ನವದೆಹಲಿ: ಬಿಹಾರದ ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಲಹ ತಾರಕಕ್ಕೇರುವ ಸಾಧ್ಯತೆ ದಟ್ಟವಾಗಿದೆ. ಬಿಹಾರ ಚುನಾವಣೆಯಲ್ಲಿ ಹಿರಿಯ ನಾಯಕ ಕಪಿಲ್ ಸಿಬಲ್ ತೋರಿದ ಬೇಜವಾಬ್ದಾರಿತನವನ್ನು ಪಕ್ಷದ ಲೋಕಸಭಾ ಸದಸ್ಯ ಅಧೀರ್ ರಂಜನ್ ಚೌಧರಿ ಕಟುವಾಗಿ ಟೀಕಿಸಿದ್ದಾರೆ. ಕೆಲಸ ಮಾಡದೇ, ಕೇವಲ ಟೀಕೆಗಳಲ್ಲಿ ಕಾಲ ಕಳೆಯುವುದರಿಂದ ಯಾವುದೇ ಪ್ರಯೋಜನವಿಲ್ಲ, ಪಕ್ಷದ ಕಾರ್ಯ ವೈಖರಿಯಲ್ಲಿ ಮತ್ತು ಚಟುವಟಿಕೆಗಳಲ್ಲಿ ನಂಬಿಕೆಯಿಲ್ಲದವರು ಪಕ್ಷ ತೊರೆಯಬಹುದು ಎಂದು ಸಿಬಲ್ಗೆ ಖಾರವಾಗಿ ಹೇಳಿದ್ದಾರೆ.
ಬಿಹಾರ ಚುನಾವಣೆಯ ಯಾವ ಪ್ರಚಾರ ಸಭೆಯಲ್ಲೂ ಸಿಬಲ್ ಕಾಣಿಸಿಕೊಂಡಿಲ್ಲ. ಆದರೆ, ಪಕ್ಷದ ಹೀನಾಯ ಸೋಲಿನ ನಂತರ ಪಕ್ಷಕ್ಕೆ ಮುಜುಗರವಾಗುವಂತೆ ಬಹಿರಂಗ ಹೇಳಿಕೆ ನೀಡುವುದು ತಪ್ಪು. ಒಂದು ದಿನವೂ ಪ್ರಚಾರ ಮಾಡದೇ ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು ಫಲಿತಾಂಶದ ವಿಮರ್ಶೆ ಮಾಡುವವರ ಅಗತ್ಯ ಪಕ್ಷಕ್ಕಿಲ್ಲ ಎಂದು ಅವರು ಸಿಬಲ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಕಪಿಲ್ ಸಿಬಲ್ ಅವರಿಗೆ ಏನೇ ಅಸಮಾಧಾನಗಳಿದ್ದರೂ ಪಕ್ಷದ ಆಂತರಿಕ ವೇದಿಕೆಯಲ್ಲಿ ಚರ್ಚಿಸಬೇಕಿತ್ತು. ಚುನಾವಣೆಗಳ ಪ್ರಚಾರದಲ್ಲಿ ಭಾಗಿಯಾಗಿದ್ದರೆ ಸಿಬಲ್ಗೆ ಫಲಿತಾಂಶದ ವಿಮರ್ಶೆ ಮಾಡುವ ಅಧಿಕಾರ ಇರುತ್ತಿತ್ತು ಎಂದೂ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ (CWC) ಸದಸ್ಯರೂ ಆದ ಚೌಧುರಿ ಹೇಳಿದ್ದಾರೆ. ಇತ್ತೀಚಿಗೆ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾಯಿಸುವಂತೆ ಪತ್ರ ಬರೆದ 23 ಸದಸ್ಯರಲ್ಲಿ ಕಪಿಲ್ ಸಿಬಲ್ ಕೂಡ ಒಬ್ಬರಾಗಿದ್ದಾರೆ.