ಕನ್ನಡಕ್ಕೊಬ್ಬರೇ ಸಿದ್ದಲಿಂಗಯ್ಯ: ದಲಿತ ಆಕ್ರೋಶದ ಅಭಿವ್ಯಕ್ತಿಗೆ ಹಾಸ್ಯವನ್ನೂ ಅಸ್ತ್ರವಾಗಿಸಿದ್ದ ಅಪರೂಪದ ಕವಿ

|

Updated on: Jun 12, 2021 | 12:57 PM

ನಮ್ಮ ಮೆಚ್ಚಿನ ಕವಿ, ಚಿಂತಕ ಸಿದ್ದಲಿಂಗಯ್ಯ, ದಲಿತ ಸಮುದಾಯದ ನೋವನ್ನೂ ಸಹ ಹಾಸ್ಯದ ಮೂಲಕ ಹೇಳುವ ಪ್ರೌಢಿಮೆ ಇತ್ತು. ಅವರ ಸಾವು ಇಡೀ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಆದ ದೊಡ್ಡ ನಷ್ಟ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕನ್ನಡಕ್ಕೊಬ್ಬರೇ ಸಿದ್ದಲಿಂಗಯ್ಯ: ದಲಿತ ಆಕ್ರೋಶದ ಅಭಿವ್ಯಕ್ತಿಗೆ ಹಾಸ್ಯವನ್ನೂ ಅಸ್ತ್ರವಾಗಿಸಿದ್ದ ಅಪರೂಪದ ಕವಿ
ಕವಿ, ಸಾಹಿತಿ ಡಾ. ಸಿದ್ದಲಿಂಗಯ್ಯ (ಚಿತ್ರ ಕೃಪೆ: ಎಎನ್​ಐ ಸುದ್ಧಿ ಸಂಸ್ಥೆ)
Follow us on

ಸಮಾಜದಲ್ಲಿ ತುಳಿತಕ್ಕೊಳಗಾದವರು ತಮ್ಮ ನೋವನ್ನು ಹೊರಹಾಕುವುದು ಹೊಸದಲ್ಲ. ಅದರಲ್ಲಿಯೂ ದಲಿತ ಸಮುದಾಯದಿಂದ ಬಂದವರು ತಮ್ಮ ನೋವು ಹೊರ ಹಾಕಲು ಆಗಾಗ ಸಿಟ್ಟಿನ ಊರುಗೋಲು ಹಿಡಿಯುವುದು ತಪ್ಪಲ್ಲ. ಇಂಥ ನೋವನ್ನು ಕೂಡ ಹಾಸ್ಯದ ಮೂಲಕ ಹೇಳುತ್ತಿದ್ದವರೊಬ್ಬರು ಯಾರಾದರೂ ಇದ್ದರೆ ಅವರು ಕವಿ, ಚಿಂತಕ ಸಿದ್ದಲಿಂಗಯ್ಯ ಮಾತ್ರ. ಇನ್ನು ಸಿದ್ದಲಿಂಗಯ್ಯ ಬರೀ ನೆನಪು. ಒಂದು ಕಾಲದಲ್ಲಿ ಇಕ್ರಲಾ ವದೀರ್ಲಾ ಎಂಬ ಕವಿತೆ ಬರೆದು ಇಡೀ ದಲಿತ ಚಳುವಳಿಗೆ ಕಿಡಿ ಹೊತ್ತಿಸಿದ್ದ ಸಿದ್ದಲಿಂಗಯ್ಯ, ತಮ್ಮ ಬದುಕಿನಲ್ಲಿ ಬಹಳ ಮುನ್ನಡೆದು ಎಲ್ಲರನ್ನು ಅಪ್ಪಿಕೊಳ್ಳುವ ಹಂತಕ್ಕೆ ಬಂದಿದ್ದರು ಎಂದು ಅವರನ್ನು ಹಲವಾರು ಕಟ್ಟರ್ ದಲಿತ ನಾಯಕರು ಟೀಕಿಸುತ್ತದ್ದರು.

ನಂಬೂದರಿಪಾಡ್​ ಅವರಿಂದ ಸ್ವಾಮಿ ರಾಮನ ತನಕ
ಸಿದ್ದಲಿಂಗಯ್ಯನವರನ್ನು ದಲಿತ ಚಳುವಳಿ ನಾಯಕರು ಇಷ್ಟ ಪಡದೇ ಇರಲು ಕೆಲವು ಕಾರಣಗಳಿದ್ದವು: ಒಂದು ಕಾಲದಲ್ಲಿ ಫೈರ್​ ಬ್ರಾಂಡ್ ಚಳುವಳಿ ಗೀತೆಗಳನ್ನು ಬರೆದು ಸಾವಿರಾರು ದಲಿತ ಯುವಕರಿಗೆ ಸಾಮಾಜಿಕ ಪ್ರಜ್ಞೆ ಹುಟ್ಟುಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಿದ್ದಲಿಂಗಯ್ಯ. ಬರುಬರುತ್ತ ಅವರಿಗೆ ದಲಿತ ಚಳುವಳಿಯ ನಾಯಕತ್ವ ವಹಿಸಿಕೊಂಡವರ ಬಗ್ಗೆ ಭ್ರಮನಿರಸನವಾದಂತಿತ್ತು.

