
ಹಾಸನ: ಕುಡಿದ ಅಮಲಿನಲ್ಲಿ ಬೈಕ್ ತೊಳೆಯುತ್ತಿದ್ದ ವ್ಯಕ್ತಿಯನ್ನು ಕೊಚ್ಚಿ ಕೊಲೆಗೈದಿರುವ ಘಟನೆ ಹಾಸನ ಹೊರವಲಯದ ನಿಂಗೆಗೌಡನಕೊಪ್ಪಲು ಬಳಿ ನಡೆದಿದೆ. ಹಾಲುವಾಗಿಲು ಗ್ರಾಮದ ನಿವಾಸಿ ಕುಮಾರ್ ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ.
ಅದೇ ಗ್ರಾಮದ ಗೋವಿಂದ ಗೌಡ ಎಂಬಾತನು ಕುಮಾರ್ನ ಕೊಲೆಗೈದಿದ್ದಾನೆ ಎಂದು ಹೇಳಲಾಗಿದೆ. ಹಬ್ಬದ ಪ್ರಯುಕ್ತ ಪೂಜೆಗೆಂದು ಬೈಕ್ ತೊಳೆಯಲು ಕೋಡಿ ಒಡೆದು ಹರಿಯುತ್ತಿದ್ದ ಕೆರೆಯ ಬಳಿ ಬಂದಿದ್ದ ಕುಮಾರ್ನನ್ನು ಕಂಠಪೂರ್ತಿ ಕುಡಿದಿದ್ದ ಗೋವಿಂದ ಗೌಡ ಹಿಂಬದಿಯಿಂದ ಬಂದು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಹಾಸನ ಗ್ರಾಮಾಂತರ ಠಾಣೆಯ ಪೊಲೀಸರು, ಕೊಲೆ ಮಾಡಿ ಶವದ ಪಕ್ಕದಲ್ಲೇ ಕೂತಿದ್ದ ಆರೋಪಿ ಗೋವಿಂದ ಗೌಡನನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ ಪೊಲೀಸರು, ಕೃತ್ಯಕ್ಕೆ ಅಸಲಿ ಕಾರಣ ಏನೆಂಬುದನ್ನು ಪತ್ತೆಹಚ್ಚುವಲ್ಲಿ ನಿರತರಾಗಿದ್ದಾರೆ.