ಹಾಳಾದ ಕಂದಳ್ಳಿ ಬ್ರೀಜ್ ಕಂ ಬ್ಯಾರೇಜ್​ನಿಂದ ನೀರು ಪೋಲು; ಬೆಳೆ ಬೆಳೆಯಲಾಗದೆ ಅನ್ನದಾತನ ಸಂಕಷ್ಟ

| Updated By: ಆಯೇಷಾ ಬಾನು

Updated on: May 15, 2024 | 9:27 AM

ಕಳೆದ 20 ವರ್ಷಗಳ ಹಿಂದೆ ಆ ಭಾಗದ ರೈತರಿಗೆ ಬೆಳೆ ಬೆಳೆಯೋಕೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಮಾಡಲಾಗಿತ್ತು. ಅದೇ ಬ್ಯಾರೇಜ್ ನೀರು ಬಳಸಿಕೊಂಡು ರೈತರು ಬೆಳೆಯನ್ನ ಬೆಳೆಯುತ್ತಿದ್ರು. ಆದ್ರೆ ಕಳೆದ ಕೆಲ ವರ್ಷಗಳಿಂದ ಬ್ಯಾರೇಜ್ ಗೇಟ್​ಗಳು ಹಾಳಾಗಿ ನೀರು ಸೋರಿಕೆಯಾಗುತ್ತಿದೆ. ನಾನಾ ಕಸರತ್ತು ಮಾಡಿದರೂ ಬ್ಯಾರೇಜ್​ನಲ್ಲಿ ನೀರು ನಿಲ್ಲಿಸೋಕೆ ಆಗ್ತಾಯಿಲ್ಲ. ಇದೇ ಕಾರಣಕ್ಕೆ ರೈತರು ಬೆಳೆಯನ್ನ ಕಳೆದುಕೊಳ್ಳುತ್ತಿದ್ದಾರೆ.

ಹಾಳಾದ ಕಂದಳ್ಳಿ ಬ್ರೀಜ್ ಕಂ ಬ್ಯಾರೇಜ್​ನಿಂದ ನೀರು ಪೋಲು; ಬೆಳೆ ಬೆಳೆಯಲಾಗದೆ ಅನ್ನದಾತನ ಸಂಕಷ್ಟ
ಕಂದಳ್ಳಿ ಬ್ರೀಜ್ ಕಂ ಬ್ಯಾರೇಜ್​
Follow us on

ಯಾದಗಿರಿ, ಮೇ.15: ಜಿಲ್ಲೆಯ ವಡಗೇರ ತಾಲೂಕಿನ ಕಂದಳ್ಳಿ ಬಳಿಯ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಬ್ರೀಜ್ ಕಂ ಬ್ಯಾರೇಜ್ ಹಾಳಾಗುತ್ತಿದ್ದು ವರ್ಷದಿಂದ ವರ್ಷಕ್ಕೆ ಬ್ಯಾರೇಜ್ ನೀರಿನ ಸೋರಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಬ್ಯಾರೇಜ್ ನೀರು ನಂಬಿ ಬೆಳೆ ಕಳೆದುಕೊಂಡ ಅನ್ನದಾತರು ಹೊಸ ಗೇಟ್ ಗಳನ್ನ ಅಳವಡಿಸುವಂತೆ ಆಗ್ರಹಿಸಿದ್ದಾರೆ.

ಭೀಮಾ ನದಿ ನೀರು ಬಳಕೆಗೆ ಬಾರದೆ ಕೃಷ್ಣ ನದಿಗೆ ಹೋಗಿ ಸೇರ್ತಿದೆ. ರೈತರಿಗೆ ನೀರು ಬಳಕೆ ಆಗ್ತಾಯಿರಲಿಲ್ಲ. ಇದೇ ಕಾರಣಕ್ಕೆ 2004ರಲ್ಲಿ ಅಂದಿನ ಸರ್ಕಾರ ಕೋಟ್ಯಾಂತರ ರೂ. ಖರ್ಚು ಮಾಡಿ ಕಂದಳ್ಳಿ ಬಳಿ ನದಿಗೆ ಅಡ್ಡಲಾಗಿ ಬ್ರೀಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಿದೆ. ಬ್ಯಾರೇಜ್ ನಿರ್ಮಾಣವಾದ ಬಳಿಕ ಬ್ಯಾರೇಜ್ ನೀರು ಬಳಸಿಕೊಂಡು ಸಾವಿರಾರು ರೈತರು ವರ್ಷಕ್ಕೆ ಎರಡು ನೀರಾವರಿ ಬೆಳೆಯನ್ನ ಬೆಳೆಯುತ್ತಿದ್ರು. ಇದೆ ಬ್ಯಾರೇಜ್ ನೀರಿನಿಂದ ರೈತರ ಬದುಕು ಸಹ ಸಮೃದ್ಧವಾಗಿತ್ತು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ರೈತರಿಗೆ ಬ್ಯಾರೇಜ್ ನೀರು ಸಿಗದಂತಾಗಿದೆ. ಯಾಕೆಂದ್ರೆ ಬ್ಯಾರೇಜ್ ನಿರ್ಮಾಣದ ವೇಳೆ ಬ್ಯಾರೇಜ್ ಗೆ ಮ್ಯಾನವೆಲ್ ಗೇಟ್ ಗಳನ್ನ ಅಳವಡಿಕೆ ಮಾಡಲಾಗಿದೆ. ಈ ಮ್ಯಾನವೆಲ್ ಗೇಟ್ ಗಳನ್ನ ವರ್ಷಕ್ಕೆ ಒಂದು ಬಾರಿಯಾದ್ರು ಓಪನ್ ಮಾಡುವ ಕೆಲಸವನ್ನ ಅಧಿಕಾರಿಗಳು ಮಾಡಬೇಕಿತ್ತು. ಆದ್ರೆ ಒಂದೂವರೆ ದಶಕದಿಂದ ಗೇಟ್ ಗಳನ್ನ ಓಪನ್ ಮಾಡಿಲ್ಲ ಇದೆ ಕಾರಣಕ್ಕೆ ಗೇಟ್​ಗಳು ತುಕ್ಕು ಹಿಡಿದು‌ ಹೋಗಿವೆ.

