Hindu Muslim : ‘ನಾನು ಅವನನ್ನು ಬಿಡುಗಡೆಗೊಳಿಸುವೆ ನೀನು ಅವನನ್ನು ಇಸ್ಲಾಮಿಗೆ ಮತಾಂತರಿಸಿದರೆ ಮಾತ್ರ’

|

Updated on: Dec 02, 2021 | 9:41 AM

Music Room : ‘ಧೋಂಡೂತಾಯಿ ಹಾಡುವುದನ್ನು ನಿಲ್ಲಿಸಿ ಮೃದುವಾಗಿ ಅಂದಳು; ‘ಏಕೆಂದರೆ, ಇದು ಸ್ವಾಮಿ ಹರಿದಾಸರ ಪವಿತ್ರ ಸಂಗೀತ. ಅದನ್ನು ಬದಲಿಸುವಂತಿಲ್ಲ. ಒಂದು ಚಿಕ್ಕ ಕತೆ ಹೇಳುವೆ ಕೇಳು,’ ಅವಳು ತಂಬೂರಿ ಕೆಳಗಿಟ್ಟು ನುಡಿಸುವುದನ್ನು ನಿಲ್ಲಿಸುವಂತೆ ತಬಲಜಿಗೆ ಸನ್ನೆ ಮಾಡಿದಳು. ‘ಅಲ್ಲಾದಿಯಾಖಾನ ವಾಸ್ತವದಲ್ಲಿ ಒಬ್ಬ ಹಿಂದೂ ಬ್ರಾಹ್ಮಣ.’

Hindu Muslim : ‘ನಾನು ಅವನನ್ನು ಬಿಡುಗಡೆಗೊಳಿಸುವೆ ನೀನು ಅವನನ್ನು ಇಸ್ಲಾಮಿಗೆ ಮತಾಂತರಿಸಿದರೆ ಮಾತ್ರ’
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದೆ ಧೋಂಡೂತಾಯಿ ಕುಲಕರ್ಣಿಯೊಂದಿಗೆ ಪತ್ರಕರ್ತೆ ನಮಿತಾ ದೇವಿದಯಾಲ
Follow us on

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ.
ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com 

*

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮೇರು ಕಲಾವಿದೆ ಧೋಂಡೂತಾಯಿ ಕುಲಕರ್ಣಿ ಅವರ ಜೀವನಕಥಾನಕವನ್ನು Music Room ನಲ್ಲಿ ಅಡಕಗೊಳಿಸಿದವರು, ಅವರ ಶಿಷ್ಯೆ, ಪತ್ರಕರ್ತೆ ನಮಿತಾ ದೇವಿದಯಾಲ. ಅದನ್ನು ‘ಸಂಗೀತ ಕೋಣೆ’ಯನ್ನಾಗಿಸಿದವರು ಲೇಖಕ, ಅನುವಾದಕ ಸದಾನಂದ ಕನವಳ್ಳಿ.

*

(ನಮಿತಾ ಮತ್ತು ಧೋಂಡೂತಾಯಿ ಸಂವಾದ)

ನಾನು ಪಾಠದಲ್ಲಿ ತೊಡಗಿ ಒಂದು ಗಂಟೆಯ ಮೇಲಾಗಿತ್ತು. ಆದರೆ ತಿಲಕ ಕಾಮೋದ ರಾಗದೊಂದಿಗೆ ತೊಂದರೆ ಎದುರಿಸುತ್ತಿದ್ದೆ. ಸ್ವರಗಳು ದೇಸ ರಾಗದಲ್ಲಿ ಜಾರುತ್ತಿದ್ದವು. ಏಕೆಂದರೆ ಅವೆರಡೂ ರಾಗಗಳು ಬಹಳ ನಿಕಟ ಸೋದರಸಂಬಂಧಿಗಳಾಗಿದ್ದು ಸಾಮಾನ್ಯ ಲಕ್ಷಣಗಳನ್ನು ಹೊಂದಿವೆ. ಚನ್ನಾಗಿಯೇ ಆರಂಭಿಸುತ್ತಿದ್ದೆನಾದರೂ ಒಮ್ಮೆಲೆ ದೇಸ ರಾಗದ ಸ್ವರಗುಚ್ಛ ಹಾಡುವಲ್ಲಿ ಸಿಲುಕಿಕೊಳ್ಳುತ್ತಿದ್ದೆ. ರೋಸಿಹೋಗಿ ನಾನು ಧೋಂಡೂತಾಯಿಗೆ ಹೇಳಿದೆ.  ‘ರಾಗ! ಘರಾನಾ! ಚೆನ್ನಾಗಿ ಕೇಳಿಸುತ್ತಿರುವಾಗ ಇದೆಲ್ಲ ಬೇಕೆ?’

