ಕೋ. ಚಂದ್ರಶೇಖರ ಸ್ವಯಂ ನಾಯಕತ್ವ? ಮುಷ್ಕರದ ಬಗ್ಗೆ ಮಾತುಕತೆ ನಡೆಸುವುದು ಯಾರ ಜೊತೆ? ದಾರಿ ಕಾಣದೇ ಸರಕಾರ ಕಂಗಾಲು
ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘಗಳ ನೌಕರರ ಮುಷ್ಕರ ಮತ್ತು ಆ ಬೆಳವಣಿಗೆಯನ್ನು ಕೂಲಂಕಷವಾಗಿ ನೋಡಿದಾಗ ರಾಜ್ಯ ಕಾರ್ಮಿಕ ಸಂಘಟನೆಗಳ ಹೆಡೆಮುರಿ ಕಟ್ಟಿ ಅದರ ನಾಯಕತ್ವ ವಹಿಸಿಕೊಳ್ಳಲು ಕೋಡಿಹಳ್ಳಿ ಚಂದ್ರಶೇಖರ ನಿರ್ಧರಿಸಿದ್ದಾರೆನೋ ಎಂಬ ಅನುಮಾನ ಬರುವಂತಿದೆ. ಮುಷ್ಕರದ ಕುರಿತಾಗಿ ಮಾತುಕತೆ ಯಾರ ಜೊತೆ ನಡೆಸಬೇಕು ಎಂಬ ದಾರಿ ಕಾಣದೇ ಸರಕಾರ ಕಂಗಾಲಾದಂತಿದೆ.

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಅಂಗ ಸಂಸ್ಥೆಗಳ ನೌಕರರ ಮುಷ್ಕರ ಸರಕಾರಕ್ಕೆ ಶಾಕ್ ಕೊಟ್ಟಿದ್ದು ಮಾತ್ರ ಅಲ್ಲ, ಅಲ್ಲಿನ ಕಾರ್ಮಿಕ ಸಂಘಟನೆಗಳ ನಾಯಕರ ನಿದ್ದೆಗೆಡಿಸಿದ್ದು ಈಗ ಗುಟ್ಟಾಗಿ ಉಳಿದಿಲ್ಲ. ಇದು ಹೇಗಾಯ್ತು ಮತ್ತು ಏಕೆ ಹೀಗಾಯ್ತು ಎನ್ನೋದು ಬಹಳ ಕುತೂಹಲದ ಪ್ರಶ್ನೆ. ಮತ್ತು ಇದು ಎಲ್ಲಿ ಶುರುವಾಯ್ತು ಎನ್ನೋದನ್ನ ನೋಡಿದರೆ ಕುತೂಹಲ ಮೂಡುವುದರ ಜೊತೆಗೆ ಇಡೀ ವ್ಯವಸ್ಥೆಯ ಬಗ್ಗೆ ಹಲವಾರು ಪ್ರಶ್ನೆಗಳು ಕೂಡ ಏಳುತ್ತವೆ.
ಸರಕಾರ ನಿನ್ನೆ ಮಾತುಕತೆ ನಡೆಸಿದಾಗ ಯಾರು ಮುಷ್ಕರಕ್ಕೆ ಕರೆ ಕೊಟ್ಟಿದ್ದರೋ ಅವರೇ ಆ ಸಭೆಯಲ್ಲಿ ಇರಲಿಲ್ಲ. ಇದು ಒಂದು ವಿರೋಧಾಭಾಸ ಮಾತ್ರ ಅಲ್ಲ, ಈಗ ಅದೇ ಒಂದು ಪ್ರತಿಷ್ಠೆಯ ವಿಷಯವಾಗಿ ಪರಿಣಮಿಸಿದೆ ಮತ್ತು ಅದೊಂದೇ ಕಾರಣಕ್ಕಾಗಿ ಸದ್ಯಕ್ಕೆ ಪರಿಹಾರ ಕಾಣುವ ಲಕ್ಷಣ ಕೂಡ ಕಾಣುತ್ತಿಲ್ಲ.
ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಅಂಗ ಸಂಸ್ಥೆಗಳ ನೌಕರರ ಒಕ್ಕೂಟಗಳ ರೂಪುರೇಷೆ
ಇಲ್ಲಿ ನಾಲ್ಕು ಕಾರ್ಮಿಕ ಸಂಘಟನೆಗಳು ಇದ್ದು ಎರಡು AITUC ಮತ್ತು CITU, ಎಡ ಪಕ್ಷಗಳ ಜೊತೆ ಗುರುತಿಸಿಕೊಂಡಿವೆ. ಮುಖ್ಯವಾಗಿ ಅನಂತ ಸುಬ್ಬರಾವ್ ನೇತೃತ್ವದ AITUC ಬಹಳ ದೊಡ್ಡ ಕಾರ್ಮಿಕ ಸಂಘಟನೆ ಹೊಂದಿದೆ. ಇದೇ ರೀತಿ ರಸ್ತೆ ಸಾರಿಗೆ ಸಂಸ್ಥೆ ಮಹಾಮಂಡಳ ಮತ್ತು ಭಾರತೀಯ ಮಜ್ದೂರ್ ಸಂಘಟನ್ ಕೂಡ ತನ್ನ ಕಿರು ಘಟಕಗಳನ್ನು ಇಲ್ಲಿ ಹೊಂದಿವೆ ಎಂಬುದನ್ನು ನಾವಿಲ್ಲಿ ನೋಡಬಹುದು. ಈ ಮೊದಲು ಸಾರಿಗೆ ನೌಕರರ ಮುಷ್ಕರ ಪ್ರತಿವರ್ಷದ ಆಚರಣೆಯಾಗಿತ್ತು.
ಆದರೆ, 2000 ರ ನಂತರ ಸರಕಾರ ತಂದ ಸುಧಾರಣೆಗಳ ಮೂಲಕ ಈ ಮುಷ್ಕರಗಳು ಕಡಿಮೆಯಾಗಿದ್ದು ಎಲ್ಲರಿಗೂ ಗೊತ್ತು. ಆದರೆ ಈ ವರ್ಷ ಕೊರೋನಾ ಬಂದು ಲಾಕ್ಡೌನ್ ಘೋಷಿಸಿದ್ದಾಗ, ಬಸ್ಗಳೆಲ್ಲಾ ನಿಂತು ಆದಾಯ ನಿಂತೇ ಹೋಗಿತ್ತು. ಈ ಸಂಸ್ಥೆಗಳು ನೌಕರರ ಸಂಬಳ ಕೊಡಲಾಗದೇ ಒದ್ದಾಡಿದರು. ಎರಡು ತಿಂಗಳಾದ ಮೇಲೆ, ಕಾಡಿ ಬೇಡಿ ಸರಕಾರ ಒಂದು ಬಾರಿ ರೂ. 300 ಕೋಟಿಗೂ ಹೆಚ್ಚಿನ ಹಣ ನೀಡಿ ಸ್ವಲ್ಪ ಅನುಕೂಲ ಮಾಡಿಕೊಟ್ಟಿದ್ದವು.
ಮತ್ತೆ ಮರು ತಿಂಗಳು ಬಸ್ ಸೇವೆ ಪ್ರಾರಂಭವಾಗಿ ಜನ ಓಡಾಡಲು ಪ್ರಾರಂಭಿಸಿದರೂ, ಈ ಸಂಸ್ಥೆಗಳಿಗೆ ಆದಾಯ ಸರಿಯಾಗಿ ಬರಲಿಲ್ಲ ಮತ್ತು ಇದರಿಂದಾಗಿ ಮತ್ತೆ ನೌಕರರ ಸಂಬಳಕ್ಕೆ ವ್ಯತ್ಯಯವಾಯ್ತು. ಇದು ಇಡೀ ನೌಕರ ವರ್ಗಕ್ಕೆ ತುಂಬಾ ನೋವು ನೀಡಿತ್ತು. ಮತ್ತೆ ಖುದ್ದಾಗಿ ಸಾರಿಗೆ ಸಚಿವ ಮತ್ತು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮುಖ್ಯಮಂತ್ರಿ ಬಳಿ ಹೋಗಿ ಸಂಬಳಕ್ಕೆ ಹಣಕಾಸು ಇಲಾಖೆಯಿಂದ ಅನುಮತಿ ಕೊಡಿಸಿದ್ದರು. ಸರಕಾರ ಕಳೆದ ಆರು ತಿಂಗಳಿನಲ್ಲಿ ಸಾರಿಗೆ ಸಂಸ್ಥೆ ನೌಕರರ ಸಂಬಳಕ್ಕೆಂದೇ ಸರಕಾರ, ರೂ. 