AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gabriel Garcia Marquez’s Birth Anniversary: ‘ವಾಸ್ತವದ ಆಧಾರವಿಲ್ಲದ ಒಂದು ಸಾಲೂ ನನ್ನ ಕಾದಂಬರಿಗಳಲ್ಲಿಲ್ಲ’

Novel : ಮಕಾಂಡೋದ ಬಗೆಗಿನ ಹಳೆಯ ನೆನಪುಗಳು, ಏಕಾಂತವನ್ನು ತುಂಬಾ ಪ್ರಭಾವಿಯಾಗಿ ಚಿತ್ರಿಸಲ್ಪಟ್ಟಿರುವ ‘ಲೀಫ್ ಸ್ಟಾರ್ಮ್’ ಮಾರ್ಕ್ವೆಝ್​ನ ಮೊದಲ ಕಾದಂಬರಿ. ಇದನ್ನು ಅವನು ಬರೆದದ್ದು ತಾನು ಕೆಲಸ ಮಾಡುತ್ತಿದ್ದ ‘ಎಲ್ ಹೆರಾಲ್ಡೋ,’ ಎಂಬ ಪತ್ರಿಕಾ ಕಚೇರಿಯ ನೀರವ ರಾತ್ರಿಗಳಲ್ಲಿ.

Gabriel Garcia Marquez’s Birth Anniversary: ‘ವಾಸ್ತವದ ಆಧಾರವಿಲ್ಲದ ಒಂದು ಸಾಲೂ ನನ್ನ ಕಾದಂಬರಿಗಳಲ್ಲಿಲ್ಲ’
ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಝ್ ಮತ್ತು ಎಸ್. ಗಂಗಾಧರಯ್ಯ
ಶ್ರೀದೇವಿ ಕಳಸದ
|

Updated on:Mar 06, 2022 | 12:57 PM

Share

ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಝ್ | Gabriel Garcia Marquez (1927-2014) : ‘ನಾನು ಅಕಸ್ಮಾತ್ತಾಗಿ ಬರೆಯತೊಡಗಿದವನು. ಬಹುಶಃ ನನ್ನ ಪೀಳಿಗೆಗೆ ಕೂಡಾ ಲೇಖಕರನ್ನ ಸೃಷ್ಟಿಸುವಂಥ  ತಾಕತ್ತಿದೆ, ಅನ್ನುವುದನ್ನು ಗೆಳೆಯನೊಬ್ಬನಿಗೆ ಸಾಬೀತು ಮಾಡಿಸುವ ಸಲುವಾಗಿ, ಅದಾದ ಮೇಲೆ ನಾನು ಖುಷಿಗಾಗಿ, ಬರೆಯುವ ಬೋನಿಗೆ ಬಿದ್ದೆ. ಆ ನಂತರ ಈ ಲೋಕದಲ್ಲಿ ಬರೆಯುವ ಬದುಕಿಗಿಂತ ನಾನು ಇಷ್ಟಪಡುವ ಸಂಗತಿ ಮತ್ತೊಂದಿಲ್ಲ,’ ಹೀಗೆ ಹೇಳಿಕೊಳ್ಳುತ್ತಿದ್ದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಝ್ ತೃತೀಯ ಜಗತ್ತಿನಿಂದ ಹೊರಹೊಮ್ಮಿದ ಅಗಾಧ ಪ್ರತಿಭೆ. ಸ್ಪ್ಯಾನಿಷ್ ಭಾಷೆಯಲ್ಲಿ ಬರೆದ, ಲ್ಯಾಟಿನ್ ಅಮೆರಿಕಾದ ಮಾರ್ಕ್ವೆಝ್, ಸಮಕಾಲೀನ ಲೇಖಕರಲ್ಲಿ ಯಾವೊಬ್ಬ ಲೇಖಕನೂ ಹೊಂದಿರದಷ್ಟು ಓದುಗರನ್ನು ಹೊಂದಿದ್ದವನು. ಏಕಕಾಲಕ್ಕೆ ಇತಿಹಾಸ, ಪುರಾಣ ಹಾಗೂ ವರ್ತಮಾನದ ಪರಿಕರಗಳನ್ನು ವಿಶಿಷ್ಟ ರೀತಿಯಲ್ಲಿ ಬೆಸೆಯುವ ಕಥನ ಕ್ರಮ ಹಾಗೂ ಅದರೊಳಗೆ ಅನಾವರಣಗೊಳ್ಳುವ ವಿಸ್ಮಯಗಳಿಂದಾಗಿ ವಿಶಿಷ್ಟ ಸಂವೇದನೆಯೊಂದನ್ನು ದಾಖಲಿಸಿದವನು. ಎಸ್. ಗಂಗಾಧರಯ್ಯ, ಕಥೆಗಾರ, ಅನುವಾದಕ (S. Gangadharaiah)

