚಾರ ಮಾಡಿದ್ದು ತನಿಖೆಯ ಹಾದಿ ತಪ್ಪಿಸಲು ಎಂಬುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲೇ ಗೊತ್ತಾಗಿತ್ತು.
ಜಿಲ್ಲೆಯಲ್ಲೇ ದೊಡ್ಡ ಕಳ್ಳತನ ಪ್ರಕರಣವಾಗಿರುವ ಕಾರಣ ಎಸ್ಪಿ ಲಕ್ಷ್ಮಣ ನಿಂಬರಗಿ ಕದೀಮರ ಪತ್ತೆಗೆ ಹಿರಿಯ ಆಧಿಕಾರಿಗಳ ನೇತೃತ್ವದಲ್ಲಿ 8 ವಿಶೇಷ ತಂಡಗಳನ್ನು ರಚನೆ ಮಾಡಿದ್ದರು. ವಿಶೇಷ ತಂಡಗಳು ವಿವಿಧ ರಾಜ್ಯಗಳ ಜಿಲ್ಲೆಗಳಲ್ಲಿ ಕದೀಮರ ಪತ್ತೆಗೆ ಜಾಲ ಬೀಸಿ ತನಿಖೆ ನಡೆಸಿದ್ದರು. ಕಳ್ಳತನ ಪ್ರಕರಣ ನಡೆದು ಒಂದು ತಿಂಗಳಾಗುತ್ತಾ ಬಂದಿದ್ದ ವೇಳೆಯೇ ತನಿಖೆಯಲ್ಲಿ ಕದೀಮರ ಕುರಿತು ಕೆಲ ಮಾಹಿತಿಗಳು ಪೊಲೀಸರಿಗೆ ಸಿಕ್ಕಿದ್ದವು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ ನಿಂಬರಗಿ ಸೂಚನೆಯಂತೆ ರಚನೆಯಾಗಿದ್ದ 8 ವಿಶೇಷ ತಂಡಗಳು ಕೇರಳ ತಮಿಳುನಾಡು, ಮಹಾರಾಷ್ಟ್ರ, ಮದ್ಯಪ್ರದೇಶ, ಬಿಹಾರ ಮತ್ತು ರಾಜಸ್ತಾನ ಸೇರಿದಂತೆ ಇತರೆ ರಾಜ್ಯಗಳಲ್ಲಿ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳಿ ತೀವ್ರ ತನಿಖೆ ನಡೆಸಿದ್ದರು.
ಸುಳಿವು ನೀಡ್ತು ಕಾರು
ಘಟನೆ ನಡೆದಿ ದಿನ ಹುಬ್ಬಳ್ಳಿ ಪಾಸಿಂಗ್ ಹೊಂದಿದ್ದ ಕಾರೊಂದು ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಕ್ರಾಸ್ ಬಳಿ ವಿಜಯಪುರದಿಂದ ಹುಬ್ಬಳ್ಳಿಯತ್ತ ರಾತ್ರಿ ಪ್ರಯಾಣ ಮಾಡಿದ್ದು ಕಂಡು ಬಂದಿತ್ತು. ಈ ಕಾರ್ ನಂಬರ್ ಆಧಾರದ ಮೇಲೆ ತನಿಖೆ ಮಾಡಿದಾಗ ಈ ಕಾರ್ ಮನಗೂಳಿ ಪಟ್ಟಣದ ಕೆನೆರಾ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ಹಾಗೂ ಸದ್ಯ ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದಲ್ಲಿರುವ ಕೆನೆರಾ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಹುಬ್ಬಳ್ಳಿಯ ಕೋಠಾರಿ ನಗರದ ವಿಜಯಕುಮಾರ ಮಿರಿಯಾಲ ಎಂಬುವರದ್ದು ಎಂದು ತಿಳಿದು ಬಂದಿತ್ತು.
ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮನಗೂಳಿಯ ಕೆನೆರಾ ಬ್ಯಾಂಕ್ ಕಳ್ಳತನದ ಕಹಾನಿ ಖಾಕಿ ಪಡೆಯ ಮುಂದೆ ಬಹಿರಂಗವಾಗಿತ್ತು. ವಿಜಯ ಕುಮಾರ ಜೊತೆಗೆ ಹುಬ್ಬಳ್ಳಿಯ ಜನತಾ ಕಾಲೋನಿಯ ಚಂದ್ರಶೇಖರ್ ನೆರೆಲ್ಲಾ ಹಾಗೂ ಹುಬ್ಬಳ್ಳಿಯ ಚಾಲುಕ್ಯ ನಗರದ ಸುನೀಲ ಮೋಕಾ ಹಾಗೂ ಇತರೊಂದಿಗೆ ಮನಗೂಳಿಯ ಕೆನೆರಾ ಬ್ಯಾಂಕ್ ಕಳ್ಳತನಕ್ಕೆ ಸಿನಿಮೀಯ ರೀತಿಯಲ್ಲಿ ಪಕ್ಕಾ ಪ್ಲ್ಯಾನ್ ಮಾಡಿದ್ದರು.
ಸಿನಿಮಾ ನೋಡಿ ಕಳ್ಳತನ
ಇಂಗ್ಲೀಷ, ಹಿಂದಿ ಚಲನ ಚಿತ್ರಗಳನ್ನು ನೋಡಿ ಹೇಗೆಲ್ಲ ಕಳ್ಳತನ ಮಾಡಬೇಕೆಂದು ಅಧ್ಯಯನ ಮಾಡಿದ್ದರು. ವಿಜಯಕುಮಾರ ಮಿರಿಯಾಲ ಮನಗೂಳಿಯ ಕೆನೆರಾ ಬ್ಯಾಂಕ್ ಮ್ಯಾನೇಜರ್ ಆಗಿದ್ದಾಗಲೇ ಬ್ಯಾಂಕ್ ಲಾಕರ್, ಸೈರನ್ ಸೇರಿದಂತೆ ಇತರೆ ಎಲ್ಲ ಕೀಗಳನ್ನು ನಕಲಿ ಮಾಡಿಸಿದ್ದನು. ನಂತರ ಅವೆಲ್ಲವುಗಳು ಸರಿಯಾಗಿ ಕೆಲಸ ಮಾಡುತ್ತಿವೆಯಾ ಎಂದು ನಕಲಿ ಕೀಗಳನ್ನು ಬಳಕೆ ಮಾಡಿ ನೋಡಿದ್ದಾನೆ. ಯಾವುದೇ ಸಮಸ್ಯೆಯಿಲ್ಲದೆ ನಕಲಿ ಕೀಗಳು ಕೆಲಸ ಮಾಡುತ್ತಿವೆ ಎಂದು ಖಾತ್ರಿ ಮಾಡಿಕೊಂಡು ಸರಿಯಾದ ಸಮಯಕ್ಕೆ ಕಾಯುತ್ತಿದ್ದರು.
ಆರ್ಸಿಬಿ ಮ್ಯಾಚ್ ದಿನ ಕಳ್ಳತನ
ಮನಗೂಳಿ ಶಾಖೆಯಿಂದ ರೋಣಿಹಾಳ ಶಾಖೆಗೆ ವರ್ಗಾವಣೆಯಾಗಿ ಮೇ 9 ರಂದು ವಿಜಯಕುಮಾರ ವರ್ಗಾವಣೆಯಾಗಿ ಹೋದ ಬಳಿಕ ಕಳ್ಳತನ ಮಾಡಲು ಸ್ಕೆಚ್ ಹಾಕಿದ್ದಾರೆ. ಮೇ 23 ರಂದು ಐಪಿಎಲ್ ಪಂದ್ಯಗಳ ಪೈಕಿ ಆರ್ಸಿಬಿ ಹಾಗೂ ಸನ್ ರೈಸರ್ಸ್ ಪಂದ್ಯದ ದಿನ ಕಳ್ಳತನ ಮಾಡಲು ನಿರ್ಧಾರ ಮಾಡಿದ್ದರು. ಈ ಪಂದ್ಯದಲ್ಲಿ ಆರ್ ಸಿ ಬಿ ಸೋತ ಕಾರಣ ಯಾರೂ ಪಟಾಕಿ ಹೊಡೆಯಲ್ಲ ಹಾಗೂ ಮಳೆ ಬಾರದ ಕಾರಣ ಅಂದು ಕಳ್ಳತನ ಮಾಡುವ ನಿರ್ಧಾರ ಕೈ ಬಿಟ್ಟಿದ್ದರು. ಮೇ 24 ರಂದು ನಾಲ್ಕನೇ ಶನಿವಾರ ಆಗಿರುತ್ತದೆ ಮಾರನೇ ದಿನ ಮೇ 25 ರಂದು ಕಳ್ಳತನ ಮಾಡಲು ತೀರ್ಮಾನ ಮಾಡುತ್ತಾರೆ. ಮೇ 24 ರಂದು ಸಿಸಿ ಕ್ಯಾಮೆರಾ ತಿರುಗಿಸಿ, ಲೈಟ್ ಕನೆಕ್ಷನ್ ಕಟ್ ಮಾಡಿ ಇತರೆ ಎಲ್ಲಾ ಪ್ಲ್ಯಾನ್ಗಳನ್ನು ಮಾಡುತ್ತಾರೆ. ಮುಖಕ್ಕೆ ಮಾಸ್ಕ್, ಹೆಲ್ಮೇಟ್ ಹಾಕಿಕೊಂಡು ಕೃತ್ಯ ಎಸಗುತ್ತಾರೆ. 58 ಕೆಜಿ 975.94 ಕೆಜಿ ಚಿನ್ನಾಭರಣ 5.20 ಲಕ್ಷ ನಗದು ಕದ್ದು ಪರಾರಿಯಾಗುತ್ತಾರೆ.