ಅಷ್ಟೇ ಅಲ್ದೇ ಗೇಟ್​ಗಳು ತುಕ್ಕು ಹಿಡಿದು ಗೇಟ್​ಗಳ ಮದ್ಯೆ ಹೋಲ್​ಗಳು ಸಹ ಬಿದ್ದಿವೆ. ಇದರಿಂದ ಬ್ಯಾರೇಜ್ ನೀರು ಸೇರಿಕೊಂಡು ಮುಂದೆ ಹೋಗುತ್ತಿದೆ. ಮಳೆಗಾಲದಲ್ಲಿ ಮಾತ್ರ ಒಂದು ಬೆಳೆಯನ್ನ ನದಿ ನೀರು‌ ಬಳಸಿಕೊಂಡು ರೈತರು ಬೆಳೆಯನ್ನ ಬೆಳೆಯುತ್ತಾರೆ. ಆದರೆ ಇದೆ ಬ್ಯಾರೇಜ್ ನಲ್ಲಿ ನೀರು ಇರುತ್ತೆ ಅಂತ ಎರಡನೇ ಬೆಳೆಯನ್ನ ಬೆಳೆಯೋಕೆ ಮುಂದಾಗುತ್ತಾರೆ. ಬೆಳೆಗೆ ಕೊನೆ‌ ಹಂತದಲ್ಲಿ ನೀರು ಬೇಕಾದಾಗ ಬ್ಯಾರೇಜ್ ನಲ್ಲಿ‌ ನೀರು ಇರೋದಿಲ್ಲ. ಬದಲಿಗೆ ಗೇಟ್ ಗಳ‌ ಸೋರಿಕೆಯಿಂದ ನದಿಗೆ ಹೋಗಿ ಸೇರುತ್ತಿವೆ. ಇದರಿಂದ ಬ್ಯಾರೇಜ್ ನೀರು‌ ನಂಬಿ ರೈತರು‌ ಲಕ್ಷಾಂತರ ರೂ.‌ನಷ್ಟ ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ: ಮಡಿಕೇರಿ: ಖುಷಿಯಲ್ಲಿದ್ದ ರೈತರಿಗೆ ಶಾಕ್, ಕಾಫಿ ದರ ದಿಢೀರ್ ಕುಸಿತ

ಕಳೆದ ನಾಲ್ಕೈದು ವರ್ಷಗಳಿಂದ ರೈತರು ಇದೆ‌ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ಪ್ರತಿ ವರ್ಷ ಆರಂಭದಲ್ಲಿ ಬ್ಯಾರೇಜ್ ನಲ್ಲಿ ಸಾಕಷ್ಟು ನೀರು ಇರುತ್ತೆ. ಆದ್ರೆ ಕೊನೆ ಹಂತದಲ್ಲಿ ನೀರು ಹಾಳಾದ ಗೇಟ್ ಗಳ ಮೂಲಕ ನದಿಗೆ ಸೇರಿ ಮುಂದೆ‌ ಹೋಗುತ್ತಿವೆ. ಇನ್ನು ಗೇಟ್ ಗಳು ತುಕ್ಕು ಹಿಡಿದು ಹೋಗಿವೆ. ಜೊತೆಗೆ ಮ್ಯಾನವೆಲ್ ಗೇಟ್ ಗಳಾಗಿದ್ದರಿಂದ ತೆಗೆಯೋಕೆ‌ ಬರ್ತಾಯಿಲ್ಲ. ಇನ್ನು ಕ್ರೇನ್ ಮೂಲಕ ಗೇಟ್ ಗಳನ್ನ ತೆರವು‌ ಮಾಡೋಕೆ ಮುಂದಾಗಲಾಗಿತ್ತು. ಕ್ರೇನ್ ನಿಂದ ಪ್ರಯತ್ನ ಪಟ್ರು ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ಕೊನೆಗೆ ರೈತರು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದು ಸಾಕು ಅಂತ ಗೇಟ್ ಗಳಿಂದ ನೀರು ಸೋರಿಕೆ ಆಗೋದ್ದನ್ನ ತಡೆಯೋಕೆ ಪ್ರಯತ್ನ ಪಡ್ತಾಯಿದ್ದಾರೆ.

