AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಚುನಾವಣೆಯಲ್ಲಿನ ಸೋಲು ನಂತರ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಪ್ರಚಾರ ಕಾರ್ಯತಂತ್ರ ಬದಲಿಸಲಿದೆ ಬಿಜೆಪಿ

ದೊಡ್ಡ ಬದಲಾವಣೆಯೆಂದರೆ, ಕೇಂದ್ರ ನಾಯಕರು ಮತ್ತು ರಾಜ್ಯ ಮುಖ್ಯಮಂತ್ರಿಗಳ ಮೇಲಿನ ಅಗಾಧ ಅವಲಂಬನೆಯ ಬದಲಿಗೆ ಸ್ಥಳೀಯ ನಾಯಕರ ಮೇಲೆ ಕೇಂದ್ರೀಕರಿಸುವುದು. ಕರ್ನಾಟಕದಲ್ಲಿ ಸ್ಥಳೀಯ ನಾಯಕರಿಗೆ ಪ್ರಚಾರಕ್ಕೆ ಅವಕಾಶ ನೀಡಿ ಕಾಂಗ್ರೆಸ್‌ ಒಳ್ಳೆಯ ಕೆಲಸ ಮಾಡಿತ್ತು.

ಕರ್ನಾಟಕ ಚುನಾವಣೆಯಲ್ಲಿನ ಸೋಲು ನಂತರ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಪ್ರಚಾರ ಕಾರ್ಯತಂತ್ರ ಬದಲಿಸಲಿದೆ ಬಿಜೆಪಿ
ಬಿಜೆಪಿ
ರಶ್ಮಿ ಕಲ್ಲಕಟ್ಟ
|

Updated on: May 15, 2023 | 9:09 PM

Share

ದೆಹಲಿ: ಕರ್ನಾಟಕದಲ್ಲಿ ಬಿಜೆಪಿ (BJP) ಸೋಲಿನ ನಂತರ ಈ ವರ್ಷಾಂತ್ಯದಲ್ಲಿ ನಡೆಯಲಿರುವ ನಾಲ್ಕು ರಾಜ್ಯ ಚುನಾವಣೆಗಳಿಗೆ (Assembly Elections) ತನ್ನ ಪ್ರಚಾರದ ಮಾದರಿಯನ್ನು ಬದಲಿಸಲು ಬಿಜೆಪಿ ನಿರ್ಧರಿಸಿದೆ. ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಛತ್ತೀಸ್‌ಗಢದಲ್ಲಿ ಚುನಾವಣೆಗಳು ನಡೆಯಲಿವೆ. ಇವುಗಳಲ್ಲಿ ಮಧ್ಯಪ್ರದೇಶದಲ್ಲಿ ಮಾತ್ರ ಬಿಜೆಪಿ ಆಡಳಿತದಲ್ಲಿದೆ. ರಾಜಸ್ಥಾನದಲ್ಲಿ ಆಡಳಿತ ವಿರೋಧಿ ನೀತಿ ತನಗೆ ಲಾಭವಾಗಲೆಂದು ಬಿಜೆಪಿ ಆಶಿಸುತ್ತಿದೆ. ನಾಲ್ಕು ರಾಜ್ಯಗಳಲ್ಲಿ ನಾಯಕತ್ವ ಮತ್ತು ಅಭ್ಯರ್ಥಿಗಳನ್ನು ನಿರ್ಧರಿಸುವಾಗ ಜಾತಿ ಸಮೀಕರಣಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಲು ಬಿಜೆಪಿ ನಿರ್ಧರಿಸಿದೆ ಎಂದು ಪಕ್ಷದ ಹಿರಿಯ ನಾಯಕರು ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ. ಇದು ಕರ್ನಾಟಕದಿಂದ ಕಲಿತ ಪಾಠವಾಗಿತ್ತು. ಕರ್ನಾಕದಲ್ಲಿ ಬಿಎಸ್ ಯಡಿಯೂರಪ್ಪ ಅವರನ್ನು ಉನ್ನತ ಹುದ್ದೆಯಿಂದ ತೆಗೆದುಹಾಕುವ ಮತ್ತು ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ಅವರಿಗೆ ಟಿಕೆಟ್ ನಿರಾಕರಿಸುವ ನಿರ್ಧಾರವು ಲಿಂಗಾಯತರನ್ನು ಕಾಂಗ್ರೆಸ್ ಕಡೆಗೆ ತಳ್ಳಿತು.

ಅಗತ್ಯವಿದ್ದರೆ, ಪಕ್ಷವು ಸಣ್ಣ ಪಕ್ಷಗಳೊಂದಿಗೆ ಚುನಾವಣಾ ಮೈತ್ರಿಗೆ ಮುಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ದೊಡ್ಡ ಬದಲಾವಣೆಯೆಂದರೆ, ಕೇಂದ್ರ ನಾಯಕರು ಮತ್ತು ರಾಜ್ಯ ಮುಖ್ಯಮಂತ್ರಿಗಳ ಮೇಲಿನ ಅಗಾಧ ಅವಲಂಬನೆಯ ಬದಲಿಗೆ ಸ್ಥಳೀಯ ನಾಯಕರ ಮೇಲೆ ಕೇಂದ್ರೀಕರಿಸುವುದು. ಕರ್ನಾಟಕದಲ್ಲಿ ಸ್ಥಳೀಯ ನಾಯಕರಿಗೆ ಪ್ರಚಾರಕ್ಕೆ ಅವಕಾಶ ನೀಡಿ ಕಾಂಗ್ರೆಸ್‌ ಒಳ್ಳೆಯ ಕೆಲಸ ಮಾಡಿತ್ತು. ಕರ್ನಾಟಕದಲ್ಲಿ ಜಗದೀಶ್ ಶೆಟ್ಟರ್ ಅವರಂತಹ ನಾಯಕರಿಗೆ ಟಿಕೆಟ್ ನಿರಾಕರಣೆಗೆ ಕಾರಣವಾದ ಪ್ರಮುಖ ಸಮಸ್ಯೆಯಾಗಿ ಕಂಡುಬಂದಿದೆ. ಒಗ್ಗಟ್ಟಿನ ಕೊರತೆಯು ಪಕ್ಷದ ಮುಂದಿರುವ ದೊಡ್ಡ ಸವಾಲುಗಳಲ್ಲಿ ಒಂದಾಗಿರುವ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಈ ತಂತ್ರವು ನಿರ್ಣಾಯಕವಾಗಿದೆ.

