ವಿಜಯಪುರ, ಏ.05: ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಸಾತ್ವಿಕ್ ಎಂಬ ಬಾಲಕನನ್ನು ರಕ್ಷಣೆ ಮಾಡಲಾಗಿದ್ದು ವಿಜಯಪುರ ಜಿಲ್ಲಾಸ್ಪತ್ರೆ(Vijayapura District hospital) ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲಾ ಪರೀಕ್ಷೆಗಳಲ್ಲಿಯೂ ಆರೋಗ್ಯ ಸಹಜ ಸ್ಥಿತಿಯಲ್ಲಿದೆ ಎಂದು ವೈದ್ಯರು ವರದಿ ನೀಡಿದ್ದಾರೆ. ಸಿಟಿ ಸ್ಕ್ಯಾನ್, ಎಂಆರ್ಐ ಸ್ಕ್ಯಾನ್ ಮೂಲಕ ತಲೆ ಹಾಗೂ ಮೆದುಳಿನ ಸ್ಕ್ಯಾನ್, ಹೊಟ್ಟೆಯ ಸ್ಕ್ಯಾನ್, ರಕ್ತದ ವಿವಿಧ ಪರೀಕ್ಷೆಯನ್ನ ಮಾಡಲಾಗಿದ್ದು, ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಬಾಲಕನಿಗೆ ಚಿಕಿತ್ಸೆ ಮುಂದುವರೆಸಲಾಗಿದೆ.
ಲವಲವಿಕೆಯಿಂದಲೇ ಇರುವ ಪುಟ್ಟ ಬಾಲಕ ಸಾತ್ವಿಕ್ ನೋಡಿ ಪೋಷಕರಲ್ಲಿ ಸಂತಸ ಮೂಡಿದೆ. ಜೊತೆಗೆ ಇಂದು ಬೆಳಗ್ಗೆ ಸಾತ್ವಿಕ್ಗೆ ತಾಯಿ ಪೂಜಾ ಅವರು ಎದೆ ಹಾಲು ನೀಡಿದ್ದು, ವೈದ್ಯರ ಸೂಚನೆಯ ಮೇರೆಗೆ ಸಿರಿಧಾನ್ಯದ ಗಂಜಿ ನೀಡಲಾಗುತ್ತಿದೆ. ಸಂಜೆ 4ರವರೆಗೆ ಬಾಲಕನ ಆರೋಗ್ಯದ ಮೇಲೆ ವೈದ್ಯರು ನಿಗಾ ಇಡಲಿದ್ದಾರೆ. ಬಳಿಕ ಬಾಲಕನ ಆರೋಗ್ಯದ ಬೆಳವಣಿಗೆ ನೋಡಿಕೊಂಡು ಡಿಸ್ಚಾರ್ಜ್ ಮಾಡುವ ಬಗ್ಗೆ ಚರ್ಚೆ ಮಾಡಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಕೊಳವೆಬಾವಿಗೆ ಬಿದ್ದ 2 ವರ್ಷದ ಸಾತ್ವಿಕ್ ಸಾವನ್ನು ಗೆದ್ದು ಬಂದ: 20 ಗಂಟೆಗಳ ಕಾರ್ಯಾಚರಣೆ ಹೇಗಿತ್ತು? ಇಲ್ಲಿದೆ ವಿವರ
ಇನ್ನು ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಬಳಿ ಜಮೀನಿನಲ್ಲಿ ಸಂಜೆ ಆಟವಾಡುತ್ತ ಹೋಗಿ ಕೊಳವೆ ಬಾವಿಯಲ್ಲಿ ಬಾಲಕ ಬಿದ್ದದ್ದ. ನಂತರ ಸತತ 20 ಗಂಟೆಗಳ ಕಾರ್ಯಾಚರಣೆ ನಡೆಸಿ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಸಿಬ್ಬಂದಿ ಸಾತ್ವಿಕ್ನನ್ನು ರಕ್ಷಣೆ ಮಾಡಿದ್ದರು. ಈ ಹಿನ್ನಲೆ ಜಿಲ್ಲಾಧಿಕಾರಿ ಟಿ ಭೂಬಾಲನ್, ಎಸ್ಪಿ ಹೃಷಿಕೇಶ್ ಸೋನಾವಣೆ, ಸಿಇಓ ರಿಶಿ ಆನಂದ ಅವರು ರಕ್ಷಣಾ ತಂಡಗಳಾದ ಅಗ್ನಿಶಾಮಕ ದಳ, NDRF ತಂಡ , SDRF ತಂಡಗಳಿಗೆ ಅಭಿನಂದನೆ ಸಲ್ಲಿಸಿದರು. ಜೊತೆಗೆ ನಗರದ ಪ್ರವಾಸಿ ಮಂದಿರದಲ್ಲಿ ಮೂರು ರಕ್ಷಣಾ ತಂಡಗಳ ಮುಖ್ಯಸ್ಥರಿಗೆ ಸನ್ಮಾನ ಮಾಡಲಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