Dasara 2024: ಮೈಸೂರಿನಲ್ಲಿ ಮಾತ್ರವಲ್ಲ, ಕರ್ನಾಟಕದ ಈ ಭಾಗದಲ್ಲೂ ದಸರಾ ಸಂಭ್ರಮ ಬಲು ಜೋರು

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 01, 2024 | 10:25 AM

ದಸರಾ ಎಂದ ಕೂಡಲೇ ನೆನಪಿಗೆ ಬರುವುದೇ ಮೈಸೂರು ದಸರಾ, ಆದರೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೊರತುಪಡಿಸಿ ರಾಜ್ಯದ ವಿವಿದೆಡೆಯಲ್ಲಿ ವಿಭಿನ್ನವಾಗಿ ದಸರಾ ಆಚರಣೆಯಿರುತ್ತದೆ. ಅಕ್ಟೋಬರ್ 3 ರಿಂದ ಅಕ್ಟೋಬರ್ 12 ರವರೆಗೆ ದುರ್ಗಾ ಪೂಜೆ, ನವರಾತ್ರಿ, ಶರನ್ನವರಾತ್ರಿ ಹೀಗೆ ಶಕ್ತಿ ದೇವತೆಗಳಾದ ನವ ದುರ್ಗೆಯರನ್ನು ಪೂಜಿಸಲಾಗುತ್ತದೆ. ಹಾಗಾದ್ರೆ ಕರ್ನಾಟಕದ ವಿವಿಧ ಭಾಗಗಳಲ್ಲಿ ದಸರಾ ಆಚರಣೆ ಹೇಗಿರುತ್ತದೆ ಎನ್ನುವುದರ ಮಾಹಿತಿ ಇಲ್ಲಿದೆ.

Dasara 2024: ಮೈಸೂರಿನಲ್ಲಿ ಮಾತ್ರವಲ್ಲ, ಕರ್ನಾಟಕದ ಈ ಭಾಗದಲ್ಲೂ ದಸರಾ ಸಂಭ್ರಮ ಬಲು ಜೋರು
ಕರ್ನಾಟಕ ದಸರಾ 2024
Follow us on

ಕರ್ನಾಟಕದ ನಾಡಹಬ್ಬವಾಗಿರುವ ದಸರಾವು ಹಿಂದೂ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನು ಭಾರತದ ಉತ್ತರ ಭಾಗಗಳಲ್ಲಿ ‘ದಶೇರ’ವಾಗಿಯೂ, ‘ದುರ್ಗಾ ಪೂಜೆ’ ಯಾಗಿ ಆಚರಿಸುವುದು ವಿಶೇಷವಾಗಿದೆ. ಕರ್ನಾಟಕದಲ್ಲಿ ವಿವಿಧ ರೀತಿಯಲ್ಲಿ ದಸರಾ ಆಚರಿಸಲಾಗುತ್ತದೆ. ಹೌದು, ಮೈಸೂರಿನಲ್ಲಿ ಮಾತ್ರವಲ್ಲದೇ ರಾಜ್ಯದ ವಿವಿದೆಡೆಯಲ್ಲಿ ದಸರಾ ಸಂಭ್ರಮವು ಜೋರಾಗಿಯೇ ಇರುತ್ತದೆ.

* ಮೈಸೂರು ದಸರಾ : ದಸರಾ ಎಂದ ಕೂಡಲೇ ಮೊದಲು ನೆನಪಿಗೆ ಬರುವುದೇ ಮೈಸೂರು.1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಪ್ರಾರಂಭವಾದ ದಸರಾ ನವರಾತ್ರಿ ಉತ್ಸವ 1805ರಲ್ಲಿ ಯದುವಂಶದ ಅರಸರ ರಾಜಧಾನಿ ಮೈಸೂರಿಗೆ ಸ್ಥಳಾಂತರಗೊಂಡಿತ್ತು. ತದನಂತರದಲ್ಲಿ ಮೈಸೂರಿನಲ್ಲಿ ಅದ್ದೂರಿಯಾಗಿ ದಸರಾ ಸಂಭ್ರಮವು ಆರಂಭವಾಯಿತು ಆದರೆ ಇಂದು ಸರ್ಕಾರದ ಆಶ್ರಯದಲ್ಲಿ ಮೈಸೂರಿನಲ್ಲಿ ಅದ್ದೂರಿಯಾಗಿ ದಸರಾವು ನಡೆಯುತ್ತದೆ. ಜಂಬೂ ಸವಾರಿ, ಮೈಸೂರು ಅರಮನೆ, ಫ಼ುಡ್ ಕಾರ್ನಿವಲ್, ಸೇನಾ ಮೆರವಣಿಗೆಗಳು, ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಕಣ್ಮನ ಸೆಳೆಯುತ್ತದೆ. ಈ ವೈಭವದ ಉತ್ಸವವನ್ನು ನೋಡಲು ದೇಶ ವಿದೇಶದಿಂದ ಜನರು ಆಗಮಿಸುತ್ತಾರೆ.

