ಬೆಂಗಳೂರು: UPಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾರ ಮೇಲೆ ಪೊಲೀಸರು ಹಲ್ಲೆ ನಡೆಸಿದ ಪ್ರಯತ್ನವನ್ನು ಖಂಡಿಸಿ KPCC ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ನಾಯಕರ ಮೇಲೆ ಕಾದ ಎಣ್ಣೆ ಬಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
UP ಪೊಲೀಸರ ದೌರ್ಜನ್ಯ ಖಂಡಿಸಿ ನಿನ್ನೆ ಸಂಜೆ ಕಾಂಗ್ರೆಸ್ ನಾಯಕರಿಂದ ಪಂಜಿನ ಮೆರವಣಿಗೆ ನಡೆಸಲಾಯಿತು. ಕಾಂಗ್ರೆಸ್ ಭವನದಿಂದ ಫ್ರೀಡಂ ಪಾರ್ಕ್ನ ಕಡೆಗೆ ಪಂಜಿನ ಱಲಿ ಆಯೋಜಿಸಲಾಗಿತ್ತು. ಈ ವೇಳೆ ಪಂಜು ಹೊತ್ತು ಹೊರಟ ವಿಪಕ್ಷ ನಾಯಕ ಸಿದ್ದರಾಮಯ್ಯರ ಮೇಲೆ ಪಂಜಿನಿಂದ ಕಾದ ಎಣ್ಣೆ ಸಿಡಿದಿದೆ.
ಇದರಿಂದ, ಸಿದ್ದರಾಮಯ್ಯರ ಗಡ್ಡ, ಕೈ ಮತ್ತು ಬೆನ್ನಿನ ಮೇಲೆ ಸುಟ್ಟಗಾಯಗಳಾದವು ಎಂದು ತಿಳಿದುಬಂದಿದೆ. ಜೊತೆಗೆ, ಪಕ್ಕದಲ್ಲೇ ಇದ್ದ KPCC ಅಧ್ಯಕ್ಷ ಡಿ.ಕೆ ಶಿವಕುಮಾರ್ರ ಕೈ ಮೇಲೆ ಕಾದ ಎಣ್ಣೆ ಸಿಡಿಯಿತು.
ಘಟನೆ ನಡೆದ ತಕ್ಷಣವೇ ಅಲ್ಲೇ ಇದ್ದ ಭದ್ರತಾ ಸಿಬ್ಬಂದಿ ಬಿದ್ದ ಎಣ್ಣೆಯನ್ನು ಒರೆಸಿದರು. ಪ್ರತಿಭಟನೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಮುನಿಯಪ್ಪ ಮತ್ತು ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಇಬ್ಬರು ನಾಯಕರಿಗೆ ಗಂಭೀರ ಗಾಯಗಳಾಗದಿದ್ದರೂ ಅಲ್ಲಿದ್ದವರಿಗೆ ಒಂದು ಕ್ಷಣ ಆತಂಕ ಉಂಟಾಗಿತ್ತು. ಪಂಜಿಗೆ ಹಾಕಿದ್ದ ಎಣ್ಣೆ ಬಿತ್ತಾ ಅಥವಾ ಬೇರೆಯವರು ಎಣ್ಣೆ ಎರಚಿದರಾ ಎಂಬ ಗುಮಾನಿ ವ್ಯಕ್ತಪಡಿಸಿದರು.