2016ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ಪೀಠದಲ್ಲಿ ಕುಳಿತು ಮಾತನಾಡುತ್ತ ಈ ಕುರಿತು ಹೇಳಿದ್ದರು: ‘ನಾನು ಇ.ಎಮ್.ಎಸ್. ನಂಬೂದರಿಪಾಡ್ ಅವರಿಂದ ಪ್ರಭಾವಿತನಾದವನು. ನನಗೆ ಜಾತಿವಾದ ಇಷ್ಟವಾಗಲ್ಲ. ಆದರೆ, ಕೆಲವು ದಲಿತ ನಾಯಕರು ಜಾತೀಯತೆಯನ್ನು ಮುಂದುವರಿಸಿದ್ದಾರೆ’.

ಸಿದ್ದಲಿಂಗಯ್ಯ ಅವರ ಜೀವನ ಅನೇಕ ಘಟ್ಟಗಳನ್ನು ದಾಟಿ ಕೊನೆಗೆ ಅವರು ಸ್ಪಿರಿಚ್ಯುಯಾಲಿಟಿ ಮತ್ತು ಮಿಸ್ಟಿಸಿಸಂನ ಆಳಕ್ಕೂ ಇಳಿದಿದ್ದರು. ಅವರು ಸ್ವಾಮಿ ರಾಮ ಅವರಿಂದ ತುಂಬಾ ಪ್ರಭಾವಿತರಾಗಿದ್ದರು ಎಂಬುದು ಬಹಳ ಜನರಿಗೆ ಗೊತ್ತಿರಲಿಲ್ಲ.

ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಚಳುವಳಿಗಳನ್ನು ಹತ್ತಿರದಿಂದ ನೋಡಿದವರು ಸಿದ್ದಲಿಂಗಯ್ಯನವರ ಒಡನಾಟವನ್ನು ತಪ್ಪಿಸಿಕೊಂಡಿರಲಿಕ್ಕಿಲ್ಲ. ಅವರ ಪಿಎಚ್​ಡಿ ಮಹಾಪ್ರಬಂಧ ಗ್ರಾಮ್ಯ ದೇವರುಗಳು ಮತ್ತು ಆಚರಣೆಯ ಬಗ್ಗೆ ಆಗಿತ್ತು. ಅದರ ಸಂಶೋಧನೆಗೆ ಊರೂರು ತಿರುಗುತ್ತ ಅಲ್ಲಿನ ಜನರ ಆಸ್ಥೆಯನ್ನು ಅಧ್ಯಯನ ಮಾಡುತ್ತ ಬೆಳೆದಿದ್ದ ಸಿದ್ದಲಿಂಗಯ್ಯ ಕೊನೆಕೊನೆಗೆ ನಾನ್-ಜಜ್ಮೆಂಟಲ್ ಅಂದರೆ ಯಾರ ಬಗ್ಗೆಯೂ ಇವರು ಹೀಗೇ ಎಂಬ ನಿರ್ಧಾರ ಮಾಡದೇ ಎಲ್ಲರನ್ನೂ ಅವರಿದ್ದಂತೆ ಸ್ವೀಕರಿಸುವ ಹಂತಕ್ಕೆ ಬೆಳೆದಿದ್ದರು. ಇದನ್ನು ಹಲವು ದಲಿತ ನಾಯಕರು ಕಟುವಾಗಿ ಟೀಕಿಸುತ್ತಿದ್ದರು. ಕುತೂಹಲಕಾರಿ ಅಂಶವೇನೆಂದರೆ, ಇದು ಗೊತ್ತಿದ್ದರೂ ಸಿದ್ದಲಿಂಗಯ್ಯ, ಖಾಸಗಿಯಾಗಿ ಮಾತನಾಡುವಾಗ ಕೂಡ ಯಾರ ಬಗ್ಗೆಯೂ ಸಿಟ್ಟಾಗುತ್ತಿರಲಿಲ್ಲ.