ಕಳೆದ ಮೂರು ವರ್ಷಗಳಿಂದ ರೈತರು ಗೇಟ್ ಗಳಿಗೆ ಟೀನ್ ಸೆಟ್ ಗಳನ್ನ ತಂದು ಅಳವಡಿಸೋ ಕೆಲಸ ಮಾಡಿದ್ದಾರೆ. ಜೊತೆಗೆ ಪ್ಲಾಸ್ಟಿಕ್ ಚೀಲ್ ಗಳನ್ನ ಗೇಟ್ ಗಳಿಗೆ ಕಟ್ಟುವ ಮೂಲಕ ನೀರು ತಡೆಯೋ ಕೆಲಸ ಮಾಡಿದ್ದಾರೆ. ಆದ್ರೆ ರೈತರು ಎಷ್ಟೇ ಪ್ರಯತ್ನ ಪಟ್ರು ನೀರು ನಿಲ್ಲಿಸೋಕೆ ಆಗ್ತಾಯಿಲ್ಲ. ಇನ್ನು ಮಳೆಗಾಲ ಬರೋಕೆ ಮುನ್ನ ಪ್ಲಾಸ್ಟಿಕ್ ಚೀಲ್ ಗಳನ್ನ ಕಟ್ಟಲಾಗುತ್ತೆ. ಬಳಿಕ ಬ್ಯಾರೇಜ್ ತುಂಬಿದ ಬಳಿಕ ಸಣ್ಣ ಪ್ರಮಾಣದಲ್ಲಿ ನೀರು ಸೋರಿಕೆ ಆಗುತ್ತೆ. ಹೀಗಾಗಿ ಎರಡನೇ ಬೆಳೆ ರಾಶಿ ಆಗೋ ತನಕ ನೀರು ಇರುತ್ತೆ ಅಂತ ಅಂದುಕೊಳ್ಳುತ್ತಾರೆ. ಆದ್ರೆ ಎರಡನೇ ಬೆಳೆ ಕೊನೆ ಹಂತಕ್ಕೆ ಬರುವಾಗ ಬ್ಯಾರೇಜ್ ನೀರ ಸಂಪೂರ್ಣ ಖಾಲಿಯಾಗುತ್ತೆ. ಇದರಿಂದ ನದಿ ಸಂಪೂರ್ಣ ಬರಡು ಭೂಮಿ ತರಹ ಕಾಣಲು ಸಿಗುತ್ತೆ. ಇತ್ತ ಕಂದಳ್ಳಿ, ಅರ್ಜುಣಗಿ, ಗೋಡಹಾಳ್, ಕೋನಹಳ್ಳಿ ಗ್ರಾಮದ ರೈತರು ವರ್ಷ ಲಕ್ಷಾಂತರ ರೂ. ಬೆಳೆಯನ್ನ ಕಳೆದುಕೊಂಡು‌ ನಷ್ಟ ಅನುಭವಿಸುತ್ತಿದ್ದಾರೆ. ಇದೆ ಕಾರಣಕ್ಕೆ ಮ್ಯಾನವೆಲ್ ಗೇಟ್ ಗಳನ್ನ ತೆರವು ಮಾಡಿ ಹೈಡ್ರಾಲಿಕ್ ಗೇಟ್ ಗಳನ್ನ ಅಳವಡಿಸಿ ಎಂದು ಆಗ್ರಹಿಸುತ್ತಿದ್ದಾರೆ..

ಒಟ್ನಲ್ಲಿ ಬ್ಯಾರೇಜ್ ಆಗಿದೆ ಅಂತ ರೈತರು ವರ್ಷಗಳಿಂದ ಸಾಕಷ್ಟು ಬೆಳೆಯನ್ನ ಬೆಳೆದು ಖುಷಿಯಾಗಿದ್ರು. ಆದ್ರೆ ಈಗ ನೀರು ಸಿಗದ ಕಾರಣಕ್ಕೆ ಬೆಳೆ ಕಳೆದುಕೊಂಡು ಕಂಗಾಲಾಗಿ ದುಃಖದಲ್ಲಿದ್ದಾರೆ. ಹೀಗಾಗಿ ಕೂಡ್ಲೆ ಸರ್ಕಾರ ಬ್ಯಾರೇಜ್ ಹೈಡ್ರಾಲಿಕ್ ಗೇಟ್ ಗಳನ್ನ ಅಳವಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕಾಗಿದೆ..

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