
ಯಾದಗಿರಿ, ಸೆ.2: ರಾಜ್ಯ ಸರ್ಕಾರವು ಮಹಿಳೆಯರಿಗೆ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಲಕ್ಷಾಂತರ ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ, ಯಾದಗಿರಿ ಜಿಲ್ಲಾ ಕೇಂದ್ರದಿಂದ ಕೇವಲ 25 ಕಿಲೋಮೀಟರ್ ದೂರದಲ್ಲಿರುವ ಮಲಕಪ್ಪನಹಳ್ಳಿ ಗ್ರಾಮದ ಪರಿಸ್ಥಿತಿ ವಿಭಿನ್ನವಾಗಿದೆ. ಸ್ವಾತಂತ್ರ್ಯ ಬಂದು 80 ವರ್ಷಗಳಾದರೂ ಈ ಗ್ರಾಮಕ್ಕೆ ಇಂದಿಗೂ ಬಸ್ ವ್ಯವಸ್ಥೆ ಇಲ್ಲ. ಇದು ರಾಜ್ಯದ ಮೂಲಭೂತ ಸೌಕರ್ಯಗಳ ಕೊರತೆಯ ಕನ್ನಡಿಯಂತಿದೆ.
ಮಲಕಪ್ಪನಹಳ್ಳಿ ಗ್ರಾಮವು ಯಾದಗಿರಿಗೆ ಸಮೀಪದಲ್ಲಿದ್ದರೂ, ಅಲ್ಲಿನ ಜನರು ಸಾರಿಗೆ ಸೌಲಭ್ಯದಿಂದ ಸಂಪೂರ್ಣವಾಗಿ ವಂಚಿತರಾಗಿದ್ದಾರೆ. ಆಸ್ಪತ್ರೆಗಳಿಗೆ ಹೋಗಲು, ಕೆಲಸ ಕಾರ್ಯಗಳಿಗಾಗಿ ಯಾದಗಿರಿ, ನಾಲವಾರ, ಚಿತ್ತಾಪುರ ಅಥವಾ ಕಲಬುರಗಿಯಂತಹ ಪಟ್ಟಣಗಳಿಗೆ ಹೋಗಲು ಗ್ರಾಮಸ್ಥರು ಖಾಸಗಿ ವಾಹನಗಳು, ಆಟೋಗಳು ಅಥವಾ ದ್ವಿಚಕ್ರ ವಾಹನಗಳನ್ನೇ ಅವಲಂಬಿಸಬೇಕಾಗಿದೆ. ಬಸ್ ಇಲ್ಲದಿರುವುದು ಅವರ ದೈನಂದಿನ ಜೀವನದ ಮೇಲೆ ಭಾರಿ ಪರಿಣಾಮ ಬೀರಿದೆ. ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ನಿತ್ಯವೂ ಹತ್ತಾರು ಮಕ್ಕಳು ಶಿಕ್ಷಣಕ್ಕಾಗಿ ಯಾದಗಿರಿ ಅಥವಾ ಕಲಬುರಗಿಗೆ ಹೋಗುತ್ತಾರೆ. ಇವರಿಗೆ ಬಸ್ ಇಲ್ಲದ ಕಾರಣ ಸುಮಾರು ಮೂರರಿಂದ ಐದು ಕಿಲೋಮೀಟರ್ ದೂರದ ಯರಗೋಳ ಅಥವಾ ನಾಲವಾರ ಗ್ರಾಮದವರೆಗೆ ನಡೆದುಕೊಂಡು ಹೋಗಿ ಅಲ್ಲಿಂದ ಖಾಸಗಿ ವಾಹನಗಳ ಮೂಲಕ ಪ್ರಯಾಣ ಮಾಡಬೇಕಿದೆ. ಪ್ರಮುಖ ರಸ್ತೆಯವರೆಗೆ ನಡೆದು ಹೋಗುವಾಗ ರೈಲ್ವೆ ಟ್ರ್ಯಾಕ್ಗಳು ಸಹ ಬರುವುದರಿಂದ ಹೆಣ್ಣುಮಕ್ಕಳು ಭಯದಿಂದಲೇ ಸಂಚರಿಸಬೇಕಾದ ಪರಿಸ್ಥಿತಿ ಇದೆ. ಈ ಕಾರಣದಿಂದಲೇ ಹಲವು ಪೋಷಕರು ತಮ್ಮ ಮಕ್ಕಳನ್ನು, ವಿಶೇಷವಾಗಿ ಹೆಣ್ಣುಮಕ್ಕಳನ್ನು, ಐದನೇ ತರಗತಿಯ ನಂತರ ಶಾಲೆ ಬಿಡಿಸಿ, ಮುಂದಿನ ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿದ್ದಾರೆ.