(ಭಾಗ 1)

ಇಪ್ಪತ್ತನೆಯ ಶತಮಾನದ ಮೊದಲ ಅರ್ಧ ಕಾಫ್ಕ, ಫಾಕ್ನರ್, ವೂಲ್ಫ್, ಜಾಯ್ಸ್, ಪ್ರೌಸ್ಟ್ ಥರದ ಶ್ರೇಷ್ಠ ಲೇಖಕರದಾಗಿದ್ದರೆ, ಉಳಿದ ಅರ್ಧ ಮಾರ್ಕ್ವೇಝ್​ಗೆ ಸೇರಿದ್ದು, ಅನ್ನುವಷ್ಟರ ಮಟ್ಟಿಗೆ ಪ್ರಭಾವ ಬೀರಿದ್ದವನು ಮಾರ್ಕ್ವೆಝ್. ಡಿಕನ್ಸ್, ಹ್ಯೂಗೊ ಅಥವಾ ಹೆಮಿಂಗ್ವೆ ಥರ ಗಂಭೀರ ಲೇಖಕನೂ, ಅಂತೆಯೇ ಜನಪ್ರಿಯ ಲೇಖಕನೂ ಆಗಿದ್ದವನು. ‘ಮಾಡರ್ನಿಸ್ಟ್’ ಮತ್ತು ‘ಪೋಸ್ಟ್ ಮಾಡರ್ನಿಸ್ಟ್’ ನಡುವಿನ ಸಂಧಿಕಾಲದಲ್ಲಿ ಪ್ರಕಟಣೆಗೊಂಡ, ವಿಶಾಲ ಅರ್ಥದಲ್ಲಿ ಸಂಪ್ರದಾಯ ಮತ್ತು ಆಧುನಿಕತೆಗಳ ನಡುವಿನ ಸಂಘರ್ಷದಂತೆಯೂ ಗ್ರಹಿಸಬಹುದಾದ, ಪ್ರಪಂಚದ ಮೊದಲ ‘ಗ್ಲೋಬಲ್’ ಕಾದಂಬರಿ ಅಂತಲೂ ಕರೆಯಬಹುದಾದ, ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ ಮಾರ್ಕ್ವೇಝ್​ಗೆ ನೊಬೆಲ್ ಬಹುಮಾನ ತಂದುಕೊಟ್ಟ ಕೃತಿ. ಮೂರು ತಲೆಮಾರುಗಳ ಬದುಕಿನ ಧ್ಯಾನದೊಂದಿಗೆ ಬಿಚ್ಚಿಕೊಳ್ಳುವ ಇದನ್ನು ಮಾರ್ಕ್ವೆಝ್ ಚಿಕ್ಕಂದಿನಲ್ಲಿ ‘ದ ಹೌಸ್’ಎಂಬ ಹೆಸರಿನಿಂದ ಬರೆಯಲು ಪ್ರಯತ್ನಿಸಿದ್ದ.

