ಜೈಪುರದಲ್ಲಿ ಮನೆಯ ನೆಲಮಾಳಿಗೆಗೆ ನುಗ್ಗಿದ ಮಳೆ ನೀರು; ಮಗು ಸೇರಿ ಮೂವರು ಸಾವು

ಭಾರೀ ಮಳೆಯಿಂದಾಗಿ ಜೈಪುರದ ಹಲವಾರು ಪ್ರದೇಶಗಳು ಜಲಾವೃತವಾಗಿದ್ದು, ರಾಜ್ಯ ರಾಜಧಾನಿಯಾದ್ಯಂತ ಟ್ರಾಫಿಕ್ ಜಾಮ್ ಉಂಟಾಗಿದೆ. ಜೈಪುರದ ವಿಶ್ವಕರ್ಮ ಪ್ರದೇಶದಲ್ಲಿ ನೆಲಮಾಳಿಗೆಯಲ್ಲಿ ನೀರು ತುಂಬಿದ ಪರಿಣಾಮ ಮೂವರು ಸಾವನ್ನಪ್ಪಿರುವುದು ದೃಢಪಟ್ಟಿದೆ.

ಜೈಪುರದಲ್ಲಿ ಮನೆಯ ನೆಲಮಾಳಿಗೆಗೆ ನುಗ್ಗಿದ ಮಳೆ ನೀರು; ಮಗು ಸೇರಿ ಮೂವರು ಸಾವು
ಜೈಪುರದ ಪ್ರವಾಹ

Updated on: Aug 01, 2024 | 3:08 PM

ಜೈಪುರ: ಪ್ರವಾಹದಿಂದಾಗಿ ದೆಹಲಿಯ ಕೋಚಿಂಗ್ ಸೆಂಟರ್‌ನ ನೆಲಮಾಳಿಗೆಯಲ್ಲಿ ಮೂವರು ಐಎಎಸ್ ಆಕಾಂಕ್ಷಿಗಳು ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ, ರಾಜಸ್ಥಾನದ ಜೈಪುರದಲ್ಲಿ ಅಂತಹುದೇ ದುರಂತ ಸಂಭವಿಸಿದ್ದು, 3 ವರ್ಷದ ಬಾಲಕಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಭಾರೀ ಮಳೆಯಿಂದಾಗಿ ಜೈಪುರದ ಮನೆಯೊಂದರ ನೆಲಮಾಳಿಗೆಯು ಇಂದು ಜಲಾವೃತಗೊಂಡಿದ್ದು, ಮೂವರು ಸಾವನ್ನಪ್ಪಿದ್ದಾರೆ ಹಾಗೂ ಮಳೆಯ ಪರಿಣಾಮವಾಗಿ ನಾಲ್ವರು ನಾಪತ್ತೆಯಾಗಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಆರಂಭವಾದ ಏಳು ಗಂಟೆಗಳ ಬಳಿಕ ಮೃತದೇಹಗಳನ್ನು ಹೊರತೆಗೆಯಲಾಯಿತು. ಜೈಪುರದಲ್ಲಿ ಮಳೆಯಿಂದಾಗಿ ನೆಲಮಾಳಿಗೆಯು ಜಲಾವೃತವಾಗಿತ್ತು. ಸಂತ್ರಸ್ತರು ಸಕಾಲದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ದುರಂತವಾಗಿ ಮಳೆಯ ನೀರಿನಲ್ಲಿ ಮುಳುಗಿದ್ದಾರೆ.

ಇದನ್ನೂ ಓದಿ: Karnataka Rains: ಕರ್ನಾಟಕದಾದ್ಯಂತ ಆಗಸ್ಟ್ 6ರವರೆಗೆ ಭಾರಿ ಮಳೆ

ಮನೆಯ ನೆಲಮಾಳಿಗೆಯಲ್ಲಿ ನೀರು ತುಂಬಿ ಮೃತಪಟ್ಟವರನ್ನು ಪೂರ್ವಿ (3), ಪೂಜಾ (19), ಮತ್ತು ಕಮಲ್ (24) ಎಂದು ಗುರುತಿಸಲಾಗಿದೆ. ಬಿಹಾರ ಮೂಲದ ಕಮಲ ಮತ್ತು ಪೂಜಾ ದಿನಗೂಲಿ ಕಾರ್ಮಿಕರಾಗಿದ್ದು, ನಗರದ ವಿಶ್ವಕರ್ಮ ಪ್ರದೇಶದಲ್ಲಿ ವಾಸವಾಗಿದ್ದರು. ಜೈಪುರದಲ್ಲಿ ಭಾರೀ ಮಳೆ ಮುಂದುವರೆದಿದ್ದು, ಅಧಿಕಾರಿಗಳು ಎಲ್ಲಾ ಶಾಲೆಗಳು ಮತ್ತು ಹಲವಾರು ಕಚೇರಿಗಳನ್ನು ಮುಚ್ಚಲು ಆದೇಶಿಸಿದ್ದಾರೆ.


ಜಾಮ್ಡೋಲಿ ಪ್ರದೇಶದಲ್ಲಿ ರಸ್ತೆಯೊಂದರಲ್ಲಿ ಗುಂಡಿ ಬಿದ್ದಿದೆ. ಅದರ ನಂತರ ಶಾಲಾ ಬಸ್, ಟ್ಯಾಕ್ಸಿ ಮತ್ತು ಬುಲ್ಡೋಜರ್ ಅಲ್ಲಿ ಸಿಲುಕಿಕೊಂಡವು. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಜೈಪುರದ ಮಹಾರಾಣಿ ಫಾರ್ಮ್ ಪ್ರದೇಶದ ಬಳಿ ಪ್ರವಾಹಕ್ಕೆ ಸಿಲುಕಿದ ದ್ರವಾವತಿ ನದಿಯಲ್ಲಿ ಕಾರೊಂದು ಕೊಚ್ಚಿ ಹೋಗಿದೆ. ಚಾಲಕ ಕಾರಿನಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಗರದ ಗೋಪಾಲಪುರದ ಗಂಗೋತ್ರಿ ನಗರದಲ್ಲಿ ಮೂರು ಮನೆಗಳು ಕುಸಿದು ಇಬ್ಬರು ಗಾಯಗೊಂಡಿದ್ದಾರೆ. ಇದೇ ವೇಳೆ ಬಗ್ರು ಎಂಬಲ್ಲಿ 12 ವರ್ಷದ ಬಾಲಕ ಮಳೆಗೆ ಕೊಚ್ಚಿ ಹೋಗಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