
ದೇವನಹಳ್ಳಿ: 65ನೇ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯ ಪ್ರಯುಕ್ತವಾಗಿ ಕಂದಾಯ ಸಚಿವ ಆರ್. ಅಶೋಕ್ ಜನರಲ್ಲಿ ಕನ್ನಡದ ಬಗ್ಗೆ ಅರಿವು ಮೂಡಿಸಲು ಇಂದು ವಿನೂತನ ಪ್ರಯತ್ನಕ್ಕೆ ಮುಂದಾದರು. ಸಚಿವರು ಇಂದು ಜೋಳಿಗೆ ಹಾಕಿಕೊಂಡು ಕನ್ನಡದ ಪುಸ್ತಕಗಳ ಮಾರಾಟ ಮಾಡಲು ಮುಂದಾದರು.
ಈ ಮುಂಚೆ, 65ನೇ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಸಚಿವ ಆರ್.ಅಶೋಕ್ರಿಂದ ಧ್ವಜಾರೋಹಣ ನೆರವೇರಿಸಲಾಯಿತು. ಧ್ವಜಾರೋಹಣ ಮಾಡಿ ಗೌರವ ವಂದನೆ ಸ್ವೀಕರಿಸಿದ ಆರ್.ಅಶೋಕ್ ಜೊತೆ ಡಿ.ಸಿ.ರವೀಂದ್ರ, ಎಸ್.ಪಿ ರವಿ ಚನ್ನಣ್ಣನವರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗಿಯಾದರು.
ಈ ನಡುವೆ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಕನ್ನಡದ ಬಗ್ಗೆ, ಕನ್ನಡ ಬಾವುಟದ ಬಗ್ಗೆ ಮಾತನಾಡಿದ್ರೆ ಯಾವ ಭಾಷೆಯಲ್ಲಿ ಉತ್ತರಿಸಬೇಕೋ ಆ ಭಾಷೆಯಲ್ಲಿ ಉತ್ತರ ಕೊಡ್ತೀವಿ. ಮಹಾರಾಷ್ಟ್ರ ಏಕೀಕರಣ ಸಮಿತಿ ಮಾಡಿಕೊಂಡು ಬಂದಿದೆ. ಅವರ ಪುಂಡಾಟಿಕೆಗೆಲ್ಲ ಸರಿಯಾದ ಬುದ್ಧಿಯನ್ನ ಕಲಿಸುತ್ತೇವೆ ಎಂದು ಬೆಳಗಾವಿಯಲ್ಲಿ ಎಂ.ಇ.ಎಸ್ ಕಾರ್ಯಕರ್ತರ ಪುಂಡಾಡಿಕೆ ಕುರಿತು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.