
ವಿಜಯಪುರ, ಸೆಪ್ಟೆಂಬರ್ 3: ವಿಜಯಪುರ ಜಿಲ್ಲೆಯಲ್ಲಿ ವಿಸ್ಮಯಕಾರಿ ಘಟನೆಯೊಂದು ನಡೆದಿದೆ. ಎಂಟು ತಿಂಗಳ ಹಿಂದೆ ಅಂತ್ಯಕ್ರಿಯೆ ನೆರವೇರಿಸಿ ಸಮಾಧಿ ಮಾಡಿದ್ದ ಸ್ವಾಮೀಜಿಯವರ ದೇಹ ಕೊಳೆಯದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಭಕ್ತರು ಹೇಳಿಕೊಂಡಿದ್ದಾರೆ. ಈ ಘಟನೆ ಇದೀಗ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಮನಗೂಳಿ ಪಟ್ಟಣದ ಚೌಕಿಮಠದ ಬಳಿ ಈ ಘಟನೆ ನಡೆದಿದೆ. ಶ್ರೀ ರೇವಣಸಿದ್ದೇಶ್ವರ ಗದ್ದುಗೆ ಪೂಜಾರಿಯಾಗಿದ್ದ ಮಲ್ಲಯ್ಯ ಸರೂರ ಸ್ವಾಮೀಜಿ ಅವರು 2025ರ ಡಿಸೆಂಬರ್ 31ರಂದು ನಿಧನರಾಗಿದ್ದರು. ಬಳಿಕ 2026ರ ಜನವರಿ 1ರಂದು ಚೌಕಿಮಠದ ಬಳಿ ಅವರ ಅಂತ್ಯಕ್ರಿಯೆ ನೆರವೇರಿಸಿ, ದೇಹವನ್ನು ಸಮಾಧಿ ಮಾಡಲಾಗಿತ್ತು.
ಮಲ್ಲಯ್ಯ ಸರೂರ ಸ್ವಾಮೀಜಿ ಹಲವು ವರ್ಷಗಳಿಂದ ಶ್ರೀ ರೇವಣಸಿದ್ದೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸುತ್ತಿದ್ದರು. ಸ್ವಾಮೀಜಿ ತಮ್ಮ ಭಕ್ತರ ಕನಸಿನಲ್ಲಿ ಬಂದು, ಶ್ರೀ ರೇವಣಸಿದ್ದೇಶ್ವರ ಗದ್ದುಗೆ ಬಳಿ ಅಂತ್ಯಕ್ರಿಯೆ ನೆರವೇರಿಸುವಂತೆ ಸೂಚನೆ ನೀಡಿದ್ದರು ಎಂದು ಭಕ್ತರು ಹೇಳಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸುಮಾರು ಎಂಟು ತಿಂಗಳ ಬಳಿಕ ಭಕ್ತರು ಸಮಾಧಿಯನ್ನು ತೆರೆದು ಸ್ವಾಮೀಜಿಯವರ ದೇಹವನ್ನು ಹೊರತೆಗೆದಿದ್ದಾರೆ. ಈ ವೇಳೆ ದೇಹ ಕೊಳೆಯದ ಸ್ಥಿತಿಯಲ್ಲಿ ಕಂಡುಬಂದಿದ್ದು, ಯಾವುದೇ ಕೊಳೆತ ವಾಸನೆ ಇರಲಿಲ್ಲ ಎಂದು ಭಕ್ತರು ತಿಳಿಸಿದ್ದಾರೆ. ಬಳಿಕ ಬಾಜಾ-ಭಜಂತ್ರಿಯೊಂದಿಗೆ ಸ್ವಾಮೀಜಿಯವರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಗಿದೆ. ಶ್ರೀ ರೇವಣಸಿದ್ದೇಶ್ವರ ಗದ್ದುಗೆ ಪಕ್ಕದಲ್ಲೇ ಸ್ವಾಮೀಜಿಯವರ ಮರು ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಸ್ವಾಮೀಜಿಯವರ ಆಸೆಯಂತೆ ಗದ್ದುಗೆ ಬಳಿ ಅಂತ್ಯಕ್ರಿಯೆ ನೆರವೇರಿಸಿದ್ದೇವೆ ಎಂದು ಭಕ್ತರು ಹೇಳಿದ್ದಾರೆ. ಎಂಟು ತಿಂಗಳ ಬಳಿಕ ಸಮಾಧಿ ತೆರೆದಾಗ ದೇಹ ಕೊಳೆಯದಿರುವುದು ಕಂಡುಬಂದಿರುವ ಘಟನೆ ಮನಗೂಳಿ ಪಟ್ಟಣದಲ್ಲಿ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ದೇಹದ ಸ್ಥಿತಿಗೆ ಸಂಬಂಧಿಸಿದಂತೆ ಯಾವುದೇ ವೈಜ್ಞಾನಿಕ ಅಥವಾ ವೈದ್ಯಕೀಯ ಕಾರಣವನ್ನು ಈ ಹಂತದಲ್ಲಿ ದೃಢಪಡಿಸಲಾಗಿಲ್ಲ. ಭಕ್ತರು ಮಾತ್ರ ಇದನ್ನು ವಿಸ್ಮಯಕಾರಿ ಘಟನೆ ಎಂದು ಹೇಳುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