ಈರುಳ್ಳಿ ಕೊಳ್ಳುವ ಮುಂಚೆಯೇ ಕಣ್ಣಲ್ಲಿ ನೀರು!

ಕೊಂಡ್ಕೊಂಡ್ ಬರ್ತಾರ ಮುಂದಿಟ್ಕೊಂಡ್ ಅಳ್ತಾರ, ಅಂತ ಈರುಳ್ಳಿ ಕುರಿತು ಒಂದು ಒಗಟು ಉತ್ತರ ಕರ್ನಾಟಕದಲ್ಲಿ ಪ್ರಚಲಿತವಾಗಿದೆ. ಅಲ್ಲಿ ಅದನ್ನು ಉಳ್ಳಾಗಡ್ಡಿ ಅಂತ ಜನ ಕರೆಯುತ್ತಾರೆ. ಈರುಳ್ಳಿ ಕಟ್ ಮಾಡುವಾಗ ಅದರಲ್ಲಿರುವ ಸಿನ್-ಪ್ರೊಪ್ಯಾನಿಥಿಯಲ್-ಎಸ್-ಆಕ್ಸೈಡ್ ಎಂಬ ರಸಾಯನಿಕ ಬಿಡುಗಡೆಯಾಗಿ ಅದು ಕಣ್ಣಿನ ಉರಿಗೆ ಕಾರಣವಾಗಿ ನೀರು ತರಿಸುತ್ತದೆ. ಆ ರಾಸಾಯನಿಕ ಮಾತು ಹಾಗಿರಲಿ, ನೀವೀಗ ಮಾರುಕಟ್ಟೆಗೆ ಹೋಗಿ ಅದರ ಬೆಲೆ ಕೇಳಿದಾಕ್ಷಣ ನಿಮ್ಮ ಕಣ್ಣಲ್ಲಿ ನೀರು ಬಂದು ಬಿಡುತ್ತದೆ. ಹೌದು ಮಾರಾಯ್ರೇ, ಬೆಂಗಳೂರಿನಲ್ಲಿ ಇವತ್ತು ಒಂದು ಕಿಲೊಗ್ರಾಮ್ ಈರುಳ್ಳಿಯ ಬೆಲೆ […]

ಈರುಳ್ಳಿ ಕೊಳ್ಳುವ ಮುಂಚೆಯೇ ಕಣ್ಣಲ್ಲಿ ನೀರು!
ಸಾಂದರ್ಭಿಕ ಚಿತ್ರ
ಅರುಣ್​ ಕುಮಾರ್​ ಬೆಳ್ಳಿ

Updated on: Oct 20, 2020 | 8:24 PM

ಕೊಂಡ್ಕೊಂಡ್ ಬರ್ತಾರ ಮುಂದಿಟ್ಕೊಂಡ್ ಅಳ್ತಾರ, ಅಂತ ಈರುಳ್ಳಿ ಕುರಿತು ಒಂದು ಒಗಟು ಉತ್ತರ ಕರ್ನಾಟಕದಲ್ಲಿ ಪ್ರಚಲಿತವಾಗಿದೆ. ಅಲ್ಲಿ ಅದನ್ನು ಉಳ್ಳಾಗಡ್ಡಿ ಅಂತ ಜನ ಕರೆಯುತ್ತಾರೆ. ಈರುಳ್ಳಿ ಕಟ್ ಮಾಡುವಾಗ ಅದರಲ್ಲಿರುವ ಸಿನ್-ಪ್ರೊಪ್ಯಾನಿಥಿಯಲ್-ಎಸ್-ಆಕ್ಸೈಡ್ ಎಂಬ ರಸಾಯನಿಕ ಬಿಡುಗಡೆಯಾಗಿ ಅದು ಕಣ್ಣಿನ ಉರಿಗೆ ಕಾರಣವಾಗಿ ನೀರು ತರಿಸುತ್ತದೆ. ಆ ರಾಸಾಯನಿಕ ಮಾತು ಹಾಗಿರಲಿ, ನೀವೀಗ ಮಾರುಕಟ್ಟೆಗೆ ಹೋಗಿ ಅದರ ಬೆಲೆ ಕೇಳಿದಾಕ್ಷಣ ನಿಮ್ಮ ಕಣ್ಣಲ್ಲಿ ನೀರು ಬಂದು ಬಿಡುತ್ತದೆ.