* ಮಡಿಕೇರಿ ವಿಶಿಷ್ಟ ದಸರಾಚರಣೆ : ಮೈಸೂರಿನಲ್ಲಿ ಮಾತ್ರವಲ್ಲದೇ ಕರ್ನಾಟಕದ ಮಡಿಕೇರಿಯಲ್ಲಿಯೂ ವಿಭಿನ್ನವಾದ ನವರಾತ್ರಿ ಸಂಭ್ರಮವಿರುತ್ತದೆ. ಈ ಹಿಂದೆ ಹಾಲೇರಿ ವಂಶಸ್ಥರ ಆಳ್ವಿಕೆಯ ಸಂದರ್ಭದಲ್ಲಿ ಕೊಡಗಿನಲ್ಲಿ ವಿವಿಧ ಮಾರಕ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡು ಸಾವು ನೋವುಗಳು ಉಂಟಾಗಿತ್ತು. ಹೀಗಾಗಿ ರಾಜರು ಶಕ್ತಿ ದೇವತೆ ಮಾರಿಯಮ್ಮ ದೇವರಿಗೆ ಮೊರೆ ಹೋಗಿ ಕರಗಗಳ ನಗರ ಪ್ರದಕ್ಷಿಣೆ ಮಾಡಿಸಿದ್ದು, ಆ ಬಳಿಕ ಈ ಸಾವು ನೋವುಗಳು ದೂರವಾದವು. ಅಂದಿನಿಂದ ಕೊಡಗನ್ನು ಆಳಿದ ಹಾಲೇರಿ ವಂಶಸ್ಥರು ವಿಜಯದಶಮಿ ಆಚರಿಸುತ್ತಿದ್ದರು. ಅಂದಿನ ಆ ದಸರಾವು ಮಡಿಕೇರಿಯಲ್ಲಿ ದಸರಾ ನಡೆಯಲು ಕಾರಣವಾಯಿತು. ಈ ದಸರಾದ ವೇಳೆಯ ಕಾರ್ನೀವಲ್ ಆಚರಣೆಯನ್ನು ಮರಿಯಮ್ಮ ಹಬ್ಬ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ವಿಶಿಷ್ಟ ರೀತಿಯ ಜನಪದ ನೃತ್ಯಗಳು ಸೇರಿದಂತೆ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

* ಶೃಂಗೇರಿಯಲ್ಲಿ ನವರಾತ್ರಿಯ ಉತ್ಸವ : ಚಿಕ್ಕಮಂಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನವರಾತ್ರಿ ಉತ್ಸವವನ್ನು ಅದ್ದೂರಿಯಾಗಿ ಮಾಡಲಾಗುತ್ತದೆ. ಈ ಒಂಬತ್ತು ದಿನಗಳ ಶಾರದೆಗೆ ಚಂಡಿಕಾ ಹೋಮ, ರಥೋತ್ಸವ, ವಿವಿಧ ಅಲಂಕಾರ, ಪೂಜೆಗಳು ನಡೆಯುತ್ತದೆ. ಅದಲ್ಲದೇ ನವರಾತ್ರಿಯ ವೇಳೆ ಶೃಂಗೇರಿಯಲ್ಲಿ ಶ್ರೀ ವಿದ್ಯಾರಣ್ಯರ ಕಾಲದಿಂದಲೂ ಈ ದರ್ಬಾರ್ ಆಚರಣೆಯು ನಡೆದುಕೊಂಡು ಬಂದ ದಸರಾ ದರ್ಬಾರ್ ಆಚರಣೆಯು ಇಂದಿಗೂ ನಡೆಯುತ್ತದೆ. ಶ್ರೀಮಠದ ಆವರಣದಲ್ಲಿ ವಿವಿಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನವರಾತ್ರಿ ವೈಭವಕ್ಕೆ ಮತ್ತಷ್ಟು ಮೆರಗು ತಂದು ಕೊಡುತ್ತದೆ.

