
ಬಾಗಲಕೋಟೆ: ತಾನು ಕೆಲಸ ಮಾಡುವ ಯಜಮಾನನ ಪತ್ನಿಯ ಕಿರುಕುಳದಿಂದ ಬೇಸತ್ತ ಮಹಿಳೆ ಕೊಠಡಿಯಲ್ಲೇ ನೇಣಿಗೆ ಶರಣಾಗಿರುವ ಘಟನೆ ಬಾಗಲಕೋಟೆ ತಾಲೂಕಿನ ಗದ್ದನಕೇರಿ ಗ್ರಾಮದಲ್ಲಿ ನಡೆದಿದೆ.
ತನ್ನ ಪತಿಯೊಂದಿಗೆ ಸಂಗೀತಾ ಅನೈತಿಕ ಸಂಬಂಧವಿದೆ ಎಂದು ಸಂಶಯಪಟ್ಟ ಲತಾ, ಸಂಗೀತಾ ನೆಲೆಸಿರುವ ಕೊಠಡಿಯಲ್ಲಿ, ನನ್ನ ಪತಿ ಹಾಗೂ ಲತಾ ಒಟ್ಟಿಗೆ ಇದ್ದಾರೆ ಎಂದು ಭಾವಿಸಿ, ಸಂಗೀತಾ ಇದ್ದ ಕೊಠಡಿಗೆ ಬೀಗ ಹಾಕಿದ್ದಾಳೆ. ಇದರಿಂದ ತೀರ ಅವಮಾನಕ್ಕೊಳಗಾದ ಸಂಗೀತಾ ಅದೇ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾಳೆ.
ಕೊಠಡಿಯೊಳಗೆ ಈರಣ್ಣ ಅಂಗಡಿ ಇರಲಿಲ್ಲ..
ದುರಾದೃಷ್ಟದ ಸಂಗತಿಯೆಂದರೆ ಸಂಗೀತಾಳೊಂದಿಗೆ ಕೊಠಡಿಯೊಳಗೆ ತನ್ನ ಪತಿಯೂ ಇದ್ದಾನೆಂದು ಲತಾ ಅನುಮಾನಗೊಂಡು ಕೊಠಡಿಗೆ ಬೀಗ ಜಡಿದಿದ್ದಳು. ಆದರೆ ಕೊಠಡಿ ತೆರೆದು ನೋಡಿದಾಗ ಸಂಗೀತಾ ಒಬ್ಬಳೆ ಕೊಠಡಿಯಲ್ಲಿದಿದ್ದು ಕಂಡು ಬಂದಿದೆ.
ಮೃತ ಸಂಗೀತಾ ಮೂಲತಃ ಬೀಳಗಿ ತಾಲ್ಲೂಕಿನ ಕೋವಳ್ಳಿ ಗ್ರಾಮದವಳಾಗಿದ್ದು, ಬೆಳಗಾವಿ ಜಿಲ್ಲೆ ರಾಮದುರ್ಗಕ್ಕೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಇತ್ತೀಚೆಗೆ ತನ್ನ ಗಂಡನ ಜೊತೆ ಜಗಳವಾಡಿ ತವರು ಮನೆಗೆ ಬಂದು ನೆಲೆಸಿದ್ದಳು. ಹೀಗಾಗಿ ಗದ್ದನಕೇರಿ ಗ್ರಾಮದ ಈರಣ್ಣ ಅಂಗಡಿ ಟೇಲರ್ ಶಾಪ್ಗೆ ಹೊಲಿಗೆ ಕೆಲಸಕ್ಕೆ ಬರುತ್ತಿದ್ದಳು. ಆದರೆ ಪತಿ ಮೇಲೆ ಸದಾ ಅನುಮಾನ ಪಡುತ್ತಿದ್ದ ಈರಣ್ಣ ಅಂಗಡಿಯ ಪತ್ನಿ ಲತಾಳಿಂದ ಒಂದು ಜೀವ ಬಲಿಯಾಗಿದೆ.
ಇದು ಆತ್ಮಹತ್ಯೆಯಲ್ಲ, ಲತಾ ಹಾಗೂ ಆಕೆಯ ಸಹಚರರು ಸಂಗೀತಾಳನ್ನು ಕೊಲೆ ಮಾಡಿದ್ದಾರೆ ಎಂದು ಮೃತಳ ಮನೆಯವರ ಆರೋಪ ಮಾಡುತ್ತಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಲತಾ ಹಾಗೂ ಆಕೆಯ ಜೊತೆಗಿದ್ದ ಇಬ್ಬರು ಯುವಕರನ್ನು ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಹಣಕಾಸು ವಹಿವಾಟು, ಅಕ್ರಮ ಸಂಬಂಧ ಶಂಕೆ: ಮಹಿಳೆಯ ಕೊಲೆಗೈದು ಅವಿವಾಹಿತ ಆತ್ಮಹತ್ಯೆ
Published On - 7:23 am, Fri, 20 November 20