ಮೇಲಾಧಿಕಾರಿಗಳ ಭೇಟಿ ವೇಳೆ ಹೂಗುಚ್ಛ ಬದಲು ಪುಸ್ತಕ ನೀಡಿ: ಅಧಿಕಾರಿಗಳಿಗೆ ವಿಜಯಪುರ ಜಿಲ್ಲಾಧಿಕಾರಿ ಸೂಚನೆ

ಹಾರ ತುರಾಯಿ ಬದಲು ಪುಸ್ತಕಗಳನ್ನು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವ ಜಿ.ಪರಮೇಶ್ವರ ಸೇರಿದಂತೆ ಕೆಲವು ಜನಪ್ರತಿನಿಧಿಗಳು ಬೆಂಬಲಿಗರಿಗೆ ಈಗಾಗಲೇ ಹೇಳಿದ್ದಾರೆ. ಇದೀಗ, ವಿಜಯಪುರದ ಜಿಲ್ಲಾಧಿಕಾರಿಯವರು, ಮೇಲಾಧಿಕಾರಿಗಳ ಭೇಟಿ ವೇಳೆ ಹೂಗುಚ್ಛ ಬದಲಿಗೆ ಪುಸ್ತಕ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮೇಲಾಧಿಕಾರಿಗಳ ಭೇಟಿ ವೇಳೆ ಹೂಗುಚ್ಛ ಬದಲು ಪುಸ್ತಕ ನೀಡಿ: ಅಧಿಕಾರಿಗಳಿಗೆ ವಿಜಯಪುರ ಜಿಲ್ಲಾಧಿಕಾರಿ ಸೂಚನೆ
ಮೇಲಾಧಿಕಾರಿಗಳಿಗೆ ಹೂಗುಚ್ಛ ಬದಲು ಪುಸ್ತಕ ನೀಡಿ ಗೌರವಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ವಿಜಯಪುರ ಜಿಲ್ಲಾಧಿಕಾರಿ
Updated By: Rakesh Nayak Manchi

Updated on: Aug 17, 2023 | 8:18 PM

ವಿಜಯಪುರ, ಆಗಸ್ಟ್ 17: ಮೇಲಾಧಿಕಾರಿಗಳ ಭೇಟಿ ವೇಳೆ ಹೂಗುಚ್ಛ ಬದಲಿಗೆ ನೋಟ್‍ಬುಕ್ ಪುಸ್ತಕ ನೀಡಿ ಗೌರವಿಸುವಂತೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾರ ತುರಾಯಿ ಬದಲು ಪುಸ್ತಕಗಳನ್ನು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಗೃಹಸಚಿವ ಜಿ.ಪರಮೇಶ್ವರ ಸೇರಿದಂತೆ ಕೆಲವು ಜನಪ್ರತಿನಿಧಿಗಳು ಬೆಂಬಲಿಗರಿಗೆ ಈಗಾಗಲೇ ಹೇಳಿದ್ದಾರೆ. ಇದೀಗ ಅಧಿಕಾರಿಗಳೂ ಅದೇ ನಡೆಯನ್ನು ಅನುಸರಿಸಲು ಆರಂಭಿಸಿದ್ದಾರೆ.

ವಿವಿಧ ಇಲಾಖೆಯ ಮೇಲಾಧಿಕಾರಿಗಳು ತಮ್ಮ ಅಧೀನ ಕಚೇರಿಗಳಿಗೆ ಭೇಟಿ ನೀಡಿದಾಗ ಅಥವಾ ಅಧಿಕಾರಿ ನೌಕರರು ಮೇಲಾಧಿಕಾರಿಗಳನ್ನು ಭೇಟಿಯಾಗಲು ಕಚೇರಿಗೆ ಹೋದಾಗ ಅಧಿಕಾರಿಗಳಿಗೆ ಹೂಗುಚ್ಛ, ಹಾರ, ಹಣ್ಣಿನ ಬುಟ್ಟಿ, ಶಾಲು ನೀಡಬಾರದು. ಅವುಗಳ ಬದಲಾಗಿ ಕಿಂಗ್ ಸೈಜಿನ್ ನೋಟ್ ಬುಕ್ ಅಥವಾ ಸಾಮಾನ್ಯ ಜ್ಞಾನ, ಮಹಾನ್ ಪುರುಷರ, ಸ್ವತಂತ್ರ್ಯ ಹೋರಾಟಗಾರರ, ವಿಜ್ಞಾನಿಗಳ, ಎನ್‍ಸೈಕ್ಲೋಪಿಡಿಯಾ ನಿಘಂಟು ನೋಟ್‍ಬುಕ್ ಪುಸ್ತಕಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಇದನ್ನೂ ಓದಿ: ವಿಜಯಪುರ: ಗುಟ್ಕಾ, ಮದ್ಯಕ್ಕಾಗಿ ಮತ್ತೊಮ್ಮೆ ಅರೆಬೆತ್ತಲಾಗಿ ಟವರ್ ಏರಿ ಕುಳಿತ ಯುವಕ

ಹೂಗುಚ್ಛ, ಶಾಲು ಬದಲಾಗಿ ಪುಸ್ತಕಗಳನ್ನು ನೀಡಿ ಗೌರವಿಸಬಹುದಾಗಿದೆ. ಸಂಗ್ರಹವಾದ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ಹಾಗೂ ಕಿಂಗ್‍ಸೈಜ್ ನೋಟ್‍ಬುಕ್‍ಗಳನ್ನು ಬಡ ಕುಟುಂಬದ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಜ್ಞಾನದ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ತಮ್ಮ ಅಧೀನದಲ್ಲಿ ಬರುವ ಅಧಿಕಾರಿ-ಸಿಬ್ಬಂದಿ ವರ್ಗಗಳಿಗೆ ಮತ್ತು ಅಧಿಕಾರಿಗಳನ್ನು ಭೇಟಿ ಮಾಡಲು ಬರುವ ಸಾರ್ವಜನಿಕರಿಗೂ ತಿಳುವಳಿಕೆಯನ್ನು ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಸುನಿಲ್ ಕುಮಾರ್ ಅವರು, ಶಾಲು, ಹಾರ ತುರಾಯಿ ನೀಡದಂತೆ ಹಾಗೂ ಪುಸ್ತಕ ನೀಡುವಂತೆ ಮನವಿ ಮಾಡಿದ್ದರು. ಕಾಂಗ್ರೆಸ್ ಸರ್ಕಾರ ರಚನೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸನ್ಮಾನ ರೂಪದಲ್ಲಿ ಪುಸ್ತಕಗಳನ್ನು ಕೊಡಿ, ಹಾರ ಶಾಲು ಹೂವಿನ ಗುಚ್ಛ ಸ್ವೀಕರಿಸುವುದಿಲ್ಲ ಎಂದಿದ್ದರು. ಇವರ ಬಳಿಕ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರೂ ಇದೇ ಹಾದಿ ಹಿಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