1650 ಕೋಟಿಗೂ ಹೆಚ್ಚು ಹಣ ಕೊಟ್ಟಿದೆ. ಇದನ್ನು ಸಾರಿಗೆ ನೌಕರರೇ ಒಪ್ಪಿಕೊಳ್ಳುತ್ತಾರೆ. ಕಳೆದ 60 ವರ್ಷದಲ್ಲಿ ಇದೇ ಮೊದಲ ಬಾರಿಗೆ ಸರಕಾರ ಸಾರಿಗೆ ನೌಕರರ ಸಂಬಳಕ್ಕೆ ಹಣ ಕೊಟ್ಟಿರೋದು. ಸರಕಾರ ನೀಡಿದ ಸಹಕಾರದ ಕಾರಣಕ್ಕಾಗಿಯೇ, ಉಳಿದ ಕಾರ್ಮಿಕ ಸಂಘಟನೆಗಳು ಕೊರೊನಾ ತಂದ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಸರಕಾರದ ವಿರುದ್ಧ ದನಿ ಎತ್ತಬಾರದು ಎಂಬ ನಿರ್ಣಯಕ್ಕೆ ಬಂದಿದ್ದು. ಆದರೆ ಅವರಿಗೂ ಕೂಡ ಒಂದು ಕೊರಗಿದೆ: ನಮ್ಮನ್ನು ಸರಕಾರಿ ನೌಕರರು ಎಂದು ಒಪ್ಪಿಕೊಂಡರೆ, ಎಂಥ ಸಂಕಷ್ಟ ಬಂದರೂ ಸಂಬಳಕ್ಕೆ ತೊಂದರೆ ಆಗದು ಎಂದು. ಇದು ಎಲ್ಲ ಸಾರಿಗೆ ನಿಗಮದ ನೌಕರರಲ್ಲಿಯೂ ಇದೆ.
ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ಮುಷ್ಕರ ನೇತೃತ್ವ ತೆಗೆದುಕೊಂಡಿದ್ದು ಹೇಗೆ?
ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳುವಳಿಗೆ ಬೆಂಬಲಿಸಲು ಕರ್ನಾಟಕದಲ್ಲೂ ನಿರ್ಣಯಿಸಿದ್ದ ರಾಜ್ಯ ರೈತ ಸಂಘಟನೆಗಳು ಡಿಸೆಂಬರ್ 8ರಂದು ರಾಜ್ಯವನ್ನು ಬಂದ್ ಮಾಡಿ ತಮ್ಮ ಬಲಾಬಲ ತೋರಿಸಲು ಸಜ್ಜಾಗಿದ್ದರು. ಆದರೆ, ಈಗಾಗಲೇ ಮರಾಠ ವಿಷಯಕ್ಕೆ ಬಂದ್ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದ ಕನ್ನಡಪರ ಸಂಘಟನೆಗಳ ಕರೆಗೆ ಜನ ಸರಿಯಾಗಿ ಬೆಂಬಲ ಸೂಚಿಸಿರಲಿಲ್ಲ. ಇದರಿಂದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರಿಗೆ ತುಂಬಾ ನೋವಾಗಿತ್ತು. ಅದಕ್ಕೆ ಎರಡು ಕಾರಣವಿದ್ದವು. ಕರ್ನಾಟಕ ಬಂದ್ ವಿಫಲವಾಗಲು ಸರಕಾರ ಮಾಡಿದ ತಂತ್ರಗಾರಿಕೆಯಿಂದ ಬೇಸರದಲ್ಲಿದ್ದ ಕೋಡಿಹಳ್ಳಿ ಚಂದ್ರಶೇಖರ ಹೇಗಾದರೂ ಮಾಡಿ ಸರಕಾರದ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸಿದ್ದರು.
