
ಕೆಲವರು ಹೇಗಪ್ಪಾ ಅಂದ್ರೆ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳು, ರಹಸ್ಯಗಳನ್ನು ಬೇರೊಬ್ಬರ ಜೊತೆ ಹಂಚಿಕೊಳ್ಳುತ್ತಾರೆ. ಆದರೆ ಕೆಲವೊಂದು ವಿಚಾರಗಳನ್ನು ಯಾರ ಬಳಿಯೂ ಹಂಚಿಕೊಳ್ಳಬಾರದು, ಅದು ರಹಸ್ಯವಾಗಿದ್ದಷ್ಟು ಒಳ್ಳೆಯದು ಎನ್ನುತ್ತಾರೆ ಚಾಣಕ್ಯ. ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿ ಶಾಸ್ತ್ರದಲ್ಲಿ ಜೀವನದ ಕುರಿತು ಹಲವು ಅಂಶಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಅವರು ಒಬ್ಬ ಮನುಷ್ಯ ಯಶಸ್ಸನ್ನು ಸಾಧಿಸಲು ಬಯಸಿದರೆ ಯಾವೆಲ್ಲಾ ವಿಷಯಗಳನ್ನು ರಹಸ್ಯವಾಗಿಟ್ಟರೆ ಒಳ್ಳೆಯದು ಎಂಬುದನ್ನು ಸಹ ಹೇಳಿದ್ದಾರೆ. ಹಾಗಿದ್ರೆ ಅವರು ಹೇಳಿರುವಂತೆ ನಮ್ಮ ಜೀವನದ ಯಾವ ಗುಟ್ಟುಗಳನ್ನು ಇತರರೊಂದಿಗೆ ಶೇರ್ ಮಾಡಬಾರದು ಎಂಬುದನ್ನು ನೋಡೋಣ ಬನ್ನಿ.
ಮುಂದಿನ ನಡೆ: ಯಶಸ್ವಿ ಜನರು ತಮ್ಮ ದೊಡ್ಡ ಯೋಜನೆಗಳು ಮತ್ತು ಆಲೋಚನೆಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅವರು ಮೊದಲು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ತಮ್ಮ ಗುರಿ ಸಾಧಿಸಿದಾಗ ಮಾತ್ರ ಅದನ್ನು ಜಗತ್ತಿಗೆ ತೋರಿಸುತ್ತಾರೆ. ಅದೇ ರೀತಿ ನೀವು ಕೂಡ ನಿಮ್ಮ ಯೋಜನೆಗಳ ಬಗ್ಗೆ ಮೊದಲೇ ಯಾರೊಂದಿಗೂ ಹಂಚಿಕೊಳ್ಳಬಾರದು ಎನ್ನುತ್ತಾರೆ ಚಾಣಕ್ಯ. ಏಕೆಂದರೆ ಅಪೂರ್ಣ ಯೋಜನೆಯ ಬಗ್ಗೆ ಹಂಚಿಕೊಂಡರೆ ಟೀಕೆ ಮತ್ತು ನಕಾರಾತ್ಮಕತೆ ನಕಾರಾತ್ಮಕತೆಯನ್ನು ಎದುರಿಸಬೇಕಾಗುತ್ತದೆ. ಇದರಿಂದ ನಿಮಗೆ ಖಂಡಿತವಾಗಿಯೂ ಯಶಸ್ಸು ಸಾಧಿಸಲು ಸಾಧ್ಯವಾಗುವುದಿಲ್ಲ.
ವೈಯಕ್ತಿಕ ಜೀವನ, ದೌರ್ಬಲ್ಯ: ವೈಯಕ್ತಿಕ ಜೀವನವನ್ನು (ಸಂಬಂಧಗಳು, ಕೌಟುಂಬಿಕ ಸಮಸ್ಯೆಗಳು, ಆರ್ಥಿಕ ಪರಿಸ್ಥಿತಿ) ಜಗತ್ತಿನೊಂದಿಗೆ ಹಂಚಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಈ ವಿಚಾರಗಳನ್ನು ಇತರರೊಂದಿಗೆ ಹಂಚಿಕೊಂಡರೆ ಅವರು ನಿಮ್ಮ ದೌರ್ಬಲ್ಯಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಮತ್ತು ನಿಮ್ಮನ್ನು ಗೇಲಿ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಂತೋಷದಾಯಕ ಜೀವನಕ್ಕಾಗಿ ನಿಮ್ಮ ವೈಯಕ್ತಿಕ ವಿಚಾರಗಳನ್ನು ರಹಸ್ಯವಾಗಿಟ್ಟುಕೊಂಡಷ್ಟು ಒಳ್ಳೆಯದು.
