ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನ ಯಶಸ್ವಿ; ಇಲ್ಲಿದೆ ವಿವರ

ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ವಿಕಸಿತ ಭಾರತ್ ಸಂಕಲ್ಪ ಯಾತ್ರೆಯು ರಾಜ್ಯದ ಮೈಸೂರು, ಬಳ್ಳಾರಿ, ಕೊಪ್ಪಳ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಈಗಾಗಲೇ ಸಂಚರಿಸಿದೆ. ಇಂದು(ಡಿ.05) ವಿಜಯನಗರ ಜಿಲ್ಲೆಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನವು ಯಶಸ್ವಿಯಾಗಿ ಜರುಗುತ್ತಿದ್ದು, ಬೈಲುವದ್ದಿಗೇರಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯಶಸ್ವಿಯಾಗಿ ಜರುಗಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನ ಯಶಸ್ವಿ; ಇಲ್ಲಿದೆ ವಿವರ
ವಿಕಸಿತ ಭಾರತ್​ ಸಂಕಲ್ಪ ಯಾತ್ರೆ
Follow us
|

Updated on: Dec 05, 2023 | 5:54 PM

ವಿಜಯನಗರ, ಡಿ.05: ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ವಿಕಸಿತ ಭಾರತ್ ಸಂಕಲ್ಪ ಯಾತ್ರೆ (Viksit Bharat Sankalp Yatra)ಯು ರಾಜ್ಯದ ಮೈಸೂರು, ಬಳ್ಳಾರಿ, ಕೊಪ್ಪಳ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಈಗಾಗಲೇ ಸಂಚರಿಸಿದೆ. ಇಂದು(ಡಿ.05) ವಿಜಯನಗರ ಜಿಲ್ಲೆಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನವು ಯಶಸ್ವಿಯಾಗಿ ಜರುಗುತ್ತಿದ್ದು, ಬೈಲುವದ್ದಿಗೇರಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯಶಸ್ವಿಯಾಗಿ ಜರುಗಿದೆ. ಬಡತನ ರೇಖೆಗಿಂತ ಕಡಿಮೆಯಿರುವವರ ಜೀವನ ಮಟ್ಟವನ್ನು ಸುಧಾರಿಸುವ ಹಿನ್ನಲೆ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸುವ ಯಾತ್ರೆ ಇದಾಗಿದ್ದು, ವಿಕಸಿತ ಭಾರತ್ ಸಂಕಲ್ಪ ಯಾತ್ರೆ ವಾಹನದ ಮೂಲಕ ಪ್ರಧಾನಮಂತ್ರಿಗಳ ಸಂದೇಶವನ್ನು ಬಿತ್ತರಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ಕೇಂದ್ರದ ವಿವಿಧ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರಾದ ಶ್ರೀಮತಿ ಶ್ವೇತಾ ‘ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿರುವ ಮುದ್ರಾ ಯೋಜನೆ ಸೇರಿದಂತೆ ಅನೇಕ ಸಾಲ ಸೌಲಭ್ಯಗಳ ಬಗ್ಗೆ, ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಮಹಿಳಾ ಗಮನದಲ್ಲಿಟ್ಟುಕೊಂಡು ಮಹಿಳೆಯರಿಗೆ ಸ್ವಉದ್ಯೋಗಗಳ ಬಗ್ಗೆ ವಿವರಿಸಿದರು. ಬಳಿಕ ಪ್ರಗತಿ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕರಾದ ನಾಗಭೂಷಣ್ ಅವರು ‘ಜೀರೋ ಬ್ಯಾಲೆನ್ಸ್ ಜನ್ ಧನ್ ಯೋಜನೆಯ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿಕೊಟ್ಟರಲ್ಲದೆ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಡಿಜಿಟಲೀಕರಣ ಕುರಿತು ಮಾಹಿತಿ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಗ್ರಾಮದ ನಿವಾಸಿ ಹಾಗೂ ಮಾತೃ ವಂದನಾ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯ ಫಲಾನುಭವಿ ರೇಣುಕಾ ಎಂಬುವವರು ಮಾತನಾಡಿ ಅನಿಸಿಕೆ ಹಂಚಿಕೊಂಡರು.