‘ವಾಸ್ತವದ ಆಧಾರವಿಲ್ಲದ ಒಂದೇ ಒಂದು ಸಾಲು ಕೂಡಾ ನನ್ನ ಕಾದಂಬರಿಗಳಲ್ಲಿಲ್ಲ’, ಅನ್ನುತ್ತಿದ್ದ ಹಾಗೂ ‘ಮ್ಯಾಜಿಕಲ್ ರಿಯಲಿಸಂ’ನ ಮಾಂತ್ರಿಕ ಶೈಲಿಯಲ್ಲಿ ಲ್ಯಾಟಿನ್ ಅಮೇರಿಕಾದ ಸಂಕೀರ್ಣ ಅನುಭವಗಳನ್ನು ಕಡೆಯುತ್ತಿದ್ದ, ಮಾನವ ಲೋಕದ ವೈವಿಧ್ಯಮಯ ಅನುಭವಗಳ ಅನ್ವೇಷಣೆಯಲ್ಲಿ ನಿರತನಾಗಿದ್ದ ಮಾರ್ಕ್ವೆಝ್, ಒಂದಷ್ಟು ದಿನ ಪತ್ರಿಕಾ ವರದಿಗಾರನಾಗಿಯೂ ಕೆಲಸ ಮಾಡಿದ್ದ. ಆ ಪತ್ರಿಕಾ ಅನುಭವಗಳನ್ನೂ ಸೃಜನಶಿಲತೆಗೆ ಒಡ್ಡಿಕೊಂಡು ಯಶಸ್ಸನ್ನು ಕಂಡಿದ್ದ. ‘ಆಫ್ ಲವ್ ಅಂಡ್ ಅದರ್ ಡೆಮನ್ಸ್’ ಅನ್ನುವ ಕಾದಂಬರಿ ಇದಕ್ಕೆ ಉತ್ತಮ ಉದಾಹರಣೆ.

‘ಮಾರ್ಕ್ವೆಝ್ ಇನ್ನು ಮುಂದೆ ಬರೆಯುವುದಿಲ್ಲ, ಅವನು ‘ಡಿಮೆನ್ಷಿಯ’ಎಂಬ ಮರೆವಿನ ಕಾಯಿಲೆಗೆ ತುತ್ತಾಗಿದ್ದಾನೆ, ಅವನ ನೆನಪಿನ ಶಕ್ತಿಯೇ ಕುಂದಿ ಹೋಗಿದೆ.’ ಕೆಲವು ವರ್ಷ ಇಂಥದ್ದೊಂದು ಸುದ್ದಿಯನ್ನು ಮಾರ್ಕ್ವೆಝ್​ನ ಕಿರಿಯ ಸಹೋದರ ಜೇಮ್ ಮಾರ್ಕ್ವೆಝ್​ ಹೇಳಿದ್ದೇ ತಡ ಮಾರ್ಕ್ವೇಝ್​ನ ಅಭಿಮಾನಿಗಳು ದಿಗ್ಭ್ರಮೆಗೊಳಗಾಗಿದ್ದರು. ಸುಮಾರು ಐದಾರು ವರ್ಷಗಳಿಂದ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿದ್ದ ಹಾಗೂ ಈ ಮುಂಚೆಯೇ ‘ಲಿಂಫ್ಯಾಟಿಕ್ ಕ್ಯಾನ್ಸರ್’ನಿಂದ ನರಳುತ್ತಿದ್ದ ಮಾರ್ಕ್ವೆಝ್​ನನ್ನು ಈ ಮರೆವಿನ ಕಾಯಿಲೆ ಬದುಕಿದ್ದಾಗಲೇ ಕೊಂದುಬಿಟ್ಟಿತ್ತು.

