Biren Singh: ಜನರ ಒತ್ತಾಯಕ್ಕೆ ಮಣಿದು ರಾಜೀನಾಮೆ ಪತ್ರ ಹರಿದು ಹಾಕಿದ ಮಣಿಪುರ ಸಿಎಂ ಬಿರೇನ್ ಸಿಂಗ್

ಇಂದು ಮಧ್ಯಾಹ್ನ 2:00-3:00 ಗಂಟೆಯ ನಡುವೆ ಮುಖ್ಯಮಂತ್ರಿ ಬಿರೇನ್ ಸಿಂಗ್ ಮತ್ತು ಗವರ್ನರ್ ಅನುಸೂಯಾ ಉಯ್ಕೆ ನಡುವೆ ಸಭೆ ನಡೆಯಬೇಕಿತ್ತು. ಹಾಗಾಗಿ ಸಿಂಗ್ ತಮ್ಮ ಮನೆಯಿಂದ ಹೊರಡುವವರಿದ್ದರು. ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ರಾಜಭವನಕ್ಕೆ ತೆರಳುವ ಮಾರ್ಗದಲ್ಲಿ ಜನರ ಭಾವನೆಗಳನ್ನು ಗೌರವಿಸಿ ರಾಜೀನಾಮೆ ನೀಡದಿರಲು ನಿರ್ಧರಿಸಿದ್ದಾರೆ

Biren Singh: ಜನರ ಒತ್ತಾಯಕ್ಕೆ ಮಣಿದು ರಾಜೀನಾಮೆ ಪತ್ರ ಹರಿದು ಹಾಕಿದ ಮಣಿಪುರ ಸಿಎಂ ಬಿರೇನ್ ಸಿಂಗ್
ಮಣಿಪುರ ಸಿಎಂ ಬಿರೇನ್ ಸಿಂಗ್
ರಶ್ಮಿ ಕಲ್ಲಕಟ್ಟ

Updated on: Jun 30, 2023 | 4:13 PM

ಮಣಿಪುರದಲ್ಲಿ ಹಿಂಸಾಚಾರ (Manipur Violence) ಮುಂದುವರಿಯುತ್ತಿರುವ ಹಿನ್ನಲೆಯಲ್ಲಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ (CM N Biren Singh) ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ತಮ್ಮ ನಿವಾಸದ ಹೊರಗೆ ಹೈವೋಲ್ಟೇಜ್ ಡ್ರಾಮಾ ನಂತರ, ಮಣಿಪುರ ಸಿಎಂ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಿರಲು ನಿರ್ಧರಿಸಿದ್ದಾರೆ. ಸಿಎಂ ಬಿರೇನ್ ಸಿಂಗ್ ಅವರ ನಿವಾಸದ ಹೊರಗೆ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ರಾಜೀನಾಮೆ ನೀಡಬೇಡಿ ಎಂದು ಒತ್ತಾಯಿಸಿದ್ದರು. ಮಹಿಳೆಯರ ಗುಂಪು ರಾಜ್ಯಪಾಲರ ನಿವಾಸಕ್ಕೆ ಹೋಗುವ ರಸ್ತೆಯನ್ನು ತಡೆದು ರಾಜೀನಾಮೆ ನೀಡದಂತೆ ಒತ್ತಡ ಹೇರಿದರು. ಇದರಿಂದಾಗಿ ಅವರು ರಾಜ್ಯಪಾಲರ ಭವನವನ್ನು ತಲುಪುವ ಮೊದಲು ಜನರ ಮುಂದೆ ತಮ್ಮ ರಾಜೀನಾಮೆ ಪತ್ರವನ್ನು ಹರಿದು ಹಾಕಿದ್ದಾರೆ.


ಇಂದು ಮಧ್ಯಾಹ್ನ 2:00-3:00 ಗಂಟೆಯ ನಡುವೆ ಮುಖ್ಯಮಂತ್ರಿ ಬಿರೇನ್ ಸಿಂಗ್ ಮತ್ತು ಗವರ್ನರ್ ಅನುಸೂಯಾ ಉಯ್ಕೆ ನಡುವೆ ಸಭೆ ನಡೆಯಬೇಕಿತ್ತು. ಹಾಗಾಗಿ ಸಿಂಗ್ ತಮ್ಮ ಮನೆಯಿಂದ ಹೊರಡುವವರಿದ್ದರು. ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ರಾಜಭವನಕ್ಕೆ ತೆರಳುವ ಮಾರ್ಗದಲ್ಲಿ ಜನರ ಭಾವನೆಗಳನ್ನು ಗೌರವಿಸಿ ರಾಜೀನಾಮೆ ನೀಡದಿರಲು ನಿರ್ಧರಿಸಿದ್ದಾರೆ ಎಂದು ಹಿರಿಯ ಸಚಿವ ಗೋವಿಂದಸ್ ಕೊಂತೌಜಮ್ ಹೇಳಿದ್ದಾರೆ.


ಬಿರೇನ್ ಸಿಂಗ್ ಅವರು ಗವರ್ನರ್ ಅನುಸೂಯಾ ಉಯ್ಕೆಯವರಿಗೆ ಸಲ್ಲಿಸಲು ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ್ದರು. ಇದಕ್ಕೂ ಮೊದಲು, ಸಿಂಗ್ ಅವರು ತಮ್ಮ ನಿವಾಸದಲ್ಲಿ ಬೆಳಿಗ್ಗೆ 8 ಗಂಟೆಗೆ ಸಂಪುಟ ಸಚಿವರ ಸಭೆಯನ್ನು ಕರೆದಿದ್ದು ಅದರಲ್ಲಿ ಅವರು ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದರು.

ಇದನ್ನೂ ಓದಿ: Biren Singh: ರಾಜ್ಯಪಾಲರ ಭೇಟಿ ನಂತರ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ ಸಾಧ್ಯತೆ?

ಬಿರೇನ್ ಸಿಂಗ್ ಅವರನ್ನು ರಾಜೀನಾಮೆ ನೀಡುವಂತೆ ಕೇಂದ್ರ ನಾಯಕತ್ವವು ಕೇಳಿಲ್ಲ ಎಂದು ಸಿಎಂ ಕಚೇರಿಯ ಮೂಲಗಳು ಬಹಿರಂಗಪಡಿಸಿವೆ. ಆದಾಗ್ಯೂ, ಜೂನ್ 29 ರಂದು ಇಂಫಾಲ್‌ನಲ್ಲಿ ಶವಗಳನ್ನು ಹಿಡಿದುಕೊಂಡು ಮಹಿಳೆಯರು ನಡೆಸಿದ ಪ್ರತಿಭಟನೆಯಿಂದ ಮುಖ್ಯಮಂತ್ರಿಗೆ ನೋವುಂಟಾದ ನಂತರ ಈ ನಿರ್ಧಾರ ಬಂದಿದೆ ಎಂದು ಹೇಳಲಾಗಿತ್ತು. ವರದಿಗಳ ಪ್ರಕಾರ, ಬಿರೇನ್ ಸಿಂಗ್ ಅವರಿಗೆ ರಾಜೀನಾಮೆ ನೀಡುವ ಆಯ್ಕೆಯನ್ನು ನೀಡಲಾಗಿತ್ತು. ಇಲ್ಲದಿದ್ದರೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವುದಾಗಿ ಹೇಳಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:10 pm, Fri, 30 June 23

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us