ಇದನ್ನೂ ಓದಿ:ಪ್ರಧಾನಿ ಮೋದಿ ಚಾಲ್ತಿ ನೀಡಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ವಿಶೇಷತೆಗಳು, ಅದರ ಪ್ರಯೋಜನಗಳು ಏನು?

ವಿವಿಧ ಜಿಲ್ಲೆಯ ಫಲಾನುಭವಿಗಳ ಸಕ್ಸಸ್​ ಮಾತು

ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಈ ಯಾತ್ರೆಯು ಹಲವು ಜಿಲ್ಲೆಗಳಲ್ಲಿ ಸಂಚರಿಸಿದ್ದು, ಫಲಾನುಭವಿಗಳು ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದರಂತೆ ಮೈಸೂರಿನ  ಫಲಾನುಭವಿ ಆನಂದೂರಿನ ರೈತ ಮಹೇಶ್ ಮಾತನಾಡಿ ‘ಕೈ ಸಾಲ ಪಡೆದು ಅದರ ಬಡ್ಡಿ ಪಾವತಿಸಲು ಕಷ್ಟವಾಗುತ್ತಿತ್ತು. ಪ್ರಧಾನಮಂತ್ರಿ ಬೆಳೆ ಸಾಲದ ಮೂಲಕ ಸಾಲ ಪಡೆದು, ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಬಳಿಕ  ಮೇಗಳಪುರ ಗ್ರಾಮದ ಮಂಜುಳಾ, ‘ಹೈನುಗಾರಿಕೆಗೆ ನೀಡುವ ಸಾಲದ ಮೂಲಕ 50 ಸಾವಿರ ರೂಪಾಯಿ ಸಾಲ ಪಡೆದು ಹಸುಗಳನ್ನು ಸಾಕಿ, ಡೈರಿಗೆ ಹಾಲು ಹಾಕಿ ಜೀವನ ನಿರ್ವಹಿಸುತ್ತಿದ್ದು, ಈ ಸಾಲ ಯೋಜನೆಯಿಂದ ಅನುಕೂಲವಾಗಿದೆ ಎಂದು ವಿವರಿಸಿದರು.

ಮತ್ತೋರ್ವ ಫಲಾನುಭವಿ ದ್ರಾಕ್ಷಾಯಿಣಿ, ‘ಸ್ವಸಹಾಯ ಸಾಲ ಪಡೆದು 20 ಮಹಿಳೆಯರು ಸ್ವಸಹಾಯದ ಗುಂಪುಗಳಲ್ಲಿ ಹಪ್ಪಳ, ಸಂಡಿಗೆ ತಯಾರಿಸಿ ಮಾರಾಟ ಮಾಡಿ ಜೀವನ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಇನ್ನೋರ್ವ ಮಹಿಳೆ ಶಾನವಾಸ್, ಪತಿಯೊಡಗೂಡಿ ಮಾಡುತ್ತಿದ್ದ ಸ್ಟೀಲ್ ಪಾತ್ರೆ ವ್ಯಾಪಾರ ವೃದ್ಧಿಗೆ ಸಾಲದ ಯೋಜನೆಯಿಂದ ಅನುಕೂಲವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಫಲಾನುಭವಿ ಶ್ರೀನಿವಾಸ್, ನಿರುದ್ಯೋಗಿಗಳಿಗೆ ನೀಡುವ 10 ಲಕ್ಷ ರೂಪಾಯಿ ಸಾಲ ಪಡೆದು ಸ್ವಂತ ಲ್ಯಾಬ್ ಆರಂಭಿಸಿ ನಾಲ್ಕು ಜನರಿಗೆ ಉದ್ಯೋಗ ನೀಡಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಮತ್ತೋರ್ವ ಫಲಾನುಭವಿ ರಘುಸ್ವಾಮಿ ಎಂಬುವವರು ನಮ್ಮ ತಾಯಿಗೆ ಹೃದಯ ಶಸ್ತ್ರ ಚಿಕಿತ್ಸೆಯಾಗಿತ್ತು. ಪ್ರತಿ ತಿಂಗಳು 4 ರಿಂದ 5 ಸಾವಿರದ ವರೆಗೆ ಔಷಧಿಗಳಿಗೆ ವೆಚ್ಚವಾಗುತ್ತಿತ್ತು. ಆದರೆ, ಈಗ 600 ರಿಂದ 700 ರೂಪಾಯಿಗಳಿಗೆ ಔಷಧಿ ದೊರೆಯುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರತಿ ಮನೆಗೆ ತಲುಪಿಸುವ ಗುರಿಯೊಂದಿಗೆ ಸಾಗಿದ ವಿಕಸಿತ ಭಾರತ ಸಂಕಲ್ಪ ಯಾತ್ರೆ

ಗಣಿ ಜಿಲ್ಲೆ ಬಳ್ಳಾರಿಯಲ್ಲಿ ವಿಕಸಿತ ಭಾರತ ಸಂಕಲ್ಪಯಾತ್ರೆ

ವಿಕಸಿತ ಭಾರತ ಸಂಕಲ್ಪಯಾತ್ರೆ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಮುಂದುವರೆದಿದ್ದು. ಬಳ್ಳಾರಿ ತಾಲೂಕಿನ ಪರಮದೇವನಹಳ್ಳಿಯಲ್ಲಿ ಈ ಯಾಥ್ರೆಯ ಕಾರ್ಯಕ್ರಮ ನಡೆದಿತ್ತು. ಫಲಾನುಭವಿ ರಮಾದೇವಿ, ‘ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ವಿಮಾ ಯೋಜನೆಯಿಂದ ಅನುಕೂಲವಾಗಿದೆ ಎಂದು ತಿಳಿಸಿದರು. ಮತ್ತೋರ್ವ ಫಲಾನುಭವಿ ಉಮಾದೇವಿ, ಟೈಲರಿಂಗ್ ಮಾಡುತ್ತಿದ್ದ ನನಗೆ ಹೆಚ್ಚಿನ ಮೊತ್ತದ ಬಂಡವಾಳ ಹೂಡಲು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಲ್ಲಿ ಸಾಲ ದೊರಕಿದ್ದರಿಂದ ವೃತ್ತಿಯನ್ನು ಅಭಿವೃದ್ದಿ ಮಾಡಿಕೊಳ್ಳಲು ಸಹಕಾರಿಯಾಗಿದೆ ಎಂದರು. ಫಲಾನುಭವಿ ಬ್ರಹ್ಮಾನಂದ ಎಂಬುವವರು ‘ಉಜ್ವಲ ಯೋಜನೆಯಿಂದಾಗಿ ಅಡುಗೆ ಅನಿಲ ಸಂಪರ್ಕ ದೊರಕಿದ್ದು, ಬಡ ಜನರಿಗೆ ಸಾಕಷ್ಟು ನೆರವಾಗಿದೆ ಎಂದು ಹೇಳಿದರು.

ಕೊಪ್ಪಳದಲ್ಲಿ ವಿಕಸಿತ ಭಾರತ ಸಂಕಲ್ಪಯಾತ್ರೆ

ಕೊಪ್ಪಳ ತಾಲೂಕಿನ ಬೆವಿನಹಳ್ಳಿ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ನಡೆದಿತ್ತು. ಈ ವೇಳೆ ಫಲಾನುಭವಿ ವೀಣಾ ಮಠದ, ‘ಕೇಂದ್ರದ ಸುಕನ್ಯಾ ಸಮೃದ್ಧಿ ಯೋಜನೆಯಿಂದಾಗಿ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಸಾಕಷ್ಟು ಅನುಕೂಲವಾಗಿದೆ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾ ಕುಮಾರಿ, ಕುಶಲಕರ್ಮಿಗಳು ವಿಶ್ವಕರ್ಮ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು. ಗ್ರಾಮ ಪಂಚಾಯಿತಿ ಸದಸ್ಯ ವೆಂಕನಗೌಡ ಪಾಟೀಲ್​ ಅವರು ಮಾತನಾಡಿ ‘ಔಷಧಿ ಸಿಂಪಡಣೆಗೆ ಡ್ರೋಣ್ ಬಳಕೆಯಿಂದ ರೈತರಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