ಧೋಂಡೂತಾಯಿ ಹಾಡುವುದನ್ನು ನಿಲ್ಲಿಸಿ ಮೃದುವಾಗಿ ಅಂದಳು ; ‘ಏಕೆಂದರೆ, ಇದು ಸ್ವಾಮಿ ಹರಿದಾಸರ ಪವಿತ್ರ ಸಂಗೀತ. ಅದನ್ನು ಬದಲಿಸುವಂತಿಲ್ಲ. ಒಂದು ಚಿಕ್ಕ ಕತೆ ಹೇಳುವೆ ಕೇಳು,’ ಅವಳು ತಂಬೂರಿ ಕೆಳಗಿಟ್ಟು ನುಡಿಸುವುದನ್ನು ನಿಲ್ಲಿಸುವಂತೆ ತಬಲಜಿಗೆ ಸನ್ನೆ ಮಾಡಿದಳು. ‘ಅಲ್ಲಾದಿಯಾಖಾನ ವಾಸ್ತವದಲ್ಲಿ ಒಬ್ಬ ಹಿಂದೂ ಬ್ರಾಹ್ಮಣ.’

ನಾನು ಬೆರಗುಗೊಂಡು ಅವಳೆಡೆ ನೋಡಿದೆ. ಹೀಗೆ ಜೈಪುರ ಘರಾಣೆಯ ಸಂಸ್ಥಾಪಕನ ಸುತ್ತ ಇತಿಹಾಸ ಪುನಾರಚಿಸುವುದು ಪಾಷಂಡಿತನ. ಆದರೆ ಧೋಂಡೂತಾಯಿ ಸುಳ್ಳಾಡುತ್ತಿರುವಂತೆ ಕಾಣಲಿಲ್ಲ. ಅವಳು ನನ್ನೆದುರು ಕತೆಯನ್ನು ಬಿಚ್ಚಿಟ್ಟಳು.

ಅಲ್ಲಾದಿಯಾಖಾನ ಜನಿಸಿದ್ದು ಮಹಾನ್ ಸಂಗೀತಗಾರ ಹಾಗೂ ತಾನಸೇನನ ಗುರು ಸ್ವಾಮಿ ಹರಿದಾಸರ ನೇರ ವಂಶಸ್ಥನಾದ ನಾಥ ವಿಶ್ವಂಭರ ಅವರ ಕುಟುಂಬದಲ್ಲಿ.

ನಾಥವಿಶ್ವಂಭರನಾಥರು ರಾಜಸ್ಥಾನದಲ್ಲಿ ಉನ್ನತ ಪುರೋಹಿತರಾಗಿದ್ದರು. ಖಾನಸಾಹೇಬರ ಪೂರ್ವಜರಲ್ಲೊಬ್ಬರು ದಿಲ್ಲಿ ಬಳಿಯ ಅನೂಪ ಶಹರ ಎಂಬ ಪುಟ್ಟ ಸಂಸ್ಥಾನದ ಆಸ್ಥಾನ ಗಾಯಕ ಹಾಗೂ ಪ್ರಧಾನ ಪುರೋಹಿತರಾಗಿದ್ದರು. ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಭರಾಟೆಯಲ್ಲಿ ಅನೂಪ ಶಹರದ ರಾಜನನ್ನು ದಿಲ್ಲಿಯ ಸಾಮ್ರಾಟ ಸೆರೆಹಿಡಿದ.