ಮಧ್ಯಪ್ರದೇಶದಲ್ಲಿ  ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪಕ್ಷದ ಮುಖವಾಗಿ ಉಳಿಯುತ್ತಾರೆ ಆದರೆ ಅವರೊಂದಿಗೆ ಜ್ಯೋತಿರಾದಿತ್ಯ ಸಿಂಧಿಯಾ, ನರೇಂದ್ರ ಸಿಂಗ್ ತೋಮರ್ ಮತ್ತು ಬಿಡಿ ಶರ್ಮಾ ಅವರಂತಹ ಇತರ ನಾಯಕರನ್ನು ತೆಗೆದುಕೊಳ್ಳುವಂತೆ ಕೇಳಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಪ್ರಕ್ರಿಯೆಯಲ್ಲಿ ಕಮಲ್ ನಾಥ್ ಸರ್ಕಾರವನ್ನು ಉರುಳಿಸುವ ಮೂಲಕ 2020 ರಲ್ಲಿ ಬಿಜೆಪಿಗೆ ಸೇರಿದ ಸಿಂಧಿಯಾ ಮತ್ತು ಅವರ ನಿಷ್ಠಾವಂತರನ್ನು ಹೊರಗಿನವರಂತೆ ನೋಡಲಾಗಿದೆ.

ಇದನ್ನೂ ಓದಿ:ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ 9 ವರ್ಷ; ಒಂದು ತಿಂಗಳ ಕಾಲ ವಿಶೇಷ ಅಭಿಯಾನ ನಡೆಸಲು ಬಿಜೆಪಿ ಸಿದ್ಧತೆ

ರಾಜಸ್ಥಾನದಲ್ಲಿ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರಿಗೆ ಆದ್ಯತೆ ನೀಡಲಾಗುವುದು. ಅದರ ಜತೆ ಕಿಶೋರಿ ಲಾಲ್ ಮೀನಾ, ಗಜೇಂದ್ರ ಸಿಂಗ್ ಶೇಖಾವತ್, ಸತೀಶ್ ಪೂನಿಯಾ ಮುಂತಾದ ವಿವಿಧ ಜಾತಿ ಗುಂಪುಗಳಿಗೆ ಸೇರಿದ ರಾಜ್ಯ ನಾಯಕರಿಗೂ ಪ್ರಾಮುಖ್ಯತೆ ನೀಡಲಾಗುವುದು.

ಛತ್ತೀಸ್‌ಗಢದಲ್ಲಿ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್, ಹಿರಿಯ ನಾಯಕ ಬ್ರಿಜ್‌ಮೋಹನ್ ಅಗರವಾಲ್, ಅರುಣ್ ಸಾವೊ ಅವರಿಗೆ ಪ್ರಾಮುಖ್ಯತೆ ನೀಡಲಾಗುವುದು. ತೆಲಂಗಾಣದಲ್ಲಿ ಬಂಡಿ ಸಂಜಯ್, ಇ ರಾಜೇಂದ್ರನ್, ಜಿ ಕಿಶನ್ ರೆಡ್ಡಿ ಅವರು ಪಕ್ಷದ ಪ್ರಮುಖ ಮುಖಗಳಾಗಿದ್ದಾರೆ. ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಮತ್ತು ಪಕ್ಷದ ಒಗ್ಗಟ್ಟಿನ ಮುಖವನ್ನು ಪ್ರಸ್ತುತಪಡಿಸಲು ರಾಜ್ಯ ನಾಯಕರನ್ನು ಕೇಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ, ಚುನಾವಣಾ ರಣತಂತ್ರ ರೂಪಿಸಲು ಸಾಮೂಹಿಕ ನೆಲೆ ಹೊಂದಿರುವ ಹಿರಿಯ ನಾಯಕರನ್ನು ಕಣಕ್ಕಿಳಿಸಲಾಗುವುದು. ಮಧ್ಯಪ್ರದೇಶದಲ್ಲಿ ಸರ್ಕಾರ ಮತ್ತು ಸಂಘಟನೆಯ ನಡುವೆ ಉತ್ತಮ ಸಮನ್ವಯತೆ ಇರುತ್ತದೆ. ತಳಮಟ್ಟದ ಕಾರ್ಮಿಕರಿಗೆ ಪ್ರಾಮುಖ್ಯತೆ ನೀಡಲಾಗುವುದು. ಸಮಸ್ಯೆಗಳು, ಭರವಸೆಗಳು ಮತ್ತು ಕಾರ್ಯತಂತ್ರವನ್ನು ನಿರ್ಧರಿಸುವಲ್ಲಿ ಅವರ ಪ್ರತಿಕ್ರಿಯೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