ಕೃತ್ಯಕ್ಕೆ ಬಳಸಿದ ಬೈಕ್ಗಳನ್ನು ಸಾಗಿಲು ಟ್ರಕ್ ಉಪಯೋಗಿಸಿದ್ದಾರೆ. ಕಳ್ಳತನ ಮಾಡಿದ್ದ 58 ಕೆಜಿ 975.94 ಕೆಜಿ ಚಿನ್ನಾಭರಣಗಳನ್ನು ಕರಗಿಸಿ ಗಟ್ಟಿಗಳನ್ನಾಗಿ ಮಾಡಿದ್ದಾರೆ. ಸದ್ಯ ಮೂವರು ಆರೋಪಿತರ ಬಳಿ 10.5 ಕೆಜಿ ಚಿನ್ನಾಭರಣ ಕರಗಿಸಿ ಮಾಡಿದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಚಿನ್ನಾಭರಣ ಹಾಗೂ ಹಲವಾರು ಆರೋಪಿತರನ್ನು ಪತ್ತೆ ಮಾಡಬೇಕಿದೆ. ಶೀಘ್ರವೇ ಎಲ್ಲರ ಬಂಧನ ಮಾಡುತ್ತೇವೆಂದು ಎಸ್ಪಿ ಹೇಳಿದ್ದಾರೆ. ಪೊಲೀಸರ ತನಿಖೆಗೆ ಜನರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದು. ಉಳಿದ ಚಿನ್ನಾಭಣರಣ ಪತ್ತೆ ಮಾಡುವುದರ ಜೊತೆಗೆ ಇತರೆ ಕದೀಮರನ್ನು ಬಂಧಿಸಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ವಾಮಾಚಾರ ಮಾಡಿ ರಾಷ್ಟ್ರೀಕೃತ ಕೆನರಾ ಬ್ಯಾಂಕ್ ಕಳ್ಳತನ
ಮನಗೂಳಿಯ ಕೆನೆರಾ ಬ್ಯಾಂಕ್ ಕಳ್ಳತನ ಪ್ರಕರಣ ಪತ್ತೆ ಮಾಡಿದ ಪೊಲೀಸರ ತಂಡಗಳಿಗೆ ಎಸ್ಪಿ ಹಾಗೂ ಹಿರಿಯ ಆಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತನಿಖೆ ಮಾಡಲು ಸಹಕಾರ ನೀಡಿದ ಮೇಲಾಧಿಕಾರಿಗಳನ್ನು ಸ್ಮರಿಸಿದ್ದಾರೆ. ಶೀಘ್ರವೇ ಪೂರ್ಣ ಪ್ರಮಾಣದಲ್ಲಿ ಬ್ಯಾಂಕ್ ಕಳ್ಳತನ ಪ್ರಕರಣವನ್ನು ಬಯಲಿಗೆಳೆಯಲಾಗುತ್ತದೆ. ಇತರೆ ಆರೋಪಿತರನ್ನು ಹಾಗೂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯುವ ಭರವಸೆಯನ್ನು ಎಸ್ಪಿ ನೀಡಿದ್ದಾರೆ. ಆದಷ್ಟು ಬೇಗ ಇತರೆ ಆರೋಪಿಗಳ ಬಂಧನವಾಗಬೇಕಿದೆ.