* ಮಂಗಳೂರಿನ ಕುದ್ರೋಳಿಯಲ್ಲಿ ನವದುರ್ಗೆಯರ ವೈಭವ : ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಶಾರದ ದೇವಿಯ ವಿಗ್ರಹದೊಂದಿಗೆ ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುವುದು ವಿಶೇಷ. ಈ ದಸರಾಕ್ಕೆ ಮೊದಲು ಚಾಲನೆ ನೀಡಿದವರು ಬಿ.ಆರ್.ಕರ್ಕೇರ. ಅಂದಿನಿಂದ ಇಂದಿನವರೆಗೂ ಪ್ರತಿವರ್ಷ ಮಂಗಳೂರು ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ನವರಾತ್ರಿ ಆರಂಭದಿಂದ ವಿಜಯದಶಮಿಯವರೆಗೆ ದೇವಾಲಯದಲ್ಲಿ ದುರ್ಗಾ ದೇವಿಯ ಒಂಬತ್ತು ರೂಪದ ಒಂಬತ್ತು ವಿಗ್ರಹಗಳನ್ನಿಟ್ಟು ಪೂಜಿಸಲಾಗುತ್ತದೆ. ವಿಜಯ ದಶಮಿಯಂದು ಸಂಜೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭವಾಗಿ ಮರುದಿನ ಮುಂಜಾನೆ ದೇವಾಲಯದ ಆವರಣದಲ್ಲಿರುವ ಪುಷ್ಕರಿಣಿ ಕೊಳದಲ್ಲಿ ವಿಗ್ರಹಗಳ ನಿಮಜ್ಜನದೊಂದಿಗೆ ದಸರಾ ಉತ್ಸವವು ಮುಗಿಯುತ್ತದೆ.

* ಶಿವಮೊಗ್ಗದಲ್ಲಿ ದಸರಾ ಜಂಬೂ ಸವಾರಿ : ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಮೈಸೂರಿನಂತೆ ಜಂಬೂ ಸವಾರಿಯು ಅದ್ದೂರಿಯಾಗಿ ನಡೆಯುತ್ತದೆ. ಮೈಸೂರಿನಂತೆಯೇ ಇಲ್ಲಿ ಕೂಡ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ದಸರಾಕ್ಕೆ ಚಾಲನೆ ನೀಡಲಾಗುತ್ತದೆ. ಒಂಬತ್ತು ದಿನಗಳ ಕಾಲ ನಡೆಯುವ ಆಚರಣೆಯ ವೇಳೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ದಸರಾದ ರಂಗನ್ನು ಹೆಚ್ಚಿಸುತ್ತದೆ. ಶಿವಮೊಗ್ಗದಲ್ಲಿ ಕೊನೆಯ ದಿನವಾದ ವಿಜಯದಶಮಿಯಂದು ಅಂಬಾರಿಯ ಮೇಲೆ ದೇವಿಯ ಮೆರವಣಿಗೆ ಸಹಿತ ಜಂಬೂ ಸವಾರಿಯು, ಬನ್ನಿಮಂಟಪಕ್ಕೆ ತೆರಳಿ ಬನ್ನಿ ಕಡಿಯುವುದರೊಂದಿಗೆ ದಸರಾಕ್ಕೆ ತೆರೆ ಬೀಳುತ್ತದೆ.