ಹಾಸ್ಯ ಪ್ರಜ್ಞೆ ಮತ್ತು ಸಿದ್ದಲಿಂಗಯ್ಯ
ಕುತೂಹಲವೆಂದರೆ, ಇಎಮ್ಎಸ್ ಅವರಿಂದ ಪ್ರಭಾವಿತರಾಗಿದ್ದರೂ, ಕೊನೆಗೆ ದಿವಂಗತ ರಾಮಕೃಷ್ಣ ಹೆಗಡೆ ಅವರ ಗರಡಿಗೆ ಬಂದಾಗ, ಸಿದ್ದಲಿಂಗಯ್ಯ ಅವರನ್ನು ಹೆಗಡೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದರು. ಅಲ್ಲಿಂದ ಮುಂದೆ ಎರಡು ಬಾರಿ ಸದಸ್ಯರಾಗಿ ಕೆಲಸ ಮಾಡುವಾಗಲೂ ಸಿದ್ದಲಿಂಗಯ್ಯ ವಿಧಾನ ಪರಿಷತ್ತಿನಲ್ಲಿ ಮಾತನಾಡಲು ನಿಂತರೆ ಸಾಕು, ನಗುವಿನ ಹೊಳೆ ಹರಿಯುತ್ತಿತ್ತು  ಇದನ್ನು ಪಟ್ಟಿ ಮಾಡುತ್ತ ಹೋದರೆ, ಅದು ಒಂದು ದೊಡ್ಡ ಪಟ್ಟಿ ಆಗಬಹುದು.

ಒಂದು ಬಾರಿ ಅವರು ಶಿವಮೊಗ್ಗದಿಂದ ಬರುತ್ತಿದ್ದರಂತೆ. ಆಗ ಅವರಿಗೆ ಒಂದು ಬೋರ್ಡ್​ ಕಣ್ಣಿಗೆ ಬಿತ್ತು; ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾರಿ ಅಂತ. ಹಾಗೇ ಬರುತ್ತ ಬರುತ್ತ ತುಮಕೂರಿನಲ್ಲಿಯೂ ಅದೇ ಬೋರ್ಡ ನೋಡಿದವರಿಗೆ ಆಶ್ಚರ್ಯವಾಯ್ತು. ಕೊನೆಗೆ ಅವರು ಕಂಡುಹಿಡಿದಿದ್ದು: ಎಂ.ಎಸ್. ರಾಮಯ್ಯ ಆಸ್ಪತ್ರೆ ಬೆಂಗಳೂರಿನಲ್ಲಿ ಮಾತ್ರ ಇತ್ತು. ದೂರದ ಶಿವಮೊಗ್ಗದಲ್ಲಿ ಆಸ್ಪತ್ರೆ ಇಲ್ಲದಿದ್ದರೂ ಏಕೆ ಬೋರ್ಡ್​ ಬಂದಿರಬಹುದು ಎಂಬ ವಿಚಾರವನ್ನು ಅತ್ಯಂತ ಹಾಸ್ಯಾತ್ಮಕವಾಗಿ ಹೇಳಿ ಇಡೀ ಸದನವನ್ನು ನಗೆಯಲ್ಲಿ ಮುಳುಗಿಸಿದ್ದರು.

ಒಮ್ಮೆ ಮಾತನಾಡುತ್ತ ನನಗೆ ಥಟ್ಟನೆ ಹೇಳಿದ್ದರು: ‘ನಿಮಗೆ ಗೊತ್ತಾ? ಈ ಭ್ರಷ್ಠಾಚಾರ ಇದೆಯಲ್ಲ, ಇದರಿಂದ ಚಿನ್ನವೀಡು ಜಾಸ್ತಿ ಆಗುತ್ತೆ ಎಂದರು. ನನಗೆ ಆಗ ಇನ್ನೂ ಆ ತಮಿಳು ಶಬ್ದ ಆರ್ಥ ಆಗಿರಲಿಲ್ಲ. ತುಂಬಾ ಭ್ರಷ್ಟಾಚಾರ ಮಾಡುವವನು ಹಣ ಎಲ್ಲಿಡುತ್ತಾರೆ? ಮತ್ತೊಂದು ಮದುವೆನೋ ಸಂಬಂಧಾನೋ ಬೆಳೆಸಿಕೊಳ್ಳುತ್ತಾರೆ ಗೊತ್ತಾ ಎಂದರು. ಇಷ್ಟು ಹೇಳಿದವರು ನಗುತ್ತ ಬೇರೆ ವಿಷಯಕ್ಕೆ ಹೊರಟು ಬಿಡುವುದು ಅವರ ವಿಶೇಷ ಆಗಿತ್ತು. ಅಂತ ಭ್ರಷ್ಠರಿಂದ ಸಮಾಜ ಹಾಳಾಗುತ್ತೆ ಎಂದು ನಿಡುಸುಯ್ಯುವ ಜಾಯಮಾನ ಅವರದಾಗಿರಲಿಲ್ಲ.