ಹೌದು ಮಾರಾಯ್ರೇ, ಬೆಂಗಳೂರಿನಲ್ಲಿ ಇವತ್ತು ಒಂದು ಕಿಲೊಗ್ರಾಮ್ ಈರುಳ್ಳಿಯ ಬೆಲೆ ರೂ. 65!

ಬೆಚ್ಚಿದಿರಾ? ಮೊನ್ನೆಯವರೆಗೆ ಅದು ರೂ 35/ಕೆಜಿ ಸಿಗುತಿತ್ತು, ಕೇವಲ ಎರಡು ವಾರಗಳ ಅವಧಿಯಲ್ಲಿ ಬೆಲೆ ದುಪ್ಪಟ್ಟಾಗಿದೆ. ಹಾಗೆ ನೋಡಿದರೆ ನಮ್ಮ ಬೆಂಗಳೂರೇ ಕೊಂಚ ವಾಸಿ ಕಣ್ರೀ. ಚೆನೈಯಲ್ಲಿ ಕೆಜಿ ಈರುಳ್ಳಿಯ ಬೆಲೆ ರೂ 73 ಅಂತೆ. ಕೊಲ್ಕತಾದಲ್ಲಿ ರೂ 65. ಆಮ್ಚಿ ಮುಂಬೈಯಲ್ಲಿ ರೂ 67. ಈರುಳ್ಳಿಯ ಬಿಡಿ ಧಾರಣೆ ಸ್ವಲ್ಪ ಬೆಟರ್ ಅಂದರೆ ರೂ 51/ಕೆಜಿ ಸಿಗುತ್ತಿರುವ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ.

ಹಬ್ಬಗಳ ಸೀಸನ್ ಶುರುವಾಗಿರುವುದರಿಂದ ಮಸಾಲೆ ಪದಾರ್ಥಗಳ ಕಿಂಗ್ ಎನಿಸಿಕೊಳ್ಳುವ ಈರುಳ್ಳಿಯ ಬೆಲೆ ಸದ್ಯಕ್ಕಂತೂ ಕಮ್ಮಿಯಾಗದು. ಡಿಢೀರ್ ಬೆಲೆಯೇರಿಕೆಗೆ, ದಕ್ಷಿಣ ಮತ್ತು ಪಶ್ಚಿಮ ಭಾರತದ ಪ್ರಾಂತ್ಯಗಳಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯೆಂದು ಹೇಳಲಾಗುತ್ತಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಸರಬರಾಜು ವ್ಯವಸ್ಥೆ ಮೇಲೆ ದೊಡ್ಡ ಪರಿಣಾಮ ಬೀರಿದೆಯಂತೆ.

ಈರುಳ್ಳಿ ಕಣಜವೆಂದು ಕರೆಸಿಕೊಳ್ಳುವ ಮಹಾರಾಷ್ಟ್ರದ ನಾಸಿಕ್ ಗೊತ್ತಲ್ಲ? ದೇಶದಲ್ಲೇ ಅತಿಹೆಚ್ಚು ಈರುಳ್ಳಿಯನ್ನು ಈ ಜಿಲ್ಲೆಯಲ್ಲಿ ಬೆಳೆಯುತ್ತಾರೆ. ಅಲ್ಲಿನ ಪರಿಸ್ಥಿತಿ ಹೇಗಿದೆಯೆಂದರೆ, ಕೆಜಿ ಈರುಳ್ಳಿ ಬೆಲೆ ರೂ 35ರಿಂದ 66ಕ್ಕೆ ಜಿಗಿದಿದೆ.

ನಮ್ಮಲ್ಲಿ 65 ರೂಪಾಯಿಗಳಿಗೆ ಸಿಗುತ್ತಿರುವುದರಿಂದ ಸಂತೋಷಪಡೋಣ ಬಿಡಿ, ಮಾರಾಯ್ರೇ.

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us