ಈ ಸಮಸ್ಯೆಯು ಇತ್ತೀಚಿನದಲ್ಲ. ಸ್ವಾತಂತ್ರ್ಯ ಬಂದು 80 ವರ್ಷಗಳಾದರೂ ಈ ಗ್ರಾಮಕ್ಕೆ ಬಸ್ ಬಂದಿಲ್ಲ. ಗ್ರಾಮಸ್ಥರು ಹಲವು ಬಾರಿ ಸ್ಥಳೀಯ ಶಾಸಕರು ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿದ್ದಾರೆ. ಕನಿಷ್ಠ ಬೆಳಿಗ್ಗೆ ಒಂದು ಮತ್ತು ಸಂಜೆ ಒಂದು ಬಸ್ ಸಂಚಾರ ಕಲ್ಪಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈವರೆಗೆ ಯಾವುದೇ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಬಸ್ ಬರದಂತೆ ಕುಂಟು ನೆಪಗಳನ್ನು ಹೇಳುತ್ತಾ ಬಂದಿದ್ದಾರೆ. ಗ್ರಾಮಕ್ಕೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ, ವಿದ್ಯುತ್ ತಂತಿಗಳು ಬಸ್ ಸಂಚಾರಕ್ಕೆ ಅಡ್ಡಿಯಾಗುತ್ತವೆ ಎಂಬಂತಹ ಕಾರಣಗಳನ್ನು ನೀಡಿದ್ದಾರೆ. ಗ್ರಾಮಸ್ಥರು ತಮ್ಮ ಸ್ವಂತ ಖರ್ಚಿನಲ್ಲಿ ವಿದ್ಯುತ್ ತಂತಿಗಳನ್ನು ಎತ್ತರಿಸುವ ಕೆಲಸವನ್ನೂ ಮಾಡಿದ್ದಾರೆ. ಆದರೂ, ಬಸ್ ವ್ಯವಸ್ಥೆ ಮಾತ್ರ ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ.
ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಕಮಿಷನರ್ ಹುದ್ದೆಗೆ ಐಪಿಎಸ್ ಅಧಿಕಾರಿಗಳ ನಿರಾಸಕ್ತಿ: ಆದೇಶವಾದರೂ ಅಧಿಕಾರ ವಹಿಸಿಕೊಳ್ಳದ ಭೂಷಣ್ ಬೋರಸೆ
ಪ್ರಸ್ತುತ ಸಂದರ್ಭದಲ್ಲಿ, ಸರ್ಕಾರವು ಉಚಿತ ಬಸ್ ಪ್ರಯಾಣದಂತಹ ಯೋಜನೆಗಳನ್ನು ಜಾರಿಗೆ ತರುತ್ತಿರುವಾಗ, ಮೂಲಭೂತವಾಗಿ ಬಸ್ ಸೇವೆ ಇಲ್ಲದ ಗ್ರಾಮಗಳ ಬಗ್ಗೆ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ. ಬಸ್ ಇಲ್ಲದಿದ್ದಾಗ ಉಚಿತ ಪ್ರಯಾಣದ ವ್ಯವಸ್ಥೆ ಇದ್ದರೂ ಪ್ರಯೋಜನವೇನು ಎಂಬುದು ಮಲಕಪ್ಪನಹಳ್ಳಿ ಗ್ರಾಮಸ್ಥರ ಪ್ರಬಲ ಪ್ರಶ್ನೆಯಾಗಿದೆ. ಆಸ್ಪತ್ರೆಗೆ ಹೋಗಲು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು, ದೈನಂದಿನ ಕೆಲಸ ಕಾರ್ಯಗಳಿಗೆ ತೆರಳಲು ಪಡುತ್ತಿರುವ ತೊಂದರೆಗಳು ಅಸಂಖ್ಯಾತ. ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕರು ತಕ್ಷಣ ಈ ಸಮಸ್ಯೆಗೆ ಸ್ಪಂದಿಸಿ, ಮಲಕಪ್ಪನಹಳ್ಳಿ ಗ್ರಾಮಕ್ಕೆ ಕನಿಷ್ಠ ಪ್ರತಿದಿನ ಎರಡು ಬಸ್ ಟ್ರಿಪ್ಗಳ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ತೀವ್ರವಾಗಿ ಆಗ್ರಹಿಸುತ್ತಿದ್ದಾರೆ. ಇದು ಕೇವಲ ಬಸ್ ಸಮಸ್ಯೆಯಲ್ಲ, ಇದು ಒಂದು ಸಮುದಾಯದ ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಪ್ರಗತಿಯ ಪ್ರಶ್ನೆಯಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