ಉತ್ತರಾಯಣ ನಂತರ ಶಿರೂರು ಮಠಕ್ಕೆ ಉತ್ತರಾಧಿಕಾರಿ ಘೋಷಣೆ -ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ

ಶಿರೂರು ಮಠಕ್ಕೆ ಉತ್ತರಾಯಣ ನಂತರ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಘೋಷಣೆ ಮಾಡಿದ್ದಾರೆ.

ಉತ್ತರಾಯಣ ನಂತರ ಶಿರೂರು ಮಠಕ್ಕೆ ಉತ್ತರಾಧಿಕಾರಿ ಘೋಷಣೆ -ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ

Updated on: Dec 06, 2020 | 11:49 AM

ಉಡುಪಿ: ಜಿಲ್ಲೆಯ ಶಿರೂರು ಮಠಕ್ಕೆ ಉತ್ತರಾಯಣ ನಂತರ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಘೋಷಣೆ ಮಾಡಿದ್ದಾರೆ.

ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಶಿರೂರು ಮಠಕ್ಕೆ ಉತ್ತರಾಧಿಕಾರಿ ಯಾರು ಎಂಬ ನಿರೀಕ್ಷೆ ಎಲ್ಲರಲ್ಲಿತ್ತು. ಉತ್ತರಾಧಿಕಾರಿ ಮಕರ ಸಂಕ್ರಾಂತಿಯ ಉತ್ತರಾಯಣ ನಂತರ ಆಗಲಿದೆ. ಯೋಗ್ಯ ವಟುವನ್ನು ಆಯ್ಕೆ ಮಾಡಲಾಗಿದೆ. ಆ ವಟುವಿಗೆ ಈಗ ತರಬೇತಿ ನಡೆಯುತ್ತಿದೆ. ಮುಂದಿನ ವರ್ಷದ ಉತ್ತರಾಯಣದಲ್ಲಿ ಅವರಿಗೆ ಪಟ್ಟಾಭಿಷೇಕ ನಡೆಯಲಿದೆ.

ಶಿರೂರು ಮಠದ ಭಕ್ತರ ಸಹಕಾರದಿಂದ, ಅಷ್ಟ ಮಠದ ಹಿರಿಯ ಯತಿಗಳ ಸಹಕಾರ, ಪ್ರೋತ್ಸಾಹದಿಂದ ಶೀರೂರು ಮಠ ಉತ್ತಮ ಸ್ಥಿತಿಯಲ್ಲಿ ಮುನ್ನಡೆಯಬೇಕು ಎಂಬುವುದು ನನ್ನ ದೇವರಲ್ಲಿ ಪ್ರಾರ್ಥನೆ. ಉತ್ತರಾಧಿಕಾರಿ ಯಾರು ಎಂದು ಮುಂದಿನ ದಿನಗಳಲ್ಲಿ ಘೋಷಣೆ ಮಾಡುತ್ತೇನೆ. ಈಗಲೇ ಘೋಷಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಲಕ್ಷ್ಮೀವರ ತೀರ್ಥರ ಕೃಷ್ಣೈಕ್ಯರಾದ ನಂತರ ತೆರವಾಗಿದ್ದ ಪೀಠ, ಜುಲೈ 19,2018 ರಿಂದ ಖಾಲಿಯಾಗಿತ್ತು. ಶೀರೂರು ಮಠದ ಆರ್ಥಿಕ ಸಂಕಷ್ಟಗಳಿಗೂ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಮಠದ ತೆರಿಗೆ ಬಾಕಿ, ಕಟ್ಟಡ ವಿವಾದ ಇತ್ಯರ್ಥ ಆಗುವ ಭರವಸೆ ಇದೆ ಎಂದು ಸೋದೆ ಮಠಾಧೀಶ ವಿಶ್ವವಲ್ಲಭ ತೀರ್ಥರು ತಿಳಿಸಿದ್ರು.