
ಆನೇಕಲ್: ಇಂದು ಬೆಳಗ್ಗೆ ಆರ್.ಟಿ.ಓ ಅಧಿಕಾರಿಗಳ ವಿರುದ್ಧ ನೂರಕ್ಕೂ ಹೆಚ್ಚು ಜನ ಲಾರಿ ಮಾಲೀಕರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸುದ್ದಿಗೆಂದು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆಯೇ ಲಾರಿ ಮಾಲೀಕರು ತಿರುಗಿ ಬಿದ್ದಿರುವ ಘಟನೆ ಅತ್ತಿಬೆಲೆಯ ಆರ್.ಟಿ.ಓ ಚೆಕ್ ಪೋಸ್ಟ್ ಬಳಿ ನಡೆದಿದೆ.
ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಆರ್.ಟಿ.ಓ ಚೆಕ್ ಪೋಸ್ಟ್ ಬಳಿ ಈ ಘಟನೆ ನಡೆದಿದ್ದು, ಸುದ್ದಿ ಪ್ರಸಾರ ಮಾಡಿದ್ದಕ್ಕೆ ಮಾಧ್ಯಮದವರ ಮೇಲೆಯೇ ಲಾರಿ ಮಾಲೀಕರು ಗರಂ ಆಗಿದ್ದಾರೆ.
ಕೋವಿಡ್ ಸಂಧರ್ಭದಲ್ಲಿ ಲಾರಿಗಳು ಕಳ್ಳದಾರಿಯಲ್ಲಿ ಹೋಗುತ್ತಿದ್ದವು ಎಂದು ಸುದ್ದಿ ಪ್ರಸಾರ ಮಾಡಲಾಗಿತ್ತು. ಗಡಿಭಾಗ ಬಳ್ಳೂರು ಗ್ರಾಮದ ಬಳಿ ಲಾರಿಗಳು ಕಳ್ಳದಾರಿಯಲ್ಲಿ ಬರುತ್ತಿದದ್ದನ್ನು ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದವು.
ಈ ವಿಚಾರವನ್ನು ಇಟ್ಟುಕೊಂಡು ಮಾಧ್ಯಮದವರ ಮೇಲೆ ತಿರುಗಿ ಬಿದ್ದ ಲಾರಿ ಮಾಲೀಕರು ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದಾರೆ. ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳದಲ್ಲಿದ್ದ ಪೊಲೀಸರು ಹಲ್ಲೆಗೆ ಮುಂದಾದವರನ್ನು ಸಮಾಧಾನಪಡಿಸಿ ಸ್ಥಳದಿಂದ ಬೇರೆಡೆಗೆ ಕರೆದೊಯ್ದಿದ್ದಾರೆ.
Published On - 3:15 pm, Fri, 13 November 20