
ನಾಗರಿಕ ಸೇವಾ ಇಲಾಖೆಗಳು (Civil Service Department) ಸರ್ಕಾರದ ನೀತಿಗಳನ್ನು ಜಾರಿಗೊಳಿಸುವ, ಆಡಳಿತವನ್ನು ಸಮರ್ಥವಾಗಿ ನಿಭಾಯಿಸುವ ಮತ್ತು ಸಾರ್ವಜನಿಕ ಸೇವೆಗಳನ್ನು ಒದಗಿಸುವ ಮುಖ್ಯ ಕಾರ್ಯವನ್ನು ಮಾಡುತ್ತದೆ. ಒಟ್ಟಾರೆಯಾಗಿ ನಾಗರಿಕ ಸೇವಾ ಇಲಾಖೆಯು ದೇಶದ ಆಡಳಿತ ಬೆನ್ನೆಲುಬಾಗಿದ್ದು, ದೇಶ ಅಭಿವೃದ್ಧಿಯತ್ತ ಸಾಗಲು ಪ್ರತಿಯೊಂದು ನಾಗರಿಕ ಸೇವಾ ಇಲಾಖೆಯ ಪಾತ್ರ ದೊಡ್ಡದು. ಅಲ್ಲದೆ ದೇಶದ ಆಡಳಿತ ವ್ಯವಸ್ಥೆ ಸರಿಯಾದ ರೀತಿಯಲ್ಲಿ ನಡೆಯಲು ನಾಗರಿಕ ಸೇವಾ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಸಹ ಬಹುಮುಖ್ಯ ಪಾತ್ರ ವಹಿಸುತ್ತಾರೆ. ಹೀಗೆ ರಾಷ್ಟ್ರದ ಪ್ರಗತಿಗಾಗಿ ಕೆಲಸ ಮಾಡುವ ಮತ್ತು ನೀತಿ ನಿರೂಪಣೆಗೆ ಮಹತ್ವದ ಕೊಡುಗೆ ನೀಡುವ ಸಾರ್ವಜನಿಕ ಸೇವಾ ಅಧಿಕಾರಿಗಳಿಗೆ ಗೌರವವನ್ನು ಸಲ್ಲಿಸುವ ಉದ್ದೇಶದಿಂದ ಪ್ರತಿವರ್ಷ ಏಪ್ರಿಲ್ 21 ರಂದು ರಾಷ್ಟ್ರೀಯ ನಾಗರಿಕ ಸೇವೆಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳೀಯೋಣ ಬನ್ನಿ.
ಸ್ವತಂತ್ರ ಭಾರತದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 1947 ರಲ್ಲಿ ನವದೆಹಲಿಯ ಮೆಟ್ಕಾಫ್ ಹೌಸ್ನಲ್ಲಿ ಆಡಳಿತಾತ್ಮಕ ಸೇವೆಗಳ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಅವರು ಅಧಿಕಾರಿಗಳನ್ನು ದೇಶದ “ಉಕ್ಕಿನ ಚೌಕಟ್ಟು” ಎಂದು ಕರೆದರು ಮತ್ತು ಭಾರತೀಯ ಆಡಳಿತ ಸೇವೆಯು ರಾಷ್ಟ್ರದ ಅಡಿಪಾಯವನ್ನು ಬಲಪಡಿಸುವ ಬೆನ್ನೆಲುಬಾಗಿದೆ ಎಂದು ಒತ್ತಿ ಹೇಳಿದರು.ಈ ದಿನದ ಸವಿನೆನಪಿಗಾಗಿ ಏಪ್ರಿಲ್ 21 ರಂದು ರಾಷ್ಟ್ರೀಯ ನಾಗರಿಕ ಸೇವೆಗಳ ದಿನವನ್ನು ಆಚರಣೆಯು ಪ್ರಾರಂಭವಾಯಿತು. ಮೊದಲ ಬಾರಿಗೆ 2006 ರಲ್ಲಿ ನವದೆಹಲಿಯ ವಿಜ್ಞಾನ ಭವನದಲ್ಲಿ ಈ ದಿನವನ್ನು ಆಚರಿಸಲಾಯಿತು, ಅಂದಿನಿಂದ ಈ ದಿನದ ಆಚರಣೆಯು ಚಾಲ್ತಿಯಲ್ಲಿದೆ.
ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಐಎಎಸ್, ಐಪಿಎಸ್, ಐಆರ್ಎಸ್, ಐಎಫ್ಎಸ್ ಮತ್ತು ಇತರ ನಾಗರಿಕ ಸೇವಕರನ್ನು ಗುರುತಿಸಿ, ಅವರ ಸೇವೆಗಳನ್ನು ಗೌರವಿಸುವುದು ರಾಷ್ಟ್ರೀಯ ನಾಗರಿಕ ಸೇವಾ ದಿನದ ಉದ್ದೇಶವಾಗಿದೆ. ಈ ದಿನವು ಅಧಿಕಾರಿಗಳನ್ನು ಉತ್ತಮ ಆಡಳಿತ ಸೇವೆಗಳನ್ನು ಒದಗಿಸಲು ಪ್ರೋತ್ಸಾಹಿಸುತ್ತದೆ ಮತ್ತು ನಾಗರಿಕ ಸೇವಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿ ತೋರುವಂತೆ ಯುವಜನರನ್ನು ಪ್ರೋತ್ಸಾಹಿಸಲಾಗುತ್ತದೆ.
ಇದನ್ನೂ ಓದಿ: ಭಾರತದಲ್ಲಿರುವ ಈ ವಿಶ್ವ ಪಾರಂಪರಿಕ ತಾಣಗಳ ಬಗ್ಗೆ ನಿಮಗೆಷ್ಟು ಗೊತ್ತು?
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:30 am, Tue, 21 April 26