* ಹಂಪಿಯಲ್ಲಿ ಐತಿಹಾಸಿಕ ಬನ್ನಿ ಮಹೋತ್ಸವ ಸಂಭ್ರಮ : ವಿಜಯನಗರ ಸಾಮ್ರಾಜ್ಯದ ಕಾಲದಲ್ಲೇ ಹಂಪಿಯಲ್ಲಿ ದಸರಾ ಹಬ್ಬವನ್ನು ಆಚರಿಸಲಾಗುತ್ತಿತ್ತು. ಇದಕ್ಕೆ ಸಾಕ್ಷಿಯೆನ್ನುವಂತೆ ಈ ಮಹಾನವಮಿ ದಿಬ್ಬವಿದೆ. ಅಂದು ನವರಾತ್ರಿ ಉತ್ಸವದ ಅಂಗವಾಗಿ ಮಹಾರಾಜರ ನೇತೃತ್ವದಲ್ಲಿ ಬನ್ನಿ ಆಚರಣೆಯು ಅದ್ದೂರಿಯಾಗಿ ನಡೆಯುತ್ತಿತ್ತು. ಅಂದಿನ ದಸರಾ ಆಚರಣೆಯು ಇಂದಿಗೂ ಇಲ್ಲಿ ನಡೆಯುತ್ತಿದೆ. ಶ್ರೀಕೃಷ್ಣದೇವರಾಯರ ಕಾಲದಲ್ಲಿ ಸೋಲನ್ನು ಕಾಣದ ಬೇಡರ ವಂಶಸ್ಥರೇ ಇಂದಿಗೂ ಈ ದಸರಾ ಹಬ್ಬವನ್ನು ಆಚರಿಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ. ಈ ದಸರಾ ಉತ್ಸವದಂದು ಹೊಸಪೇಟೆಯ ಧರ್ಮದ ಗುಡ್ಡದಲ್ಲಿ ದೇವರ ಬನ್ನಿಯನ್ನು ಮುಡಿಯಲಾಗುತ್ತದೆ. ಆ ಬಳಿಕ ಹೊಸಪೇಟೆಯ ವಿವಿಧ ಹಳ್ಳಿಗಳಲ್ಲಿರುವ ದೇವಾಲಯದಗಳಲ್ಲಿ ಒಂಬತ್ತು ದಿನಗಳವರೆಗೆ ಶಕ್ತಿ ದೇವತೆಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುವುದು ಇಲ್ಲಿನ ವಿಶೇಷವಾಗಿದೆ.

ಇದನ್ನೂ ಓದಿ: ದಸರಾ ಆನೆಯನ್ನು ಕಂಟ್ರೋಲ್ ಮಾಡುವ ಶಕ್ತಿ ಈ ಹಗ್ಗಕ್ಕಿದೆ! ಏನಿದರ ವಿಶೇಷತೆ?

* ದಾಂಡೇಲಿಯಲ್ಲಿ ರಾಮಲೀಲಾ ಉತ್ಸವದ ವೈಭವ : ರಾಜ್ಯದ ಒಂದೊಂದು ಕಡೆಯಲ್ಲೂ ಒಂದೊಂದು ರೀತಿಯ ಆಚರಣೆಯಿದ್ದು, ಆದರೆ ಉತ್ತರ ಕನ್ನಡದ ದಾಂಡೇಲಿಯಲ್ಲಿ ಈ ವೇಳೆಯಲ್ಲಿ ರಾಮಲೀಲಾ ಉತ್ಸವವನ್ನು ಅದ್ದೂರಿಯಾಗಿ ಮಾಡಲಾಗುತ್ತದೆ. ಕಳೆದ ಆರು ದಶಕಗಳಿಂದ ದಸರಾ ಪ್ರಯುಕ್ತ ಈ ಆಚರಣೆಯು ಚಾಲ್ತಿಯಲ್ಲಿದ್ದು, ದುಷ್ಟಶಕ್ತಿಗಳ ಪ್ರತೀಕವಾದ ಅಸುರರ ಪ್ರತಿಕೃತಿಗಳನ್ನು ದಹಿಸುವುದು ಇಲ್ಲಿನ ವಿಶೇಷ. ಈ ಉತ್ಸವದ ವೇಳೆ ಸಿಡಿಮದ್ದುಗಳ ಪ್ರದರ್ಶನದೊಂದಿಗೆ ದಸರಾಕ್ಕೆ ತೆರೆ ಎಳೆಯಲಾಗುತ್ತದೆ.

ದಸರಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