ಆದಾಯ ಮತ್ತು ಹಣಕಾಸು ಯೋಜನೆ: ನಿಮ್ಮ ಸಂಬಳ, ಆದಾಯದ ಮೂಲಗಳು, ಉಳಿತಾಯ ಮತ್ತು ಹೂಡಿಕೆಗಳ ಬಗ್ಗೆ ಇತರರೊಂದಿಗೆ ಹೆಚ್ಚು ಮಾತನಾಡಬೇಡಿ. ಹೀಗೆ ವೈಯಕ್ತಿಕ ಹಣಕಾಸಿ ಮಾಹಿತಿಯನ್ನು ಹಂಚಿಕೊಳ್ಳುವುದರಿಂದ ಕೆಲವು ಜನರು ನಿಮ್ಮ ಬಗ್ಗೆ ಅಸೂಯೆ ಪಡಬಹುದು ಮತ್ತು ತಪ್ಪು ಸಲಹೆ ನೀಡುವ ಮೂಲಕ ನಿಮಗೆ ಹಾನಿ ಮಾಡಬಹುದು. ಹಾಗಾಗಿ ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳಿ.
ಒಳ್ಳೆಯ ಕಾರ್ಯಗಳು ಮತ್ತು ದಾನ: ನೀವು ಯಾರಿಗಾದರೂ ಸಹಾಯ ಮಾಡುತ್ತಿದ್ದರೆ, ಅದನ್ನು ಪ್ರಚಾರ ಮಾಡಬೇಡಿ. ನಿಜವಾದ ದಾನವೆಂದರೆ ಯಾವುದೇ ಪ್ರದರ್ಶನವಿಲ್ಲದೆ ಮಾಡುವುದು ಎನ್ನುತ್ತಾರೆ ಚಾಣಕ್ಯ.
ಇದನ್ನೂ ಓದಿ: ಇಂತಹ ಸ್ಥಳಗಳಲ್ಲಿ ವಾಸಿಸುವ ಜನರು ಎಂದಿಗೂ ಪ್ರಗತಿ ಹೊಂದುವುದಿಲ್ಲ, ಬಡವರಾಗಿಯೇ ಉಳಿಯುತ್ತಾರೆ
ಭಯ ಮತ್ತು ವೈಫಲ್ಯ: ನಿಮ್ಮ ಸಮಸ್ಯೆಗಳು ಮತ್ತು ಭಯಗಳ ಬಗ್ಗೆ ಎಲ್ಲರ ಬಳಿ ಹೇಳಿಕೊಳ್ಳಬೇಡಿ. ನಿಮ್ಮ ದೌರ್ಬಲ್ಯವನ್ನು ತಿಳಿದುಕೊಂಡು ಕೆಲವರು ನಿಮ್ಮನ್ನು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಭಯ ಮತ್ತು ವೈಫಲ್ಯಗಳ ಬಗ್ಗೆ ಹಂಚಿಕೊಳ್ಳಬೇಡಿ ಬದಲಿಗೆ ನಿಮ್ಮ ವೈಫಲ್ಯಗಳಿಂದ ಜೀವನ ಪಾಠ ಕಲಿಯಿರಿ. ಜೊತೆಗೆ ನಿಮಗಾದ ಮೋಸದ ಬಗ್ಗೆಯೂ ತಪ್ಪಿಯೂ ಇತರರಿಗೆ ಹೇಳಬೇಡಿ. ಹೀಗೆ ಮಾಡುವುದರಿಂದ ಅವರು ನಿಮ್ಮನ್ನು ಮೂರ್ಖರೆಂದು ಭಾವಿಸುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