ರಾಜನನ್ನು ಸೆರೆಹಿಡಿದ ಕೂಡಲೇ ಅನೂಪ ಶಹರದ ಆಸ್ಥಾನ ಸಂಗೀತಗಾರ ಕಾಣೆಯಾದ. ಎಲ್ಲಿ ಹೋಗಲಿರುವುನೆಂದು ಯಾರಿಗೂ ಹೇಳದೆ. ದಿಲ್ಲಿಯ ಹೊರವಲಯಗಳಿಗೆ ತೆರಳಿ ಒಂದು ಚಿಕ್ಕ ಛತ್ರವೊಂದರಲ್ಲಿ ನೆಲೆಗೊಂಡು ಹಾಡಲಾರಂಭಿಸಿದ. ಕ್ರಮೇಣ ಅನೇಕರು ಅವರ ಗಾಯನ ಕೇಳಲು ನೆರೆಯತೊಡಗಿದರು. ಕೊನೆಗೆ ಅವನ ಸಂಗೀತ ಪ್ರತಿಭೆ ಸಾಮ್ರಾಟನ ಕಿವಿ ತಲುಪಿತು. ಸಾಮ್ರಾಟ ಅವನನ್ನು ಆಸ್ಥಾನಕ್ಕೆ ಕರೆಸಿ ಹಾಡಲು ಹೇಳಿದ. ಅವನ ಸಂಗೀತದಿಂದ ಪ್ರಭಾವಿತಗೊಂಡು ಹೇಳಿದ ; ‘ಬೇಕಾದ್ದನ್ನು ಕೇಳು, ಅದು ನಿನ್ನದಾಗುವುದು.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದ ಅಲ್ಲಾದಿಯಾ ಖಾನ್

‘ಏನಾದರೂ? ಖಂಡಿತವಾಗಿಯೂ?’ ಅವನು ಮುಗುಳ್ನಗುತ್ತಾ ಪ್ರಶ್ನಿಸಿದ. ವಾಡಿಕೆಯ ರತ್ನಗಳು ಇಲ್ಲವೆ ಆಸ್ತಿಯ ಕೋರಿಕೆ ನಿರೀಕ್ಷಿಸಿದ್ದ ಸಾಮ್ರಾಟ ನಿರಾಸಕ್ತವಾಗಿ ತಲೆಯಾಡಿಸಿದ.

ಚೂಟಿ ಸಂಗೀತಗಾರ ತನ್ನ ರಾಜನ ಬಿಡುಗಡೆ ಕೋರಿದ. ಆಶ್ಚರ್ಯಕ್ಕೊಳಗಾಗಿ, ಸಾಮ್ರಾಟ ಕೊಂಚ ಯೋಚಿಸಿ ಹೇಳಿದ ; ‘ನಾನು ಅವನನ್ನು ಬಿಡುಗಡೆಗೊಳಿಸುವೆ. ನೀನು ಅವನನ್ನು ಇಸ್ಲಾಮಿಗೆ ಮತಾಂತರಿಸಿದರೆ ಮಾತ್ರ’ ಈ ಷರತ್ತು ಪಾಲಿಸುವುದು ಸಾಧ್ಯ ಎಂದು ಸಾಮ್ರಾಟನಿಗೆ ಅನಿಸಿತ್ತು. ಏಕೆಂದರೆ ಮನುಷ್ಯನಿಗೆ ಧರ್ಮ ಅತಿ ಮುಖ್ಯವಾದುದು. ಆದರೆ ಅಂದಿನ ದಿನಮಾನಗಳಲ್ಲಿ ದೇವರ ಅಪರಾವತಾರವೆಂದು ನಂಬಿದ್ದ ರಾಜನಿಗೆ ನಿಷ್ಠೆ ತೋರುವುದು ಎಲ್ಲಕ್ಕಿಂತ ಮಿಗಿಲಾದುದಾಗಿತ್ತು. ಹಿಂದೆಮುಂದೆ ನೋಡದೆ, ಗಾಯಕ ಷರತ್ತಿಗೆ ಒಪ್ಪಿಕೊಂಡ.

ಅಲ್ಲಾದಿಯಾಖಾನರ ಪೂರ್ವಜ ಮುಸ್ಲಿಮನಾದುದು ಹೀಗೆ,

ಶತಕಗಳ ನಂತರ ಅಲ್ಲಾದಿಯಾಖಾನರು ತಮ್ಮ ಚರಿತ್ರಕಾರ ಗೋವಿಂದರಾವ ಟೇಂಬೆ ಅವರಿಗೆ ಈ ಕತೆ ಹೇಳಿದಾಗ, ಆ ವಿದ್ವಾಂಸ ಪ್ರಶ್ನಿಸಿದರು, ‘ನಿಮ್ಮ ಮನೆತನ ಪುನರ್ಮತಾಂತರ ಹೊಂದುವುದಿಲ್ಲವೇಕೆ?’