ಇದನ್ನೂ ಓದಿ : Short Stories : ಅಚ್ಚಿಗೂ ಮೊದಲು ; ಕಥೆಗಾರ ಎಸ್. ಗಂಗಾಧರಯ್ಯನವರ ‘ಮಣ್ಣಿನ ಮುಚ್ಚಳ’ ಇಂದಿನಿಂದ ನಿಮ್ಮ ಓದಿಗೆ

Gabriel García Marquez Birth Anniversary Special Write up by S Gangadhariah

ಮಾರ್ಕ್ವೆಝ್​ನ ಕೃತಿ

ಆವರೆಗೂ ‘ಲಿವಿಂಗ್ ಟು ಟಡಲ್ ದ ಟೇಲ್,’ ಅನ್ನುವ ಆತ್ಮಕಥೆಯ ಮೂರು ಭಾಗಗಳಲ್ಲಿ ಮೊದಲನೆಯ ಭಾಗವನ್ನಷ್ಟೇ ಪ್ರಕಟಿಸಿದ್ದ ಮಾರ್ಕ್ವೆಝ್. ಕ್ಯಾನ್ಸರ್ ಕಾಯಿಲೆಯಿಂದ ಚೇತರಿಸಿಕೊಂಡ ನಂತರ ಉಳಿದೆರಡು ಭಾಗಗಳನ್ನು ಬರೆಯುವುದರಲ್ಲಿ ಪೂರಾ ತೊಡಗಿಸಿಕೊಂಡಿದ್ದಾನೆ, ಅಂತಲೇ ನಂಬಿತ್ತು ಸಾಹಿತ್ಯವಲಯ. ‘ಮೆಮಾಯರ್ಸ್ ಆಫ್ ಮೈ ಮೆಲಾಂಕಲಿಕ್ ವೋರ್ಸ್​’ ಮಾರ್ಕ್ವೆಝ್​ನಿಂದ ಬರೆಸಿಕೊಂಡ ಕಟ್ಟಕಡೆಯ ಕಾದಂಬರಿ. ಮಕಾಂಡೋದ ಬಗೆಗಿನ ಹಳೆಯ ನೆನಪುಗಳು ಹಾಗೂ ಏಕಾಂತ ತುಂಬಾ ಪ್ರಭಾವಿಯಾಗಿ ಚಿತ್ರಿಸಲ್ಪಟ್ಟಿರುವ ‘ಲೀಫ್ ಸ್ಟಾರ್ಮ್’ ಮಾರ್ಕ್ವೆಝ್​ನ ಮೊದಲ ಕಾದಂಬರಿ. ಇದನ್ನು ಅವನು ಬರೆದದ್ದು ತಾನು ಕೆಲಸ ಮಾಡುತ್ತಿದ್ದ ‘ಎಲ್ ಹೆರಾಲ್ಡೋ,’ ಎಂಬ ಪತ್ರಿಕಾ ಕಚೇರಿಯ ನೀರವ ರಾತ್ರಿಗಳಲ್ಲಿ. ಅದು ಲ್ಯಾಟಿನ್ ಅಮೇರಿಕಾದಲ್ಲಿ ಅವನಿಗೆ ನಿಜಕ್ಕೂ ಒಳ್ಳೆಯ ಹೆಸರನ್ನು ತಂದುಕೊಡಬೇಕಿತ್ತು. ಆದರೆ ತಾನೊಬ್ಬ ಅದ್ಭುತ ಲೇಖಕ ಅನ್ನುವುದನ್ನು ಸಾಬೀತುಪಡಿಸಲು ಮಾರ್ಕ್ವೆಝ್ ತನ್ನ ಐದನೆಯ ಪುಸ್ತಕ ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್,’ ಎಂಬ ಕಾದಂಬರಿಯನ್ನು ಬರೆಯುವವರೆಗೂ ಕಾಯಬೇಕಾಗುತ್ತದೆ.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಕೇಶವ ಮಳಗಿ ಅನುವಾದಿಸಿದಿ ಮಾರ್ಕ್ವೇಝ್​ನ ಪ್ರಬಂಧ : Gabriel Garcia Marquez’s Birth Anniversary: ಅಚ್ಚಿಗೂ ಮೊದಲು; ಕೇಶವ ಮಳಗಿ ಅನುವಾದಿಸಿದ ‘ಗದ್ಯ ಗಾರುಡಿ’ ಲಭ್ಯ

Published On - 11:16 am, Sun, 6 March 22

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್