ಜಾಗ್ವಾರ್ ಕಾರು ಚಾಲಕನ ಅಟ್ಟಹಾಸ: ಇಬ್ಬರು ಪೊಲೀಸರು, ವಿದ್ಯಾರ್ಥಿಗಳು ಸೇರಿ 9 ಜನ ದುರ್ಮರಣ

ಅಹಮದಾಬಾದ್​ನಲ್ಲಿ ಸಂಭವಿಸಿದ ಅಪಘಾತವಾನ್ನು ನೋಡಲು ಸೇರಿದ್ದ ಜನರ ಮೇಲೆ ಜಾಗ್ವಾರ್ ಕಾರು ಹರಿದಿದ್ದು, ಚಾಲಕನ ಅಟ್ಟಹಾಸಕ್ಕೆ 9 ಜನರು ಬಲಿಯಾಗಿದ್ದಾರೆ.

ಜಾಗ್ವಾರ್ ಕಾರು ಚಾಲಕನ ಅಟ್ಟಹಾಸ: ಇಬ್ಬರು ಪೊಲೀಸರು, ವಿದ್ಯಾರ್ಥಿಗಳು ಸೇರಿ 9 ಜನ ದುರ್ಮರಣ
Updated By: ರಮೇಶ್ ಬಿ. ಜವಳಗೇರಾ

Updated on: Jul 20, 2023 | 7:59 AM

ಅಹಮದಾಬಾದ್​​​​​​, (ಜುಲೈ 20): ಅಹಮದಾಬಾದ್​​​​​​ನ(Ahmedabad) ಸರ್ಖೇಜ್-ಗಾಂಧಿನಗರ (ಎಸ್‌ಜಿ) ಹೆದ್ದಾರಿಯಲ್ಲಿನ ಇಸ್ಕಾನ್ ಸೇತುವೆ ಮೇಲೆ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಒಟ್ಟು 9 ಜನ ಮೃತಪಟ್ಟಿದ್ದಾರೆ. ತಡರಾತ್ರಿ 1.30 ಗಂಟೆಗೆ ಟ್ರಕ್​  ಹಾಗೂ ಎಸ್​ಯುವಿ ಕಾರಿನ ನಡುವೆ ಸಂಭವಿಸಿದ್ದ ಅಪಘಾತವನ್ನು ನೋಡಲು ಸೇರಿದ್ದ ಜನರ ಮೇಲೆ ಇನ್ನೊಂದು ಕಾರು ವೇಗವಾಗಿ ಬಂದು ಗುದ್ದಿದೆ.  ಈ ದುರ್ಘಟನೆಯಲ್ಲಿ ಇಬ್ಬರು ಪೊಲೀಸರು, ವಿದ್ಯಾರ್ಥಿಗಳು ಸೇರಿದಂತೆ ಸಾವನ್ನಪ್ಪಿದ್ದಾರೆ. ಸ್ಥಳದಲ್ಲೇ 6 ಜನ ಮೃತಪಟ್ಟಿದ್ದರೆ, ಪೊಲೀಸರು ಸೇರಿ ಮೂವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇನ್ನು ಘಟನೆಯಲ್ಲಿ 13 ಜನರಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಕಾರು ಚಾಲಕನಿಗೂ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಪಘಾತದ ವೇಳೆ ಮೃತಪಟ್ಟವರಲ್ಲಿ ಹೆಚ್ಚಿನವರು ಕಾಲೇಜ್​ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಬೋಟಾಡ್, ಭಾವನಗರದಿಂದ ಅಹಮದಾಬಾದ್‌ಗೆ ಓದಲು ಬಂದಿದ್ದರು.

ಎಸ್‌ಯುವಿ ಕಾರು ಹಾಗೂ ಟ್ರಕ್ ನಡುವೆ ಅಪಘಾತ ಸಂಭವಿಸಿದ್ದು, ಇದನ್ನು ನೋಡಲು ನಿಂತಿದ್ದ ಜನರ ಮೇಲೆ ವೇಗವಾಗಿ ಬಂದ ಜಾಗ್ವರ್​ ಕಾರು ಹರಿದಿದೆ. ರಾಜ್‌ಪಥ್ ಕ್ಲಬ್ ಪ್ರದೇಶದಿಂದ ವೇಗವಾಗಿ ಬಂದ ಕಾರು, ಜನಸಂದಣಿಯ ಮೇಲೆ ನುಗ್ಗಿದೆ. ಕಾರು ವೇಗವಾಗಿ ಬಂದು ಗುದ್ದಿದ ರಭಸಕ್ಕೆ ಅನೇಕ ಜನರು ಘಟನಾ ಸ್ಥಳದಿಂದ ಸುಮಾರು 20 ರಿಂದ 25 ಅಡಿ ದೂರ ಹಾರಿ ಹೋಗಿ ಬಿದ್ದಿದ್ದಾರೆ ಎಂದು ವರದಿಯಾಗಿದೆ.

Published On - 7:35 am, Thu, 20 July 23