‘ಅದರ ಅಗತ್ಯವುಂಟೆ?’ ಖಾನಸಾಹೇಬರು ಮೆಲುದನಿಯಲ್ಲಿ ಕೇಳಿದರು. ‘ಅದೂ ಅಲ್ಲದೆ, ನಾವು ಮತಾಂತರಗೊಂಡರೂ ನಿಮ್ಮ ಮಕ್ಕಳ ಮದುವೆ ನಮ್ಮೊಂದಿಗೆ ಮಾಡುವಿರಾ?’ ಟೇಂಬೆ ಮತ್ತು ಸುತ್ತ ಕುಳಿತಿದ್ದ ಬ್ರಾಹ್ಮಣ ಪಂಡಿತರು ಸುಮ್ಮನಿದ್ದರು. ‘ನಾನು ಹಿಂದೂ ಧರ್ಮಕ್ಕೆ ಮತಾಂತರಗೊಂಡರೆ ನಾನು ಇಲ್ಲಿಯೂ ಸಲ್ಲದವನು, ಅಲ್ಲಿಯೂ ಸಲ್ಲದನಾಗುವೆನು. ನಾನು ಈಗಿರುವಂತೆ ಇರುವುದೇ ವಾಸಿ’, ಖಾನಸಾಹೇಬರು ನಗುತ್ತ ಅಂದರು.

‘ಇಂದು ಕೂಡ ತಮ್ಮ ಮನೆಯಲ್ಲಿ ಯಾರಾದರೂ ಗಂಭೀರವಾಗಿ ಜಡ್ಡಿಗೆ ಬಿದ್ದರೆ ಅವರು ಸತ್ಯನಾರಾಯಣ ಪೂಜೆ ಮಾಡುವರು’ ಧೋಂಡೂತಾಯಿ ಅಂದಳು. ‘ತಮ್ಮ ಮನೆಯಲ್ಲಲ್ಲ ಮತ್ತೆ ನೆರೆಮನೆಯಲ್ಲಿ’, ಅವಳು ರಹಸ್ಯ ಮುಗುಳ್ನಗೆಯೊಂದಿಗೆ ಮಾತು ಸೇರಿಸಿದಳು.

‘ಸಂಗೀತ ಕೋಣೆ’ಯಾಗಿಸಿದವರು ಸದಾನಂದ ಕನವಳ್ಳಿ

ನಂತರ ನಾನು ಕಂಡುಕೊಂಡುದೇನೆಂದರೆ, ಅನೇಕ ಮುಸ್ಲಿಂ ಸಂಗೀತಗಾರರಲ್ಲಿ ತಾವು ಹಿಂದೂ ಸಂತ-ಗಾಯಕ ಸ್ವಾಮಿ ಹರಿದಾಸರ ವಂಶಜರೆಂದು ಗುರುತಿಸಿಕೊಳ್ಳುವದು ಸಾಮಾನ್ಯ ಪದ್ಧತಿಯಾಗಿದೆ. ಈ ಬದಲಾವಣೆಗೆ ಕಾರಣ ಬೇಕಿಲ್ಲ. ಏಕೆಂದರೆ ಭಾರತೀಯ ಶಾಸ್ತ್ರೀಯ ಸಂಗೀತವು ಹಿಂದೂ ಮತ್ತು ಇಸ್ಲಾಮಿ ಸಿದ್ಧಾಂತ ಪರಂಪರೆಗಳ ಅದ್ಭುತ ಸಂಗಮವಾಗಿದೆ.

(ಸೌಜನ್ಯ :  ಅಭಿನವ, 9448676770)

ಇದನ್ನೂ ಓದಿ : Simone de Beauvoir : ‘ಕೊನೆಯದಾಗಿ ಅಲ್ಲೊಂದು ಶಬ್ದ ಬರೆಯುವುದು ಬಾಕಿಯಿತ್ತು ಅದನ್ನು ನಾನು ಬರೆದುಬಿಟ್ಟೆ’