ರೈತ ಚಳುವಳಿ ಸಂದರ್ಭದಲ್ಲಿ ಅವರಿಗೆ ನೈತಿಕ ಬೆಂಬಲ ಸೂಚಿಸಿದ್ದ ಕೆಎಸ್ಆರ್ಟಿಸಿ ನೌಕರರ ಲೀಗ್ ಅಧ್ಯಕ್ಷ ಚಂದ್ರಶೇಖರ ಮತ್ತು ಪ್ರಧಾನ ಕಾರ್ಯದರ್ಶಿ ಜಗದೀಶ್ ಅವರ ನೋವಿಗೆ ಸ್ಪಂದಿಸಲು ಕೋಡಿಹಳ್ಳಿ ಚಂದ್ರಶೇಖರ ತಯಾರಾದರು. ಯಾವಾಗ ಬಾರುಕೋಲು ಚಳವಳಿ ಮುಗಿಯಿತೋ ಅಂದೇ ಕೋಡಿಹಳ್ಳಿ ಚಂದ್ರಶೇಖರ ಕೆಎಸ್ಆರ್ಟಿಸಿ ನೌಕರರ ಲೀಗ್ನ ಜೊತೆ ಮಾತಾಡಿ ಮುಷ್ಕರಕ್ಕೆ ಸ್ಕೆಚ್ ಹಾಕಿದರು. ಗುರುವಾರ ಈ ನೌಕರರು ವಿಧಾನ ಸೌಧ ಚಲೋ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಆ ದಿನ ತಮ್ಮ ಜೊತೆ ಬನ್ನಿ ಎಂದು ಈ ಲೀಗ್ನ ಸದಸ್ಯರು ಕೋಡಿಹಳ್ಳಿ ಚಂದ್ರಶೇಖರ ಅವರಿಗೆ ಕೋರಿದರು ಮತ್ತು ಕೋಡಿಹಳ್ಳಿ ಆ ದಿನ ಫ್ರೀಡಂ ಪಾರ್ಕ್ನಿಂದ ವಿಧಾನ ಸೌಧಕ್ಕೆ ಇವರ ಜೊತೆ ನಡೆಯಲು ಬಂದರು. ಪೊಲೀಸರು ಹಾದಿ ಮಧ್ಯೆ ತಡೆದರು. ಇಷ್ಟೇ ಆಗಿದ್ದು. ಹೊಸ ನಾಯಕರು ಹುಟ್ಟಿಯೇ ಬಿಟ್ಟರು.
ಈ ಮಧ್ಯೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಮಾತುಕತೆ ನಡೆಸಲು ಫ್ರೀಡಂ ಪಾರ್ಕ್ಗೆ ಹೋಗಿದ್ದರು. ಆದರೆ, ಅಲ್ಲಿಗೆ ಈ ಕಾರ್ಮಿಕ ಸಂಘದ ಸದಸ್ಯರು ಯಾರೂ ಮಾತುಕತೆಗೆ ಬರಲಿಲ್ಲ.
ಕೋಡಿಹಳ್ಳಿ ಮುಷ್ಕರದ ಕರೆ ಕೊಟ್ಟಾಗ, ಪ್ರಾಯಶಃ ಸರಕಾರ ಅವರ ಮಾತಿಗೆ ನೌಕರರು ಬೆಂಬಲ ಸೂಚಿಸಿಲ್ಲ ಹಾಗಾಗಿ ಇದು ವಿಫಲವಾಗುತ್ತೆ ಎಂದುಕೊಂಡಿದ್ದಿರಬಹುದು. ಆದರೆ ಆಗಿದ್ದೇ ಬೇರೆ. ಜಾಸ್ತಿ ಬೆಂಬಲ ಇಲ್ಲದ ಕೆಎಸ್ಆರ್ಟಿಸಿ ನೌಕರರ ಲೀಗ್ನ ಕರೆಗೆ ಓಗೊಟ್ಟು ಎಲ್ಲರೂ ಮುಷ್ಕರಕ್ಕೆ ಬೆಂಬಲ ಸೂಚಿಸಿದರು. ಕೋಡಿಹಳ್ಳಿ ಚಂದ್ರಶೇಖರ ತಮ್ಮ ಯಾವ ಸಂಘಟನೆಗಳ ಸದಸ್ಯ ಅಲ್ಲ, ಹಾಗಾಗಿ ಅವರು ಮುಷ್ಕರಕ್ಕೆ ಕರೆ ಕೊಡುವಂತಿಲ್ಲ ಎಂಬ ತಾರ್ಕಿಕ ಮಾತು, ಸಾರಿಗೆ ಸಂಸ್ಥೆ ನೌಕರರಿಗೆ ಹಿಡಿಸಲಿಲ್ಲ. ಅವರದ್ದು ಒಂದೇ ವಿಚಾರ: ಓರ್ವ ಸಾರ್ವಜನಿಕ ಹೋರಾಟದ ನಾಯಕ ಬಂದು ನಮಗೆ ನ್ಯಾಯ ಕೊಡಿಸಿದರೆ ತಪ್ಪೇನು ಎಂಬುದು. ಇದೇ ಕಾರಣಕ್ಕಾಗಿ ಅವರು ಬೇರೆ ಎಲ್ಲರನ್ನು ಬಿಟ್ಟು ಕೋಡಿಹಳ್ಳಿ ಹಿಂದೆ ಹೋದರು ಮತ್ತು ಶುಕ್ರವಾರ ಕೆಲಸಕ್ಕೆ ಬಾರದೇ ಮುಷ್ಕರದ ಬಿಸಿ ಸರಕಾರಕ್ಕೆ ತಟ್ಟುವಂತೆ ನೋಡಿಕೊಂಡರು. ಈಗ ಹೊಸ ಸಂಘಟನೆಯ ಹೋರಾಟ ಎಷ್ಟಕ್ಕೆ ಹೋಗಿದೆಯೆಂದರೆ, ಒಂದು ಕಾಲದ ಘಟಾನುಘಟಿ, AITUC ಮುಖ್ಯಸ್ಥ ಅನಂತ ಸುಬ್ಬರಾವ್ ಅವರ ಮಾತನ್ನು ಯಾವ ನೌಕರರು ಕೇಳಲು ಸಿದ್ಧರಿಲ್ಲ.
ಈಗ ಸರಕಾರಕ್ಕೆ ಹೊಸದೊಂದು ತಲೆನೋವು ಪ್ರಾರಂಭವಾಗಿದೆ. ಹಳೆಯ ಕಾರ್ಮಿಕ ಸಂಘಟನೆಗಳು ಭಾಗವಹಿಸಿಲ್ಲ. ಹೊಸಬರು ಮಾತುಕತೆಗೆ ಬರುತ್ತಿಲ್ಲ. ನಿನ್ನೆ ರಾತ್ರಿ ಬಿಎಂಟಿಸಿ ಅಧ್ಯಕ್ಷ ಮುಷ್ಕರ ನಿರತರಲ್ಲಿ ಹೋದಾಗ ಕೋಡಿಹಳ್ಳಿ ಇರಲಿಲ್ಲ. ಹಾಗಾಗಿ ಅವರ ಸಂಧಾನ ವಿಫಲವಾಯಿತು. ಕೋಡಿಹಳ್ಳಿ ಈಗ ಮುಖ್ಯಮಂತ್ರಿ ಮಾತುಕತೆಗೆ ಕರೆದರೆ ಮಾತ್ರ ಬರುವುದಾಗಿ ಹೇಳಿ ಈ ಸಮಸ್ಯೆಯನ್ನು ಇನ್ನಷ್ಟು ಕಗ್ಗಂಟು ಮಾಡಿದ್ದಾರೆ. ಅವರ ಮೂಲ ಬೇಡಿಕೆ ಇಡೇರಿಸುವುದು ಸರಕಾರಕ್ಕೆ ಆಗದ ಮಾತು ಎಂದು ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಒಮ್ಮೆ ಈ ನಿಗಮಗಳ ನೌಕರರನ್ನು ಸರಕಾರಿ ನೌಕರರು ಎಂದು ಒಪ್ಪಿಕೊಂಡರೆ ನಾಳೆ ಎಲ್ಲ ನಿಗಮ ಮಂಡಳಿಯ ನೌಕರರು ಚಳವಳಿ ಮಾಡಬಹುದು, ಅದ್ದರಿಂದ ಈ ಬೇಡಿಕೆ ಈಡೇರಿಸಲು ಸರಕಾರಕ್ಕೆ ಕಷ್ಟವಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
Published On - 1:35 pm, Sat, 12 December 20