ನಾನು ಅಂಬೇಡ್ಕರ್​ವಾದಿ ಎಂದು ಹೇಳುವಾಗ ಅವರ ದನಿಯಲ್ಲಿ ಆಪ್ತತೆ ಇರುತ್ತಿತ್ತೇ ಹೊರತು ಅಂಬೇಡ್ಕರ್​ ಅವರನ್ನು ಮುಂದಿನ ಜನಾಂಗಕ್ಕೆ ತಲುಪಿಸುವವನು ತಾನೊಬ್ಬನೇ ಎಂಬ ಧಾರ್ಷ್ಟ್ಯ ಕಾಣುತ್ತಿರಲಿಲ್ಲ. ಇದು ಅವರ ವೈಶಿಷ್ಟ್ಯವಾಗಿತ್ತು. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಅಂಬೇಡ್ಕರ್ ಅವರ ಸಮಗ್ರ ಕೃತಿಗಳನ್ನು ಕನ್ನಡಕ್ಕೆ ತರುವಲ್ಲಿ ಬಹಳ ಪ್ರಯತ್ನ ಮಾಡಿದವರು, ಸಿದ್ದಲಿಂಗಯ್ಯ.

ಬಿಜೆಪಿ ಬಗ್ಗೆ ಕಟುವಾಗಿ ಮಾತನಾಡುತ್ತಿರಲಿಲ್ಲ ಎಂಬುದು ಅವರನ್ನು ಟೀಕಿಸುವ ಅನೇಕ ದಲಿತ ನಾಯಕರ ವಾದವಾಗಿತ್ತು. ಯಾರೇ ಅಧಿಕಾರಕ್ಕೆ ಬರಲಿ ಅವರಿಂದ ಒಳ್ಳೆಯದನ್ನು ಮಾಡಿಸಬೇಕು ಎಂಬ ಉತ್ಕಟ ಮನೋಬಲ ಇತ್ತು. ರಾಜಕೀಯ ಕಠೋರ ನಿಲವು ತಾಳದೇ ಸಮಾಜದ ಉನ್ನತಿಗೆ ಯಾರಾದರೂ ಕೆಲಸ ಮಾಡುವಂಥವರಿದ್ದರೆ ಅವರಿಂದ ಕೆಲಸ ಮಾಡಿಸೋಣ ಮತ್ತು ಹಾಗೊಮ್ಮೆ ಅಂಥ ಕೆಲಸ ಮಾಡಿದವರು ಬೇರೆ ಬೇರೆ ರಾಜಕೀಯ ಪಕ್ಷಗಳಲ್ಲಿದ್ದರೆ ಅವರನ್ನು  ಹೊಗಳುವ ಹೃದಯವಂತಿಕೆ ಅವರಲ್ಲಿತ್ತು. ಈ ಹಿನ್ನೆಲೆಯಿಂದ ಅವರನ್ನು ಅಪಾರ್ಥ ಮಾಡಿಕೊಂಡವರೇ ಜಾಸ್ತಿ ಎಂದರೆ ತಪ್ಪಾಗಲಾರದು.

ಕಳೆದ ಒಂದು ತಿಂಗಳಲ್ಲಿ ಕರ್ನಾಟಕ ಮೂವರು ದಿಗ್ಗಜರನ್ನು ಕಳೆದುಕೊಂಡಿದೆ. ಮೊದಲು ಜಿ. ವೆಂಕಟಸುಬ್ಬಯ್ಯ, ಆಮೇಲೆ ಎಚ್.ಎಸ್. ದೊರೆಸ್ವಾಮಿ ಮತ್ತು ಈಗ ಸಿದ್ದಲಿಂಗಯ್ಯ ನಮ್ಮಿಂದ ದೂರವಾಗಿದ್ದಾರೆ. ಮೂವರು ದಿಗ್ಗಜರು, ಬೇರೆಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು. ಸಿದ್ದಲಿಂಗಯ್ಯನವರ ಸಾವು ಭಾರೀ ನಿರ್ವಾತ ಉಂಟುಮಾಡಿರುವುದಂತೂ ನಿಜ.

(Obituary of dalit poet Siddalingaiah whose sense of humour and his commitment to Ambedkar were a lesson to the new generation)

ಇದನ್ನೂ ಓದಿ: Siddalingaiah Death: ಕವಿ, ಸಾಹಿತಿ ಸಿದ್ದಲಿಂಗಯ್ಯ ನಿಧನ; ಯಡಿಯೂರಪ್ಪ, ಸಿದ್ಧರಾಮಯ್ಯ, ಕುಮಾರಸ್ವಾಮಿ ಸಹಿತ ಹಲವು ಗಣ್ಯರ ಸಂತಾಪ

ಇದನ್ನೂ ಓದಿ: ಹಿರಿಯ ದಲಿತ ಕವಿ, ಸಾಹಿತಿ ಡಾ. ಸಿದ್ದಲಿಂಗಯ್ಯ ನಿಧನ

Published On - 8:47 pm, Fri, 11 June 21